ಅಡ್ವಾಣಿ ಆಯ್ಕೆ ಮಾಡಿದ್ದು ಭವಿಷ್ಯದ ಪಿಎಂ ಸ್ಥಾನಕ್ಕೆ, ತ್ರಿವಿಕ್ರಮನಂತೆ ಬೆಳೆದಿದ್ದರು ಅನಂತ್

ಕರ್ನಾಟಕ ಬಿಜೆಪಿಯಲ್ಲಿ ಒಂದು ಯುಗಾಂತ್ಯವಾಗಿದೆ. ಅನಂತ ಕುಮಾರ್ ಜತೆಗಿದ್ದ ಕರ್ನಾಟಕ ಬಿಜೆಪಿ ಹಾಗೂ ಅನಂತಕುಮಾರ್ ಇಲ್ಲದ ಅಥವಾ ನಂತರದ ಬಿಜೆಪಿ ಅಂತಲೇ ಪರಿಗಣಿಸಬೇಕಾಗುತ್ತದೆ. ಈ ದಿನ ಅನಂತ್ ಸಾವಿನ ಸುದ್ದಿ ಕೇಳಿದಾಗಿನಿಂದ ಮನೆಯಿಂದ ಆಚೆ ಹೋಗಿಲ್ಲ ಎಂದರು ದಶಕಗಳಿಂದ ಬಿಜೆಪಿಯ ಬೆಳವಣಿಗೆ ನೋಡುತ್ತಾ ಬರುತ್ತಿರುವ ಆ ಆರೆಸ್ಸೆಸ್ ಕಾರ್ಯಕರ್ತ.

ಅನಂತ್ ಕುಮಾರ್ ಬೆಳವಣಿಗೆ ದಾಖಲಿಸುವ ಹಾಗಿದ್ದರೆ ಎಬಿವಿಪಿ ದಿನಗಳಿಂದ ಹೇಳುತ್ತಾ ಸಾಗಬೇಕಾಗುತ್ತದೆ. ಅದಕ್ಕೂ ಮುಂಚೆ ಅಂದರೆ, ಅನಂತ್ ಕುಮಾರ್ ಅವರ ಮೇಲೆ ತಾಯಿ ಗಿರಿಜಾ ಶಾಸ್ತ್ರಿ ಪ್ರಭಾವದ ಬಗ್ಗೆ ಪ್ರಸ್ತಾವ ಮಾಡಲೇ ಬೇಕಾಗುತ್ತದೆ. ತಮ್ಮ ಮಗನ ಸಲುವಾಗಿ ದೊಡ್ಡ ಕನಸುಗಳನ್ನು ಕಂಡಿದ್ದ ಹೆಣ್ಣುಮಗಳು ಅವರು. ಅಷ್ಟೇ ಅಲ್ಲ, ಅವರೇ ಸ್ವತಃ ಮಹತ್ವಾಕಾಂಕ್ಷಿಯಾಗಿದ್ದರು.

ಅನ್ನ, ಅಕ್ಷರ, ಆಹಾರ ಕ್ಷೇತ್ರದಲ್ಲಿ ಗಿರಿಜಾ ಶಾಸ್ತ್ರಿ ಅವರು ಕೆಲಸ ಮಾಡಿದ್ದು ಕಡಿಮೆ ಏನಲ್ಲ. ತೇಜಸ್ವಿನಿ ಅನಂತಕುಮಾರ್ ಅವರ 'ಅದಮ್ಯ ಚೇತನ'ದ ಜತೆಗೆ ಗಿರಿಜಾ ಶಾಸ್ತ್ರಿ ಮೆಮೋರಿಯಲ್ ಟ್ರಸ್ಟ್ ಅಂತಲೂ ಇದೆ. ಇನ್ನು ಅನಂತಕುಮಾರ್ ರ ತಂದೆ ರೈಲ್ವೆಯಲ್ಲಿ ಉದ್ಯೋಗಿ ಆಗಿದ್ದರು. ಈ ವಿಚಾರವನ್ನು ಮೆಟ್ರೋ-ಮೆಮು ಮತ್ತಿತರ ಯಾವುದೇ ರೈಲ್ವೆಗೆ ಸಂಬಂಧಿಸಿದ ವಿಚಾರ ಬಂದಾಗ ಅನಂತ್ ಕೂಡ ಹೇಳುತ್ತಿದ್ದರು.

ಅಡ್ವಾಣಿ ಕುಟುಂಬಕ್ಕೇ ಬಹಳ ಅಚ್ಚುಮೆಚ್ಚು

ಅಡ್ವಾಣಿ ಕುಟುಂಬಕ್ಕೇ ಬಹಳ ಅಚ್ಚುಮೆಚ್ಚು

ಮೊದಲೇ ಹೇಳಿದಂತೆ ಅನಂತ್ ಎಬಿವಿಪಿಯಿಂದ ಬಂದವರು. ಎಬಿವಿಪಿಯಿಂದ ಬಂದಂಥವರನ್ನೇ ಇಡೀ ದೇಶದಿಂದ ಐವರನ್ನು ಆರಿಸಿಕೊಂಡ ಆಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಡ್ವಾಣಿ, ಪಕ್ಷದಲ್ಲಿ ಬೆಳೆಸಲು ನಿರ್ಧರಿಸಿದರು. ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಪ್ರಮೋದ್ ಮಹಾಜನ್, ನರೇಂದ್ರ ಮೋದಿ ಹಾಗೂ ಅನಂತ್ ಕುಮಾರ್ ಇವರೇ ಆ ಐವರು. ಒಂದಿಲ್ಲೊಂದು ದಿನ ಈ ದೇಶದ ಪ್ರಧಾನಿ ಆಗುತ್ತಾರೆ ಅಂದುಕೊಂಡಿದ್ದ ಪ್ರಮೋದ್ ಮಹಾಜನ್ ತಮ್ಮನಿಂದಲೇ ಹತ್ಯೆಗೀಡಾದರು. ಆದರೆ ಉಳಿದ ನಾಲ್ವರು ನಿರೀಕ್ಷೆ ಹುಸಿ ಮಾಡಲಿಲ್ಲ. ಅನಂತ್ ಮೇಲೆ ಅಡ್ವಾಣಿ ಅವರಿಗೆ ಬಹಳ ಅಕ್ಕರೆ. ಬೆಂಗಳೂರಿಗೆ ಬಂದಾಗ ಅನಂತ್ ಮನೆಗೆ ಭೇಟಿ ನೀಡದೆ ಹಿಂತಿರುಗುತ್ತಿದ್ದ ಸಂದರ್ಭಗಳು ಕಡಿಮೆ. ಆಪ್ತ ಮೂಲಗಳೇ ಖಚಿತ ಪಡಿಸುವಂತೆ ಅವರು ಅಡ್ವಾಣಿ ಜತೆಗಷ್ಟೇ ಆಪ್ತರಾಗಿದ್ದವರಲ್ಲ. ಅವರ ಇಡೀ ಕುಟುಂಬಕ್ಕೆ ಅನಂತ್ ಬಗ್ಗೆ ವಿಶೇಷ ಪ್ರೀತಿ ಇತ್ತು. ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಅನಂತ ಕುಮಾರ್ ಸಚಿವರಾಗುವುದರ ಹಿಂದೆ ಅಡ್ವಾಣಿ ಹಾಗೂ ಬೈರೋನ್ ಸಿಂಗ್ ಶೆಖಾವತ್ ಪ್ರಭಾವ ಇತ್ತು. ಅದಕ್ಕಿಂತ ಹೆಚ್ಚಾಗಿ ಅನಂತ್ ಬಗ್ಗೆ ಪ್ರೀತಿ ಇತ್ತು ಎಂಬುದನ್ನು ಹಲವರು ಸ್ಮರಿಸುತ್ತಾರೆ.

