2019 Flashback: ಒಂದು ವರ್ಷದಲ್ಲಿ ದೇಶದ ರಾಜಕೀಯದಲ್ಲಿ ಏನೇನಾಯ್ತು?
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದಲ್ಲಿ ರಾಜಕೀಯ ವಲಯದಲ್ಲಿ ಅನಿರೀಕ್ಷಿತ ಹಾಗೂ ಬೃಹತ್ ಬದಲಾವಣೆಗಳು ಹೊಸತಲ್ಲ. 2019 ಭಾರತದ ರಾಜಕಾರಣದಲ್ಲಿ ಅನೇಕ ಮಹತ್ವದ ಸ್ಥಿತ್ಯಂತರಗಳನ್ನು ಕಂಡಿದೆ.
ಚುನಾವಣೆಗಳು, ರಾಜಕೀಯ ಪಕ್ಷಗಳ ಏಳು-ಬೀಳು, ಪ್ರತಿಭಟನೆ-ಹೋರಾಟಗಳು, ಪರ-ವಿರೋಧದ ಚರ್ಚೆಗಳು, ಹೊಸ ಕಾನೂನುಗಳು, ರಾಜಕೀಯ ಬದ್ಧವೈರಿಗಳ ನಡುವಿನ ಮೈತ್ರಿ, ಮಿತ್ರಪಕ್ಷಗಳ ನಡುವೆ ಕಿತ್ತಾಟ, ಪಕ್ಷದೊಳಗಿನ ಬಂಡಾಯ ಮುಂತಾದವು 2019ರ ಭಾರತದ ರಾಜಕಾರಣವನ್ನು ರಂಗಾಗಿಸಿದ್ದವು.
2019ರ ಏಪ್ರಿಲ್ನಿಂದ ಮೇವರೆಗೆ ಒಂದು ತಿಂಗಳವರೆಗೆ ನಡೆದ ಸುದೀರ್ಘ ಸಾರ್ವತ್ರಿಕ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಅದರ ಜತೆಯಲ್ಲಿಯೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆದಿದ್ದವು. ಅಕ್ಟೋಬರ್ನಲ್ಲಿ ಕೂಡ ವಿಧಾನಸಭೆ ಚುನಾವಣೆಗಳು, ಉಪಚುನಾವಣೆಗಳು ನಡೆದವು. ಕರ್ನಾಟಕ, ಮಹಾರಾಷ್ಟ್ರ ಮುಂತಾದೆಡೆ ಅಚ್ಚರಿಯ ಬೆಳವಣಿಗೆಗಳು ನಡೆದವು. ವರ್ಷದ ಅಂತ್ಯವಂತೂ ರಾಜಕೀಯ ಗೊಂದಲ, ಸಂಘರ್ಷಗಳ ಮೂಲಕವೇ ಅಂತ್ಯಗೊಳ್ಳುತ್ತಿವೆ.

ಲೋಕಸಭೆ ಚುನಾವಣೆಯ ಕದನ
ಏಪ್ರಿಲ್ 11ರಿಂದ ಮೇ 19ರವರೆಗೆ ಲೋಕಸಭೆಯ 543 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಿತು. ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು. 303 ಸ್ಥಾನಗಳಲ್ಲಿ ಗೆದ್ದ ಬಿಜೆಪಿಯು ಎನ್ಡಿಯ ಮೈತ್ರಿಕೂಟದ ಮಿತ್ರಪಕ್ಷಗಳ 52 ಸ್ಥಾನಗಳ ಬೆಂಬಲದೊಂದಿಗೆ 355 ಸದಸ್ಯರ ಬಲ ಪಡೆದು ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ 2014ರ ಚುನಾವಣೆಗಿಂತ ಎಂಟು ಹೆಚ್ಚು ಸ್ಥಾನಗಳನ್ನು ಗಳಿಸಿದ್ದಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಯಿತು. ಯುಪಿಎ ಕೇವಲ ಒಟ್ಟು 91 ಸದಸ್ಯರ ಬಲ ಮಾತ್ರ ಹೊಂದಿತ್ತು.

