'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ 'ಹಾಕಿದ ಹಾಗೆ ಆಗಬಾರದು
ಅಕ್ಕಪಕ್ಕದ ಮನೆಯ ಮಹಿಳೆಯರ ಸಂವಾದ."ಯಾಕೋ ಎರಡು ದಿನಗಳಿಂದ ಜ್ವರ ಸುಸ್ತು. ಊಟ ಸೇರ್ತಾ ಇಲ್ಲ ವೈದ್ಯರ ಬಳಿ ಹೋಗಿ ಬರಬೇಕು" ಅಂತ ಒಬ್ಬಳು ಹೇಳಿದಾಗ , ಮತ್ತೊಬ್ಬಳು " ನಿನಗೇನು ಹುಚ್ಚಾ, ಮೆಡಿಕಲ್ ಗೆ ಹೋಗಿ ಮಾತ್ರೆ ತಗೋ. ಇಷ್ಟಕ್ಕೆಲ್ಲಾ ಡಾಕ್ಟರರ ಹತ್ತಿರ ಹೋದರೆ ಆ ಟೆಸ್ಟ್,ಈ ಟೆಸ್ಟ್ ಅಂತ ನಿನ್ನ ಸುಲಿಗೆ ಮಾಡಿ ಬಿಡ್ತಾರೆ ನೋಡು" ಎನ್ನುವ ಉಚಿತ ಸಲಹೆ ಸಿಕ್ಕಿತು.
ಇದು ಕೇವಲ ಅವಿದ್ಯಾವಂತರ ಸಮಸ್ಯೆಯಲ್ಲ. ಸುಸಂಸ್ಕತ ಜನರದೂ ಇದೇ ಮನಃಸ್ಥಿತಿ. ಮನೆಯಲ್ಲಿಯೇ ಎಲ್ಲಾ ತರಹದ ಮದ್ದುಗಳನ್ನು ತೆಗದುಕೊಂಡು,ಕಡಿಮೆಯಾಗದೆ ಉಲ್ಭಣ ಸ್ಥಿತಿ ತಲುಪಿದಾಗ ವೈದ್ಯರ ಮೊರೆಹೋಗುತ್ತಾರೆ.ಇದಕ್ಕೆ ಕಾರಣ ಅಜ್ಞಾನ ಇಲ್ಲವೇ ಬಡತನ.ಹೀಗೆ ಸಣ್ಣ ಕಾಯಿಲೆಗಳಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆಯೇ ಅಧಿಕ.
ಜ್ವರ ಒಂದು ಕಾಯಿಲೆ ಅಲ್ಲ .ದೇಹದ ಒಳಗೆ ಉಂಟಾಗಿರಬಹುದಾದ ಅವ್ಯವಸ್ಥೆಯ ಮುನ್ಸೂಚನೆಯೇ ಈ ಜ್ವರ ಎಂಬುದು ವೈದ್ಯರ ಅಭಿಪ್ರಾಯ. ಜ್ವರ ತಾನೇ ಎಂಬ ನಿರ್ಲಕ್ಷ್ಯದಿಂದಾಗಿ ಒಬ್ಬ ವ್ಯಕ್ತಿ ಎಷ್ಟು ತೊಂದರೆಗೆ ಒಳಗಾಗುತ್ತಾರೆ ಎಂಬುದಕ್ಕೆ ನನ್ನ ಅನುಭವವೇ ಸಾಕ್ಷಿ.

ಮದುವೆಗೆಂದು ಪರವೂರಿಗೆ ತೆರಳಿದ್ದ ನನಗೆ ಚಳಿಜ್ವರ ಕಾಡಿದಾಗ,ಅಲ್ಲಿದ್ದ ಒಂದು ಕ್ಲಿನಿಕ್ ನಲ್ಲಿ ತೋರಿಸಿದಾಗ ಆಂಟಿ ಬಯೋಟಿಕ್ ಕೊಟ್ಟರು. ನಂತರವೂ ಕಡಿಮೆಯಾಗದಿದ್ದಾಗ ನಮ್ಮ ಊರಿನ ವೈದ್ಯರು ರಕ್ತ , ಮೂತ್ರ ಪರೀಕ್ಷೆಗಳಿಗೆ ಬರೆದುಕೊಟ್ಟರು. ಎಲ್ಲದರಲ್ಲೂ ನೆಗೆಟಿವ್ ಬಂದಾಗ ಮತ್ತೊಮ್ಮೆ ಆಂಟಿ ಬಯೋಟಿಕ್ ನ ಪುನರಾವರ್ತನೆ ಯಾಯಿತು.
ನಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಲು ಅವಕಾಶವಾಗಿರಲಿಲ್ಲ. ಮಾತ್ರೆ ಮುಗಿಯುತ್ತಿದ್ದಂತೆಯೇ ಮತ್ತೆ ಜ್ವರ ಕಾಡಿತು. ಈ ಮಧ್ಯೆ ಬೆಂಗಳೂರಿಗೆ ಹೋಗಬೇಕಾಯಿತು.ಮತ್ತೆ ಅಲ್ಲಿನ ಡಾಕ್ಟರರ ಹತ್ತಿರ ಓಡಾಟ.ಅಲ್ಲಿ ಮತ್ತೆ ಎಲ್ಲಾ ಪರೀಕ್ಷೆಗಳೂ ಆದವು. ಡೆಂಗಿ,ಜಾಂಡೀಸ್,ಮೂತ್ರದ ಸೋಂಕು ಯಾವುದೂ ಅಲ್ಲ ಅಂತ ಆದ ಮೇಲೆ ಬ್ಲಡ್ ಕಲ್ಚರ್ ಪರೀಕ್ಷೆಯೂ ನಡೆಯಿತು.
ಇದೂ ನೆಗೆಟೀವ್ ಬಂದಾಗ 'ಅನ್ನೋನ್ ಫೀವರ್' ಎಂದು ಬರೆದು,ಮತ್ತೆ ಆಂಟಿ ಬಯೋಟಿಕ್ ನ ಪ್ರಯೋಗ .ಇಷ್ಟರಲ್ಲಿ ನಾನು ಅರ್ಧ ಜೀವವಾಗಿದ್ದೆ. ಸಾವಿರಾರು ರೂಪಾಯಿ ಕೈ ಬಿಟ್ಟು ಹೋಗಿತ್ತು. ಸಾಕಾಗಿ ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದು,ಹಳ್ಳಿ ಸೇರಿದೆ.ಈಗ ಕಡೆಯ ಪ್ರಯತ್ನ ಕುಟುಂಬ ವೈದ್ಯರ ಭೇಟಿ.

ಕಟಪಾಡಿಯಲ್ಲಿರುವ ಶ್ರೀನಿವಾಸ ರಾವ್ ಕೊರಡ್ಕಲ್ ಅವರನ್ನು ಸಂಪರ್ಕಿಸಿದೆ.ಯಾವ ರಿಪೋರ್ಟ್ ಗಳನ್ನೂ ನೋಡದೆ ಜ್ವರ ಲಕ್ಷಣಗಳಿಂದ ಅದನ್ನು ಸಣ್ಣ ಕರುಳಿನ ಸೋಂಕು ಎಂದು ತೀರ್ಮಾನಿಸಿ,ಅದಕ್ಕೆ ಮದ್ದು ಕೊಟ್ಟರು. ಪವಾಡವೆಂಬಂತೆ ಒಂದೇ ವಾರದ ಮದ್ದಿನಲ್ಲಿ ನಾನು ಹುಷಾರಾಗಿದ್ದೆ.ಆದರೆ ಸೋಂಕು ತೀವ್ರವಾಗಿದ್ದ ರಿಂದ ಒಂದು ತಿಂಗಳು ಮದ್ದು ಮುಂದುವರೆಯಿತು.
ಮೂರು ತಿಂಗಳುಗಳಿಂದ ಒದ್ದಾಡಿದ್ದವಳಿಗೆ ಹುರುಪು ಬಂದಿತ್ತು.ಎಂಬಿಬಿಸ್ ಮಾಡಿದ್ದ ಅವರು ಅದೆಷ್ಟೋ ವರ್ಷ ಗಳಿಂದ ಹಳ್ಳಿಯಲ್ಲಿಯೇ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ,ಇತ್ತೀಚೆಗೆ ಮಣಿಪಾಲದಲ್ಲಿ ಸನ್ಮಾನವನ್ನು ಮಾಡಿದ್ದಾರೆ. ಅವರ ಕೈ ಗುಣದಿಂದ ಅನೇಕ ಜನರು ಗುಣ ಹೊಂದಿ ತೃಪ್ತರಾಗಿದ್ದಾರೆ.
ಈಗಿನ ಪೀಳಿಗೆ ಎಲ್ಲದಕ್ಕೂ ಸ್ಪೆಷಲಿಸ್ಟ್ ರವರ ಬಳಿಯೇ ಹೋಗುವುದು. ವೈದ್ಯರು ಯಾರೇ ಆಗಲಿ ಮೊದಲು ಕಾಯಿಲೆಯನ್ನು ಗುರುತಿಸಬೇಕು. ರೋಗಿಗಳು ಅವರ ಪ್ರಯೋಗ ಪಶುವಾಗಬಾರದು.'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ 'ಹಾಕಿದ ಹಾಗೆ ಆಗಬಾರದು. ಈ ವಿಷಯದಲ್ಲಿ ನಮ್ಮ ಡಾಕ್ಟರರು ಬಹಳ ಬುದ್ಧಿವಂತರು. ಕಾಯಿಲೆಯ ಮೂಲವೇ ಬುದ್ಧಿವಂತಿಕೆ. ಏನೇ ಆಗಲಿ 'ವೈದ್ಯ ನಾರಾಯಣೋ ಹರಿ ' ಎಂಬುದನ್ನು ನಾವು ಮರೆಯುವಂತಿಲ್ಲ.












Click it and Unblock the Notifications