ಎಕ್ಸಿಟ್ ಪೋಲ್ ಉಲ್ಟಾ ಆದ್ರೆ ಇವರೇ ಕಿಂಗ್ ಮೇಕರ್ಸ್ ಆಗಲಿದ್ದಾರೆ

ಬೆಂಗಳೂರು, ಮೇ 21 : ಮೇ 23ರಂದು ಗುರುವಾರ ಪ್ರಕಟವಾಗಲಿರುವ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡನೇ ಬಾರಿ ರಚನೆಯಾಗುವುದು ಸ್ಪಷ್ಟ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ಈ ಎಕ್ಸಿಟ್ ಪೋಲ್ ಗಳನ್ನು ನಂಬಲು ವಿರೋಧ ಪಕ್ಷಗಳ ನಾಯಕರು ಸುತಾರಾಂ ತಯಾರಿಲ್ಲ. ಚುನಾವಣೋತ್ತರ ಫಲಿತಾಂಶ ಉಲ್ಪಾಪುಲ್ಟಾ ಆಗಿ, ಭಾರತೀಯ ಜನತಾ ಪಕ್ಷ ನಿರ್ನಾಮವಾಗುತ್ತದೆ, ಅದಕ್ಕೆ ಬಹುಮತ ಬರಲು ಸಾಧ್ಯವೇ ಇಲ್ಲ ಎಂದು ವಿರೋಧಿ ಪಕ್ಷದ ನಾಯಕರು, ಅವರನ್ನು ಬೆಂಬಲಿಸುವ ಕೋಟ್ಯಂತರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾದು ಕುಳಿತಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಭಾರತದ ಚುನಾವಣಾ ಇತಿಹಾಸ ಗಮನಿಸಿದರೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚೂಕಡಿಮೆ ನಿಜವಾಗಿವೆ. ಆದರೆ, ಈ ಬಾರಿ ಎಕ್ಸಿಟ್ ಪೋಲ್ ಸಂಪೂರ್ಣವಾಗಿ ತಲೆಕೆಳಗಾಗುತ್ತದೆ, ಈ ಬಾರಿ ಇವಿಎಂ ಬಳಸಿ ಭಾರೀ ಪ್ರಮಾಣದಲ್ಲಿ ಗೋಲ್ ಮಾಲ್ ಮಾಡಲಾಗಿದೆ, ಪ್ರಾದೇಶಿಕ ಪಕ್ಷಗಳು ಭಾರತದ ಆಡಳಿತ ಚುಕ್ಕಾಣಿ ಹಿಡಿಯುತ್ತವೆ ಎಂದು ವಿರೋಧಿಗಳು ಆಶಿಸಿದ್ದಾರೆ.

ಕರ್ನಾಟಕದ ಕೆಲ ಜ್ಯೋತಿಷಿಗಳು ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರೆ, ಮಧ್ಯ ಪ್ರದೇಶದ ಜ್ಯೋತಿಷಿಯೊಬ್ಬರು ಸಾಧ್ಯವೇ ಇಲ್ಲ, ಪ್ರಾದೇಶಿಕ ಪಕ್ಷಗಳ ನೇತಾರರೊಬ್ಬರು ದೇಶದ ನೊಗ ಹೊರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಎಕ್ಸಿಟ್ ಪೋಲ್ ಫಲಿತಾಂಶ ಸಂಪೂರ್ಣವಾಗಿ ತಲೆಕೆಳಗಾಗುವ ಸಂಭವನೀಯತೆ ಶೇ.99ರಷ್ಟು ಇಲ್ಲವಾದರೂ, ಒಂದು ವೇಳೆ ಎಲ್ಲ ನಿರೀಕ್ಷೆಗಳು ಹುಸಿಯಾಗಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 250ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದು, ಮಹಾಘಟಬಂಧನ್ ಎಂದು ಕರೆಯಲಾಗುವ ರಾಜಕೀಯ ಪಕ್ಷಗಳ ಒಕ್ಕೂಟ ಮೇಲುಗೈ ಸಾಧಿಸಿದರೆ, ಯಾರ್ಯಾರು ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ, ಯಾರು ಕಿಂಗ್ ಮೇಕರ್ ಗಳಾಗಲಿದ್ದಾರೆ ಎಂಬುದರತ್ತ ಒಂದು ನೋಟ ಇಲ್ಲಿದೆ.

