ಕೋವಿಡ್ನಿಂದ ಸಾವು; 1 ಲಕ್ಷ ರೂ. ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕದಲ್ಲಿ ಇದುವರೆಗೂ ಕೋವಿಡ್ನಿಂದಾಗಿ 36,793 ಜನರು ಮೃತಪಟ್ಟಿದ್ದಾರೆ. ಹಲವಾರು ಕುಟುಂಬದಲ್ಲಿ ಮನೆಗೆ ಆಧಾರ ಸ್ತಂಭವಾಗಿದ್ದ ಜನರೇ ಸೋಂಕಿಗೆ ಬಲಿಯಾಗಿದ್ದಾರೆ. ಎಷ್ಟೋ ಮನೆಗಳಲ್ಲಿ ಯುವಕರು ಮೃತಪಟ್ಟಿದ್ದಾರೆ. ಇದರಿಂದಾಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಕರ್ನಾಟಕ ಸರ್ಕಾರ ಬಡತನ ರೇಖೆಗಿಂತ ಕಡಿಮೆ ಮಟ್ಟದಲ್ಲಿರುವ ಕುಟುಂಬದ ದುಡಿಯುವ ಸದಸ್ಯರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಲ್ಲಿ 1 ಲಕ್ಷ ರೂ. ಪರಿಹಾರಧನವನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ, ಈ ಕುರಿತು ಆದೇಶವನ್ನು ಸಹ ಹೊರಡಿಸಿದೆ. ಪರಿಹಾರ ನೀಡಲು ಮಾರ್ಗಸೂಚಿಯನ್ನು ನಿಗದಿ ಮಾಡಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಲ್ಲಿ ಯಾರಾದರೂ ಕೋವಿಡ್ನಿಂದ ಮೃತಪಟ್ಟಿದ್ದರೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಪಡೆಯಬಹುದಾಗಿದೆ. ಆಯಾ ತಾಲೂಕು ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಸಲ್ಲಿಕೆ ಮಾಡಿ ಪರಿಹಾರ ಪಡೆಯಬಹುದಾಗಿದೆ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಬಿಪಿಎಲ್ ಕುಟುಂಬದವರಿಗೆ ಹೀಗೆ ಪರಿಹಾರ ಘೊಷಣೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. 30 ಸಾವಿರ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದ್ದು, ಸುಮಾರು 300 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಲಸಾಗಿದೆ.
ಯಾರಿಗೆ ಪರಿಹಾರ?; ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೀಮಿತವಾಗುವಂತೆ ಈ ಪರಿಹಾರ ಸಿಗಲಿದೆ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳು ಮೃತಪಟ್ಟಿದ್ದರೂ ಆ ಕುಟುಂಬದ ದುಡಿಯುವ, ವಯಸ್ಕರ ಹೆಸರಿನಲ್ಲಿ ಪರಿಹಾರದ ಮೊತ್ತವನ್ನು ನೀಡಲಾಗುತ್ತದೆ.
ಕೋವಿಡ್ ಪರಿಸ್ಥಿತಿ ಇರುವ ತನಕ ಈ ಯೋಜನೆಯನ್ನು ಮುಂದುವರೆಸಲು ಸರ್ಕಾರ ತೀರ್ಮಾನಿಸಿದೆ. ಕೋವಿಡ್ ಲಸಿಕೆಗಾಗಿ ನಿಗದಿ ಮಾಡಿದ್ದ ಹಣವನ್ನು ಇದಕ್ಕಾಗಿ ಉಪಯೋಗಿಸಲಾಗುತ್ತದೆ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಮಾಡುವುದರಿಂದ ರಾಜ್ಯ ಸರ್ಕಾರದ ಆರ್ಥಿಕ ಹೊರೆ ಸಹ ಕಡಿಮೆಯಾಗಲಿದೆ.
ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಬಂದಾಗ ಲಾಕ್ಡೌನ್ ಘೋಷಣೆ ಮಾಡಿತ್ತು. ಆಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ವಿವಿಧ ವರ್ಗದ ಜನರಿಗಾಗಿ 1,250 ಕೋಟಿ, 500 ಕೋಟಿ ರೂ.ಗಳ ಎರಡು ಪ್ಯಾಕೇಜ್ ಘೋಷಣೆ ಮಾಡಿತ್ತು. ಬಳಿಕ ದೇಶದಲ್ಲಿಯೇ ಮೊದಲ ಬಾರಿಗೆ ಬಿಪಿಎಲ್ ಕುಟುಂಬದವರಿಗೆ ಪರಿಹಾರ ನೀಡುವ ಯೋಜನೆಯನ್ನು ಘೋಷಣೆ ಮಾಡಿತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅಗತ್ಯ ದಾಖಲೆಗಳ ವಿವರಗಳನ್ನು ಇಲ್ಲಿ ನಮೂದಿಸಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?; ಬಿಪಿಎಲ್ ಕುಟುಂಬದ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಆಯಾ ತಾಲೂಕು ಕಚೇರಿಗಳಲ್ಲಿ ಅರ್ಜಿ ಪಡೆದು ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ, ಪರಿಹಾರವನ್ನು ಪಡೆಯಲು ಸಲ್ಲಿಕೆ ಮಾಡಬೇಕಾಗಿದೆ.
ಅರ್ಜಿಯ ಜೊತೆ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯದಿಂದ ಅಧಿಕೃತವಾಗಿ ಗುರುತಿಸಿದ ಕೋವಿಡ್ ಪಾಸಿಟಿವ್ ವರದಿ, ಕೋವಿಡ್ ದೃಢಪಟ್ಟ ರೋಗಿಯ ಸಂಖ್ಯೆ ಹಾಗೂ ವೈದ್ಯರಿಂದ ದೃಢೀಕರಣ ಮಾಡಿಸಿ ಅರ್ಜಿಯನ್ನು ಸಲ್ಲಿಸಬೇಕು.
ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಪಡೆದವರು (ಕೋವಿಡ್-19 ನೆಗಟಿವ್ ಇದ್ದವರು) ಕ್ಲಿನಿಕಲ್ ರೇಡಿಯಾಲಜಿ ಮತ್ತು ಇತರೆ ಸಂಬಂಧಿಸಿದ ಪ್ರಯೋಗಾಲಯ ವರದಿ ಸಲ್ಲಿಸಬೇಕು.
ಅರ್ಜಿಯ ಜೊತೆಗೆ ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್ ಪ್ರತಿ, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಅರ್ಜಿ ನಮೂನೆ-1ರಲ್ಲಿ ಮಾಹಿತಿ, ನಮೂನೆ-2ರಲ್ಲಿ ಸ್ವಯಂ ಘೋಷಣಾ ಪತ್ರ, ನಮೂನೆ 3ರಲ್ಲಿ ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರಗಳನ್ನು ಸಲ್ಲಿಸಬೇಕು.
ಈ ಮೇಲಿನ ದಾಖಲೆಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ ತಾಲೂಕು ಆರೋಗ್ಯ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ತಾಲೂಕು ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.












Click it and Unblock the Notifications