ಬೆಂಗಳೂರಿಗರೇ ಚಳಿಗಾಲದ ಸುಖಗಳೆಲ್ಲ ಪ್ರಾಪ್ತಿರಸ್ತು...
ಬೆಂಗಳೂರಿನಲ್ಲಿ ಗಟ್ಟಿಯಾಗಿ ಚಳಿಗಾಲ ಆರಂಭವಾದ ಲಕ್ಷಣವೇ ಸಿಕ್ಕಿರಲಿಲ್ಲ. ಆದರೆ ಗುರುವಾರ ಬೆಳಗಿನಿಂದ ಸೋನೆ ಮಳೆ, ಥಂಡಿ ಗಾಳಿ. ದೂರದ ಶ್ರೀಲಂಕಾದಲ್ಲಿ ಸೀನಿದ್ದಕ್ಕೆ ಇಲ್ಲಿ ಬೆಂಗಳೂರಿನಲ್ಲಿ ಸಣ್ಣಗೆ ನಡುಕ. ಬೆಳಗ್ಗೆ ಒಂಬತ್ತಾದರೂ ಹಾಸಿಗೆ ಬಿಟ್ಟು ಏಳಲಾರದಂಥ ಸುಖವಾದ ಆಲಸ್ಯ. ಸೂರ್ಯನೂ ಚಕ್ಕರ್. ಬಿಸ್ಸಿ ಬಿಸ್ಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಬಿಸಿಬಿಸಿ ಅವರೇಕಾಳು ಉಪ್ಪಿಟ್ಟು- ಫಿಲ್ಟರ್ ಕಾಫಿಯ ತಪನೆ.
ನವೆಂಬರ್ ಮುಗೀತಾ ಬಂತು, ಬೆಂಗಳೂರಲ್ಲಿ ಚಳಿ ಎಲ್ಲಿ..?!
ತಿಂಡಿ-ಊಟಗಳೆಲ್ಲ ಅವರವರ ಆದ್ಯತೆ ಅಂದುಕೊಳ್ಳಿ. ಆಫೀಸಿಗೆ ಹೊರಟು ನಿಂತರೆ ಜರ್ಕಿನ್ ಸ್ಮರಣೆ. ಕಚೇರಿಗೆ ಬಂದ ಮೇಲೆ ಏಸಿ ಕಡಿಮೆ ಮಾಡ್ರೀ ಎಂಬ ಆರ್ತನಾದ. ಬಹಳ ದಿನದ ನಂತರ ಮೈ ಏರಿದ ಸ್ವೆಟರ್ ಗಳು ನಡುಗುತ್ತಿವೆಯೇನೋ ಎಂಬ ಗುಮಾನಿ. ಅಂದಹಾಗೆ ನೀವು ಗಮನಿಸಿದಿರಾ, ಕಳೆದ ವರ್ಷಕ್ಕೆಲ್ಲ ಹೋಲಿಸಿದರೆ ಚಳಿಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಯೇ ಇಲ್ಲ.
ಅದಾಗಲೇ ಅಯ್ಯಪ್ಪ ಮಾಲಾಧಾರಿಗಳು ಕಾಣಿಸಿಕೊಳ್ಳುತ್ತಿದ್ದಾರೆ, ಆದರೆ ಚಳಿಯ ಸುಳಿವೇ ಇಲ್ಲ. ಮಳೆಯ ನೀರು ಮಾಡಿಟ್ಟ ಕರೆ ಮನೆಯ ನೆಲದಲ್ಲಿ ಹಾಗೇ ಇದೆ. ಬೋಂಡದಂಗಡಿಯ ವ್ಯಾಪಾರ ಇನ್ನೂ ಚುರುಕಾಗಲೇ ಇಲ್ಲ. ಐಸ್ ಕ್ರೀಂ ಮಾರುವವರ ಮೊಗದಲ್ಲಿ ಈಗಲೂ ಮಂದಹಾಸ. ಬೆಳಗ್ಗೆ ವಾಕಿಂಗ್ ಬರುವವರಲ್ಲೂ ಬಂಕ್ ಮಾಡುವವರ ಸಂಖ್ಯೆ ಹೆಚ್ಚಾಗಿಲ್ಲ.
ಅಟ್ಟ ಸೇರಿದ್ದ ಡಬಲ್ ಎಕ್ಸೆಲ್ ಸೈಜಿನ ಹೊದಿಕೆಗಳು ಕೆಳಗಿಳಿದಿಲ್ಲ. ಮಗಳ ಅಥವಾ ಮಗನ ಮೂಗಿಗೆ ಇನ್ನೂ ಜಲಪಾತದ ಲುಕ್ ಬಂದಿಲ್ಲ. ಆದರೆ ನವೆಂಬರ್ ತಿಂಗಳ ಕೊನೆಯ ದಿನ ಇಡೀ ಬೆಂಗಳೂರಿಗೆ ಫ್ರಿಜ್ ನೀರು ಚಿಮುಕಿಸಿದಂತಾಗಿದೆ. ಮೈ ನಡುಗಿಸಿ, ತಲೆ ಕೊಡವುವವರು ಕಾಣುತ್ತಿದ್ದಾರೆ.
ತಮಿಳುನಾಡಿನ ಸೈಕ್ಲೋನ್ ಎಫೆಕ್ಟ್: ರಾಜ್ಯದಲ್ಲಿ ಮೂರು ದಿನ ತುಂತುರು ಮಳೆ
ಇನ್ನೆರಡು-ಮೂರು ದಿನ ಇದೇ ವಾತಾವರಣ ಇರುತ್ತದಂತೆ. ಹೊಸದಾಗಿ ಮದುವೆಯಾದವರು ಊಟಿಯನ್ನು ನೆನೆದು ಬೆಂಗಳೂರಿನಲ್ಲೇ ಅಪ್ಪುಗೆಯ ಬಿಸಿಯನ್ನು ಅನುಭವಿಸಬಹುದು. ಲಾಲ್ ಬಾಗ್ ನ ವಾಕಿಂಗ್ ಹೋಗುವವರು ಸ್ವೆಟರ್ ಮರೆಯದಿರಲಿ. 'ಸೀತಮ್ಮ', 'ಸೀತಪ್ಪ'ಗಳು ಮನೆಯೊಳಗಿರಲಿ. ಕರ್ಚೀಫ್ ವ್ಯಾಪಾರಿಗಳಿಗೆ ಸುಗ್ಗಿಯಾಗಲಿ.
ಬಿಸಿ ಮಸಾಲಪುರಿ, ಹಬೆಯಾಡುವ ಜೋಳ, ಶುಗರ್ ಅನ್ನು ಮರೆಸಿ, ತಿನ್ನು ಬಾ ಎಂದು ಕೈ ಚಾಚಿ ಕರೆಯುವ ಬಿಸಿ ಜಿಲೇಬಿ, ಮಸಾಲೆ ದೋಸೆ, ಹೋಳಿಗೆ, ಎಂಟಿಆರ್ ನ ಕಾಫಿ...ಇನ್ನೆರಡು ದಿನ 'ಇವೆಲ್ಲ ಪ್ರಾಪ್ತಿರಸ್ತು'.