ದಾವಣಗೆರೆಯಲ್ಲಿ ಬೆಣ್ಣೆದೋಸೆ ಪ್ರಸಿದ್ಧಿ ಆಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ದಾವಣಗೆರೆ, ಸೆಪ್ಟೆಂಬರ್, 12: ಬೆಣ್ಣೆ ದೋಸೆ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಚಟ್ನಿ ಹಾಗೂ ಪಲ್ಯ ರುಚಿ ಆಗಿದ್ದರಂತೂ ಅದರ ಮಜಾನೇ ಬೇರೆ ಆಗಿರುತ್ತದೆ. ದಾವಣಗೆರೆ ಬೆಣ್ಣೆದೋಸೆ ಎಂದಾಕ್ಷಣ ಬಾಯಲ್ಲಿ ನೀರು ಬಂದೇ ಬರುತ್ತದೆ. ಯಾಕೆಂದರೆ ಕೇವಲ ದಾವಣಗೆರೆ ಮಾತ್ರವಲ್ಲ, ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಈ ಬೆಣ್ಣೆ ದೋಸೆ ಪ್ರಖ್ಯಾತಿ ಪಡೆದಿದೆ. ರಾಜ್ಯಾದ್ಯಂತ ಈ ಬೆಣ್ಣೆ ದೋಸೆಯನ್ನು ಸವಿಯಲು ಜನರು ಕಾತರದಿಂದ ಕಾಯುತ್ತಿರುತ್ತಾರೆ. ದಾವಣಗೆರೆಗೆ ಬಂದವರು ಬೆಣ್ಣೆ ದೋಸೆಯನ್ನು ಸವಿದೇ ಹಿಂದಿರುಗುತ್ತಾರೆ.
ದಾವಣಗೆರೆ ಬೆಣ್ಣೆದೋಸೆಗೆ ಕೇವಲ ದಶಕಗಳು ಮಾತ್ರ ಅಲ್ಲ, ಬರೋಬ್ಬರಿ 78 ವರ್ಷಗಳ ಸುದೀರ್ಘ ಇತಿಹಾಸ ಇದೆ. ಅಂದಿನಿಂದ ಇಂದಿನವರೆಗೆ ದೋಸೆ ರುಚಿ ಹಾಗೆಯೇ ಉಳಿದಿದೆ. ಕಾಲಕ್ಕೆ ತಕ್ಕಂತೆ ಬದಲಾಗಿದ್ದರೂ ಬೆಣ್ಣೆದೋಸೆ ರುಚಿ ಮಾತ್ರ ಹಾಗೆಯೇ ಇದೆ. ಬೇರೆ ಯಾವುದೇ ಊರುಗಳಿಂದ ಇಲ್ಲಿಗೆ ಬಂದರೆ ಬಿಸಿ ಬಿಸಿ ಬೆಣ್ಣೆದೋಸೆ, ಗಟ್ಟಿ ಚಟ್ನಿ, ಆಲೂಗಡ್ಡೆ ಪಲ್ಯವನ್ನು ಆನಂದದಿಂದ ಸೇವಿಸಿ ಹೋಗುತ್ತಾರೆ. ಸಾಮಾನ್ಯ ದಿನಗಳಲ್ಲಿ ಬೆಣ್ಣೆದೋಸೆ ಸವಿಯಲು ಜನರ ದಂಡೇ ನಿಲ್ಲುತ್ತದೆ. ಇನ್ನು ಜಾತ್ರೆ, ದೊಡ್ಡ ದೊಡ್ಡ ಸಮಾರಂಭಗಳು, ಸಮಾವೇಶಗಳಿದ್ದರೆ ದೋಸೆಗಳನ್ನು ತಯಾರಿಸುವವರಿಗೆ ಬಿಡುವೇ ಇರುವುದಿಲ್ಲ.
