ಸಿನಿಮಾ ಮೂಲಕವೂ ಮತ ಸೆಳೆಯುವ ಮಾಯಾ ಜಾಲ ರೂಪಿಸುವ ಚುನಾವಣೆ ಚಾಣಾಕ್ಷರು
ಈ ಬಾರಿ ಅಂದರೆ 2019ರ ಲೋಕಸಭಾ ಚುನಾವಣೆ ಪ್ರಚಾರದ ಹೊಸ ಬಗೆಯನ್ನು ನೀವು ಗಮನಿಸಿದ್ದೀರಾ? ನಿಮ್ಮಲ್ಲಿ ಕೆಲವರಾದರೂ ಇದನ್ನು ತಿಳಿದಿರುತ್ತೀರಿ. ಏಕೆ ಹೇಳುತ್ತಿದ್ದೇನೆ ಅಂದರೆ, ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂಬ ಸಿನಿಮಾ ಬಂದುಹೋಯಿತು. 2016ರಲ್ಲಿ ನಡೆದ 'ಉರಿ' ಸೇನಾ ನೆಲೆ ಮೇಲಿನ ದಾಳಿಗೆ ಸಂಬಂಧಿಸಿದ ಸಿನಿಮಾ ಬಂದು, ಅದರಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮುಖ್ಯವಾಗಿ ಹೇಳಲಾಯಿತು.
ಇನ್ನು ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಪಿ.ಎಂ. ನರೇಂದ್ರ ಮೋದಿ ತಯಾರಾಗುತ್ತಿದೆ. ಭಾರತದ ನಾನಾ ಭಾಷೆಗಳಲ್ಲಿ ಆ ಸಿನಿಮಾ ತಯಾರಾಗಲಿದ್ದು, ವಿವೇಕ್ ಒಬೇರಾಯ್ ಅವರು ಆ ಸಿನಿಮಾದ ನಾಯಕರಾಗಿ, ಪ್ರಧಾನಿ ಮೋದಿ ಪಾತ್ರಧಾರಿ ಆಗಲಿದ್ದಾರೆ. ಇನ್ನು 'ಇಂದು ಸರ್ಕಾರ್', 31 ಅಕ್ಟೋಬರ್ ಸಿನಿಮಾಗಳು ಕೂಡ ರಾಜಕೀಯ ವಸ್ತುವುಳ್ಳ ಸಿನಿಮಾ ಎಂಬುದನ್ನು ಮರೆಯುವಂತಿಲ್ಲ.
ತೆಲುಗಿನಲ್ಲಿ ಎನ್.ಟಿ.ರಾಮ ರಾವ್ ಅವರ ಜೀವನಾಧಾರಿತ ಚಿತ್ರದ ಮೊದಲ ಕಂತು ಬಿಡುಗಡೆಯಾಗಿದ್ದು, ಅದಕ್ಕೆ ಜನರಿಂದ ಬಹಳ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಆ ಸಿನಿಮಾದ ಹಿಂದೆ ಇದ್ದ ಉದ್ದೇಶ ಟಿಡಿಪಿಗೆ ಲಾಭ ಆಗಬೇಕು ಎಂಬುದಾಗಿತ್ತು. ಅದೇ ಸಿನಿಮಾದ ಎರಡನೇ ಭಾಗದ ಬಗ್ಗೆ ಸದ್ಯಕ್ಕೆ ನಿರೀಕ್ಷೆ ಇದೆ. ಅದೇನಾಗುತ್ತದೋ ಕಾದು ನೋಡಬೇಕು.
ಸಿನಿಮಾಗಳು ಜನರ ಮೇಲೆ ಪ್ರಭಾವ ಬೀರುವ ಶಕ್ತಿಶಾಲಿ ಮಾಧ್ಯಮ. ತೆರೆಯ ಮೇಲೆ ಕಾಣುವ ನಾಯಕ ಪಾತ್ರಧಾರಿಯ ಔದಾರ್ಯ, ತ್ಯಾಗಗಳನ್ನು ನಿಜವೆಂದು ಭ್ರಮಿಸುವ, ಪರಿಭಾವಿಸುವ ಜನರ ಸಂಖ್ಯೆ ಕಡಿಮೆ ಏನಿಲ್ಲ. ಈ ವಿಚಾರ ಗೊತ್ತಿರುವುದರಿಂದಲೇ ರಾಜಕೀಯಕ್ಕೆ ಸಂಬಂಧಿಸಿದ ಕಥೆ, ಡೈಲಾಗ್ ಗಳು ಇರುವ ಸಿನಿಮಾಗಳಲ್ಲಿ ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಇರುವವರು ಅಭಿನಯಿಸುತ್ತಾರೆ. ಅಥವಾ ತಮ್ಮ ಪರ ಹಾಗೂ ವಿರೋಧಿಗಳ ವಿರುದ್ಧವಾದ ಭಾವನೆ ಬಿತ್ತುತ್ತಾರೆ.