ಬಿಜು ಜನತಾ ದಳದ ನವೀನ್ ಪಟ್ನಾಯಕ್

ಬಿಜು ಜನತಾ ದಳದ ನವೀನ್ ಪಟ್ನಾಯಕ್

ಮಹಾಘಟಬಂಧನ್ ದಲ್ಲಿ ಘಟಾನುಘಟಿ ನಾಯಕರು ಇದ್ದರೂ ಸದ್ಯಕ್ಕೆ ಎಲ್ಲರ ಕಣ್ಣು ಇವರ ಮೇಲಿದೆ. ಏಕೆಂದರೆ, ಓಡಿಶಾದಿಂದ ಕಳೆದ ಬಾರಿ 18 ಲೋಕಸಭಾ ಸದಸ್ಯರನ್ನು ಸಂಸತ್ತಿಗೆ ಕಳಿಸಿದ್ದ ನವೀನ್ ಪಟ್ನಾಯಕ್ ಅವರು ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಬಲ್ಲರು. ಸದ್ಯಕ್ಕೆ ಅವರು ಮಹಾಘಟಬಂಧನ್ ಜೊತೆ ಗುರುತಿಸಿಕೊಂಡಿದ್ದರೂ, ಇತ್ತೀಚೆಗೆ ಫೋನಿ ಚಂಡಮಾರುತ ಸಂಭವಿಸಿದಾಗ ಕೇಂದ್ರ ಸರಕಾರ, ಅದರಲ್ಲೂ ನರೇಂದ್ರ ಮೋದಿಯವರು ನೀಡಿದ ಸಹಕಾರವನ್ನು ನವೀನ್ ಅವರು ಅಪಾರವಾಗಿ ಸ್ಮರಿಸಿದ್ದಾರೆ. ಅವರನ್ನು ಎನ್‌ಡಿಎ ನಾಯಕರು ಈಗಾಗಲೆ ಸಂಪರ್ಕಿಸಿದ್ದು, ಅವರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಚಿದಂಬರ ರಹಸ್ಯವಾಗಿದೆ ಮತ್ತು ಅಂತಿಮ ಫಲಿತಾಂಶದ ಮೇಲೆ ಅವರು ಯಾವ ಕಡೆ ವಾಲುತ್ತಾರೆ ಎಂಬುದು ನಿರ್ಧಾರವಾಗಲಿದೆ.

ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು

ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು

ಸದ್ಯಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ರೀತಿಯಲ್ಲಿ ತಿರುಗಾಡುತ್ತ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಹೆಣಗಾಡುತ್ತಿರುವ ಚಂದ್ರಬಾಬು ನಾಯ್ಡು ಅವರು ಮಹಾಘಟಬಂಧನ್ ಪರ ನಿಜವಾದ ಕಿಂಗ್ ಮೇಕರ್ ಆಗಲಿದ್ದಾರೆ. ಕೆಲವರು ಹಿಂದೇಟು ಹಾಕಿದರೂ ಛಲದಂಕಮಲ್ಲನಂತೆ ಸಭೆಗಳನ್ನು ನಡೆಸುತ್ತ, ಬಿಜೆಪಿ ಸರಕಾರವನ್ನು ಕೆಡವಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಇವರ ನೇತೃತ್ವದಲ್ಲಿಯೇ ಇವಿಎಂ ವಿರುದ್ಧ ಮಹಾಘಟಬಂಧನ್ ಸಮರ ಸಾರಿದೆ. ಬಿಜೆಪಿ ಏಜೆಂಟ್ ನಂತೆ ವರ್ತಿಸಿರುವ ಚುನಾವಣಾ ಆಯೋಗ, ಬಿಜೆಪಿಗೆ ಅನುಕೂಲವಾಗುವಂತೆ ಇವಿಎಂ ತಿದ್ದುಪಡಿ ಮಾಡಿದೆ ಎಂದು ನಾಯ್ಡು ಬಜಾಯಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗುವುದಾ? ಅಥವಾ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಆಂಧ್ರಕ್ಕೆ ಮರಳಲಿದ್ದಾರಾ?

