ದಲಿತರ ಆಕ್ರೋಶದ ಬೆಂಕಿ ತೆರೆದಿಟ್ಟ ಭಾರತ್ ಬಂದ್ ಚಿತ್ರಗಳು
ಉತ್ತರ ಭಾರತದ ಹಲವು ರಾಜ್ಯಗಳು ಹೊತ್ತಿ ಉರಿಯುತ್ತಿವೆ. ಸೋಮವಾರದಂದು ಕರೆ ನೀಡಿದ್ದ ಭಾರತ ಬಂದ್ ಹಲವು ರಾಜ್ಯಗಳಲ್ಲಿ ಭಾರೀ ಪರಿಣಾಮ ಬೀರಿದೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಕಾಯ್ದೆಗೆ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಬೆನ್ನಿಗೆ ಈ ಆಕ್ರೋಶ ವ್ಯಕ್ತವಾಗಿದೆ. ದಲಿತ ಸಂಘಟನೆಗಳು ಈ ವಿಚಾರದ ವಿರುದ್ಧ ಮುನಿಸಿಕೊಂಡಿವೆ.
ಮಾರ್ಚ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನ ವಿರುದ್ಧ ಈ ಗಲಭೆ ಎದ್ದಿದೆ. ಹಲವು ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ನ್ಯಾಯಾಲಯ, ದುರುಪಯೋಗವನ್ನು ತಪ್ಪಿಸುವುದಕ್ಕಾಗಿ ಕ್ರಮ ಕೈಗೊಂಡಿತ್ತು.
ಇವತ್ತ್ಯಾಕೆ 'ಭಾರತ ಬಂದ್'? ತಿಳಿಯಬೇಕಾದ 10 ಸಂಗತಿ
ದಲಿತರ ಮೇಲೆ ದೌರ್ಜನ್ಯದ ಯಾವುದೇ ದೂರು ಬಂದರೂ ವಿಚಾರಣೆಯ ನಂತರವೇ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಸಿ ಎಸ್ಟಿ ಕಾಯ್ದೆ 1989 ರಲ್ಲಿ ತಿದ್ದುಪಡಿ ತರಲು ಕೋರ್ಟು ಹೇಳಿತ್ತು. ಸುಪ್ರೀಂ ಕೋರ್ಟ್ ಆದೇಶಿಸಿದ ತಿದ್ದುಪಡಿಯ ಪ್ರಕಾರ ಎಸ್ಸಿ ಎಸ್ಟಿ ಕಾಯ್ದೆಯನ್ವಯ ಯಾರನ್ನಾದರೂ ಬಂಧಿಸಬೇಕಾದರೆ ಪ್ರಾಥಮಿಕ ಡಿಎಸ್ ಪಿ ತನಿಖೆಯ ನಂತರವೇ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿತ್ತು.
ಅಷ್ಟೆ ಅಲ್ಲ, ಇದಕ್ಕೂ ಮುನ್ನ ಈ ಕಾಯ್ದೆಯಡಿ ಬಂಧಿತರಾಗುವವರಿಗೆ ಜಾಮೀನು ಸಹ ಸಿಗುತ್ತಿರಲಿಲ್ಲ. ಹೊಸ ತಿದ್ದುಪಡಿಯಲ್ಲಿ ಆರೋಪಿಗೆ ಜಾಮೀನು ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಕಲ್ಲು ತೂರಾಟ, ಬೈಕ್ ಗೆ ಬೆಂಕಿ
ಉತ್ತರಪ್ರದೇಶದ ಮೀರತ್ ನಲ್ಲಿ ಸೋಮವಾರ ಭಾರತ್ ಬಂದ್ ನ ವೇಳೆ ಪ್ರತಿಭಟನಾನಿರತರು ಬೈಕ್ ಗೆ ಬೆಂಕಿ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ಕಲ್ಲು ತೂರಾಟ ನಡೆಸಿದರು.