Vani Vilas Sagara : ಇತಿಹಾಸದಲ್ಲೇ ಮತ್ತೊಮ್ಮೆ ಹೊಸ ದಾಖಲೆ ಸೃಷ್ಟಿಸಿದ ವಾಣಿ ವಿಲಾಸ ಜಲಾಶಯ
ಬೆಣ್ಣೆಯಿಂದ ಉದ್ಯಮಿಗಳ ಬೆಳವಣಿಗೆ
ಗ್ರಾಹಕರ ದಂಡೇ ಆಗಮಿಸುವುದರಿಂದ ಒಂದು ದೋಸೆ ಕೊಡಲು ಗಂಟೆಗಟ್ಟಲೇ ಕಾಯಿಸುತ್ತಾರೆ. ಕಾದು ತಿಂದರೆ ಅದರ ಮಜಾನೆ ಬೇರೆ ಅಂತಾರಲ್ಲ ಹಾಗೆ. ಎಷ್ಟೇ ಸಮಯ ಆದರೂ ಕೂಡ ಬೆಣ್ಣೆ ದೋಸೆಯನ್ನು ಸವಿದೇ ತೆರಳುತ್ತಾರೆ. ಅಷ್ಟೊಂದು ಬೇಡಿಕೆ ಬೆಣ್ಣೆದೋಸೆಗೆ ಇದೆ. ಸ್ಯಾಂಡಲ್ ವುಡ್ ನಟರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಮುಂತಾದವರು ದಾವಣಗೆರೆಗೆ ಬಂದಾಗ ಮೊದಲು ಮಾಡುವ ಕೆಲಸವೇ ಬೆಣ್ಣೆ ದೋಸೆಯನ್ನು ಸವಿಯುವುದಾಗಿರುತ್ತದೆ. 2018ರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ದಾವಣಗೆರೆಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು ಕೂಡ ಇಲ್ಲಿನ ರುಚಿಗೆ ಮಾರು ಹೋಗಿದ್ದರು. ಆಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆದಿಯಾಗಿ ಎಲ್ಲರೂ ದೋಸೆಯನ್ನು ಚಪ್ಪರಿಸಿದ್ದರು.
ದಾವಣಗೆರೆ ಜಿಲ್ಲೆಯಾಗಿ ಕೇವಲ 25 ವರ್ಷಗಳಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ ಇಲ್ಲಿ ಹೆಚ್ಚು ಹೈನುಗಾರಿಕೆ ಮಾಡಲಾಗುತಿತ್ತು. ಹಳ್ಳಿಗಳಲ್ಲಿ ಹಸು, ಎಮ್ಮೆ ಸಾಕಾಣಿಕೆ ಹೆಚ್ಚಾಗಿತ್ತು. ಆಗ ಸುಲಭವಾಗಿ ಕಡಿಮೆ ದರದಲ್ಲಿ ಬೆಣ್ಣೆ ಸಿಗುತಿತ್ತು. ಯಾವಾಗ ದೋಸೆಗೆ ಬೆಣ್ಣೆ ಹಾಕಲು ಶುರು ಮಾಡಿದ್ದರೋ, ಅಲ್ಲಿಂದ ಇಲ್ಲಿಯವರೆಗೂ ಬೆಣ್ಣೆಗೆ ಡಿಮ್ಯಾಂಡ್ ಹೆಚ್ಚಾಗುತ್ತಾ ಬಂದಿದೆ. ಹೆಚ್ಚಿನ ಉಪಯೋಗದ ಜೊತೆಗೆ ಹೈನುಗಾರಿಕೆ ಮಾಡುವವರು, ರೈತರು ಇದರಿಂದ ಸಾಕಷ್ಟು ಆದಾಯ ಗಳಿಸಿದರು. ನಗರ ಬೆಳೆದಂತೆ ಹೈನುಗಾರಿಕೆ ಕಡಿಮೆ ಆಗಿದೆ. ಆದರೂ ಈಗಲೂ ಜಿಲ್ಲೆಯಲ್ಲಿ ಬೆಣ್ಣೆ ಹೆಚ್ಚಾಗಿ ಸಿಗುತ್ತದೆ. ಕೆಲವರು ಈ ವ್ಯಾಪಾರದಿಂದಲೇ ದೊಡ್ಡ ದೊಡ್ಡ ಉದ್ಯಮಿಗಳಾದ ಇತಿಹಾಸವೂ ಇದೆ.
