ಆದಿವಾಸಿಗಳು ಬೆಳೆದ ಸಸ್ಯ ಸಂಕುಲದಲ್ಲಿ ಸಿಕ್ಕಿತಾ ಕೊರೊನಾ ವೈರಸ್ ಔಷಧಿ?
ಮನೌಸ್, ಮೇ.20: ಜಗತ್ತನ್ನು ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ಸೋಂಕಿಗೆ ವ್ಯಾಕ್ಸಿನ್ ಕಂಡು ಹಿಡಿಯುವುದೇ ಸವಾಲು. ವಿಶ್ವದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ವೈದ್ಯಕೀಯ ಸಂಶೋಧಕರು ಲ್ಯಾಬ್ ಗಳಲ್ಲಿ ಹಗಲ-ರಾತ್ರಿ ಕೊರೊನಾಗೆ ಮದ್ದು ಪತ್ತೆ ಮಾಡುವುದಕ್ಕೆ ಶ್ರಮಿಸುತ್ತಿದ್ದಾರೆ.
ಪ್ರಪಂಚದ ಜನರೆಲ್ಲ ಕೊರೊನಾ ವೈರಸ್ ಭೀತಿಯಲ್ಲಿ ಮಾಸ್ಕ್ ಧರಿಸಿಕೊಂಡು, ಪ್ರತಿನಿತ್ಯ ಸ್ಯಾನಿಟೈಸರ್ ಬಳಸುತ್ತಾ, ಮನೆಗಳಲ್ಲೇ ಲಾಕ್ ಡೌನ್ ಆಗಿದ್ದಾರೆ. ಆದರೆ ವಾಯುವ್ಯ ಬ್ರೆಜಿಲ್ ನ ಆದಿವಾಸಿ ಜನಾಂಗದ ಜನರ ಜೀವನ ಶೈಲಿ ಇದೆಲ್ಲಕ್ಕಿಂತ ಭಿನ್ನವಾಗಿದೆ.
ಸಾರ್ವಜನಿಕ ಬದುಕಿನಿಂದ ದೂರದಲ್ಲಿರುವ ಆದಿವಾಸಿಗಳಲ್ಲೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಬ್ರೆಜಿಲ್ ನ ಮನೌಸ್ ನಗರದ ಸಮೀಪದಲ್ಲಿ ವಾಸವಿರುವ ಆದಿವಾಸಿ ಜನಾಂಗದ ಐವರು ಪುಟ್ಟ ದೋಣಿಯಲ್ಲಿ ಅಮೆಜಾನ್ ನದಿ ಆಚೆಗೆ ಬೆಳೆದ ಸಸ್ಯ ಸಂಕುಲದ ಮಧ್ಯದಲ್ಲಿ ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡು ಹಿಡಿಯಲು ಮುಂದಾಗಿದ್ದಾರೆ.

ಕೊವಿಡ್-19ಗೆ ಆದಿವಾಸಿ ಪದ್ಧತಿಯಂತೆ ಚಿಕಿತ್ಸೆ
ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಭೀತಿ ಹುಟ್ಟಿಸಿದೆ ನಿಜ. ಅದೇನೇ ಇದ್ದರೂ ನಮ್ಮ ಜನರಲ್ಲಿ ಕಾಣಿಸಿಕೊಂಡ ಸೋಂಕಿತ ಲಕ್ಷಣಗಳ ಪರಿಹಾರಕ್ಕೆ ನಾವೇ ಔಷಧಿ ಕಂಡು ಹಿಡಿದುಕೊಳ್ಳುತ್ತೇವೆ. ಆದಿವಾಸಿ ಸಂಪ್ರದಾಯದಂತೆ ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸೋಂಕಿತ ಲಕ್ಷಣಗಳು ಗೋಚರಿಸಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಹಾಗೂ ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ನಮಗೆ ತಿಳಿದಿದೆ ಅಂತಾ ಸತೇರಿ ಮಾವೆ ಆದಿವಾಸಿ ಜನಾಂಗದ ಮುಖಂಡ ಆಂಡ್ರೆ ಸತೇರಿ ಮಾವೆ ತಿಳಿಸಿದ್ದಾರೆ.
Image Courtesy: CNA

ಆದಿವಾಸಿಗಳಲ್ಲಿ ಆತಂಕ ಹುಟ್ಟಿಸಿದ ಸಾಮೂಹಿಕ ಅಂತ್ಯಸಂಸ್ಕಾರ
ಅಮೆಜಾನ್ ನದಿ ಆಚೆಗಿನ ಆದಿವಾಸಿಗಳು ವಾಸವಿರುವ ಪ್ರದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯಿತು. 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು, 1,400 ಜನ ಮಹಾಮಾರಿಗೆ ಬಲಿಯಾಗಿದ್ದರು. ಈ ವೇಳೆ ಮೃತರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ದೊಡ್ಡ ಪ್ರಮಾಣದ ಗುಂಡಿ ತೋಡಲಾಗಿತ್ತು. ಸರ್ಕಾರದ ಈ ಕ್ರಮವು ಆದಿವಾಸಿಗಳಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿತು.

ಒಂದೊಂದು ರೋಗಕ್ಕೆ ಒಂದೊಂದು ಸಸ್ಯದಲ್ಲಿ ಔಷಧಿ
ಸತೇರೆ ಮಾವೆ ಆದಿವಾಸಿ ಜನಾಂಗದ ಜನರು ತಾವು ಬೆಳೆದ ಒಂದೊಂದು ಗಿಡಗಳಲ್ಲಿ ಒಂದೊಂದು ಔಷಧೀಯ ಗುಣಗಳನ್ನು ಕಂಡುಕೊಂಡಿದ್ದಾರೆ. ಅನಾರೋಗ್ಯದಿಂದ ಮುಕ್ತಿ ಹೊಂದಲು ಈ ಗಿಡಗಳನ್ನೇ ಬಳಸಿಕೊಂಡು ಔಷಧಿ ಸಿದ್ಧಪಡಿಸುತ್ತಾರೆ. ಕರಪನೌಬಾ ಗಿಡದಿಂದ ಊರಿಯೂತ ಸಮಸ್ಯೆಗೆ ಔಷಧಿ, ಸರಕ್ಯೂರಮಿರ ಗಿಡದಿಂದ ಮಲೇರಿಯಾ ರೋಗಕ್ಕೆ ಔಷಧಿಗಳನ್ನು ಸಿದ್ಧಪಡಿಸಲಾಗಿದೆ. ಅದೇ ರೀತಿ ಕೊರೊನಾ ವೈರಸ್ ಸೋಂಕು ನಿವಾರಣೆಗೂ ಕೂಡಾ ಸಸ್ಯಗಳನ್ನೇ ಬಳಸಿಕೊಂಡು ಔಷಧಿ ಪತ್ತೆ ಮಾಡಲು ಆದಿವಾಸಿ ಜನರು ಅಣಿಯಾಗಿದ್ದಾರೆ.

ಕೆಲವು ಗಂಟೆಗಳಲ್ಲೇ ಸ್ನಾಯು ಸೆಳೆತ ನಿವಾರಿಸಿದ ಔಷಧಿ
ದೇಹದ ನರನಾಡಿ ಸೆಳೆದಂತೆ ಆಗುತ್ತಿದ್ದು, ಉಸಿರಾಡುವುದೇ ಕಷ್ಟ ಎನ್ನುವಂತೆ ಆಗಿತ್ತು. ಮನೆಯಲ್ಲೇ ತಯಾರಿಸಿದ ಸಿರಪ್ ಕುಡಿದ ಕೆಲವು ಗಂಟೆಗಳಲ್ಲೇ ನೋವು ಮಾಯವಾಯಿತು ಎಂದು 35 ವರ್ಷದ ವಲ್ದಾ ಫೆರ್ರೆರಿಯಾ-ದೆ-ಸೌಜಾ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
Image Courtesy: CNA

ಪೂರ್ವಜರ ಕಾಲದಿಂದಲೂ ಔಷಧಿ ತಯಾರಿಕೆ
ಇನ್ನು, ರೋಸಿವಾನೆ ಪೆರೆರಾ-ಗೆ-ಸಿಲ್ವಾ ಕೂಡಾ ಸಹಾಯದೊಂದಿಗೆ ತಮ್ಮ ಪೂರ್ವಜರ ಕಾಲದಿಂದಲೂ ಆಂಡ್ರೆ ಸತೇರಿ ಮಾವೆ ಔಷಧಿ ತಯಾರಿಕೆ ಮಾಡುತ್ತಿದ್ದಾರೆ. 93 ವರ್ಷದ ತಮ್ಮ ಅಜ್ಜನಿಂದ ಈ ವಿದ್ಯೆಯನ್ನು ಆಂಡ್ರೆ ಸತೇರಿ ಮಾವೆ ಕರಗತ ಮಾಡಿಕೊಂಡಿದ್ದಾರೆ.
Image Courtesy: CNA

ಮನೌಸ್ ಸಮೀಪ ವಲಸೆ ತೆರಳಿದ್ದ ಆದಿವಾಸಿಗಳು
ಅಂದೀರಾ ಮೆರೌ ಪ್ರದೇಶದಲ್ಲಿ ವಾಸವಿದ್ದ 13,000 ಆದಿವಾಸಿಗಳು ಇತ್ತೀಚಿನ ದಶಕದಲ್ಲಷ್ಟೇ ಮನೌಸ್ ನಗರದ ಸಮೀಪದಲ್ಲಿರುವ ಪ್ರದೇಶಕ್ಕೆ ವಲಸೆ ಬಂದಿದ್ದರು. ಹೀಗಿದ್ದರೂ ನಗರ ಪ್ರದೇಶಗಳಲ್ಲಿ ಸಿಗುವ ವೈದ್ಯಕೀಯ ಚಿಕಿತ್ಸೆ ಮೇಲೆ ಆದಿವಾಸಿ ಜನರು ಅವಲಂಬಿತರಾಗಿರಲಿಲ್ಲ. ಬದಲಿಗೆ ತಮ್ಮ ಸಹಾಯಕ್ಕೆ ಯಾರು ಬರಲಿ, ಬರದಿರಲಿ ನಮ್ಮ ಆದಿವಾಸಿ ಸಂಪ್ರದಾಯದ ಬಗೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದಾಗಿ ಸತೇರಿ ಮಾವೆ ಜನಾಂಗದ ಆದಿವಾಸಿಗಳು ಹೇಳುತ್ತಿದ್ದಾರೆ.












Click it and Unblock the Notifications