ಹೊಗೆನಕಲ್ ಎಂಬ 'ಭಾರತದ ನಯಾಗರ'ದ ಅಂದ ನೋಡಿದ್ದೀರಾ?

Recommended Video

      ಹೊಗೆನಕಲ್ ಎಂಬ 'ಭಾರತದ ನಯಾಗರ'ದ ಅಂದ ನೋಡಿದ್ದೀರಾ? | Oneindia Kannada

      ಬೆಂಗಳೂರು, ಜೂನ್ 23: ಈ ಬಾರಿಯ ಮಳೆ ಈಗಾಗಲೇ ನದಿಗಳ ಒಡಲನ್ನು ಭರ್ತಿ ಮಾಡಿವೆ. ಬೇಸಗೆಯಲ್ಲಿ ಬತ್ತಿದ್ದ ಜಲಪಾತಗಳು ನವಚೈತನ್ಯ ತುಂಬಿಕೊಂಡು ಭೋರ್ಗರೆಯುತ್ತಿವೆ.

      ಕೆಲವು ದಿನಗಳಿಂದ ವಿವಿಧೆಡೆ ಮಳೆ ತುಸು ವಿರಾಮ ನೀಡಿದೆ. ಆದರೆ, ಜಲಪಾತಗಳ ಸೌಂದರ್ಯ ಇಮ್ಮಡಿಸಿದೆ. 'ಭಾರತದ ನಯಾಗಾರ' ಎಂದೇ ಕರೆಯಲಾಗುವ ಹೊಗೆನಕಲ್ ಈಗ 'ನಯಾಗರ'ದ ಸ್ವರೂಪ ಪಡೆದುಕೊಂಡಿದೆ.

      ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಹೊಗೆನಕಲ್ ಜಲಪಾತ, ಎರಡೂ ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.

      ತಮಿಳುನಾಡಿನ ಮೆಟ್ಟೂರು ಜಲಾಶಯವನ್ನು ತಲುಪುವ ಮುನ್ನ ಕಾವೇರಿ ನದಿ ತಮಿಳುನಾಡನ್ನು ಪ್ರವೇಶಿಸುವ ಈ ಸ್ಥಳ, ಇಲ್ಲಿನ ಚೆಂದದ ಪರಿಸರ, ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

      ನೀರು ಧುಮ್ಮಿಕ್ಕುವಾಗ ಅದರ ಸಿಡಿತದ ರಭಸಕ್ಕೆ ಮೇಲೇಳುವ ಹೊಗೆಯ ಕಾರಣಕ್ಕೆ ಇಲ್ಲಿಗೆ ಹೊಗೆನಕಲ್ ಎಂಬ ಹೆಸರು ಬಂತು ಎನ್ನುತ್ತಾರೆ.

      ನೀರಿನೊಳಗೆ ಅಡ್ಡಾಡುವುದಲ್ಲದೆ ಕಲ್ಲಿನ ಬಂಡೆಯ ಮೇಲೆ ಸಾಗಿ 'ವ್ಯೂ ಪಾಯಿಂಟ್‌'ನಲ್ಲಿ ನಿಂತರೆ 'ವಾಹ್' ಎಂಬ ಉದ್ಗಾರ ಹೊರಡಿಸದೆ ಇರಲು ಸಾಧ್ಯವಿಲ್ಲ. ತೆಪ್ಪ ನೀರಿಗಿಳಿಯದ ಈ ಬಿರುಮಳೆಯ ಹೊತ್ತಲ್ಲಿ, ಅಲ್ಲಿಗೆ ಬಂದ ಪ್ರವಾಸಿಗರಿಗೆ ಜಲಪಾತ ಬೇಸರ ಮೂಡಿಸದು. ಅತ್ಯಂತ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.

