ಕಾವೇರಿ ನದಿ ದಡದ ಪವಿತ್ರ ಕ್ಷೇತ್ರ ಗುಹ್ಯದಲ್ಲಿ ದೀಪಾವಳಿಗೆ ವಿಶೇಷ ಜಾತ್ರೆ
ದೀಪಾವಳಿಯನ್ನು ಎಲ್ಲೆಡೆ ಆಚರಿಸಲಾಗುತ್ತದೆಯಾದರೂ ಕೊಡಗಿನಲ್ಲಿ ಈ ಹಬ್ಬದ ಆಚರಣೆ ಹೆಚ್ಚಾಗಿ ಕಾಣಿಸುವುದಿಲ್ಲ. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಕೆಲವೆಡೆ ವಿವಿಧ ಪೂಜೆ ಮತ್ತು ಜಾತ್ರೆ ನಡೆಯುತ್ತದೆ. ಆ ಪೈಕಿ ಗುಹ್ಯದಲ್ಲಿ ದೀಪಾವಳಿ ಸಂದರ್ಭ ನಡೆಯುವ ಜಾತ್ರೆ ವಿಶೇಷವಾಗಿದೆ.
ಗುಹ್ಯವು ಕಾವೇರಿ ನದಿ ದಡದಲ್ಲಿರುವ ಪವಿತ್ರ ಕ್ಷೇತ್ರವಾಗಿದೆ. ಇದು ಕೊಡಗಿನಲ್ಲಿರುವ ಕ್ಷೇತ್ರಗಳ ಪೈಕಿ ವೈಶಿಷ್ಟ್ಯವನ್ನು ಹೊಂದಿದ ಕ್ಷೇತ್ರವಾಗಿದ್ದು, ಇಲ್ಲಿ ಪ್ರತಿವರ್ಷವೂ ದೀಪಾವಳಿ ಸಮಯದಲ್ಲಿ ವಾರ್ಷಿಕ ಹಬ್ಬ ನಡೆಯುತ್ತದೆ. ಈ ವೇಳೆ ಐದು ದಿನಗಳ ಕಾಲ ನಡೆಯುವ ಹಬ್ಬ ವಿಶಿಷ್ಟ ವಿಭಿನ್ನವಾಗಿರುತ್ತದೆ. ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜತೆಗೆ ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ಇದ್ದು, ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಉತ್ಸವವು ಪೂರ್ಣಗೊಳ್ಳುತ್ತದೆ.
ಚಿಕ್ಕಮಗಳೂರು; ದೇವಿರಮ್ಮನ ಬೆಟ್ಟದ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ
ಗುಹ್ಯ ಕ್ಷೇತ್ರ ಕೊಡಗಿನ ಸಿದ್ದಾಪುರದಿಂದ ಐದು ಕಿ.ಮೀ. ದೂರದಲ್ಲಿದ್ದು, ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ ಎರಡು ಕಿ.ಮೀ ಕ್ರಮಿಸಿ ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಗುಹ್ಯ ಗ್ರಾಮವನ್ನು ತಲುಪಬಹುದಾಗಿದೆ. ಇಲ್ಲಿನ ಗುಹೆಗಳಲ್ಲಿ ಋಷಿಗಳು ತಪಸ್ಸು ಮಾಡಿದ ಕಾರಣ ಈ ಹೆಸರು ಬಂದಿತೆನ್ನುತ್ತಾರೆ. ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಕಾವೇರಿ ನದಿಯ ಆಳದಲ್ಲಿ ಹಿಂದಿನ ಕಾಲದ ದೇವಾಲಯವೊಂದು ಮುಳುಗಿ ಹೋಗಿದ್ದು, ಆ ಗುಟ್ಟು ಇನ್ನೂ ಯಾರಿಗೂ ತಿಳಿದಿಲ್ಲವೆಂದು, ಹಾಗಾಗಿ 'ಗುಹ್ಯ' ಹೆಸರು ಬಂದಿದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ವಿಷ್ಣು ಗುಟ್ಟಾಗಿ ಅಡಗಿದ ಜಾಗ ಗುಹ್ಯವಾಯಿತು ಎಂದು ಹೇಳುತ್ತಾರೆ.
ಗಮನ ಸೆಳೆಯುವ ಅಗಸ್ತ್ಯೇಶ್ವರ ದೇಗುಲ
ಗುಹ್ಯ ಕ್ಷೇತ್ರ ಅಗಸ್ತ್ಯೇಶ್ವರ ದೇಗುಲದಿಂದ ಗಮನಸೆಳೆಯುತ್ತಿದ್ದು, ಈ ದೇವಾಲಯ ವೃತ್ತಾಕಾರದಲ್ಲಿರುವುದು ವಿಶೇಷವಾಗಿದೆ. ಇನ್ನು ದೇಗುಲದಲ್ಲಿರುವ ಈಶ್ವರ ಲಿಂಗ ಸ್ವತಃ ಅಗಸ್ತ್ಯ ಮಹರ್ಷಿಯೇ ಪ್ರತಿಷ್ಠಾಪಿಸಿದ್ದು ಎಂಬ ನಂಬಿಕೆ ಈಗಲೂ ಇದೆ. ತಲಕಾವೇರಿಯಲ್ಲಿ ಹರಿದ ಕಾವೇರಿ ಗುಹ್ಯದ ಬಳಿ ಪತಿ ಅಗಸ್ತ್ಯೆಶ್ವರನ ಕೋರಿಕೆ ಮೇರೆಗೆ ನಿಂತು ಹರಿದ ಸ್ಥಳವೆಂದು ಹೇಳಲಾಗುತ್ತಿದೆ.
ಪಟಾಕಿಯಿಂದ ಬದುಕು ಕತ್ತಲಾಗದಿರಲಿ... ಪಟಾಕಿ ಸಿಡಿಸುವಾಗ ಹುಷಾರ್!
ಮದುವೆಗಾಗಿ ಕುಬೇರನಲ್ಲಿ ಸಾಲ ಮಾಡಿದ್ದ ವಿಷ್ಣು!
ಇನ್ನೊಂದೆಡೆ ಗುಹ್ಯದಲ್ಲಿ ಅಗಸ್ತ್ಯೇಶ್ವರ ದೇವಾಲಯವಲ್ಲದೆ ವಿಷ್ಣುಮೂರ್ತಿ ದೇವಾಲಯವೂ ಇದೆ. ಇದು ಅಗಸ್ತ್ಯೇಶ್ವರ ದೇವಾಲಯಕ್ಕಿಂತಲೂ ಹಿಂದಿನದು ಎಂದು ಹೇಳಲಾಗಿದೆ. ಈ ದೇವಾಲಯ ನಿರ್ಮಾಣವಾದ ಬಗ್ಗೆ ಒಂದು ರೋಚಕ ಕಥೆಯಿದೆ. ಅದು ಏನೆಂದರೆ? ಹಿಂದೆ ದೇವತೆಗಳ ಕಾಲದಲ್ಲಿ ಲೋಕ ಪಾಲಕ ವಿಷ್ಣು ತನ್ನ ಮದುವೆಗಾಗಿ ಕುಬೇರನಲ್ಲಿ ಸಾಲ ಮಾಡಿದ್ದನಂತೆ. ಸಾಲ ಮಾಡಿದ ಹಣದಲ್ಲಿ ಬಹಳ ಅದ್ದೂರಿಯಾಗಿ ವಿಷ್ಣು ಮದುವೆಯಾಗಿದ್ದನಂತೆ.
