ಬಿಜೆಪಿ ವಿರುದ್ದ ಬೆಟ್ಟ ಅಗೆದು ಇಲಿ ಹೊರ ತೆಗೆದ ಕಾಂಗ್ರೆಸ್ಸಿನ ಕಥೆಯಿದು
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬಂದ ನಂತರ, ಅಂದಿನಿಂದ ಇಂದಿನವರೆಗೆ ದೇಶ ಮಟ್ಟದಲ್ಲಾಗಲಿ ಅಥವಾ ರಾಜ್ಯ ಮಟ್ಟದಾಗಲಿ, ವಿರೋಧ ಪಕ್ಷದವರಿಗೆ ಬಿಜೆಪಿ ವಿರುದ್ದ ಯಾವುದೇ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವಾಗುತ್ತಿಲ್ಲ.
ಯಾಕೆ ಹೀಗೆ ಎಂದು ಹಲವು ಕಾಂಗ್ರೆಸ್ ಮುಖಂಡರನ್ನು ಕೇಳಿದಾಗ ಅವರಿಂದ ಬರುವ ಉತ್ತರ, ನಮ್ಮ ಹೋರಾಟಕ್ಕೆ ಮಾಧ್ಯಮಗಳಿಂದ ನೈತಿಕ ಬೆಂಬಲ ಸಿಗುತ್ತಿಲ್ಲ. ದೇಶದ ಹೆಚ್ಚಿನ ಮಾಧ್ಯಮಗಳು ಬಿಜೆಪಿಯ ಕಪಿಮುಷ್ಠಿಯಲ್ಲಿವೆ ಎಂಬುದು.
ಇತ್ತೀಚೆಗೆ ಕೇಂದ್ರ ಸರಕಾರಕ್ಕೆ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗುತ್ತಿರುವ ಮೂರು ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆದ ವಿಚಾರದಲ್ಲಿ, ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಕಾಂಗ್ರೆಸ್ಸಿಗರು ಬೀಗುತ್ತಿದ್ದರು. ಅದಕ್ಕೆ, ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಹೋರಾಟ ನಡೆಸುತ್ತಿರುವ ರೈತರೇ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದಾರೆ.
ಇನ್ನು, ರಾಜ್ಯದ ವಿಚಾರಕ್ಕೆ ಬರುವುದಾದರೆ, ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್ಸಿಗರು ಹಗರಣ ಎಂದು ಬಿಜೆಪಿ ಬಾಯಿ ಬಡಿದುಕೊಂಡಿದ್ದು ಒಂದಾ, ಎರಡಾ? ಆದರೆ, ಯಾವ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೃದಯ ಮುಟ್ಟಿಕೊಂಡು ಹೇಳುವಂತಹ ಸ್ಥಿತಿಯಲ್ಲಿ ಯಾವ ಕಾಂಗ್ರೆಸ್ಸಿಗರೂ ಇಲ್ಲ. ಈ ಪಟ್ಟಿಗೆ ಇನ್ನೊಂದು ಹಗರಣ ಸೇರಿಕೊಂಡಿದೆ. ಅದು ನಿರೀಕ್ಷಿತ ಕೂಡಾ..

ಬೊಮ್ಮಾಯಿಯವರ ತಲೆದಂಡವಾಗಲಿದೆ ಎಂದು ಘರ್ಜಿಸಿದ್ದ ಪ್ರಿಯಾಂಕ್ ಖರ್ಗೆ
ಕೋವಿಡ್ ಪರಿಕರ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕಾಂಗ್ರೆಸ್ ಹೋರಾಟ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ನಂತರ, ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದು ಬಿಟ್ ಕಾಯಿನ್ ಹಗರಣ. ರಾಜ್ಯದ ಮೂಲೆಮೂಲೆಯಲ್ಲಿ ಕೂತು ಕಾಂಗ್ರೆಸ್ಸಿಗರು ಆರ್ಭಟಿಸಿದ್ದೇ ಆರ್ಭಟಿಸಿದ್ದು. ಆ ವಿಚಾರ ಕೂಡಾ ಇತರ ಕೇಸಿನಂತೆ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತಲೆದಂಡವಾಗಲಿದೆ ಎಂದು ಘರ್ಜಿಸಿದ್ದ ಪ್ರಿಯಾಂಕ್ ಖರ್ಗೆ ಈಗ ಯಾಕೋ ಸುಮ್ಮನಾಗಿದ್ದಾರೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಒತ್ತಾಯ
ಬಿಟ್ ಕಾಯಿನ್ ವಿಚಾರದಲ್ಲಿ ಬೇಲ್ ಪಡೆದುಕೊಂಡು ಹೊರಗೆ ಬಂದಿದ್ದ ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ರಮೇಶ್ ಅವರ ಜೀವಕ್ಕೆ ಪೊಲೀಸರಿಂದಲೇ ಬೆದರಿಕೆಯಿದೆ, ಎನ್ಕೌಂಟರ್ ಆದರೂ ಆಗಬಹುದು, ಅವರಿಗೆ ಭದ್ರತೆ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಒತ್ತಾಯ ಮಾಡಿದ್ದರು. ಅವನಿಗೆ ರಾಜ್ಯ ಸರಕಾರ ಭದ್ರತೆ ಕೊಡುವುದು ಹಾಗಿರಲಿ, ಬೇಲ್ ಸಿಕ್ಕ ನಂತರ ಶ್ರೀಕಿ ಎಲ್ಲಿದ್ದಾನೆ ಎನ್ನುವ ಕನಿಷ್ಠ ಸುಳಿವನ್ನೂ ಪೊಲೀಸರಿಗೆ ಪಡೆಯಲು ಸಾಧ್ಯವಾಗಿಲ್ಲ. ಇದು ಉದ್ದೇಶಪೂರ್ವಕ ಎನ್ನುವುದಕ್ಕೆ ನಮ್ಮಲ್ಲಿ ಬಲವಾದ ಆಧಾರಗಳಿಲ್ಲ.

ಸಿದ್ದರಾಮಯ್ಯನವರ ದಿವಂಗತ ಪುತ್ರನನ್ನು ವಿಚಾರದಲ್ಲಿ ಎಳೆದು ತಂದರು
ಬಿಟ್ಕಾಯಿನ್ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಬರೀ ಆರೋಪ ಮಾಡಿಕೊಂಡು ಕೂತರು. ಮುಖ್ಯಮಂತ್ರಿಗಳು ಒಮ್ಮೆ ದೆಹಲಿಗೆ ಹೋಗಿ ಬಂದರು, ಬಿಜೆಪಿಯವರು ಸಿದ್ದರಾಮಯ್ಯನವರ ದಿವಂಗತ ಪುತ್ರ ರಾಕೇಶ್ ರನ್ನು ಈ ವಿಚಾರದಲ್ಲಿ ಎಳೆದು ತಂದರು. ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಒಂದಷ್ಟು ಪತ್ರಿಕಾಗೋಷ್ಠಿ ನಡೆಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಇನ್ನು, ಗೃಹ ಸಚಿವ ಆರಗ ಜ್ಞಾನೇಂದ್ರ, "ಬಿಟ್ಕಾಯಿನ್ ಹಗರಣ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ (ಶ್ರೀಕೃಷ್ಣ ರಮೇಶ್) ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾನೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆಯೇ ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಆರೋಪ ಮಾಡುವುದು ಬಿಟ್ಟರೆ ಅವರಿಗೆ ಬೇರಾವುದೇ ಪ್ರಮುಖ ಕೆಲಸಗಳಿಲ್ಲ" ಎಂದು ಆರೋಪಿಸಿದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕ ಸಾವು
ಇದೆಲ್ಲಾ ನಡೆಯುವ ಹೊತ್ತಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕ ಸಾವನ್ನಪ್ಪಿದರು. ಮಾಧ್ಯಮ ಸೇರಿದಂತೆ ಎಲ್ಲರ ದೃಷ್ಟಿ ಅದರ ಮೇಲೆಯೇ ನೆಟ್ಟಿತು. ಕಾಂಗ್ರೆಸ್ಸಿನವರು ಆ ವಿಚಾರದಲ್ಲಿ ಸುಮ್ಮನಾದರು, ಹಾಗಾಗಿ, ಬಿಜೆಪಿಯವರು ಯಾಕೆ ಆ ವಿಚಾರವನ್ನು ಮತ್ತೆ ಕೆದಕಲು ಹೋಗುತ್ತಾರೆ? ಅಲ್ಲಿಗೆ ಜನರ ಮೈಂಡೂ ಡೈವರ್ಟ್ ಆಯಿತು, ಬಿಟ್ ಕಾಯಿನ್ ವಿಚಾರವೂ ಸದ್ಯದ ಮಟ್ಟಿಗೆ ಕಾವು ಕಳೆದುಕೊಂಡಿತು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಳಬೇಗುದಿ
ಡಿಕೆಶಿಗೆ ಯಶಸ್ಸು ಬರುತ್ತೆ ಅಂತ ಸಿದ್ದರಾಮಯ್ಯ, ಸಿದ್ದರಾಮಯ್ಯಗೆ ಹೆಸರ ಬರುತ್ತೆ ಅಂತ ಡಿಕೆಗೆ ಒಳಬೇಗುದಿ ಇದ್ದೇ ಇದೆ. ಇಬ್ಬರೂ ಸೇರಿ ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ರೂಪಿಸುವಲ್ಲಿ ಹಿಂದೆ ಬಿದ್ದರು, ಕಾರ್ಯಕರ್ತರೂ ಸಹ ಹೋರಾಟವನ್ನೇ ಮರೆತರು. ಬಿಜೆಪಿಗೆ ಬೇಕಾಗಿದ್ದೂ ಅದೇ.. ಹಾಗಾಗಿ, ಬಿಜೆಪಿ ವಿರುದ್ದ ಬೆಟ್ಟ ಅಗೆದು ಇಲಿ ಹೊರ ತೆಗೆದಂತಾಯಿತು ಕಾಂಗ್ರೆಸ್ ಪರಿಸ್ಥಿತಿ.












Click it and Unblock the Notifications