ಸಾಮಾನ್ಯವಾಗಿ ಜನರು ದೋಸೆಯ ಜೊತೆಗೆ ಚಟ್ನಿಯನ್ನು ಕೇಳುತ್ತಾರೆ. ತೆಂಗಿನಕಾಯಿಯಿಂದ ಮಾಡಿದ ಚಟ್ನಿಯನ್ನು ಕೇಳಿ ಮತ್ತಷ್ಟು ಹೆಚ್ಚಾಗಿ ಹಾಕಿಸಿಕೊಳ್ಳುತ್ತಾರೆ. ಅಕ್ಕಿ, ಉದ್ದಿನಬೇಳೆ, ಮಂಡಕ್ಕಿ ಸೇರಿದಂತೆ ದೋಸೆಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಲಾಗುತ್ತದೆ. ರುಬ್ಬಿದ ಹಿಟ್ಟನ್ನು ಹಾಕಿ ಬೆಣ್ಣೆದೋಸೆ ಮಾಡಲಾಗುತ್ತದೆ. ಮಸಾಲೆ ದೋಸೆ ಅಥವಾ ಸೆಟ್ ದೋಸೆಯಂತೆ ಬೆಣ್ಣೆದೋಸೆಯನ್ನು ಮಾಡಲಾಗುತ್ತದೆ. ಮಸಾಲೆ ದೋಸೆ, ಸೆಟ್ ದೋಸೆಗಿಂತ ಇಲ್ಲಿಗೆ ಯಾರೇ ಬಂದರೂ ಮೊದಲು ಕೇಳುವುದು ಮಾತ್ರ ಬೆಣ್ಣೆದೋಸೆಯನ್ನೇ ಅನ್ನುವುದು ವಿಶೇಷವಾಗಿದೆ.
ಮಧ್ಯಕರ್ನಾಟಕದ ಹೆಬ್ಬಾಗಿಲು ಆಗಿರುವ ಕಾರಣಕ್ಕೆ ಹೆಚ್ಚಾಗಿ ದಾವಣಗೆರೆಗೆ ಜನರು ಆಗಮಿಸುತ್ತಲೇ ಇರುತ್ತಾರೆ. ಸಿನಿಮಾ ನಟರು ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ಹೋಗುವಾಗ ದಾವಣಗೆರೆಗೆ ಬಂದು ಕನಿಷ್ಠ ಒಂದು ಪ್ಲೇಟ್ ಬೆಣ್ಣೆದೋಸೆ ತಿಂದೇ ಮುಂದಕ್ಕೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.
ದಾವಣಗೆರೆಯಲ್ಲಿ
1928ರಲ್ಲಿ
ಬೆಣ್ಣೆದೋಸೆ
ಶುರುವಾಗಿತ್ತು.
ಆಗಿನ್ನು
ಭಾರತಕ್ಕೆ
ಸ್ವಾತಂತ್ರ್ಯ
ಬಂದಿರಲಿಲ್ಲ.
ಆಗ
ಜನರು
ಗುಳೆ
ಹೋಗುವುದು
ಹೆಚ್ಚಾಗಿತ್ತು.
ಆ
ಜಿಲ್ಲೆಯಿಂದ
ಈ
ಜಿಲ್ಲೆಗೆ
ಹೋಗುತ್ತಿದ್ದರು.
ಕೆಲವರು
ಕೂಲಿ
ಅರಸಿ
ಬೇರೆಡೆ
ಹೋಗುತ್ತಿದ್ದರು.
ಮತ್ತೆ
ಕೆಲವರು
ಇಲ್ಲಿದ್ದರೆ
ಏನೂ
ಆಗುವುದಿಲ್ಲ
ಎನ್ನುವ
ಕಾರಣಕ್ಕೆ
ಬೇರೆ
ಕಡೆ
ಹೋಗಿ
ವಾಸ
ಮಾಡಿದವರು
ಹೆಚ್ಚಿನ
ಸಂಖ್ಯೆಯಲ್ಲಿ
ಇದ್ದಾರೆ.
ಬೆಳಗಾವಿ
ಜಿಲ್ಲೆಯ
ಬೀಡ್ಕಿ
ಗ್ರಾಮದ
ಚೆನ್ನಮ್ಮ
ಎಂಬ
ಮಹಿಳೆ
ತನ್ನ
ಮಕ್ಕಳ
ಜೊತೆ
ದಾವಣಗೆರೆಗೆ
ಆಗಮಿಸಿದ್ದರು.
ಚೆನ್ನಮ್ಮ
ಪಾಕ
ತಯಾರಿಸುವಲ್ಲಿ
ಪ್ರವೀಣೆ
ಆಗಿದ್ದರು.
ನಗರದ
ವಸಂತ
ಚಿತ್ರಮಂದಿರದ
ಬಳಿ
ಸಣ್ಣದಾದ
ಟಿಫನ್
ಸೆಂಟರ್
ಶುರು
ಮಾಡಿದರು.
ಜೊತೆಗೆ
ಆಲೂಗೆಡ್ಡೆ
ಪಲ್ಯ
ತಯಾರಿಸಲು
ಶುರು
ಮಾಡಿದ್ದರು.
ಅವರ
ಕೈರುಚಿ
ಎಲ್ಲರಿಗೂ
ಇಷ್ಟವಾಗಿತ್ತು.
ಆಗಿನ ಕಾಲದಲ್ಲಿ ರಾಗಿ ಹಿಟ್ಟಿನಿಂದ ದೋಸೆ ತಯಾರು ಮಾಡುತ್ತಿದ್ದರು. 1938ರ ವೇಳೆಗೆ ಚೆನ್ನಮ್ಮನವರ ಮಕ್ಕಳು ಅಕ್ಕಿ ಹಿಟ್ಟು, ಮಂಡಕ್ಕಿ, ಉದ್ದಿನ ಬೇಳೆ, ಬೆಣ್ಣೆಯೊಂದಿಗೆ ದೋಸೆಯನ್ನು ತಯಾರಿಸತೊಡಗಿದರು. ಬರಬರುತ್ತಾ ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನಾಟಕ ಅಭ್ಯಾಸಕ್ಕೆ ಬರುತ್ತಿದ್ದ ಬೇರೆ ಬೇರೆ ಜಿಲ್ಲೆಗಳ ಜನರು ಚೆನ್ನಮ್ಮ ಮಾಡಿದ್ದ ದೋಸೆಯನ್ನು ಸವಿಯದೇ ಹಿಂತಿರುಗಿತ್ತಿರಲಿಲ್ಲ. ಆಗಿನಿಂದ ಚೆನ್ನಮ್ಮ ಮಾಡುತ್ತಿದ್ದ ದೋಸೆ ಎಲ್ಲೆಡೆ ಮನೆಮಾತಾಗಿತ್ತು. ನಂತರ ಚೆನ್ನಮ್ಮನವರ ಗಂಡು ಮಕ್ಕಳಾದ ಶಾಂತಪ್ಪ ಮತ್ತು ಮಹದೇವಪ್ಪ ಹೋಟೆಲ್ನ ಉಸ್ತುವಾರಿ ವಹಿಸಿಕೊಂಡರು. ತಮ್ಮದೇ ಆದ ಟಿಫನ್ ಸೆಂಟರ್ಗಳನ್ನು ಬೇರೆ ಬೇರೆ ಕಡೆ ಆರಂಭಿಸಿದರು. ಆಗಿನಿಂದ ಇವರ ಟಿಫಿನ್ ಸೆಂಟರ್ ಮತ್ತಷ್ಟು ಜನಪ್ರಿಯತೆ ಆಗುತ್ತಾ ಹೋಯಿತು. ಬೇಡಿಕೆಯೂ ಜಾಸ್ತಿ ಹೆಚ್ಚಾಯಿತು.