ಬಹುಜನ ಸಮಾಜ ಪಕ್ಷದ ಗಟ್ಟಿಗಿತ್ತಿ ಮಾಯಾವತಿ

ಬಹುಜನ ಸಮಾಜ ಪಕ್ಷದ ಗಟ್ಟಿಗಿತ್ತಿ ಮಾಯಾವತಿ

ಆನೆ ನಡೆದಿದ್ದೇ ಹಾದಿ ಎಂಬಂತೆ ರಾಜಕೀಯ ನಡೆಗಳನ್ನು ನಡೆಸುವಲ್ಲಿ ಕುಮಾರಿ ಮಾಯಾವತಿ ನಿಸ್ಸೀಮರು. ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಸೀಟು ಗೆಲ್ಲದಿದ್ದರೂ ಈ ಬಾರಿ ಪ್ರಧಾನಿಯಾಗುವ ಕನಸು ಕಟ್ಟಿಕೊಂಡವರು. ದಲಿತ ಸಮುದಾಯದ ಅನಭಿಷಿಕ್ತ ನಾಯಕಿಯಾಗಿರುವ 63 ವರ್ಷದ ಮಾಯಾವತಿ ಅವರು ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿದ್ದಲ್ಲದೆ, ಕಾಂಗ್ರೆಸ್ ಪಕ್ಷವನ್ನು ದೂರ ಇಡುವಂಥ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದರು. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಚಮತ್ಕಾರವಾಗಿ ಬಹುಜನ ಸಮಾಜ ಪಕ್ಷ ಭಾರೀ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಸಂಸತ್ತಿಗೆ ಕಳುಹಿಸಿದರೆ ಮತ್ತು ಬಿಜೆಪಿ ವಿಫಲವಾದರೆ, ಮಹತ್ವಾಕಾಂಕ್ಷಿ ಮಾಯಾವತಿಯವರನ್ನು ಪ್ರಧಾನಿ ಪಟ್ಟದಲ್ಲಿ ಕಂಡರೂ ಅಚ್ಚರಿಯಿಲ್ಲ.

ತೃಣಮೂಲ ಕಾಂಗ್ರೆಸ್ ಅಟಂಬಾಂಬ್ ಮಮತಾ

ತೃಣಮೂಲ ಕಾಂಗ್ರೆಸ್ ಅಟಂಬಾಂಬ್ ಮಮತಾ

ಪ್ರಧಾನಿ ನರೇಂದ್ರ ಮೋದಿಯವರಿಗೇ, ಮಣ್ಣಿನಿಂದ ರೋಶೋಗುಲ್ಲಾ ತಯಾರಿಸಿ ಅದಕ್ಕೆ ಕಲ್ಲು ಸಿಕ್ಕಿಸಿ ಅವರ ಹಲ್ಲು ಮುರಿಯುವಂತೆ ಮಾಡುತ್ತೇನೆ, ಪ್ರಜಾತಾಂತ್ರಿಕವಾಗಿ ಅವರಿಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ದ್ವೇಷ ಕಾರಿದವರು 'ದೀದಿ' ಮಮತಾ ಬ್ಯಾನರ್ಜಿ. ಕಾಂಗ್ರೆಸ್ಸಿನಿಂದ ಸಿಡಿದೆದ್ದು ತಮ್ಮದೇ ಪಕ್ಷ ಸ್ಥಾಪಿಸಿ, ಎಡಪಕ್ಷಗಳ ದಶಕಗಳ ಆಡಳಿತವನ್ನು ಪಶ್ಚಿಮ ಬಂಗಾಳದಲ್ಲಿ ಕಿತ್ತೊಗೆದವರು ಮಮತಾ ಬ್ಯಾನರ್ಜಿ. ಆರಂಭದಲ್ಲಿ ಉತ್ತಮ ಆಡಳಿತ ನೀಡಿದರೂ, ಇತ್ತೀಚಿನ ವರ್ಷಗಳಲ್ಲಿ ಗೂಂಡಾಗಿರಿಯನ್ನೇ ಪ್ರಬಲ ಅಸ್ತ್ರ ಮಾಡಿಕೊಂಡಿದ್ದಾರೆ. ಇವರ ಮುಂದೆ ಮಹಾಘಟಬಂಧನ್ ದ ಯಾವ ನಾಯಕರ ಆಟವೂ ನಡೆಯುವುದಿಲ್ಲ. ಇಂಥವರು ಇದೀಗ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಸಂಕಲ್ಪ ಮಾಡಿದ್ದು, ಮಹಾಘಟಬಂಧನ್ ದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದರೆ, ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ಭಾರೀ ಪ್ರಮಾಣದಲ್ಲಿ ಸೀಟುಗಳನ್ನು ಕಬಳಿಸಲಿದೆ.