      ನದಿ ತೀರದಲ್ಲಿ ಅಡ್ಡಾಡಲು ವಿಶಾಲ ಜಾಗವಿದೆ. ಪುಟ್ಟದೊಂದು ದೇವಸ್ಥಾನ, ಊಟ ಉಪಾಹಾರಕ್ಕೆ ಸಣ್ಣ ಪುಟ್ಟ ಹೋಟೆಲುಗಳು, ಜತೆಗೆ ಐಷಾರಾಮಿ ಸೌಲಭ್ಯವೂ ಇದೆ. ಹಾಗೆಯೇ ಇಲ್ಲಿ ಮಾಡಲಾಗುವ ಮಸಾಜ್ ಕೂಡ ಜನಪ್ರಿಯ.

      ಈಗ ಕಾವೇರಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಹೊಗೆನಕಲ್‌ನ ಅಂದ ಇಮ್ಮಡಿಸಿದೆ. ಹೊಗೆನಕಲ್ ಹೇಗಿದೆ, ಅಲ್ಲಿಗೆ ತೆರಳುವುದು ಹೇಗೆ ಮುಂತಾದ ಮಾಹಿತಿ ಇಲ್ಲಿದೆ.

      ತುಂಬಿಕೊಂಡ ಕಾವೇರಿ

      ಕಳೆದ ವರ್ಷ ಕಾವೇರಿ ತುಂಬಿ ಹರಿದು ಹೊಗೆನಕಲ್ 'ನಯಾಗರ'ದ ಸ್ವರೂಪ ಪಡೆದುಕೊಂಡಿದ್ದು ಸೆಪ್ಟೆಂಬರ್‌ ತಿಂಗಳಿನಲ್ಲಿ. ಅಲ್ಲಿಯವರೆಗೂ ಮಳೆ ಇಲ್ಲದೆ ಜಲಪಾತ ಸೊರಗಿತ್ತು.

      ಈ ಬಾರಿಯ ಮಳೆ ಈಗಲೇ ಕಾವೇರಿಯನ್ನು ಉಕ್ಕಿ ಹರಿಸಿದೆ. ಅಲ್ಲಲ್ಲಿ ಧಾರೆಗಳಾಗಿ ಬಿಡಿ ಬಿಡಿಯಾಗಿ ಧುಮುಕುತ್ತಾ ಚಿತ್ತಾಕರ್ಷಕ ದೃಶ್ಯದ ಮೂಲಕ ಅಕ್ಕಪಕ್ಕದಲ್ಲಿಯೇ ನಾಲ್ಕೈದು ಜಲಪಾತಗಳ ಸೊಬಗನ್ನು ಸವಿಯುವ ಆಹ್ಲಾದಕರ ಅನುಭವ ನೀಡುತ್ತಿದ್ದ ಜಲಪಾತ ಈಗ ಒಂದೇ ಧಾರೆಯಾಗಿ ಭೋರ್ಗರೆಯುತ್ತಿದೆ.

      ತೆಪ್ಪದಲ್ಲಿ ಸಾಗುವುದೇ ಸೊಗಸು

      ತೆಪ್ಪದಲ್ಲಿ ಸಾಗುವುದೇ ಸೊಗಸು

      ಹೊಗೆನಕಲ್ ಜಲಪಾತದಲ್ಲಿ ಎಲ್ಲೆಂದರಲ್ಲಿ ಇಳಿಯಲು ಅವಕಾಶವಿಲ್ಲ. ಕರ್ನಾಟಕ ಮತ್ತು ತಮಿಳುನಾಡು ದಿಕ್ಕುಗಳಿಂದ ನುರಿತ ವ್ಯಕ್ತಿಗಳು ತೆಪ್ಪದಲ್ಲಿ ಕೂರಿಸಿಕೊಂಡು ಜಲಧಾರೆಯ ತಳಭಾಗಕ್ಕೆ ಕರೆದೊಯ್ಯುತ್ತಾರೆ.