ಚೆನ್ನಮ್ಮನವರ ಮಕ್ಕಳು 1944ರಲ್ಲಿ ಬೇರೆ ಬೇರೆಯಾಗಿ ತಮ್ಮ ಸ್ವಂತ ವ್ಯಾಪಾರ ಮಾಡಲು ಶುರು ಮಾಡಿದರು. ಬಸವಂತಪ್ಪ, ಶಂಕರಪ್ಪ ಎಂಬುವವರು ಮತ್ತೆ ತಮ್ಮ ಊರಿಗೆ ವಾಪಾಸ್ಸಾದರು. ಶಾಂತಪ್ಪ ಮತ್ತು ಮಹಾದೇವಪ್ಪ ಮಾತ್ರ ದಾವಣಗೆರೆ ಬಿಟ್ಟು ಬೇರೆಡೆ ಹೋಗಲಿಲ್ಲ. ಇವರಿಬ್ಬರು ಆರಂಭಿಸಿದ ಹೊಟೇಲ್ಗಳು ಇಂದಿಗೂ ಸ್ವಾದವನ್ನು ಉಳಿಸಿಕೊಂಡಿವೆ. ನಂತರವ ಕೇವಲ ದಾವಣಗೆರೆ ಮಾತ್ರವಲ್ಲ, ರಾಜ್ಯಾದ್ಯಂತ ಹೋಟೆಲ್ಗಳು ಪ್ರಾರಂಭವಾದವು. ಇಲ್ಲಿ ಸಿಗುವಂತಹ ರುಚಿ ಮತ್ತೆ ಎಲ್ಲಿಯೂ ಸಿಗುವುದಿಲ್ಲ ಎಂದು ದೋಸೆಯನ್ನು ಸವಿದವರ ಅಭಿಪ್ರಾಯ ಆಗಿದೆ.
1944ರಲ್ಲಿ ಬೆಣ್ಣೆದೋಸೆಗೆ ಬೇಡಿಕೆ ಹೆಚ್ಚಳ
1944ರಲ್ಲಿ ದೋಸೆಗೆ ಬೇಡಿಕೆಯೂ ಹೆಚ್ಚಾಯಿತು. ಇದನ್ನು ಮನಗಂಡ ಶಾಂತಪ್ಪ ಅವರು, ಶಾಂತಪ್ಪ ಬೆಣ್ಣೆದೋಸೆ ಹೊಟೇಲ್ ಅನ್ನು ಶುರು ಮಾಡಿದರು. ಇದೇ ದಾವಣಗೆರೆಯ ಪ್ರಥಮ ಹೊಟೇಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈಗ ದಾವಣಗೆರೆಯ ಗಡಿಯಾರ ಕಂಬದ ಬಳಿ ಈ ಹೋಟೆಲ್ ಇದೆ. ಈಗ ಈ ಹೋಟೆಲ್ ಅನ್ನು ಅವರ ಮಗ ಗಣೇಶ್ ನಡೆಸುತ್ತಿದ್ದಾರೆ. ಮಹದೇವಪ್ಪ ಅವರು ವಸಂತ ಥಿಯೇಟರ್ ಬಳಿ ತಮ್ಮ ಹೊಟೇಲ್ ಆರಂಭಿಸಿದರು. ಅವರ ಹಿರಿಯ ಮಗ ರವಿ ಚರ್ಚ್ ರಸ್ತೆಯಲ್ಲಿ "ರವಿ ಬೆಣ್ಣೆ ದೋಸೆ ಹೋಟೆಲ್" ಎಂಬ ಹೋಟೆಲ್ ಅನ್ನು ಈಗಲೂ ನಡೆಸುತ್ತಿದ್ದಾರೆ. ಕಿರಿಯ ಪುತ್ರ ವಿಜಿ ಡೆಂಟಲ್ ಕಾಲೇಜು ರಸ್ತೆಯಲ್ಲಿ ತನ್ನದೇ ಆದ "ವಿಜಿ ಬೆಣ್ಣೆ ದೋಸೆ" ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಬೆಳಗ್ಗೆ ಶುರುವಾಗುವ ವ್ಯಾಪಾರ ರಾತ್ರಿ 10ಗಂಟೆಯವರೆಗೆ ಇರುತ್ತದೆ.
