ತೀರ್ಪು ನೀಡಬೇಕಿರುವ ಜಡ್ಜ್ಗೆ ಲಾಲೂ ಬೆಂಬಲಿಗರು ಕರೆ ಮಾಡಿದ್ದೇಕೆ?
"ಲಾಲೂಜೀ ನಿಮ್ಮ ಕಡೆಯವರಿಂದ ಸಾಕಷ್ಟು ಕರೆಗಳು ಬರುತ್ತಿವೆ. ಆದರೆ ನಾನು ನಿಮ್ಮ ಕಡೆಯವರಿಗೆ ಹೇಳಿದ್ದೀನಿ: ಕಾನೂನಿನ ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬೇಕೋ ಆ ರೀತಿಯ ನಿರ್ಧಾರವನ್ನೇ ತೆಗೆದುಕೊಳ್ತೀನಿ" ಹೀಗೆ ಗುಂಡು ಹೊಡೆದಂತೆ ಕೋರ್ಟ್ ಹಾಲ್ ನಲ್ಲಿ ಗುರುವಾರ ಹೇಳಿದ್ದಾರೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಶಿವಪಾಲ್ ಸಿಂಗ್.
ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ಬಹುಕೋಟಿ ಮೇವು ಹಗರಣದ ಆರೋಪಿ ಲಾಲೂ ಪ್ರಸಾದ್ ಯಾದವ್ ರ ಶಿಕ್ಷೆ ಪ್ರಮಾಣ ಪ್ರಕಟಿಸಬೇಕಿತ್ತು. ಅದನ್ನು ಒಂದು ದಿನ ಮುಂದೂಡಲಾಗಿದೆ. ಇದೇ ವೇಳೆ ಲಾಲೂ ಪ್ರಸಾದ್ ಯಾದವ್ ಮಕ್ಕಳಾದ ತೇಜ್ ಪ್ರತಾಪ್ ಹಾಗೂ ತೇಜಸ್ವಿ ಅವರನ್ನು ಕೂಡ ಶಿವಪಾಲ್ ಸಿಂಗ್ ತರಾಟೆಗೆ ತೆಗೆದುಕೊಂಡರು.
"ಯಾದವ್ ಎಂಬುದರ ಬದಲಿಗೆ ಮಿಶ್ರಾ ಎಂದಿದ್ದರೆ, ಅವರಿಗೆ ಇಂಥ ಕಷ್ಟ ಇರುತ್ತಿರಲಿಲ್ಲ" ಎಂದು ಕೋರ್ಟ್ ತೀರ್ಪಿಗೆ ಜಾತಿಯ ತಳಕು ಹಾಕಿ ಮಾತನಾಡಿದ್ದ ತೇಜ್ ಪ್ರತಾಪ್- ತೇಜಸ್ವಿಯನ್ನು ತರಾಟೆಗೆ ತೆಗೆದುಕೊಂಡರು. ಅಂದಹಾಗೆ ಲಾಲೂ ಕುಟುಂಬದ ಸದಸ್ಯರು ಜಾತಿಯನ್ನು ಎಳೆದು ತಂದಿದ್ದಕ್ಕೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು.

ಮಾಧ್ಯಮದವರನ್ನು ಹೊರಗೆ ಕಳುಹಿಸಿ
ಕೋರ್ಟ್ ನ ಹಾಲ್ ನೊಳಗೆ ವಿಪರೀತ ಸಂಖ್ಯೆಯಲ್ಲಿದ್ದ ಜನರನ್ನು ಕಂಡು ಸಿಟ್ಟಾದಂತೆ ಕಂಡುಬಂದ ಶಿವಪಾಲ್ ಸಿಂಗ್ ಅವರು ವಕೀಲರಿಗೆ ಸೂಚನೆ ನೀಡಿ, ಹಗರಣದ ತನಿಖೆಗೆ ಸಂಬಂಧಪಡದವರನ್ನು ಕೋರ್ಟ್ ಹಾಲ್ ನಿಂದ ಆಚೆಗೆ ಕಳುಹಿಸಿ ಎಂದು ಹೇಳಿದರು. ಆಗ ವಕೀಲರು ಮಾಧ್ಯಮದವರನ್ನು ಅಲ್ಲಿಂದ ಆಚೆ ಕಳುಹಿಸುವಂತೆ ಕೋರಿದರು.

ಹಗರಣದ ಪ್ರಮುಖ ಸೂತ್ರಧಾರಿಗಳು
ವಕೀಲರು ತಮ್ಮ ವಾದ ಮಂಡಿಸಿದ ಬಳಿಕ ಕೋರ್ಟ್ ಹಾಲ್ ನಿಂದ ಹೊರಗೆ ಹೋಗಿ, ಆಗ ಕಲಾಪ ಸುಲಭವಾಗಿ ನಡೆಸಬಹುದು ಎಂದು ಸೂಚಿಸಲಾಯಿತು. ಕಲಾಪದದ ವೇಳೆ ಬಿಹಾರ ವಿಚಕ್ಷಣಾ ದಳದ ಡಿಜಿ, ಜೆಡಿಯು ನಾಯಕ ಜಗದೀಶ್ ಶರ್ಮಾ ಮತ್ತು ಬಿಹಾರದ ಮಾಜಿ ಡಿಜಿಪಿ ಡಿಪಿ ಓಜಾ ಅವರನ್ನು ಹಗರಣದ ಪ್ರಮುಖ ಸೂತ್ರಧಾರಿಗಳು ಎಂದು ಕರೆಯಲಾಯಿತು.

ಶಿಕ್ಷೆ ಪ್ರಮಾಣ ಐದನೇ ತಾರೀಕು ಪ್ರಕಟ
ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ರ ಶಿಕ್ಷೆ ಪ್ರಮಾಣವನ್ನು ಜನವರಿ ಐದನೇ ತಾರೀಕು ಪ್ರಕಟಿಸುವುದಾಗಿ ಘೋಷಿಸಲಾಯಿತು. ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹದಿನಾಲ್ಕು ಮಂದಿಯನ್ನು ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಸೇರಿದಂತೆ ಏಳು ಆರೋಪಿಗಳನ್ನು ಡಿಸೆಂಬರ್ ಇಪ್ಪತ್ಮೂರರಂದು ಕೋರ್ಟ್ ಖುಲಾಸೆ ಮಾಡಿತ್ತು.

900 ಕೋಟಿ ಮೊತ್ತದ ಮೇವು ಖರೀದಿ ಹಗರಣ
ಬಿಹಾರದಲ್ಲಿ 1980 ಹಾಗೂ 1990ರ ದಶಕದಲ್ಲಿ ನಡೆದ 900 ಕೋಟಿ ಮೊತ್ತದ ಮೇವು ಖರೀದಿ ಹಗರಣದ ಪೈಕಿ ಒಂದು ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.












Click it and Unblock the Notifications