ಸರ್ಕಾರದ ಭಾಗವಾದ ಅಮಿತ್ ಶಾ
ಭಾರತದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ನೇರವಾಗಿ ಸರ್ಕಾರದ ಚಟುವಟಿಕೆಗಳಲ್ಲಿ ಭಾಗಿಯಾಗದಿದ್ದ ಅಮಿತ್ ಶಾ, ಗೃಹ ಸಚಿವರಾದರು. ಕಳೆದ ಅವಧಿಯಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆಯಾಗಿ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ತೀವ್ರ ಟೀಕೆಗಳನ್ನು ಎದುರಿಸಿದರು. ರಾಜನಾಥ್ ಸಿಂಗ್ ಮತ್ತೊಂದು ಪ್ರಮುಖ ಹುದ್ದೆಯಾದ ರಕ್ಷಣಾ ಸಚಿವಾಲಯದ ಜವಾಬ್ದಾರಿ ಪಡೆದುಕೊಂಡರು.

ಬಿಜೆಪಿಯ ಶಕ್ತಿಗೆ ಹೊಡೆತ
ಬಿಜೆಪಿ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ದೇಶದ ಅನೇಕ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿತು. ಶೇ 71ರಷ್ಟು ಭಾಗದ ಮೇಲೆ ಬಿಜೆಪಿ ಪ್ರಭಾವವಿತ್ತು. ಅನೇಕ ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಆದರೆ ಈಗ ಅದು ಶೇ 41ಕ್ಕೆ ಇಳಿದಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಹಾಗೆಯೇ ರಾಜಕೀಯ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮತ್ತೆ ಚೇತರಿಸಿಕೊಂಡಿದೆ. ಹಾಗೆಯೇ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್ಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶಿಸಿವೆ. ಈ ವರ್ಷವೇ ಬಿಜೆಪಿ ಐದನೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.

ಜಾರ್ಖಂಡ್ನಲ್ಲಿ ಕೈತಪ್ಪಿದ ಅಧಿಕಾರ
ಜಾರ್ಖಂಡ್ನಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರ ನಡೆಸಿದ್ದ ಬಿಜೆಪಿ, ವರ್ಷದ ಕೊನೆಯಲ್ಲಿ ಸೋಲಿನ ಆಘಾತ ಅನುಭವಿಸಿತು. ಜೆಎಂಎಂ ಪಕ್ಷದ ಮೈತ್ರಿಕೂಟ ಪಾರಮ್ಯಕ್ಕೆ ಬಿಜೆಪಿ ಶರಣಾಯಿತು. ಹರಿಯಾಣದಲ್ಲಿ 90 ಕ್ಷೇತ್ರಗಳಲ್ಲಿ ಬಿಜೆಪಿ 40ರಲ್ಲಿ ಜಯಗಳಿಸಿತು. ಕಾಂಗ್ರೆಸ್ 31 ಸ್ಥಾನ ಗಳಿಸಿತು. ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಮತ್ತೆ ಅಧಿಕಾರಕ್ಕೇರಿತು.