ಶ್ರೀಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್, ಗಾಯತ್ರಿ ಬೆಣ್ಣೆ ದೋಸೆ ಹೋಟೆಲ್, ವಸಂತ ಬೆಣ್ಣೆ ದೋಸೆ ಹೋಟೆಲ್ ಈಗಲೂ ಜನಪ್ರಿಯತೆ, ರುಚಿಯನ್ನು ಉಳಿಸಿಕೊಂಡಿವೆ. ದೋಸೆಯ ಪರಿಮಳವನ್ನು ಸವಿಯಲು ರಾಜ್ಯದ ಮೂಲೆ ಮೂಲೆಯಿಂದಲೂ ಜನರು ಆಗಮಿಸುತ್ತಾರೆ. ಈ ಕಾರಣದಿಂದ ಬೇರೆ ದೋಸೆಗಳಿಗಿಂತ ಬೆಣ್ಣೆದೋಸೆಗೆ ಹೆಚ್ಚಿನ ಬೇಡಿಕೆ ಇದೆ.
ಸೂಳೆಕೆರೆ ನಿರ್ಮಾಣಕ್ಕೆ ವೇಶ್ಯೆಯರು ಇಟ್ಟಿದ್ದ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಮಿರ್ಚಿ ಮಂಡಕ್ಕಿಗೆ 98 ವರ್ಷಗಳ ಇತಿಹಾಸ
ಇನ್ನು ದಾವಣಗೆರೆಯಲ್ಲಿ ಮಿರ್ಚಿ ಮಂಡಕ್ಕಿ, ನರ್ಗಿಸ್, ಮೆಣಸಿನ ಕಾಯಿ ಬೋಂಡಾ ಅಂದರೆ ಬಲು ಅಚ್ಚುಮೆಚ್ಚು. ಇದಕ್ಕೆ 98 ವರ್ಷಗಳ ಸುದೀರ್ಘ ಇತಿಹಾಸ ಇದೆ. ಇನ್ನು ಎರಡು ವರ್ಷ ಕಳೆದರೆ ಶತಕದ ಸಂಭ್ರಮ ಆಗುತ್ತದೆ. ಇನ್ನು ಇದನ್ನು ಆರಂಭಿಸಿದ್ದು ಸಹ ಚೆನ್ನಮ್ಮ ಮತ್ತು ಕುಟುಂಬದವರೇ ಎನ್ನುವುದು ವಿಶೇಷವಾಗಿದೆ. ಡ್ರಾಮಾ ಕಂಪೆನಿಯಿದ್ದಾಗ ಅಲ್ಲಿಯೇ ಮಿರ್ಚಿ ಮಂಡಕ್ಕಿ ಮಾರಾಟ ಮಾಡುತ್ತಿದ್ದರು. ಈ ರುಚಿಯನ್ನು ಕಂಡ ಜನರು ಈಗಲೂ ಮಿರ್ಚಿ ಮಂಡಕ್ಕಿದೆ ಸಾಲಾಗಿ ನಿಲ್ಲುತ್ತಾರೆ. ಬೆಣ್ಣೆದೋಸೆ ವ್ಯಾಪಾರ ವೃದ್ಧಿ ಆದಂತೆ ಮಿರ್ಚಿ, ಮಂಡಕ್ಕಿಗೂ ಬೇಡಿಕೆ ಹೆಚ್ಚಾಗಲು ಆರಂಭವಾಯಿತು.