      ಇಕ್ಕೆಲಗಳಲ್ಲಿ ಯಾರೋ ತರಾತುರಿಯಲ್ಲಿ ಕೆತ್ತಿ ಹೋದಂತಿರುವ ವಿವಿಧ ಆಕಾರ ಪಡೆದುಕೊಂಡ ಬೃಹತ್ ಬಂಡೆಗಲ್ಲುಗಳ ನಡುವಣ ತೆಪ್ಪದ ಪಯಣ ವಿಶಿಷ್ಟ ಅನುಭವ ನೀಡುತ್ತದೆ. ಸುಮಾರು ಅರ್ಧ ತೆಪ್ಪದಲ್ಲಿ ಸಾಗಿದ ಬಳಿಕ ಜಲಪಾತದ ದರ್ಶನ ಸಿಗುತ್ತದೆ. ಇಲ್ಲಿ ಮೂರು ನಾಲ್ಕು ಕಡೆ ಬೀಳುವ ಜಲಧಾರೆಗಳಲ್ಲಿ ಯಾವುದನ್ನು ನೋಡುವುದು ಎಂಬ ಗೊಂದಲ ಕಾಡುತ್ತದೆ.

      ತೆಪ್ಪಗಳಿಗೆ ನಿರ್ಬಂಧ

      ತೆಪ್ಪಗಳಿಗೆ ನಿರ್ಬಂಧ

      ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ತೆಪ್ಪ ಮತ್ತು ದೋಣಿಗಳಲ್ಲಿ ಸಾಗುವುದಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ.

      ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹರಿಬಿಡಲಾಗಿದೆ. ಇದರಿಂದ ಕಾವೇರಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ಸದ್ಯಕ್ಕೆ ತೆಪ್ಪಗಳನ್ನು ನೀರಿಗೆ ಇಳಿಸುತ್ತಿಲ್ಲ. ಇದರಿಂದ ಈಗ ಅಲ್ಲಿಗೆ ತೆರಳುವ ಪ್ರವಾಸಿಗರಿಗೆ ತೆಪ್ಪದಲ್ಲಿ ತೆರಳಿ ಅದರ ಸೌಂದರ್ಯ ಸವಿಯುವ ಅವಕಾಶ ಸಿಗುವುದಿಲ್ಲ.

      ನೀರ ನಡುವೆಯೇ ಅಂಗಡಿ!

      ನೀರ ನಡುವೆಯೇ ಅಂಗಡಿ!

      ಎರಡೂ ಬದಿಗಳಲ್ಲಿ ಎತ್ತರದ ಕಲ್ಲುಬಂಡೆಗಳ ನಡುವೆ ಸಾಗುವ ತೆಪ್ಪದಲ್ಲಿ ಕುಳಿತು ಬೇಸರವಾದಾಗ ಅಥವಾ ಆ ತಂಪು ವಾತಾವರಣದಲ್ಲಿ ಹೊಟ್ಟೆ ಚುರುಗುಟ್ಟಿದಾಗ ಏನನ್ನಾದರೂ ತಿನ್ನಬೇಕು ಎಂಬ ಬಯಕೆ ಮೂಡುವುದು ಸಹಜ. ಆದರೆ ಏನನ್ನೂ ಕೊಂಡೊಯ್ಯದಿದ್ದರೆ, ನೀರಿನ ನಡುವೆ ಏನನ್ನು ತಿನ್ನುವುದು?

      ಹೊಗೆನಕಲ್‌ನಲ್ಲಿ ಈ ಸಮಸ್ಯೆ ಎದುರಾಗುವುದೇ ಇಲ್ಲ. ಇಲ್ಲಿ ತೆಪ್ಪದ ಪ್ರವಾಸಿಗರಿಗೆ ತೆಪ್ಪದ ಅಂಗಡಿಗಳೇ ಎದುರಾಗುತ್ತವೆ.