ಮಹಾರಾಷ್ಟ್ರದಲ್ಲಿ ಅಚ್ಚರಿಯ ಬೆಳವಣಿಗೆ
ಅದಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಅಕ್ಟೋಬರ್ನಲ್ಲಿ ನಡೆದ ಚುನಾವಣೋತ್ತರ ನಾಟಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿತ್ತು. ಜಂಟಿಯಾಗಿ ಚುನಾವಣೆ ಎದುರಿಸಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಭಾರಿ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಶಿವಸೇನಾ ತನ್ನ ಸೈದ್ಧಾಂತಿಕ ವೈರಿಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಜತೆಗೂಡಿ ಸರ್ಕಾರ ರಚನೆಗೆ ಪ್ರಯತ್ನ ನಡೆಸಿತ್ತು. ಅಹೋರಾತ್ರಿ ಬೆಳವಣಿಗೆಯಲ್ಲಿ ಎನ್ಸಿಪಿ ನಾಯಕ ಅಜಿತ್ ಪವಾರ್, ಬಿಜೆಪಿ ಜತೆ ಕೈಗೂಡಿಸಿ ಸರ್ಕಾರ ರಚಿಸಿದ್ದರು. ಆದರೆ ಅದಕ್ಕೆ ಎನ್ಸಿಪಿಯ ಇತರೆ ಶಾಸಕರ ಬೆಂಬಲ ಸಿಗದ ಕಾರಣ ಅದು ಮೂರೇ ದಿನದಲ್ಲಿ ಬಿದ್ದುಹೋಯಿತು. ಕೊನೆಗೆ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಸಮ್ಮಿಶ್ರ ಸರ್ಕಾರದ ಪತನ
2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಸರಳ ಬಹುಮತ ಪಡೆದಿರಲಿಲ್ಲ. ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚನೆಗೆ ಎಂಟು ಸ್ಥಾನಗಳ ಕೊರತೆ ಎದುರಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸಿದ್ದವು. ಆರಂಭದಿಂದಲೇ ಅಸಮಾಧಾನದ ಹೊಗೆಯಾಡುತ್ತಿದ್ದ ಸರ್ಕಾರದಲ್ಲಿ ಅದು ಭುಗಿಲೆದ್ದಿತು. ಪರಿಣಾಮ ಕಾಂಗ್ರೆಸ್ ಮತ್ತು ಜೆಡಿಎಸ್ನ ಒಟ್ಟು 17 ಶಾಸಕರು ರಾಜೀನಾಮೆ ನೀಡಿದರು. ಅವರ ಕಾನೂನು ಹೋರಾಟದ ನಡುವೆ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಸುಲಭವಾಗಿ ಅಧಿಕಾರಕ್ಕೆ ಬಂತು. ಡಿಸೆಂಬರ್ನಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12ರಲ್ಲಿ ಗೆದ್ದ ಬಿಜೆಪಿ ತನ್ನ ಸರ್ಕಾರವನ್ನು ಭದ್ರಪಡಿಸಿಕೊಂಡಿತು.

ಸೋತ ರಾಹುಲ್, ಹುದ್ದೆ ತ್ಯಾಗ
ಲೋಕಸಭೆ ಚುನಾವಣೆಯಲ್ಲಿನ ಆಘಾತಕಾರಿ ಸೋಲು ಕಾಂಗ್ರೆಸ್ ನಾಯಕತ್ವದ ಮೇಲೆ ತೀವ್ರ ಪರಿಣಾಮ ಬೀರಿತು. ಸೋಲಿಗೆ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸುವುದಾಗಿ ರಾಹುಲ್ ಗಾಂಧಿ ಪ್ರಕಟಿಸಿದರು. ಅವರ ಮನವೊಲಿಕೆಯ ಪ್ರಯತ್ನ ವಿಫಲವಾಯಿತು. ಅವರ ಜಾಗಕ್ಕೆ ನೆಹರೂ-ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದರೂ ಅದು ಈಡೇರಲಿಲ್ಲ. ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಪಕ್ಷದ ಜವಾಬ್ದಾರಿ ಹೊತ್ತುಕೊಂಡರು. ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಕುಟುಂಬ ಮೊದಲ ಸೋಲು ಕೂಡ ಕಂಡಿತು. ಅಮೇಠಿಯಲ್ಲಿ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಸೋಲಿನ ಕಹಿ ಅನುಭವಿಸಿದರು. ವಯನಾಡು ಕ್ಷೇತ್ರದಲ್ಲಿಯ ಸ್ಪರ್ಧಿಸಿದ್ದ ರಾಹುಲ್, ಅಲ್ಲಿ ಸುಲಭದ ಜಯಗಳಿಸಿದರು. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವರ್ಚಸ್ಸಿನ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನವೂ ಕಾಂಗ್ರೆಸ್ಗೆ ಕೈಕೊಟ್ಟಿತು. ನಂತರದ ವಿಧಾನಸಭೆ ಚುನಾವಣೆಗಳ ಪ್ರಚಾರದಲ್ಲಿ ರಾಹುಲ್ ಗಾಂಧಿ ನಿರಾಸಕ್ತಿ ಪ್ರದರ್ಶಿಸಿದ್ದರು.