ದಾವಣಗೆರೆಯಲ್ಲಿ ಸಂಜೆ ಆದರೆ ಸಾಕು ಮಿರ್ಚಿ, ಮಂಡಕ್ಕಿ, ನರ್ಗಿಸ್ ಸೇವಿಸಲು ಜನರ ದಂಡೇ ನೆರೆದಿರುತ್ತದೆ. ಬೇರೆ ಕಡೆಯಿಂದ ಬಂದವರೂ ಸಹ ಇಲ್ಲಿನ ರುಚಿಯನ್ನು ಸವಿದು ಖುಷಿಪಡುತ್ತಾರೆ. ಮತ್ತೆ ಕೆಲವರು ದಾವಣಗೆರೆಗೆ ಬಂದಾಗ ಮಿರ್ಚಿ, ಮಂಡಕ್ಕಿ ಅನ್ನು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಈ ಉದ್ಯಮವೂ ಸಾಕಷ್ಟ ಬೃಹದ್ದಾಕಾರವಾಗಿ ಬೆಳೆದಿದೆ.
ದಾವಣಗೆರೆಯಿಂದ ಬೇರೆ ಕಡೆಗೂ ಮಂಡಕ್ಕಿ ರಪ್ತು
ಯಾವಾಗ ಮಸಾಲಾ ಮಂಡಕ್ಕಿ, ಮಿರ್ಚಿ ಮಂಡಕ್ಕಿ, ನರ್ಗಿಸ್ ಸೇರಿದಂತೆ ಬೇರೆ ಬೇರೆ ರೀತಿಯ ರುಚಿಕರವಾದ ಖಾದ್ಯ ತಯಾರಿಸಲು ಶುರುವಾಯಿತೋ ಆಗ ಮಂಡಕ್ಕಿ ಭಟ್ಟಿಗಳು ಸಹ ತಲೆ ಎತ್ತಿದವು. ದೊಡ್ಡ ಪ್ರಮಾಣದಲ್ಲಿ ಮಂಡಕ್ಕಿ ಭಟ್ಟಿ ಶುರುವಾದವು. ದಾವಣಗೆರೆ ಮಾತ್ರವಲ್ಲ, ಬೇರೆ ಬೇರೆ ಕಡೆಗಳಿಗೂ ಸಹ ಇಲ್ಲಿಂದ ಮಂಡಕ್ಕಿಯನ್ನು ಕಳುಹಿಸಿಕೊಡಲಾಗುತ್ತದೆ. ಇಲ್ಲಿ ಇದ್ದಷ್ಟು ಮಂಡಕ್ಕಿ ಭಟ್ಟಿಗಳು ರಾಜ್ಯದಲ್ಲಿ ಬೇರೆ ಕಡೆ ಸಿಗುವುದು ಅಪರೂಪ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯು ಆಹಾರ ಪ್ರಿಯರಿಗೆ ಹೇಳಿಮಾಡಿಸಿದ ತಾಣವಾಗಿದೆ. ರುಚಿಕರವಾದ ಊಟ, ತಿಂಡಿ, ಸಸ್ಯಹಾರ, ಮಾಂಸಹಾರ ಖಾದ್ಯಗಳಿಗೆ ಪ್ರಸಿದ್ಧಿ ಪಡೆದಿದೆ. ಬೆಣ್ಣೆದೋಸೆ, ಮಿರ್ಚಿ, ಮಂಡಕ್ಕಿ ರುಚಿ ನೋಡಬೇಕೆ, ಹಾಗಾದರೆ ದಾವಣಗೆರೆಗೆ ಭೇಟಿ ಕೊಡಿ.