ಡಿಎಂಕೆ ಅಧಿನಾಯಕ ಎಂಕೆ ಸ್ಟಾಲಿನ್

ಡಿಎಂಕೆ ಅಧಿನಾಯಕ ಎಂಕೆ ಸ್ಟಾಲಿನ್

ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದ ಡಿಎಂಕೆ ಪಕ್ಷದ ಅಧಿನಾಯಕ ಎಂಕೆ ಸ್ಟಾಲಿನ್ ಈ ಬಾರಿ ತಮಿಳುನಾಡಿನಲ್ಲಿ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂದು ಬಹುತೇಕ ಎಕ್ಸಿಟ್ ಪೋಲ್ ಗಳು ಹೇಳಿವೆ. ಅವರು ನೇರವಾಗಿ ಎಐಎಡಿಎಂಕೆ ಕ್ಷೇತ್ರಗಳಲ್ಲಿ ಕನ್ನ ಕೊರೆದಿದ್ದಾರೆ. ಬಿಜೆಪಿಯ ಆಸೆಗಳನ್ನು ಮುರುಟಿಹೋಗುವಂತೆ ಮಾಡಿದ್ದಾರೆ. ಆದರೆ, ಈ ಎಕ್ಸಿಟ್ ಪೊಲ್ ಉಲ್ಟಾಪುಲ್ಟಾ ಆದರೆ, ತಮಿಳುನಾಡಿನ ಈ ಸಮೀಕ್ಷೆಗಳೂ ಉಲ್ಟಾ ಆಗುತ್ತದಾ? ಎಐಎಡಿಎಕೆಯೇ ಮೇಲುಗೈ ಸಾಧಿಸುವುದಾ? ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿಯಾಗಲಿ ಎಂದ ಪ್ರಥಮ ನಾಯಕರಲ್ಲಿ ಒಬ್ಬರು ಎಂಕೆ ಸ್ಟಾಲಿನ್. ಮೋದಿಯವರು ಇವರನ್ನು ಸೆಳೆಯಲು ಎಷ್ಟೇ ಪ್ರಯತ್ನ ಮಾಡಿದರೂ ಇವರು ದೂರ ಕಾಪಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪರವೇ ಒಲವು ಹೊಂದಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿಯ ಕೆಸಿಆರ್

ತೆಲಂಗಾಣ ರಾಷ್ಟ್ರ ಸಮಿತಿಯ ಕೆಸಿಆರ್

ಕೆಸಿಆರ್ ಎಂದೇ ಜನಜನಿತರಾಗಿರುವ ಕೆ ಚಂದ್ರಶೇಖರ ರಾವ್ ಅವರು ಚಂದ್ರಬಾಬು ನಾಯ್ಡು ಅವರಷ್ಟು ಪ್ರಭಾವಶಾಲಿಯಲ್ಲ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಹೊರತುಪಡಿಸಿದ ತೃತೀಯ ರಂಗ ರಚಿಸಲು ಭಾರೀ ಪ್ರಯತ್ನ ನಡೆಸಿ ವಿಫಲರಾದವರು. ಸದ್ಯಕ್ಕೆ ತೆಲಂಗಾಣದಲ್ಲಿ ಕೆಸಿಆರ್ ಪಕ್ಷವನ್ನು ಹಿಡಿಯುವವರು ಇಲ್ಲವಾಗಿದೆ. ಹೀಗಾಗಿ, ಅವರೇ ಅಲ್ಲಿ ಕಿಂಗ್. ಮಹಾಘಟಬಂಧನ್ ಜೊತೆ ಗುರುತಿಸಿಕೊಂಡಿರುವ ಇವರು, ಇಲ್ಲಿಯೂ ಕಿಂಗ್ ಮೇಕರ್ ಆಗ್ತಾರಾ? ಹದಿನೇಳರಲ್ಲಿ ಕಳೆದ ಬಾರಿ 10 ಸೀಟುಗಳನ್ನು ಕೆಸಿಆರ್ ತಮ್ಮದಾಗಿಸಿಕೊಂಡಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿವೆ ಎಕ್ಸಿಟ್ ಪೋಲ್ ಫಲಿತಾಂಶಗಳು. ಏನಾಗುತ್ತದೋ?