ಆಂಧ್ರದಲ್ಲಿ ಜಗನ್ ದರ್ಬಾರು
ಎನ್ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಆಂಧ್ರಪ್ರದೇಶದ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು, ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿಕೂಟದ ಮೂಲಕ ಸರ್ಕಾರ ರಚನೆಯಾದರೆ ಪ್ರಧಾನಿಯಾಗುವ ಆಸೆಯೊಂದಿಗೆ ಎಲ್ಲ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಲೋಕಸಭೆ ಮತ್ತು ವಧಾನಸಭೆ ಎರಡಲ್ಲಿಯೂ ಚಂದ್ರಬಾಬು ನಾಯ್ಡು ಭಾರಿ ಮುಖಭಂಗ ಅನುಭವಿಸಿದರು. ವಿಧಾನಸಭೆ ಚುನಾವಣೆಯಲ್ಲಿ 175 ಕ್ಷೇತ್ರಗಳ ಪೈಕಿ 151 ಕಡೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಜಯಗಳಿಸಿದರೆ, ಟಿಡಿಪಿ ಕೇವಲ 23 ಸೀಟುಗಳಲ್ಲಿ ಗೆದ್ದಿತ್ತು. ಮುಖ್ಯಮಂತ್ರಿ ಜಗನ್ ಅನೇಕ ಸುಧಾರಣಾ ಯೋಜನೆಗಳನ್ನು ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ನವೀನ್ ಪಟ್ನಾಯಕ್ ಪ್ರಾಬಲ್ಯ
ಲೋಕಸಭೆ ಚುನಾವಣೆಯೊಂದಿಗೇ ಒಡಿಶಾದ ವಿಧಾನಸಭೆ ಚುನಾವಣೆ ಕೂಡ ನಡೆಯಿತು. ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ಮೂಲಕ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಬಿಜೆಪಿಗೆ ಸೆಡ್ಡು ಹೊಡೆದರು. 147 ಕ್ಷೇತ್ರಗಳಲ್ಲಿ ಬಿಜೆಡಿ 113 ಕಡೆ ಗೆಲುವು ಸಾಧಿಸಿತು. ಬಿಜೆಪಿ 23 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಗಳಿಸಿದ್ದು ಕೇವಲ 9 ಸ್ಥಾನ.

ಈಶಾನ್ಯದಲ್ಲಿ ಬಿಜೆಪಿಗೆ ಸಿಹಿ-ಕಹಿ
ಈಶಾನ್ಯ ಭಾಗದಲ್ಲಿರುವ ಸಿಕ್ಕಿ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಏಪ್ರಿಲ್ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿತು. ಸಿಕ್ಕಿಂನಲ್ಲಿ 32 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಕ್ಕಿ ಕ್ರಾಂತಿಕಾರಿ ಮೋರ್ಚಾ 17 ಸ್ಥಾನಗಳೊಂದಿಗೆ ಬಹುಮತ ಸಾಧಿಸಿತು. ಮತ್ತೊಂದುಪ್ರಾದೇಶಿಕ ಪಕ್ಷ ಎಸ್ಡಿಎಫ್ ಉಳಿದ 15 ಸ್ಥಾನಗಳನ್ನು ಗೆದ್ದಿತು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಶೂನ್ಯ ಸಾಧನೆಯೊಂದಿಗೆ ಭಾರಿ ಮುಖಭಂಗ ಅನುಭವಿಸಿದ್ದವು. 2014ರ ಚುನಾವಣೆಯಲ್ಲಿಯೂ ಇಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. ಬಿಜೆಪಿ ಹತ್ತು ಸ್ಥಾನಗಳನ್ನು ಪಡೆದಿತ್ತು.
ಅರುಣಾಚಲ ಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ 42 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಿಜೆಪಿ ಆಗ 11 ಸ್ಥಾನ ಗಳಿಸಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನ ಪಡೆದು ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ ಬಲ ಕೇವಲ 4ಕ್ಕೆ ಕುಸಿಯಿತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications