ದೇವೇಗೌಡ್ರು ಕಿವಿಹಿಂಡಿದ ನಂತರ ಎಚ್ಚೆತ್ತ ಜೆಡಿಎಸ್ ನಾಯಕರು
ಎರಡು ಅಸೆಂಬ್ಲಿ ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದೆ. ಹಾನಗಲ್ ನಲ್ಲಿ ನಮಗೆ ಗೆಲ್ಲುವ ಶಕ್ತಿಯಿಲ್ಲ ಎಂದು ಈಗಾಗಲೇ ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮತ್ತು ದಳಪತಿಗಳು ಸಿಂಧಗಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಜೊತೆಗೆ ಬೀಡು ಬಿಟ್ಟಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕುಮಾರಸ್ವಾಮಿಯವರೂ ಕ್ಷೇತ್ರದಲ್ಲಿ ಸತತ ಪ್ರಚಾರವನ್ನು ನಡೆಸುತ್ತಿದ್ದಾರೆ. "ಬೆಂಗಳೂರಿನಿಂದ ಹಣ ತಂದು ಇಲ್ಲಿ ಚುನಾವಣೆ ಎದುರಿಸುವುದಿಲ್ಲ, ಕ್ಷೇತ್ರದಲ್ಲಿ ಜೆಡಿಎಸ್ ಪರ ಮತದಾರರ ಒಲವಿದೆ"ಎಂದು ಗೌಡ್ರು ಹೇಳಿದ್ದಾರೆ.
ಇತ್ತ, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ದಂಡೇ ಎರಡು ಕ್ಷೇತ್ರದ ಪ್ರಚಾರದಲ್ಲಿ ಪಾಲ್ಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ಕಾಂಗ್ರೆಸ್ಸಿನ ಹೆಚ್ಚಿನ ಶಾಸಕರು, ಮಾಜಿ ಸಚಿವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನು, ಬಿಜೆಪಿಯಲ್ಲಿ ಇಡೀ ಸಚಿವ ಸಂಪುಟವೇ ಸಿಂಧಗಿ ಮತ್ತು ಹಾನಗಲ್ ನಲ್ಲಿ ಠಿಕಾಣಿ ಹೂಡಿದೆ. ಆದರೆ, ಜಾತ್ಯಾತೀತ ಜನತಾದಳಕ್ಕೆ ಈ ಮಾತು ಅನ್ವಯಿಸುತ್ತಿರಲಿಲ್ಲ. ಈಗ, ಹೆಚ್ಚಿನ ಜೆಡಿಎಸ್ ಮುಖಂಡರು ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ಕುಮಾರಸ್ವಾಮಿಯವರ ಜೊತೆಗೆ ಬಂಡೆಪ್ಪ ಖಾಶೆಂಪುರ್ ಮಾತ್ರ
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ದಂಡೇ ಎರಡು ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರವನ್ನು ನಡೆಸುತ್ತಿದ್ದರೆ, ಜೆಡಿಎಸ್ ನಲ್ಲಿ ಮಾತ್ರ ಅಪ್ಪ,ಮಗ, ಮೊಮ್ಮಗ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಕುಮಾರಸ್ವಾಮಿಯವರ ಜೊತೆಗೆ ಬಂಡೆಪ್ಪ ಖಾಶೆಂಪುರ್ ಬಿಟ್ಟರೆ, ಬೇರೆ ಯಾವ ಶಾಸಕರು/ಮಾಜಿ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ದೇವೇಗೌಡ್ರು ಇದಕ್ಕೆ ಬೇಸರವನ್ನೂ ವ್ಯಕ್ತ ಪಡಿಸಿದ್ದರು.

ಮುಂದಿನ ಚುನಾವಣೆಗೆ ಜೆಡಿಎಸ್ ಗೆಲುವು ಎಷ್ಟು ಮುಖ್ಯ
ಸಿಂಧಗಿಯಲ್ಲಿ ಜೆಡಿಎಸ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ಇಟ್ಟುಕೊಂಡಿರುವ ದೇವೇಗೌಡ್ರು, ಪಕ್ಷದ ಶಾಸಕರಿಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಸೂಚನೆಯನ್ನು ನೀಡಿದ್ದರು. ಆದರೂ, ಅದಕ್ಕೆ ಅಷ್ಟಾಗಿ ಮುಖಂಡರು ಸ್ಪಂದಿಸಿರಲಿಲ್ಲ. ಆ ವೇಳೆ, ಇಳಿವಯಸ್ಸಿನಲ್ಲೂ ತಾನೇ ಪ್ರಚಾರದ ನೇತೃತ್ವವನ್ನು ಗೌಡ್ರು ವಹಿಸಿಕೊಂಡ ನಂತರ, ಈಗ ಒಬ್ಬೊಬ್ಬರಾಗಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಚಾರದಲ್ಲಿ ಭಾಗವಹಿಸುತ್ತಿರುವ ನಾಯಕರಿಗೆ ಮುಂದಿನ ಚುನಾವಣೆಗೆ ಜೆಡಿಎಸ್ ಗೆಲುವು ಎಷ್ಟು ಮುಖ್ಯ ಎನ್ನುವುದನ್ನು ಗೌಡ್ರು ಮನವರಿಕೆ ಮಾಡಿಕೊಡುತ್ತಿದ್ದಾರೆ ಎನ್ನುವ ಸುದ್ದಿಯಿದೆ.

ನಾಜಿಯಾ ಅಂಗಡಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ
ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿಯವರು, ಗೌಡ್ರ ಫರ್ಮಾನಿನ ನಂತರ, ಗುರುವಾರ (ಅ 21) ಸಿಂಧಗಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತುಮಕೂರು, ಮಂಡ್ಯ ಭಾಗದ ಶಾಸಕರು/ಮುಖಂಡರೂ ಸದ್ಯದಲ್ಲೇ ಸಿಂಧಗಿಗೆ ತೆರಳಲಿದ್ದಾರೆ. ಗೌಡ್ರು, ಕುಮಾರಸ್ವಾಮಿಯವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕರೂ ಪ್ರಚಾರದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದರು.

ಹಾಸನ ಮತ್ತು ಮೈಸೂರು ಭಾಗದ ಜೆಡಿಎಸ್ ಮುಖಂಡರು
ಪ್ರಮುಖವಾಗಿ, ಹಾಸನ ಮತ್ತು ಮೈಸೂರು ಭಾಗದ ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದು ದೇವೇಗೌಡ್ರ ಸಿಟ್ಟಿಗೆ ಕಾರಣವಾಗಿತ್ತು. ಇದು ಪಕ್ಷದಲ್ಲಿ ಒಗ್ಗಟ್ಟಿಲ್ಲ ಎನ್ನುವ ಸಂದೇಶ ರವಾನೆಯಾಗುವುದು ಒಂದು ಕಡೆಯಾದರೆ, ಚುನಾವಣೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವುದು ಗೌಡ್ರಿಗೆ ಕಷ್ಟವಾಗುತ್ತಿತ್ತು. ಈಗ, ಗೌಡ್ರ ಬುದ್ದಿಮಾತಿನ ನಂತರ, ರಾಜ್ಯದ ಇತರ ಭಾಗದ ಮುಖಂಡರು, ಪ್ರಚಾರದಲ್ಲಿ ಸಕ್ರಿಯರಾಗುತ್ತಿದ್ದಾರೆ.
ಅಕ್ಟೋಬರ್ ಮೂವತ್ತರಂದು ಎರಡು ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ, ನವೆಂಬರ್ ಎರಡರಂದು ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.












Click it and Unblock the Notifications