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್

ಅಪ್ಪ ಮುಲಾಯಂ ಸಿಂಗ್ ಯಾದವ್ ಅವರ ನೆರಳಿನಿಂದ ಹೊರಬಂದು ಪಕ್ಷವನ್ನು ಮತ್ತೆ ಕಟ್ಟಲು ಅಖಿಲೇಶ್ ಯಾದವ್ ಭಾರೀ ಶ್ರಮಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಕೇವಲ 5 ಸೀಟು ಗೆದ್ದಿದ್ದ ಅಖಿಲೇಶ್ ಅಂಡ್ ಪಾರ್ಟಿ ಈ ಬಾರಿ 14 ಸೀಟು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ, ಸಿಎನ್ಎಕ್ಸ್ ಜಂಟಿ ಸಮೀಕ್ಷೆ ಹೇಳಿದೆ. ಚಮತ್ಕಾರವಾಗಿ ಅಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಅಖಿಲೇಶ್ ಗೆದ್ದರೆ ಮಹಾಘಟಬಂಧನ್ ದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ ಅವರಿಗೆ ಚಾನ್ಸ್ ಇದೆಯಾ?

ರಾಹುಲ್ ಗಾಂಧಿ ಅವರಿಗೆ ಚಾನ್ಸ್ ಇದೆಯಾ?

ಸದ್ಯಕ್ಕೆ ಇದೇ ಯಕ್ಷ ಪ್ರಶ್ನೆ. ಸರಕಾರ ರಚಿಸುವಲ್ಲಿ, ಮಹಾಘಟಬಂಧನ್ ದಲ್ಲಿ ರಾಹುಲ್ ಗಾಂಧಿ ಯಾವ ಪಾತ್ರ ವಹಿಸಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ, ಸ್ಟಾಲಿನ್ ಹೊರತುಪಡಿಸಿದರೆ ಯಾವ ನಾಯಕನಿಗೂ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವುದು ಬೇಕಿಲ್ಲ. ಇದನ್ನು ಅವರು ಬಹಿರಂಗವಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ಮಮತಾ ಸ್ವಲ್ಪ ಮೆತ್ತಗಾಗಿದ್ದಾರಾದರೂ, ರಾಹುಲ್ ಹೆಸರು ಪ್ರಸ್ತಾಪಿಸಿದ್ದಾರಾದರೂ, ಎಲ್ಲವೂ ನಿರ್ಧಾರವಾಗುವುದು ಲೋಕಸಭೆ ಚುನಾವಣೆ 2019ರಲ್ಲಿ ರಾಹುಲ್ ಎಷ್ಟು ಸ್ಥಾನ ಗೆಲ್ಲುತ್ತಾರೆಂದು ನೋಡಿದಾಗ ಮಾತ್ರ. ಆದರೆ, ಎಕ್ಸಿಟ್ ಪೋಲ್ ಗಳು ರಾಹುಲ್ ಗಾಂಧಿಯವರಿಗೆ ಆಶಾದಾಯಕವಾಗೇನೂ ಇಲ್ಲ. ಏನಾದರೂ ಮಿರಾಕಲ್ ನಡೆಯಲಿ ಎಂದು ರಾಹುಲ್ ಗಾಂಧಿ ಆಶಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+