ಮಂಗಳೂರಲ್ಲಿ ಗೋಲಿಬಾರ್; ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಏನಂತಾರೆ?
ಬೆಂಗಳೂರು, ಡಿಸೆಂಬರ್ 20 : 'ದಕ್ಷಿಣ ಭಾರತದ ಹಿಂದುತ್ವದ ಪ್ರಯೋಗಶಾಲೆ' ಎಂದು ಕರೆಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಹೆಣಗಳು ಉರುಳಿವೆ. ಕೇಂದ್ರ ಸರಕಾರ ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆ ಪೊಲೀಸರ ಗೋಲಿಬಾರ್ನಲ್ಲಿ ದಿನ ಅಂತ್ಯ ಕಂಡಿತು.
2 ಸಾವು, ಕನಿಷ್ಟ 6 ಜನರಿಗೆ ಗಾಯಗಳಾಗುವ ಮೂಲಕ ಶುಕ್ರವಾರವೂ ಮಂಗಳೂರಿನಲ್ಲಿ ಉದ್ರಿಕ್ತ ಪರಿಸ್ಥಿತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದು, ರಾಜೀನಾಮೆ ನೀಡಿ ಹೊರಬಂದು ಜನಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಸಿಕಾಂತ್ ಸೆಂಥಿಲ್ ಅವರ ಜತೆಗೆ ನಡೆಸಿದ ದೂರವಾಣಿ ಸಂದರ್ಶನ ಇಲ್ಲಿದೆ.
ಮಂಗಳೂರು ಗೋಲಿಬಾರ್; 1 ಕೋಟಿ ಪರಿಹಾರಕ್ಕೆ ಆಗ್ರಹ
'ಒನ್ ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಸಸಿಕಾಂತ್, ಸದ್ಯ ದೇಶದಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಹೋರಾಟವನ್ನು ಅಷ್ಟು ಸುಲಭವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ನಂಬಿದ್ದಾರೆ. ಜನರ ಅಸ್ಥಿತ್ವವೇ ಇದರಲ್ಲಿ ಅಡಗಿರುವ ಹಿನ್ನೆಲೆಯಲ್ಲಿ ಬೀದಿಯಲ್ಲಿರುವ ಜನರ ಮಾತುಗಳನ್ನು ಸರಕಾರ ಕೇಳಲೇಬೇಕಿದೆ ಎಂದವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಮಂಗಳೂರು ಗೋಲಿಬಾರ್: ಸರ್ಕಾರಕ್ಕೆ ಕುಮಾರಸ್ವಾಮಿ ಪಂಚ ಪ್ರಶ್ನೆಗಳು
ಮಾತುಕತೆ ಸಂಪೂರ್ಣ ವಿವರ ಇಲ್ಲಿದೆ.
* ಒನ್ ಇಂಡಿಯಾ ಕನ್ನಡ: ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಅದೇ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೀರಿ. ಘಟನೆಗೆ ಏನು ಪ್ರತಿಕ್ರಿಯೆ ನೀಡುತ್ತೀರಿ?
ಸಸಿಕಾಂತ್ ಸೆಂಥಿಲ್: ನಾನು ಅಲ್ಲಿ ಇಲ್ಲದೆ (ಮಂಗಳೂರಿನಲ್ಲಿ) ನಡೆಯುತ್ತಿರುವ ಕಾರ್ಯಚರಣೆ ಕುರಿತು ಮಾತನಾಡುವುದು ಸರಿಯಲ್ಲ. ಸನ್ನಿವೇಶಗಳು ನಾನಾ ಆಯಾಮದಲ್ಲಿ ಸೃಷ್ಟಿಯಾಗಿರುತ್ತವೆ. ಹೀಗಿರುವಾಗ ಪ್ರತಿಕ್ರಿಯೆ ನೀಡುವ ಏಕೈಕ ಉದ್ದೇಶದಿಂದ ಪ್ರತಿಕ್ರಿಯಿಸುವುದು ಸರಿಯಲ್ಲ ಅಂದುಕೊಂಡಿದ್ದೇನೆ. ನಾನು ಅಲ್ಲಿ ಇದ್ದೆ ಮತ್ತು ಅಲ್ಲಿನ ಸಂಕಷ್ಟಗಳು ಚೆನ್ನಾಗಿ ಅರಿವಿದೆ. ಹೀಗಾಗಿ ಮಂಗಳೂರಿನ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ.
ಮಂಗಳೂರು ಪೊಲೀಸರ ಫೈರಿಂಗ್, ಪೊಲೀಸ್ ಆಯುಕ್ತ ಏನು ಹೇಳುತ್ತಾರೆ?
* ಒನ್ ಇಂಡಿಯಾ ಕನ್ನಡ: ಡಿ. 11ರ ನಂತರ ಪೌರತ್ವ ಕಾಯ್ದೆಗೆ ಅಂಗೀಕಾರ ಸಿಕ್ಕ ನಂತರ ದೇಶದಲ್ಲಿ ಪ್ರತಿಭಟನೆಯ ಅಲೆಯೊಂದು ಆರಂಭವಾಗಿದೆ. ಇದನ್ನು ಹೇಗೆ ನೋಡುತ್ತೀರಿ?
ಸಸಿಕಾಂತ್ ಸೆಂಥಿಲ್: ಇದು ಅತ್ಯಂತ ಒಳ್ಳೆಯ ಬೆಳವಣಿಗೆಗಳಿಗೆ ನಾಂದಿ ಹಾಡಲಿದೆ ಎಂದು ನಂಬಿದ್ದೇನೆ. ಇಲ್ಲಿ ಮೂರು ಪ್ರಮುಖ ಅಂಶಗಳಿವೆ. ಒಂದು, ಜನ ದೇಶದ ಎಲ್ಲಾ ಸಂಸ್ಥೆಗಳ ಬಗೆಗೆ ನಂಬಿಕೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಜಾಹೀರಾಗಿದೆ.
ಎರಡನೇ ಅಂಶ, ಜನ ಇಷ್ಟಲ್ಲಾ ಮಾಡಬೇಕಾಗಿ ಬಂದಿರುವುದು ನತದೃಷ್ಟಕರ. ಇಂತಹದೊಂದು ಹಂತಕ್ಕೆ ದೇಶ ಬರಬಾರದಿತ್ತು. ಮೂರನೇಯದು, ನನ್ನೆಲ್ಲಾ ಓರಿಗೆಯ ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಎಷ್ಟು ಸಾಧ್ಯವೋ ಅಷ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಸರಕಾರ ಇದನ್ನು ಬಲಪ್ರಯೋಗದ ಮೂಲಕವೇ ಮುಗಿಸಲು ನೋಡುತ್ತದಾದರೂ ಅಹಿಂಸಾತ್ಮಕ ಹಾದಿಯನ್ನು ಬಿಡಬಾರದು.
ಇದು ಎಲ್ಲರಲ್ಲಿ ನನ್ನ ಕೋರಿಕೆ ಕೂಡ. ಇದನ್ನು ಹೊರತು ಪಡಿಸಿದರೆ ಕೆಲವು ಬೆಳವಣಿಗೆಗಳ ಬಗೆಗೆ ನಾನು ಕುತೂಹಲದಿಂದ ನೋಡುತ್ತಿದ್ದೇನೆ. ಪ್ರಜಾಪ್ರಭುತ್ವದ ಬೇರು ಮಟ್ಟದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಭರವಸೆ ಮೂಡಿಸುವಂತಿವೆ. ಎಲ್ಲಾ ಆಳುವವರಿಗೆ ಅಂತಿಮವಾಗಿ ಜನರೇ ನಿರ್ಣಾಯಕರು ಎಂಬ ಸಂದೇಶವೊಂದು ರವಾನೆಯಾಗುತ್ತಿದೆ.
* ಒನ್ ಇಂಡಿಯಾ ಕನ್ನಡ: ಸಿಎಎ ವಿರೋಧಿ ಪ್ರತಿಭಟನೆಯನ್ನೇ ಇಟ್ಟುಕೊಂಡು ನೋಡಿದರೆ ನಾಳೆಗಳನ್ನು ಹೇಗೆ ಕಲ್ಪನೆ ಮಾಡಿಕೊಳ್ಳುತ್ತೀರಿ?
ಸಸಿಕಾಂತ್ ಸೆಂಥಿಲ್: ನಾಳೆಗಳ ವಿಚಾರದಲ್ಲಿ ಸರಕಾರ ಸರಳವಾಗಿರುವ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ. ಸಿಎಎ ಇರಲಿ ಎನ್ಆರ್ಸಿ ಇರಲಿ ಇಂತಹ ಬಡವರ ವಿರೋಧಿಯಾದ ಕಾಯ್ದೆಗಳನ್ನು ಹಿಂಪಡೆಯಬೇಕು. ಈ ಕುರಿತು ನಡೆಸುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು.
ವಿದ್ಯಾರ್ಥಿಗಳು ಮತ್ತೆ ಅವರವರ ಕಾಲೇಜುಗಳಿಗೆ ಮರಳಬೇಕು. ಜನಜೀವನ ಸಹಜ ಸ್ಥಿತಿಗೆ ಮರಳಬೇಕು. ಸಂವಿಧಾನ ವಿರೋಧಿಯಾಗಿರುವ, ಬಡವರ ವಿರೋಧಿಯಾಗಿರುವ ಈ ಕಾನೂನುಗಳನ್ನು ತೆಗೆದುಹಾಕಬೇಕು. ಅಳಿವು ಉಳಿವಿನ ಪ್ರಶ್ನೆ ಇದಾಗಿರುವುದರಿಂದ ಅವರು (ಪ್ರತಿಭಟನಾಕಾರರು) ವಾಪಾಸ್ ಮರಳುವುದು ಸಾಧ್ಯವೇ ಇಲ್ಲ. ಸರಕಾರ ಈ ದನಿಗಳನ್ನು ಕೇಳಿಕೊಳ್ಳದೆ ಹೋದರೆ ಖಂಡಿತಾ ಇದು ಇಷ್ಟಕ್ಕೆ ನಿಲ್ಲುವುದಿಲ್ಲ.