ಊಟ-ತಿಂಡಿ ಇಲ್ಲದೆ ವಾಪಸ್ ಕಳಿಸುತ್ತಿರಲಿಲ್ಲ

ಊಟ-ತಿಂಡಿ ಇಲ್ಲದೆ ವಾಪಸ್ ಕಳಿಸುತ್ತಿರಲಿಲ್ಲ

ಅನಂತಕುಮಾರ್ ಅವರ ಕುಟುಂಬ ಹಿನ್ನೆಲೆ ಹಲವು ಪಾಠಗಳನ್ನು ಕಲಿಸಿತ್ತು. ಅವರ ಬಳಿ ಯಾರಾದರೂ ಕೆಲಸ ಮಾಡಿಕೊಡುವಂತೆ ಅಥವಾ ಸಹಾಯ ಕೇಳಿ ಹೋದರೆ, ಯಾವ ಸಮಯದಲ್ಲಿ ಹೋಗಿದ್ದೀವಿ ಎಂಬ ಆಧಾರದಲ್ಲಿ ಮೊದಲಿಗೆ ತಿಂಡಿಯೋ-ಊಟವೋ ವ್ಯವಸ್ಥೆ ಮಾಡುವಂತೆ ಹೇಳುತ್ತಿದ್ದರು. ಆ ನಂತರವೇ ಉಳಿದ ಮಾತುಕತೆ. ಈ ಸಲ ನನ್ನ ಮಗಳಿಗೆ ಕಾಲೇಜಿನ ಸೀಟಿಗೆ ಸಂಬಂಧಿಸಿದಂತೆ ಸಣ್ಣ ನೆರವಿನ ಅಗತ್ಯ ಇತ್ತು. ಅದನ್ನು ಕೇಳುವ ಸಲುವಾಗಿ ಅವರ ಕಚೇರಿಗೆ ಹೋಗಿದ್ದೆ. ಮೊದಲಿಗೆ ಊಟ ಮಾಡುವ ತನಕ ಉಳಿದ ಯಾವುದರ ಬಗ್ಗೆಯೂ ಮಾತಿರಲಿಲ್ಲ. ಆ ನಂತರ ನನ್ನೆದುರಿಗೇ ತಮ್ಮಿಂದ ಆದ ಪ್ರಯತ್ನವನ್ನು ಸಹ ಮಾಡಿದರು. ಇದು ನನ್ನೊಬ್ಬನ ಅನುಭವ ಅಲ್ಲ. ಅವರ ಕಚೇರಿಗೆ ತೆರಳಿದ ಹಲವರು ಇದೇ ಮಾತನ್ನು ಹೇಳುತ್ತಾರೆ. ಅವರಿಗೆ ಸಿಗಬೇಕಿದ್ದ ಇನ್ನೂ ದೊಡ್ಡ ಮಟ್ಟದ ಮಾನ್ಯತೆ ಸಿಗದೇ ಹೋದದ್ದು ಬೇಸರದ ವಿಚಾರ ಎನ್ನುತ್ತಾರೆ ದಾವಣಗೆರೆ ಮೂಲದ ಮತ್ತೊಬ್ಬ ಆರೆಸ್ಸೆಸ್ ಕಾರ್ಯಕರ್ತ.

ಮುಖ್ಯಮಂತ್ರಿ ಆಗಿ ಬಿಂಬಿಸಿಕೊಳ್ಳಲು ಬಹಳ ಅವಕಾಶಗಳಿದ್ದವು

ಮುಖ್ಯಮಂತ್ರಿ ಆಗಿ ಬಿಂಬಿಸಿಕೊಳ್ಳಲು ಬಹಳ ಅವಕಾಶಗಳಿದ್ದವು

ಕರ್ನಾಟಕ ಬಿಜೆಪಿಯಲ್ಲಿ ಅನಂತಕುಮಾರ್ ಬಗ್ಗೆ ನಾನಾ ಬಗೆಯ ಅಭಿಪ್ರಾಯಗಳಿದ್ದವು. ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ವಿರುದ್ಧ ಗುಂಪನ್ನು ಕಟ್ಟಿದ್ದಾರೆ. ಬೇಕೆಂತಲೇ ಇತರರನ್ನು ಎತ್ತಿಕಟ್ಟುತ್ತಾರೆ ಇತ್ಯಾದಿ ಮಾತನಾಡುತ್ತಾರೆ. ಆರೆಸ್ಸೆಸ್ ಬಗ್ಗೆ ಗೊತ್ತಿಲ್ಲದವರು ಮಾತ್ರ ಹೀಗೆ ಮಾತನಾಡಲು ಸಾಧ್ಯ. ಅನಂತ್ ಹಾಗೂ ಯಡಿಯೂರಪ್ಪ ಆರೆಸ್ಸೆಸ್ ನಿಂದಲೇ ಬಂದವರು. ಅಲ್ಲಿ ಹೇಳಿಕೊಡುವ ಮೊದಲ ಪಾಠ ದೇಶಭಕ್ತಿ ಹಾಗೂ ತ್ಯಾಗ. ಅವುಗಳನ್ನು ಅಳವಡಿಸಿಕೊಂಡಿದ್ದರು. ಇಲ್ಲದಿದ್ದರೆ ಕರ್ನಾಟಕದಲ್ಲಿ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದು ಬಹಳ ಕಷ್ಟದ ವಿಚಾರ ಏನಾಗಿರಲಿಲ್ಲ. ಅದರಲ್ಲೂ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟುಹೋಗಿ, ಕೆಜೆಪಿ ಸ್ಥಾಪನೆ ಸಂದರ್ಭಕ್ಕಿಂತ ಉತ್ತಮ ಅವಕಾಶ ಬೇಕಿರಲಿಲ್ಲ. ಆದರೆ ಸ್ವತಃ ಅನಂತ್ ಕನಸು ದೊಡ್ಡದಿತ್ತು. ಅವರನ್ನು ಅಡ್ವಾಣಿ ಅವರು ಆರಿಸಿಕೊಂಡು, ಬೆಳೆಸಿದ್ದು ಬೇರೆ ಕಾರಣಕ್ಕೆ ಆಗಿತ್ತು ಎಂಬುದನ್ನು ಪಕ್ಷದ ಹಲವು ಹಿರಿಯರು ಅನುಮೋದಿಸುತ್ತಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಯಾರು ಸ್ಪರ್ಧಿಸಬಹುದು?

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಯಾರು ಸ್ಪರ್ಧಿಸಬಹುದು?

ಅನಂತ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಇನ್ನು ಮುಂದೆ ಯಾರು ಸ್ಪರ್ಧೆ ಮಾಡಬಹುದು ಎಂಬ ಬಗ್ಗೆ ನಡೆಯುತ್ತಿದ್ದ ಚರ್ಚೆ ಈಗ ಗಂಭೀರ ಸ್ವರೂಪ ಪಡೆದಿದೆ. ಆ ಪೈಕಿ ಮೊದಲ ಆಯ್ಕೆಯಾಗಿ ತೇಜಸ್ವಿನಿ ಅನಂತಕುಮಾರ್ ಹೆಸರು ಕೇಳಿಬರುತ್ತಿದೆ. ಅನುಕಂಪದ ಆಧಾರದಲ್ಲಿ ಮತ ಚಲಾವಣೆ ಆಗಬಹುದು ಎಂಬುದು ಲೆಕ್ಕಾಚಾರ. ಆದರೆ ಬೆಂಗಳೂರಿನಲ್ಲಿ ನಡೆದಿರುವ ಚುನಾವಣೆ ಇತಿಹಾಸವನ್ನು ನೋಡುವುದಾದರೆ ಇಲ್ಲಿ ಅನುಕಂಪ ಕೆಲಸಕ್ಕೆ ಬಂದ ಉದಾಹರಣೆಗಳಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಹಾಗಿದ್ದರೆ ಇನ್ಯಾರು ಸ್ಪರ್ಧಿಸುವುದು ಬಿಜೆಪಿ ಪಾಲಿಗೆ ಪ್ಲಸ್ ಆಗಬಹುದು ಅಂದರೆ ಎಂ.ಪಿ.ಕುಮಾರ್, ಸುರೇಶ್ ಕುಮಾರ್ ಹಾಗೂ ಆರ್.ಅಶೋಕ್ ಈ ಮೂವರ ಹೆಸರು ಕೇಳಿಬರುತ್ತಿದೆ. ಅಶೋಕ್ ರಾಜ್ಯ ರಾಜಕಾರಣದಿಂದ ಆಚೆ ಹೋಗಲು ಸಿದ್ಧರಾಗುವುದು ಅನುಮಾನ. ಅಂಥ ಸಂದರ್ಭದಲ್ಲಿ ಎಂ.ಪಿ.ಕುಮಾರ್ ಅಥವಾ ಸುರೇಶ್ ಕುಮಾರ್ ಇಬ್ಬರಲ್ಲಿ ಒಬ್ಬರು ಸರಿಯಾದ ಆಯ್ಕೆ ಆಗಬಹುದು ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+