"ಸತ್ಯ ನ್ಯಾಯ ಕಾಲ ಉತ್ತರ ನೀಡಲಿದೆ" ಡಿಕೆಶಿ ರಿಟರ್ನ್ಸ್, ಮುಂದೇನು?
"ನಾನು ಹಿಂದೆ ಹೋಗುವುದಿಲ್ಲ, No question of going back, time and law will give answer. ನಾನು ಮಾತನಾಡಿದ್ದಕ್ಕೆ ಬದ್ಧನಾಗಿದ್ದೇನೆ. ರಾಜಕಾರಣದಲ್ಲಿ ನಡೆಯುವ ಚದುರಂಗ ಆಟಕ್ಕೆ ಬೇಕಾದ ಬದಲಾವಣೆಗಳು ಗೊತ್ತಿವೆ. ಜತೆಗೆ ದೊಡ್ಡ ಸೈನ್ಯ ಇದೆ. ಅದರ ಅಭಿಮಾನ ಏನು ಎಂಬುದನ್ನು ನೀವು ನೋಡಿದ್ದೀರಿ. ಅವರ ಋಣ ತೀರಿಸುವ ಶಕ್ತಿ ನೀಡು ಎಂಬ ದೇವರಲ್ಲಿ ಕೇಳಿಕೊಳ್ಳುತ್ತೇನೆ," ಎಂದು ದೆಹಲಿಯ ತಿಹಾರ್ ಜೈಲಿನಿಂದ ಬೆಂಗಳೂರಿಗೆ ರಿಟರ್ನ್ ಆಗಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಗುಡುಗಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕ ಭವ್ಯ ಸ್ವಾಗತ, ಹೂಮಳೆ, ಸಾದಹಳ್ಳಿ ಗೇಟ್ ಬಳಿ ಸಾಂಸ್ಕೃತಿಕ ಸದ್ದಿನ ನಡುವೆ ಅಸಂಖ್ಯ ಅಭಿಮಾನಿಗಳ ಹರ್ಷೋದ್ಗಾರ, ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಆಡಿದ ಮಾತುಗಳು, ಸಾಮಾಜಿಕ ಜಾಲ ತಾಣಗಳಲ್ಲಿನ ಟ್ರೆಂಡ್ ಗಳು ಬೇರೆಯದ್ದೇ ಆಯಾಯವನ್ನು ತೆರೆದಿಟ್ಟಿವೆ. ರಾಜ್ಯ ರಾಜಕೀಯದಲ್ಲಿ ಮುಂಬರುವ ಬದಲಾವಣೆಗೆ ಮುನ್ಸೂಚನೆಗೆ ಡಿಕೆಶಿ ಪುರಪ್ರವೇಶ ಮುನ್ನಡಿಯಾಗುವ ಲಕ್ಷಣಗಳು ಗೋಚರಿಸಿವೆ.
ಡಿಕೆಶಿ ಮೆರವಣಿಗೆ ಬಗ್ಗೆ ಬಿಜೆಪಿ ನಾಯಕರು, ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಆಕ್ಷೇಪ ಎತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ "ಬೇಲ್ ಸಿಕ್ಕಿದ್ದಕ್ಕೆ ಈ ರೀತಿ, ಇನ್ನು ಕೇಸಿನಿಂದ ಖುಲಾಸೆಯಾದ್ರೆ ಇನ್ನೇನು ಮಾಡುತ್ತಾರೋ" ಎಂದು ಹೀರೋ ರೀತಿ ಸ್ವಾಗತವನ್ನು ಪ್ರಶ್ನಿಸಿದ್ದಾರೆ.
ಸಿಕ್ಕ ಸಮಯದಲ್ಲೇ ಡಿಕೆಶಿ ಈ ಎಲ್ಲಾ ಪ್ರಶ್ನೆಗಳಿಗೂ ಕ್ಲುಪ್ತವಾಗಿ ಉತ್ತರಿಸಿದ್ದಾರೆ, ಹಲವರಿಗೆ ಎಚ್ಚರಿಕೆ ನೀಡಿದ್ದಾರೆ, ಕುಟುಂಬಸ್ಥರನ್ನು ಕೋರ್ಟಿಗೆ ಎಳೆ ತಂದಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ, ಎಲ್ಲದರ ನಡುವೆ ನಾನು ಮಾತನಾಡುವುದು ಬಹಳವಿದೆ ಎಂದು ಅಲ್ಪವಿರಾಮ ಇಟ್ಟಿದ್ದಾರೆ... ಹೀಗಾಗಿ ಡಿಕೆಶಿ ರಿಟರ್ನ್ಸ್ ಅಥವಾ ಡಿಕೆಶಿ 2.0 ಎಪಿಸೋಡು ಮುಂದುವರೆಯುವುದು ನಿರೀಕ್ಷಿತ.

ಡಿಕೆಶಿ ರಿಟರ್ನ್ಸ್ ಪ್ರಮುಖ ಅಂಶಗಳೇನು
ಡಿಕೆ ಶಿವಕುಮಾರ್ ಇಂದು ಆಡಿದ ಮಾತಿನ ಚಿಂತನ ಮಂಥನ ಎಲ್ಲೆಡೆ ನಡೆಯುತ್ತಿದೆ.
* ನಾನು ನಿರಪರಾಧಿ, ತಪ್ಪು ಮಾಡಿದ್ರೆ ಕಾನೂನು ಶಿಕ್ಷೆ ನೀಡಲಿದೆ.
* ನನ್ನಂತೆ ಹಲವಾರು ಮಂದಿ ಇದ್ದಾರೆ. ಇತರಿಗೂ ಕಾನೂನಿನ ಪಾಠವಾಗಲಿದೆ.
* ಇಲ್ಲಿ ಎಲ್ಲರೂ ಕಷ್ಟಪಡುತ್ತಾರೆ, ಕೆಲವರಿಗೆ ಅಧಿಕಾರ ಅದೃಷ್ಟದಿಂದ ಒಲಿದು ಬರುತ್ತದೆ, ಅಧಿಕಾರ ಶಾಶ್ವತವಲ್ಲ
* ಇದು ಅಂತ್ಯವಲ್ಲ ಆರಂಭ, ನಾನು ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ,
* ರಾಜ್ಯದ ಜನರ ಜವಾಬ್ದಾರಿ ಇದೆ, ಜನರ ಋಣ ನನ್ನ ಮೇಲಿದೆ.
"ಸತ್ಯ ನ್ಯಾಯ ಕಾಲ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡಲಿದೆ" ಎಂದಿದ್ದಾರೆ. ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿರುವ ಡಿಕೆಶಿಯನ್ನು ತಿಹಾರ್ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದ ಜಾರಿ ನಿರ್ದೇಶನಾಲಯವು ತನ್ನ ಕಾನೂನು ಹೋರಾಟ ಮುಂದುವರೆಸಿದೆ. ಇತ್ತ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಮೂಲಕ ತೀಕ್ಷ್ಣ ಮಾತುಗಳ ಮೂಲಕ ಡಿಕೆ ಶಿವಕುಮಾರ್ ಅವರು ಎಂಟ್ರಿಯಲ್ಲೇ ಹಲವರ ಎದೆಯಲ್ಲಿ ಅವಲಕ್ಕಿ ಕುಟ್ಟುವಂಥ ಪರಿಸ್ಥಿತಿ ತಂದಿದ್ದಾರೆ.

ನಾನು ಯಾರು ನನ್ನ ಕಸುಬೇನು ಎಂಬುದನ್ನು ತಿಳಿಸಿದ ಡಿಕೆಶಿ
"ನಾನು ಒಬ್ಬ ಪ್ರಜಾಪ್ರತಿನಿಧಿಯಾಗಿ ಕಾನೂನು ಗೌರವಿಸುತ್ತೇನೆ. ನನ್ನ ಪತ್ನಿ, ಪುತ್ರಿ ಮತ್ತು ತಮ್ಮನ ಅಫಿಡವಿಟ್ ಈಗಾಗಲೇ ಸಲ್ಲಿಸಿದ್ದೇನೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಲೆಕ್ಷನ್ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ದಾಖಲೆಗಳೊಂದಿಗೆ ಬರುತ್ತೇನೆ. ಹುಟ್ಟುತ್ತಾ ಕೃಷಿಕ, ಬೆಳೆಯುತ್ತಾ ಉದ್ಯಮಿಯಾದೆ. ನನ್ನ ಪ್ಯಾಷನ್ ಶಿಕ್ಷಣದಲ್ಲಿತ್ತು, ಹಾಗೆಯೇ ರಾಜಕಾರಣಿಯಾದೆ. ಹಾಗಾಗಿ ಎಲ್ಲ ವ್ಯವಹಾರಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ" ಎಂದರು. ಈ ಮೂಲಕ ಐಟಿ ಇಲಾಖೆ, ಲೋಕಾಯುಕ್ತ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ಸಮನ್ಸ್ , ತನಿಖೆ, ವಿಚಾರಣೆ ತ್ವರಿತವಾಗಿ ನಡೆದಿದ್ದೇಕೆ?
"ಯಾರಿಗೂ ಯಾವ ಕಾಲಕ್ಕೂ ದ್ರೋಹ ಮಾಡಿಲ್ಲ. ಯಾರ ಬೆನ್ನಿಗೆ ಚೂರಿ ಹಾಕಿಲ್ಲ" ಎಂದ ಡಿಕೆಶಿ, ಬಂಡೆ ಚೂರು ಚೂರಾಯ್ತು ಎಂದ್ರು, 40 ವರ್ಷಗಳ ರಾಜಕಾರಣ ಮುಗಿಸುವ ಷಡ್ಯಂತ್ರ ಮಾಡಿದ್ರು ಎಲ್ಲಕ್ಕೂ ಉತ್ತರ ನೀಡುತ್ತೇನೆ ಎಂದಿದ್ದಾರೆ. ತನಿಖಾ ಸಂಸ್ಥೆಗಳು 2017ರ ಐಟಿ ದಾಳಿ ಪ್ರಕರಣ ತನಿಖೆಯನ್ನು ಮುಂದಿಟ್ಟುಕೊಂಡು ತನಿಖಾ ಸಂಸ್ಥೆಗಳು ಸಮನ್ಸ್ ನೀಡಿದ್ದು, ತನಿಖೆ ಮುಂದುವರೆಸಿ ವಿಚಾರಣೆ ಮಾಡಿದ್ದು, ಕುಟುಂಬಸ್ಥರಿಗೆ ಸಮನ್ಸ್ ನೀಡಿದ್ದು, ಜೈಲುವಾಸ ಎಲ್ಲವನ್ನು ಸುದ್ದಿಗೋಷ್ಠಿ ಸಂದರ್ಭದಲ್ಲಿ ಡಿಕೆಶಿ ಸ್ಮರಿಸಿಕೊಂಡರು. ಕೆಲವೇ ಕ್ಷಣಗಳಲ್ಲಿ ಸಿಬಿಐ ತನಿಖೆಗೆ ಕೊಡುತ್ತಾರೆ ಎಂದರೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಸರ್ಕಾರಕ್ಕೆ ಚುಚ್ಚಿದರು.

ಇಲಿ ಹೋಯ್ತು ಎಂಬ ವಿಚಾರಕ್ಕೆ ಉತ್ತರ ನೀಡುತ್ತೇನೆ
ತಮ್ಮ ಕುಟುಂಬಸ್ಥರಿಗೆ, ಆಪ್ತರಿಗೆ, ಅದರಲ್ಲೂ ತಮ್ಮ ವಯೋವೃದ್ಧ ತಾಯಿಯನ್ನು ದೆಹಲಿಗೆ ಬರುವಂತೆ ಮಾಡಿದವರ ಮನೆಯಲ್ಲೂ ಇಂಥ ಪರಿಸ್ಥಿತಿ ಬಂದರೆ ಏನು ಮಾಡುತ್ತಾರೆ? ನನ್ನ ಮಕ್ಕಳಿಗೆ ತಮ್ಮ ತಂದೆ ಎಂಎಲ್ ಎಂದು ಹೇಳಿಕೊಳ್ಳಲು ಇಷ್ಟವಿಲ್ಲ, ಅಂಥವರನ್ನು ಕರೆಸಿಕೊಂಡು ವಿಚಾರಣೆ ನಡೆಸಿದರು ಎಂದು ತಮ್ಮ ಮಗಳು ಐಶ್ವರ್ಯಾ ಇಡಿ ಸಮನ್ಸ್ ನಂತೆ ದೆಹಲಿಗೆ ಬಂದು ವಿಚಾರಣೆಗೆ ಹಾಜರಾಗಿದ್ದರ ಬಗ್ಗೆ ಪ್ರಸ್ತಾಪಿಸಿದರು. "ನಾನು ಜೈಲಿಗೆ ಹೋದಾಗ ನನ್ನ ಮಕ್ಕಳು, ನನ್ ತಾಯಿ, ಪತ್ನಿ ಎಷ್ಟು ಸಂಕಟ ಅನುಭವಿಸಿದ್ದಾರೆ ಎಂಬುದು ನನಗೆ ಗೊತ್ತು. ನನ್ನ ಮನಸ್ಸಿಗೆ ಎಲ್ಲಕ್ಕಿಂತ ನೋವಾಗಿದ್ದೇ ಅದು. ಆ ಬಗ್ಗೆ ನಿಮಗೆಲ್ಲ ಇನ್ನೊಮ್ಮೆ ಹೇಳುತ್ತೇನೆ" ಎಂದರು.

ರಾಜ್ಯದ ಜವಾಬ್ದಾರಿ ನನ್ನ ಮೇಲಿದೆ
ನನ್ನನ್ನು ನೋಡುವುದಕ್ಕೆಂದು ಎಷ್ಟೋ ಜನ ರಸ್ತೆಗೆ ಬಂದಿದ್ರು, ದೆಹಲಿಗೂ ಬಂದಿದ್ದರು. ನನಗೆ ಒಳಿತಾಗಲಿ, ಜಾಮೀನು ಸಿಗಲಿ ಎಂಮದು ಪ್ರಾರ್ಥಿಸಿದ್ದರು. ನನಗೆ ಜಾಮೀನು ಸಸಿಗುವಲ್ಲಿ ವಕೀಲರು, ಕಾಂಗ್ರೆಸ್ ನಾಯಕರು ಶ್ರಮಿಸಿದರು. ಅವರೆಲ್ಲರ ಉಪಕಾರವನ್ನು ನಾನು ಹೇಗೆ ಮರೆಯಲಿ. ಇಲ್ಲಿ ಕುಳಿತು ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತ, ದೇವರಲ್ಲಿ ಒಂದೇ ಒಮದು ಪ್ರಾರ್ಥನೆ ಸಲ್ಲಿಸುತ್ತೇನೆ. ಈ ಜನರ ಋಣ ತೀರಿಸುವ ಶಕ್ತಿಯನ್ನು ನನಗೆ ಕೊಡಿ" ಎಂದು ಡಿಕೆಶಿ ಭಾವುಕರಾಗಿ ಹೇಳಿದರು. ಈ ಮೂಲಕ ಪಕ್ಷವು ಮುಂಬರುವ ದಿನಗಳಲ್ಲಿ ನೀಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧ ಎಂಬುದನ್ನು ಸಾರಿದ್ದಾರೆ.












Click it and Unblock the Notifications