      ಅಲ್ಲಿಂದಿಲ್ಲಿಗೆ ಅಡ್ಡಾಡುವ ಈ ಅಂಗಡಿಗಳು ನಿಮ್ಮ ಹತ್ತಿರ ಬಂದು ವ್ಯಾಪಾರ ನಡೆಸಿ ಮರಳುತ್ತವೆ. ಅನೇಕ ಮಂದಿ ಇಲ್ಲಿ ತೆಪ್ಪಗಳಲ್ಲಿ ಕುಳಿತು ವ್ಯಾಪಾರ ನಡೆಸುತ್ತಾರೆ. ಕುರುಕಲು ತಿಂಡಿಗಳು, ಪಾನೀಯಗಳು ಸಿಗುತ್ತವೆ. ಜತೆಗೆ ಮೀನು ತಿನ್ನುವ ಬಯಕೆಯುಳ್ಳವರಿಗೆ ಅಲ್ಲಿಯೇ ಮೀನು ಹಿಡಿದು ಕರಿದುಕೊಡುವ ಮಹಿಳೆಯರೂ ಸಿಗುತ್ತಾರೆ.

      ಎಲ್ಲಿದೆ ಹೊಗೆನಕಲ್

      ಎಲ್ಲಿದೆ ಹೊಗೆನಕಲ್

      ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಗಡಿ ಭಾಗಗಳ ನಡುವೆ ಇರುವುದೇ ಹೊಗೆನಕಲ್.

      ತಮಿಳುನಾಡು ಈ ಜಲಪಾತ ತನ್ನದು ಎಂದು ಹೇಳಿಕೊಂಡರೆ, ಕರ್ನಾಟಕ ತನ್ನದು ಎಂದು ಪ್ರತಿಪಾದಿಸುತ್ತದೆ. ಎರಡೂ ರಾಜ್ಯಗಳ ಜನರು ಇಲ್ಲಿ ತಮ್ಮ ತೀರದ ಭಾಗದಿಂದ ತೆಪ್ಪಗಳನ್ನು ಓಡಿಸುತ್ತಾರೆ.

      ತಮಿಳುನಾಡಿನ ಜನರು ಈ ಜಲಪಾತಕ್ಕೆ ಮರಿಕೊಟ್ಟಾಯಂ ಎಂದು ಸಹ ಕರೆಯುತ್ತಾರೆ. ಎರಡೂ ರಾಜ್ಯಗಳಿಂದ ಈ ಭಾಗಕ್ಕೆ ಬರಲು ರಸ್ತೆ ಮತ್ತು ಸಾರಿಗೆ ಸಂಪರ್ಕವಿದೆ. ಆದರೆ, ಕರ್ನಾಟಕದ ದಿಕ್ಕಿನಿಂದ ಸಾರಿಗೆ ಸಂಪರ್ಕ ವಿರಳ.

      ಹೇಗೆ ತೆರಳುವುದು?

      ಹೇಗೆ ತೆರಳುವುದು?

      ಹೊಗೆನಕಲ್ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ.ಮೀ, ಧರ್ಮಪುರಿಯಿಂದ 40 ಕಿ.ಮೀ. ದೂರದಲ್ಲಿದೆ. ಕೊಳ್ಳೇಗಾಲದ ಮಾರ್ಗವಾಗಿ ಬಸ್‌ನಲ್ಲಿ ಹೋಗಬಹುದು.

      ನಡುವೆ ಮಲೆಮಹದೇಶ್ವರ ಬೆಟ್ಟವೂ ಸಿಗುವುದರಿಂದ ಅಲ್ಲಿಗೆ ಸಹ ಭೇಟಿ ನೀಡಬಹುದು. ಹೊಗೆನಕಲ್ ಸಮೀಪ ಮೇಳಗಿರಿ ಜಲಪಾತ, ಮೆಟ್ಟೂರು ಅಣೆಕಟ್ಟು, ಪೆನ್ನರ್ ಪರಮೇಶ್ವರಿ ದೇವಸ್ಥಾನಗಳನ್ನು ಸಹ ವೀಕ್ಷಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+