ವಿಶ್ವರೂಪಮ್ ಎರಡನೇ ಭಾಗ ಹಾಗೇ ಇತ್ತು
ಇತ್ತ ತಮಿಳುನಾಡಿನಲ್ಲಿ ರಜನೀಕಾಂತ್ ಸಿನಿಮಾಗಳಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಡೈಲಾಗ್ ಗಳು ಸಾಮಾನ್ಯವಾಗಿಯೇ ಇರುತ್ತಿವೆ. ಕಮಲ್ ಹಾಸನ್ ರ ವಿಶ್ವರೂಪಂ ಸಿನಿಮಾದ ಎರಡನೇ ಭಾಗ ಕೂಡ ಅವರ ಹೊಸ ಪಕ್ಷಕ್ಕೆ ಸಂಬಂಧಿಸಿದಂತೆ ಪ್ರೀ ಲಾಂಚ್ ಪ್ರಯತ್ನ ಎಂದು ಅಭಿಪ್ರಾಯ ಪಟ್ಟವರು ಹಲವರು.

ಮೆರ್ಸಲ್, ಸರ್ಕಾರ್ ತಮಿಳು ಸಿನಿಮಾಗಳ ವಿವಾದ
ತಮಿಳು ನಟ ವಿಜಯ್ ಸಿನಿಮಾಗಳಂತೂ ಸಾಲು ಸಾಲಾಗಿ ರಾಜಕಾರಣದ ವಿಷಯಗಳನ್ನೇ ಒಳಗೊಂಡು, ವಿವಾದಾತ್ಮಕ ಸಂಗತಿಗಳನ್ನು ತೆರೆದಿಟ್ಟು ಸುದ್ದಿಯಾಗಿರುವುದು ಹೆಚ್ಚು. ಮೆರ್ಸಲ್, ಸರ್ಕಾರ್ ಎರಡೂ ಸಿನಿಮಾಗಳಿಗೆ ಭಾರೀ ಪ್ರತಿರೋಧ ವ್ಯಕ್ತವಾಯಿತು. ಈ ಎಲ್ಲ ಸಿನಿಮಾಗಳು ಲೋಕಸಭೆ ಚುನಾವಣೆಗೆ ಇನ್ನೇನು ಒಂದು-ಒಂದೂವರೆ ವರ್ಷ ಇರುವಂತೆ ಬಿಡುಗಡೆ ಕಂಡವು.

ಲಕ್ಷ್ಮೀಸ್ ಎನ್ ಟಿಆರ್ ಎಂಬುದು ಸಿನಿಮಾ ಹೆಸರು
ತೆಲುಗಿನಲ್ಲಿ ಈಗ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಕ್ಷ್ಮೀಸ್ ಎನ್ ಟಿಆರ್ ಎಂಬ ಚಿತ್ರ ತಯಾರಾಗುತ್ತಿದೆ. ಲಕ್ಷ್ಮೀ ಪಾರ್ವತಿಯು ಎನ್ ಟಿಆರ್ ಜೀವನದಲ್ಲಿ ಎರಡನೇ ಪತ್ನಿಯಾಗಿ ಪ್ರವೇಶಿಸಿದ ನಂತರ ಆದ ಬೆಳವಣಿಗೆಗಳು ಹಾಗೂ ಟಿಡಿಪಿಯಲ್ಲಿ ಎನ್ ಟಿಆರ್ ಗೆ ಮೋಸ ಮಾಡಿದವರು ಯಾರು ಎಂಬ ಅಂಶಗಳನ್ನು ಆ ಸಿನಿಮಾ ಹೊಂದಿರುತ್ತದೆ ಎನ್ನಲಾಗುತ್ತಿದೆ. ಸಿನಿಮಾಗೆ ವೈಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ ಹಣ ಹೂಡಿದ್ದಾರೆ ಎಂಬ ಮಾತಿದೆ.

ಸಿನಿಮಾದ ಮೂಲಕ ಮತ ಸೆಳೆಯುವ ಯತ್ನ
ಸಿನಿಮಾಗಳ ಮೂಲಕ ಜನರಲ್ಲಿ ಆರಾಧನಾ ಭಾವ ಮೂಡುವುದು ಹೊಸತಲ್ಲ. ಈ ಪರಂಪರೆ ತಮಿಳುನಾಡು, ಆಂಧ್ರದಲ್ಲಿ ಹೆಚ್ಚಿದೆ. ಎಂ.ಜಿ.ಆರ್, ಜಯಲಲಿತಾ, ಎನ್.ಟಿ.ರಾಮರಾವ್ ಸಿನಿಮಾ ರಂಗದಲ್ಲಿ ಇದ್ದುಕೊಂಡು ಬಂದೇ ಮುಖ್ಯಮಂತ್ರಿ ಗದ್ದುಗೆಗೆ ಏರಿದವರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಪ್ರಭಾವಶಾಲಿಯಾಗಿ ಬಳಸಿಕೊಂಡಿದ್ದ ಭಾರತೀಯ ಜನತಾ ಪಕ್ಷ, ಈ ಸಲ ಸಿನಿಮಾದ ಮೂಲಕ ಜನರ ಮತ ಸೆಳೆಯುವ ಯತ್ನದಲ್ಲಿ ಇದ್ದಂತಿದೆ. ಬಿಜೆಪಿ ಒಂದೇ ಅಲ್ಲ. ಇನ್ನೇನು ಬಿಡುಗಡೆ ಆಗಲಿರುವ ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಸಿನಿಮಾದ ಟ್ರೇಲರ್ ನಲ್ಲೂ ಅಂಥದ್ದೊಂದು ಡೈಲಾಗ್ ಇದೆ.












Click it and Unblock the Notifications