ಬಾಲ್ಯದ ನೆನಪು: ಕದ್ದ ಎಳನೀರು ಕುಡಿಯದಂತೆ ಮಾಡಿದ ಕಿಲಾಡಿ ಗೆಳೆಯರು
ಬೇಸಗೆಯ ಒಂದು ಮಟ-ಮಟ ಮಧ್ಯಾಹ್ನ ನಾನು, ವೈದ್ಯನಾಥ, ಆನಂದ ಮೂವರು 'ಇಂದು ಎಳನೀರು ಕದ್ದೇ ತೀರಬೇಕು' ಎಂದು ಘನ ನಿರ್ಧಾರ ಮಾಡಿ ಊರು ಬಿಟ್ಟು ಕಾಲುದಾರಿಯಲ್ಲಿ ಆನಂದನ ತೆಂಗಿನ ತೋಟದ ಕೆಡಗೆ ಹೆಜ್ಜೆ ಹಾಕಿದೆವು.
ಆಗಷ್ಟೆ ಏಳನೇ ತರಗತಿ ಮುಗಿಸಿದ್ದ ನಮಗೆ ದೊಡ್ಡ ರಜೆ ಸಿಕ್ಕಿತ್ತು. ಎಷ್ಟೆಂದು ಕ್ರಿಕೆಟ್ ಆಡುವುದು. ಹಾಗಾಗಿ ಈ ಮಹತ್ ಸಾಹಸ ಕಾರ್ಯಕ್ಕೆ ನಾವು ಮೂವರು ಇಳಿದಿದ್ದೆವು. ಹೋಗುವ ದಾರಿಯಲ್ಲೇ ಕಳ್ಳತನ ಹೇಗಿರಬೇಕೆಂದು ಚರ್ಚಿಸಿ ನೀಲನಕ್ಷೆ ರಚಿಸಿಕೊಂಡೆವು.
ತೋಟದ ಅಂಚಿನ ಮರಗಳಲ್ಲೇ ಎಳನೀರು ಕದಿಯಬೇಕು, ಯಾವುದೇ ಕಾರಣಕ್ಕೂ ತೋಟದ ಮಧ್ಯಕ್ಕೆ ಹೋಗಿ ಸಿಕ್ಕಿಹಾಕಿಕೊಳ್ಳಬಾರದು, ಸಣ್ಣ ಮರಗಳನ್ನೇ ನೋಡಿ ಕಾಯಿ ಕೀಳಬೇಕು, ಕಿತ್ತ ಕಾಯನ್ನು ತೋಟದಿಂದ ಮಾರು ದೂರ ಇರುವ ಒಣಗಿದ ತೊಟ್ಟಿಯೊಂದರಲ್ಲಿ ಕೂತು ಕುಡಿದು, ಅಲ್ಲೆ ಪಕ್ಕದ ಬಾವಿಯೊಳಕ್ಕೆ ಕಾಯಿ ಎಸೆದು ಸಾಕ್ಷ್ಯನಾಶ ಮಾಡಬೇಕು ಇದು ನಮ್ಮ ಯೋಜನೆ.
ಮೂವರು ಆನಂದನ ತೋಟಕ್ಕೆ ತಲುಪಿದೆವು, ತೋಟದ ಅಂಚಿನಲ್ಲಿದ್ದ ಒಂದು ಸಣ್ಣ ತೆಂಗಿನ ಮರವನ್ನೂ ಹುಡುಕಿದೆವು. ಆದರೆ ಹತ್ತುವುದು ಯಾರೂ ಮೂವರಿಗೂ ಮರ ಹತ್ತಲು ಬಾರದು. ರೈತರ ಮಕ್ಕಳಾದ ವೈದ್ಯನಾಥ ಹಾಗೂ ಆನಂದ, ಗಾತ್ರದಲ್ಲಿ, ಬಲದಲ್ಲಿ ನನಗಿಂತ ಮೇರಾಗಿದ್ದರು. ಬಡಕಲು ದೇಹದ ನನ್ನನ್ನು ಅನಾಯಾಸ ಹೆಗಲ ಮೇಲೆ ಎತ್ತಿಕೊಂಡರು. ಮಾವಿನ ಹಣ್ಣು, ಬಾಳೆ ಹಣ್ಣಿನಂತೆ ಸುಲಭವಾಗಿ ಕಿತ್ತುಬಿಡಬಹುದೆಂದು ತೆಂಗಿನ ಗೊಂಚಲಿಗೆ ಕೈಹಾಕಿದರೆ ಊಂಹುಂ ಸಾಧ್ಯವೇ ಆಗುತ್ತಿಲ್ಲ. ಸರಿಸುಮಾರು ಅರ್ಧ ಗಂಟೆ ಕುಸ್ತಿ ಮಾಡಿದ ನಂತರ ಎಳನೀರು ಕಾಯಿ ನನ್ನ ಕೈಗೆ ಬಂತು. ಅಷ್ಟರಲ್ಲಿ ಭುಜ ಸೋತಿದ್ದ ನನ್ನ ಗೆಳೆಯರು ಎರಡು-ಮೂರು ಬಾರಿ ನನ್ನನ್ನು ಕೆಳಗೆ ಬೀಳಿಸಿದ್ದು ಆಗಿತ್ತು.

ಎಳನೀರು ಹಂಚಿಕೊಳ್ಳುವುದು ಹೇಗೆ?
ಎಳನೀರು ಕೈಗೆ ಬಂದ ಕೂಡಲೇ ಮೊದಲೇ ಯೋಜಿಸಿದಂತೆ ಮಾರು ದೂರವಿದ್ದ ಸುದ್ದುಮಣ್ಣಿನ ದಿಬ್ಬದ ಹಿಂದಿನ ಖಾಲಿ ತೊಟ್ಟಿಗೆ ಹೋಗಿ ಕೂತೆವು. ನಮ್ಮಲ್ಲಿ ಬಲದವನಾಗಿದ್ದ ವೈದ್ಯನಾಥ ಕಡ್ಡಿಯೊಂದರಿಂದ ತೆಂಗಿನ ಕಾಯಿಗೆ ತೂತು ಮಾಡಿದ. ಆ ನಂತರವೇ ನಮಗೆ ಎದುರಾದದ್ದು ನಿಜವಾದ ಸವಾಲು, ಎಳನೀರು ಹಂಚಿಕೊಳ್ಳುವುದು ಹೇಗೆ?

ಒಬ್ಬ ಕೊಟ್ಟ ಭಾರಿ ಐಡಿಯಾ
ಇರುವುದು ಒಂದೇ ತೆಂಗಿನ ಕಾಯಿ, ಕುಡಿಯಬೇಕಾದದ್ದು ಮೂವರು. ಹೇಗೆ ಹಂಚಿಕೊಳ್ಳಬೇಕು ಎಂಬುದು ನಮಗೆ ಯಕ್ಷಪ್ರಶ್ನೆ ಆಯಿತು. ಆಗ ವೈದ್ಯನಾಥ ಬಹು ಅದ್ಭುತವಾದ ಐಡಿಯಾ ಒಂದನ್ನು ಕೊಟ್ಟ. 'ಮೂವರು ಎಳನೀರು ಕುಡಿಯೋಣ, ಎಳನಿರು ಕುಡಿಯಬೇಕಾದರೆ ಯಾರು ಮೊದಲು 'ಗುಟಕ್' ಎಂದು ಶಬ್ದ ಮಾಡುತ್ತಾರೊ ಅವರು ಅಲ್ಲಿಗೆ ನಿಲ್ಲಿಸಿಬಿಡಬೇಕು'. ಅವನ ಐಡಿಯಾ ಪ್ರಕಾರ ಗಂಟಲಿನಿಂದ 'ಗುಟಕ್' ಶಬ್ದ ಬರುವವರೆಗೆ ಎಳನೀರು ಕುಡಿಯಬಹುದು. ಶಬ್ದ ಬಂದ ಕೂಡಲೆ ನಿಲ್ಲಿಸಿಬಿಡಬೇಕು. ವೈದ್ಯನ ಐಡಿಯಾವನ್ನು ತುಂಬಿದ ಮನಸ್ಸಿನಿಂದ ಆನಂದ ಒಪ್ಪಿಕೊಂಡ, ನಾನು ಸ್ವಲ್ಪ ವಿರೋಧಿಸಿದೆನಾದರೂ ಅವರದ್ದು ಬಹುಮತ ಇತ್ತು ಹಾಗಾಗಿ ನನ್ನ ಬಾಯಿ ಮುಚ್ಚಿಸಿದರು.

ಕುಡಿಯಲು ಮೊದಲು ನನಗೇ ಕೊಟ್ಟರು
ಮೊದಲು ಎಳನೀರು ನಾನೇ ಕುಡಿಯಲೆಂದು ನನಗೆ ಕೊಟ್ಟರು. ಮೊದಲೇ ಮೇಷ್ಟ್ರ ಮಗ ನಾನು, ಸೌಮ್ಯವಾಗಿ ಬೆಳೆದವನು. ಲೋಟವನ್ನು ತುಟಿಗೆ ಹತ್ತಿಸದೆ ನೀರು ಸಹ ಕುಡಿದ ರೂಢಿ ಇರಲಿಲ್ಲ ನನಗೆ. ಎಳನೀರಂತೂ ಸ್ಟ್ರಾ ಇಲ್ಲದೆ ಕುಡಿದದ್ದು ನೆನಪೇ ಇರಲಿಲ್ಲ. ಆದರು ಧೈರ್ಯ ಮಾಡಿದೆ.

ಮೂಗು ಆಕಾಶ ನೋಡುವಂತೆ ಕತ್ತೆತ್ತಿ ಕುಡಿದೆ
ಸಾಮಾನ್ಯ ಗಾತ್ರದಲ್ಲಿದ್ದ ಎಳನೀರು ಕಾಯಿಯನ್ನು ತುಟಿಗೆ ಹತ್ತಿಸಿಕೊಂಡು, ಮೂಗು ಆಕಾಶ ನೋಡುವಷ್ಟು ತಲೆಎತ್ತಿ, ಒಂದು ಗುಟುಕು ಕುಡಿದ್ದೆನಷ್ಟೆ, ಗಂಟಲಿನಿಂದ 'ಗುಟಕ್' ಎಂಬ ಶಬ್ದ ನನ್ನ ಸ್ವಲ್ಪ ಮಾತ್ರ ಪ್ರಯತ್ನವೂ ಇಲ್ಲದೆ ತಾನಾಗಿಯೇ ಹೊರ ಬಂದಿತು. ಶಬ್ದ ಬರಲೆಂದೇ ಕಾಯುತ್ತಿದ್ದ ಗೆಳೆಯರು ನಾನು ಇನ್ನೊಂದು ಗುಟುಕು ಕುಡಿಯುವ ಮೊದಲೆ ಎಳನೀರನ್ನು ಅಮಾನತ್ತು ನನ್ನಿಂದ ಕಿತ್ತು ಕೊಂಡರು. ನನಗಾದ ನಿರಾಸೆ ಅಬ್ಬಾ.. ಹೇಳತೀರದು. ಕಿಲಾಡಿ ಗೆಳೆಯರ ಷರತ್ತಿಗೆ ಒಪ್ಪಿಕೊಂಡಿದ್ದಕ್ಕೆ ಬಹು ಸಿಟ್ಟು ಬಂದಿತ್ತು.

ಗೆಳೆಯರು ಮಾಡು ಶಬ್ದಕ್ಕೆ ಕಾದು ಕೂತೆ
ಮುಂದಿನ ಸರದಿ ಆನಂದನದು. ಅವನೂ ರೈತನ ಮಗನೇ ಆದರೆ ಸ್ವಲ್ಪ ಸ್ಥಿತಿವಂತ ಕುಟುಂಬ. ಆತ ಎಳನೀರು ಎತ್ತಿದ ಒಂದು ಹತ್ತು-ಹನ್ನೆರಡು ಗುಟುಕು ಕುಡಿದಿದ್ದನೇನೋ ಗುಟಕ್ ಎಂದು ಶಬ್ದ ಮಾಡಿದ. ಶಬ್ದಕ್ಕಾಗಿಯೇ ಮೈಎಲ್ಲಾ ಕಿವಿಯಾಗಿಸಿಕೊಂಡಿದ್ದ ನಾನು ಪಟಕ್ಕನೆ ಎಳನೀರು ಕಿತ್ತುಕೊಂಡೆ. ಅವರೂ ಶಬ್ದ ಮಾಡಿದರೆ ಮುಂದಿನ ರೌಂಡ್ನಲ್ಲಾದರೂ ನನಗೆ ಎಳನೀರು ಕುಡಿಯಲು ಸಿಗುತ್ತದೆಯೇನೋ ಎಂದು (ದುರಾ)ಆಸೆ ನನ್ನದು.

ಶಬ್ದವಿಲ್ಲದೆ ಎಳನೀರು ಕುಡಿದ ವೈದ್ಯನಾಥ
ಈಗ ಮುಂದಿನ ಸರದಿ ವೈದ್ಯನಾಥನದ್ದು. ಅವ ಮಹಾ ಕಿಲಾಡಿ, ಅಪ್ಪಟ ಒರಟು ಹಳ್ಳಿ ಹುಡುಗ. ಕಕ್ ಎಂದು ಒಮ್ಮೆ ಗಂಟಲು ಕ್ಯಾಕರಿಸಿ, ಎಳನೀರು ಕಾಯಿ ಎತ್ತಿದವನು ಇಳಿಸಲೇ ಇಲ್ಲ, ಎಳನೀರು ಕುಡಿವಾಗ ಮೇಲೆ ಕೆಳಗೆ ಚಲಿಸುತ್ತಿದ್ದ ಅವನ ಗಂಟಲ ಮೂಳೆಗಳನ್ನೇ ನೋಡುತ್ತಾ, 'ಗುಟಕ್' ಶಬ್ದಕ್ಕಾಗಿ ಕಾಯುತ್ತಾ ಕೂತಿದ್ದ ನನಗೆ ಭಾರಿ ನಿರಾಸೆ ತಂದಿತು ಅವನ ಎಳನೀರು ಕುಡಿವ ಪ್ರತಿಭೆ. ಲೋಟವೊಂದರಲ್ಲಿ ನೀರು ಕುಡಿದಷ್ಟೆ ಆರಾಮವಾಗಿ ಎಳನೀರು ಕುಡಿದುಬಿಟ್ಟ ಅವನು. 'ಗುಟಕ್' ಶಬ್ದಕ್ಕಾಗಿ ಕಾದ ಕೂತಿದ್ದ ನನಗೆ ಕೊನೆಗೆ ಖಾಲಿ ಎಳನೀರು ಕಾಯಿ ಮಾತ್ರವೇ ಸಿಕ್ಕಿತು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications