'ದೊಡ್ಡವರ ಮನೆ ಮೇಲೆ ಕರೆ ಅರಿಬಿ ಬೀಸಿತಲೇ' ಕಾರ್ಣಿಕನ ಎಚ್ಚರದ ನುಡಿ
ಐತಿಹಾಸಿಕ ಕ್ಷೇತ್ರ ಆನಕೊಂಡ ಗ್ರಾಮದಲ್ಲಿ ನಡೆದ ಕಾರಣಿಕ ನುಡಿ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಶ್ರೀಕ್ಷೇತ್ರ ಮೈಲಾರ ಲಿಂಗ ಕಾರಣಿಕದಂತೆ ದಾವಣಗೆರೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಶ್ರಾವಣ ಮಾಸದ ಕೊನೆ ಅವಧಿಗೆ ಕಾರಣಿಕ ಉತ್ಸವ ಹಮ್ಮಿಕೊಳ್ಳಲಾಗುತ್ತದೆ.
ಶ್ರಾವಣ ಮಾಸದ ಕಡೆ ಸೋಮವಾರವಾದಂದು ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿ ದುರ್ಗಾಂಭಿಕಾ ದೇವಿ ಹಾಗೂ ಸುತಮುತ್ತಲಿನ ಹದಿಮೂರಕ್ಕೂ ಹೆಚ್ಚು ದೇವತಗಳ ಸಮ್ಮುಖದಲ್ಲಿ ಸಂಜೆ ಸುಮಾರು 7 ಗಂಟೆ 10 ನಿಮಿಷಕ್ಕೆ ಕಾರಣಿಕ ನುಡಿಯಲಾಯಿತು.
ವಿಧಿ ವಿಧಾನ : ಉತ್ಸವ ದಿನ ಸಂಜೆ ಸುತ್ತಮುತ್ತಲಿನ ನೂರಾರು ಗ್ರಾಮದಿಂದ ಸಾವಿರಾರು ಭಕ್ತರು ಕಾರಣಿಕದ ಕುತೂಹಲ ತಣಿಸಿಕೊಳ್ಳಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೀಡು ಬಿಟ್ಟಿರುತ್ತಾರೆ.
7 ಗಂಟೆ ಸುಮಾರಿಗೆ ಕಾರಣಿಕ ನುಡಿ ಇದ್ದರೆ, 6.30 ರ ವೇಳಗೆ ಒಂದೊಂದೇ ದೇವರುಗಳು ಆಗಮಿಸಿ ಕಾರಣಿಕ ಪ್ರದಕ್ಷಿಣಿ ಹಾಕಿ ಆಸೀನವಾಗಲಿವೆ. ನಿಟುವಳ್ಳಿ ದುರ್ಗಾಂಭಿಕಾ ದೇವಿ ಹಾಗೂ ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವರುಗಳನ್ನು ಹೊತ್ತ ಪಲ್ಲಕ್ಕಿ ಬರುತ್ತಲೇ ಗೋವಿಂದಾ ಗೋವಿಂದಾ... ಉಧೋ ಉಧೋ.. ಎನ್ನುವ ಭಕ್ತರ ಹರ್ಷೋದ್ಘಾರ ಮಾಡುತ್ತಾರೆ.
ದೇವರುಗಳ ಪಲ್ಲಕ್ಕಿಯ ಪ್ರದಕ್ಷಿಣೆ ನಿಂತ ಬಳಿಕ ಕಾರಣಿಕ ಹೇಳುವ ವ್ಯಕ್ತಿ ಸದ್ದಲೇ ಎಂದಾಗ, ಕೆಲ ಕ್ಷಣ ಸ್ಥಳದಲ್ಲಿ ನಿಶ್ಯಬ್ಧ ಆವರಿಸುತ್ತದೆ.

ಐತಿಹಾಸಿಕ ಕ್ಷೇತ್ರ ಆನಕೊಂಡ ಗ್ರಾಮದ ಕಾರಣಿಕ
ರಾಮ ರಾಮ ಎಂದು ನುಡಿದೀತಲೇ
ಶೃಂಗಾರದ ವನಕೆ ಆನೆ ಕಿರೀಟ ಇಟ್ಟೀತಲೇ
ಮಾತಾಯಿ ಕೊಡಕೆ ನೀರು ಹಾಕಾಳಲೇ
ದೊಡ್ಡವರ ಮನೆ ಮೇಲೆ ಕರೆ ಅರಿಬಿ ಬೀಸಿತಲೇ
ಎಚ್ಚರ !
ಇದು ಐತಿಹಾಸಿಕ ಕ್ಷೇತ್ರ ಆನಕೊಂಡ ಗ್ರಾಮದಲ್ಲಿ ನಡೆದ ಕಾರಣಿಕ ಉತ್ಸವದಲ್ಲಿ ಕೇಳಿ ಬಂದ ನುಡಿ.ಒಂದೆರಡು ವಾಕ್ಯ ಅಥವಾ ನಾಲ್ಕು ಸಾಲಿನ ಘೋಷಣೆಯನ್ನು ಕಾರಣಿಕ ಹೇಳಿ ಮುಗಿದಾಕ್ಷಣ, ಅಲ್ಲಿ ನೆಲೆಸಿದ್ದಒಂದೊಂದೇ ದೇವರುಗಳು ಸ್ವ-ಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
ಕೆಲ ಕ್ಷಣದಲ್ಲೇ ದೇವಸ್ಥಾನದ ಕಮಿಟಿ ವತಿಯಿಂದ ಧ್ವನಿ ವರ್ಧಕದಲ್ಲಿ ಕಾರಣಿಕ ನುಡಿಯನ್ನು ಹೇಳಲಾಗುತ್ತದೆ.

ಹರಳಹಳ್ಳಿಯ ಶ್ರೀ ಆಂಜನೇಯ ಕಾರಣಿಕ ಸಂಭ್ರಮ
ನಾಗರಪಂಚಮಿ ಹಬ್ಬದ ಅಂಗವಾಗಿ ಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿಯ ಕೆರೆ ಅಂಗಳದಲ್ಲಿ ಹರಳಹಳ್ಳಿಯ ಶ್ರೀ ಆಂಜನೇಯ ಕಾರಣಿಕ ಸಂಭ್ರಮದಿಂದ ಜರುಗಿತು.
"ಸರ್ಪ ಎಡೆ ಎತ್ತು, ಹಸುಗೂಸು ನಕ್ಕೀತು, ಅನ್ನ ನೀರು ಸಂತೃಪ್ತಿ"
ಕೊಮಾರನಹಳ್ಳಿ, ಮಲೇಬೆನ್ನೂರು, ಹರಳಹಳ್ಳಿ, ಕೊಪ್ಪ, ದಿಬದಹ್ದ ಳ್ಳಿ,
ಹಾಲಿವಾಣ ತಿಮ್ಲಾಪುರ ಸೇರಿದಂತೆ ಹತ್ತಾರು ಹಳ್ಳಿಗಳ ಸಾವಿರಾರು ಜನ ಆಗಮಿಸಿದ್ದರು.

ಕೊಕ್ಕನೂರು ಆಂಜನೇಯ ಸ್ವಾಮಿ ಕಾರಣಿಕ
* ನಂದಿಗುಡಿಯಲ್ಲಿ ನಡೆದ ಕೊಕ್ಕನೂರು ಆಂಜನೇಯ ಸ್ವಾಮಿ ಕಾರಣಿಕ: "ಬಂಗಾರದ ರಾಶಿ ದುಡುಗಾದೀತು ಸಂಪು ಪರಾಕ್''
* ಹರಿಹರದಲ್ಲಿ ನಡೆದ ಜಿಗಳಿ ರಂಗನಾಥ ಸ್ವಾಮಿ ಕಾರಣಿಕ
"ಆಕಾಶದಿಂದ ಬಂಗಾರದ ತೊಟ್ಟಿಲು ಇಳಿದೀತು, ಆ ತೊಟ್ಟಿಲಿನಲ್ಲಿ ಲಿಂಗ ಒಡಮೂಡೀತು ಆ ಲಿಂಗಕ್ಕೆ ಕಾಳಿಂಗ ಸರ್ಪ ಬಂದೀತಲೇ''
"ಮುತ್ತಿನ ರಾಶಿ ದುಂಡುಗಾದೀತಲೇ ಪರಾಕ್''

ಜಾತ್ರೆಯ ರಂಗು
ಕಾರಣಿಕದ ಕೌತುಕ ಒಂದಡೆಯಾದರೆ ದಾರಿಯುದ್ದಕ್ಕೂ ಜಾತ್ರೆಯ ರಂಗೇರಿರುತ್ತದೆ. ಹತ್ತಾರು ಗ್ರಾಮದ ಜತೆಗೆ ಶ್ರಾವಣ ಮಾಸದ ಪ್ರಮುಖ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಅವಕಾಶ ಇಲ್ಲಿ ಸಿಗುತ್ತದೆ. ಮಹಿಳೆಯರು ಸರ, ಬಳೆ, ಕಿವಿಯೋಲೆ ಖರೀದಿಯಲ್ಲಿ ನಿರತರಾಗಿದ್ದರೆ, ಮಕ್ಕಳು ಆಟಿಕೆ, ದೊಡ್ಡವರು ತಮ್ಮ ಮಳೆ-ಬೆಳೆ, ಬೇಸಾಯ ಕುರಿತ ಚರ್ಚೆ ಹಾಗೂ ಸಾಮಾಗ್ರಿ ಖರೀದಿ ಮಾಡುತ್ತಾರೆ.
ವಿ.ಸೂ : ಇಲ್ಲಿ ಬಳಸಲಾಗಿರುವ ಚಿತ್ರಗಳೆಲ್ಲವೂ ಸಾಂದರ್ಭಿಕ ಚಿತ್ರಗಳು











Click it and Unblock the Notifications