ಗುಹ್ಯದಲ್ಲಿ ಅಡಗಿ ಕುಳಿತ ವಿಷ್ಣು
ಮದುವೆಯಾದ ಬಳಿಕ ಸಾಲ ತೀರಿಸಬೇಕಲ್ಲವೇ? ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಕುಬೇರನೂ ಕೇಳತೊಡಗಿದನಂತೆ. ಕುಬೇರನ ಕಾಟವನ್ನು ತಡೆಯಲಾರದ ವಿಷ್ಣು ದೇವ ಲೋಕದಿಂದ ಭೂಲೋಕದತ್ತ ಓಡಿ ಬಂದು ಗುಹ್ಯದಲ್ಲಿ ಅಡಗಿ ಕುಳಿತನಂತೆ. ವಿಷ್ಣುವನ್ನು ಹುಡುಕಿಕೊಂಡು ಭೂಲೋಕಕ್ಕೆ ಬಂದಿದ್ದ ಕುಬೇರ ಗುಹ್ಯಕ್ಕೂ ಬಂದಿದ್ದ ಎಂಬುದು ಕೆಲವರ ನಂಬಿಕೆ. ಇದಕ್ಕೆ ಒತ್ತು ನೀಡುವಂತೆ ವರ್ಷಕ್ಕೊಮ್ಮೆ ಕಾವೇರಿ ನದಿಯಲ್ಲಿ ಮೀನೊಂದು ಕಾಣ ಸಿಗುತ್ತದೆ ಎನ್ನಲಾಗಿದೆ.
ಕಾವೇರಿ ನದಿ ತಟದ ಸುಂದರ ತಾಣ
ಅದು ಏನೇ ಇರಲಿ ಗುಹ್ಯ ಕ್ಷೇತ್ರ ಕಾವೇರಿ ನದಿ ತಟದ ಸುಂದರ ತಾಣವಾಗಿದ್ದು, ಇಲ್ಲಿಗೆ ಆಗಮಿಸುವವರಿಗೆ ಸುತ್ತಲಿನ ಕಾಫಿ ತೋಟ, ಕಾವೇರಿ ನದಿಯ ಜುಳು ಜುಳು ನಿನಾದ ಮುದ ನೀಡುತ್ತದೆ. ದೀಪಾವಳಿ ಸಮಯದಲ್ಲಿ ಜನರೆಲ್ಲ ಇಲ್ಲಿ ನೆರೆದು ಈಶ್ವರನಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ. ಉಳಿದಂತೆ ಇತರೆ ದಿನಗಳಲ್ಲಿ ಪೂಜಾಕೈಂಕರ್ಯಗಳು ನೆರವೇರುತ್ತಿರುತ್ತವೆ.
ಅವಲಕ್ಕಿ ಹಾಕುವ ಸಂಪ್ರದಾಯ
ಕೊಡಗಿನಲ್ಲಿ ದೀಪಾವಳಿ ಆಚರಣೆ ಕುರಿತಂತೆ ಹೇಳುವುದಾದರೆ ಹಿಂದಿನ ಕಾಲದಲ್ಲಿ ದಕ್ಷಿಣ ಕನ್ನಡದಿಂದ ಬಂದು ಕೊಡಗಿನಲ್ಲಿ ನೆಲೆ ನಿಂತ ಕೆಲವು ಸಮುದಾಯದ ಕುಟುಂಬಗಳು ದೀಪಾವಳಿ ಸಂದರ್ಭ ಕುಟುಂಬದಲ್ಲಿ ಮೃತಪಟ್ಟ ಹಿರಿಯರಿಗೆ ಎಡೆಯಿಟ್ಟು ಅವಲಕ್ಕಿಯನ್ನು ಹಾಕುವ ಸಂಪ್ರದಾಯವನ್ನು ರೂಢಿಸಿಕೊಂಡಿರುವುದು ಕಂಡು ಬರುತ್ತದೆ. ಎಲ್ಲೆಡೆ ದೀಪಾವಳಿಗೆ ಪಟಾಕಿ ಹೊಡೆಯುವುದು ಕಂಡು ಬರುತ್ತದೆಯಾದರೂ ಕೊಡಗಿನಲ್ಲಿ ಮಾತ್ರ ಸುಗ್ಗಿಹಬ್ಬ ಎಂದೇ ಕರೆಯುವ ಹುತ್ತರಿ ಹಬ್ಬಕ್ಕೆ ಪಟಾಕಿ ಹೊಡೆದು ಸಂಭ್ರಮಿಸುವುದು ಹಿಂದಿನಿಂದಲೂ ನಡೆದು ಬಂದಿದೆ.