ರೈಲು ತಡೆದು ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆ ಕಾರ್ಯಕರ್ತರು
ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಸೋಮವಾರ ಭಾರತ್ ಬಂದ್ ವೇಳೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ರೈಲು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈಲು ನಿಲ್ದಾಣದಲ್ಲಿ ಬಂದ್ ಬಿಸಿ
ಬಿಹಾರದ ಗಯಾ ರೈಲು ನಿಲ್ದಾಣದಲ್ಲಿ ಭಾರತ್ ಬಂದ್ ವೇಳೆ ದಲಿತ ಸಂಘಟನೆಗಳ ಕಾರ್ಯಕರ್ತರು ರೈಲು ನಿಲ್ಲಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಟೈರ್ ನ ಬೆಂಕಿ ಆರಿಸಲು ಪೊಲೀಸರ ಯತ್ನ
ನವದೆಹಲಿಯಲ್ಲಿ ಭಾರತ್ ಬಂದ್ ವೇಳೆ ಪ್ರತಿಭಟನಾ ನಿರತರು ಟೈರ್ ಗೆ ಹಾಕಿದ್ದ ಬೆಂಕಿಯನ್ನು ನಂದಿಸಲು ಪೊಲೀಸರ ಪ್ರಯತ್ನ ಹೀಗೆ ನಡೆದಿತ್ತು.
ಜಿಗ್ನೇಶ್ ಮೆವಾನಿ ಮಾತುಕತೆ
ಗುಜರಾತ್ ನ ದಲಿತ ಮುಖಂಡ ಹಾಗೂ ವಡ್ಗಾಮ್ ನ ಶಾಸಕ ಜಿಗ್ನೇಶ್ ಮೆವಾನಿ ತಮ್ಮ ಸಮುದಾಯದ ಬೆಂಬಲಿಗರ ಜತೆಗೆ ಭಾರತ್ ಬಂದ್ ವೇಳೆ ಅಹ್ಮದಾಬಾದ್ ನಲ್ಲಿ ಮಾತುಕತೆ ನಡೆಸಿದರು.
ಪ್ರತಿಭಟನಾನಿರತರಿಗೆ ಲಾಠಿ ಬೀಸಿದ ಪೊಲೀಸರು
ರಾಜಸ್ತಾನದ ಜೋಧ್ ಪುರದಲ್ಲಿ ಭಾರತ್ ಬಂದ್ ವೇಳೆ ಸೋಮವಾರ ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿ ಬೀಸಿದರು.
ಪ್ರತಿಭಟನಾನಿರತರತ್ತ ಪೊಲೀಸರ ಕಲ್ಲು ತೂರಾಟ
ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಭಾರತ್ ಬಂದ್ ವೇಳೆ ಪೊಲೀಸರು ಪ್ರತಿಭಟನಾನಿರತರತ್ತ ಕಲ್ಲು ತೂರಿದ ಕ್ಷಣ.
ಮುಚ್ಚಿದ್ದ ಮಳಿಗೆಗಳು
ಪಂಜಾಬ್ ನ ಅಮೃತ್ ಸರದಲ್ಲಿ ಸೋಮವಾರ ಭಾರತ್ ಬಂದ್ ವೇಳೆ ಮುಚ್ಚಿದ್ದ ಮಳಿಗೆಗಳ ಹಾದಿಯಲ್ಲಿ ವ್ಯಕ್ತಿಯೊಬ್ಬರು ನಡೆದು ಬಂದಿದ್ದು ಹೀಗೆ.
ಪ್ರತಿಭಟನಾನಿರತರು ಕಲ್ಲು ತೂರಿದರು
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದಲಿತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ಕೊಟ್ಟ ವೇಳೆ ಘಾಜಿಯಾಬಾದ್ ನಲ್ಲಿ ಸೋಮವಾರ ಪ್ರತಿಭಟನಾನಿರತರು ಕಲ್ಲುಗಳನ್ನು ತೂರಿದರು.