ಮಮತಾ ಬ್ಯಾನರ್ಜಿಗೆ ಮರ್ಮಾಘಾತ ನೀಡುವಲ್ಲಿ ನರೇಂದ್ರ ಮೋದಿ ಯಶಸ್ವಿ
Recommended Video
ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಹುದ್ದೆಯ ಆಕಾಂಕ್ಷಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆಯೇ ನಡೆಯಲಿದೆ ಎಂದು ಬಿಂಬಿತವಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಡೆದಿರುವ ಬೆಳವಣಿಗೆಗಳು ಆ ಚಿತ್ರಣವನ್ನೇ ಸಂಪೂರ್ಣ ಬದಲಾಯಿಸಿವೆ. ಕಾಳಗ ನಡೆಯಲಿರುವುದು ಮೋದಿ ಮತ್ತು ರಾಹುಲ್ ನಡುವೆ ಅಲ್ಲವೇ ಅಲ್ಲ. ಬದಲಿಗೆ, ಮೋದಿ ಮತ್ತು 'ದೀದಿ' ಮಮತಾ ಬ್ಯಾನರ್ಜಿ ನಡುವೆ.
ಈ ಪಲ್ಲಟವನ್ನು ಚೆನ್ನಾಗಿ ಅರಿತಿರುವ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕರು, ಕೇಂದ್ರದ ವಿರುದ್ಧ ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸುತ್ತಿರುವ ಪಶ್ಚಿಮ ಬಂಗಾಳದ ಪ್ರಭಾವಶಾಲಿ ನಾಯಕಿ ಮಮತಾ ಬ್ಯಾನರ್ಜಿಗೆ ಮರ್ಮಾಘಾತ ನೀಡಲು ಸಿದ್ಧರಾಗಿದ್ದಾರೆ. ಮತ್ತು ಈಗಾಗಲೆ ಹೆಬ್ಬುಲಿಯಂತೆ ಮೆರೆದಾಡುತ್ತಿರುವ ಮಮತಾ ಬ್ಯಾನರ್ಜಿ ಪತರಗುಟ್ಟುವಂತೆ ಬಾರಿಸಿದ್ದಾರೆ. ಆದರೆ, ಇದು ಪಶ್ಚಿಮ ಬಂಗಾಳದಲ್ಲಿ ಮತ ಗಳಿಸುವಲ್ಲಿ ಯಶಸ್ವಿಯಾಗುವುದಾ? ಕಾಲವೇ ನಿರ್ಧರಿಸಲಿದೆ.
ಬಿಜೆಪಿ ವಿರುದ್ದ ಮಮತಾ ದೀದಿಯ ಮುಂದುವರಿದ ಅಸಹಿಷ್ಣುತೆ
ಮಮತಾ ಬ್ಯಾನರ್ಜಿ ವಿರುದ್ಧ ಮೊದಲ ಕದನ ಗೆದ್ದಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೋರ್ಟ್ ಆರ್ಡರನ್ನು ಹಿಡಿದು ಪಶ್ಚಿಮ ಬಂಗಾಳದ ನೆಲದಲ್ಲಿ ಹೆಲಿಕಾಪ್ಟರ್ ಮೂಲಕ ಇಳಿದಾಗ. ಅಮಿತ್ ಶಾ ಅವರಿಗೆ ಹೆಲಿಕಾಪ್ಟರ್ ಮೂಲಕ ಕೋಲ್ಕತಾಗೆ ಆಗಮಿಸಲು ಅವಕಾಶ ನೀಡುವುದಿಲ್ಲ ಎಂದು ಹಠ ಹಿಡಿದಿದ್ದ ದೀದಿ ಕೊನೆಗೂ ಕೋರ್ಟಿಗೆ ತಲೆಬಾಗಲೇಬೇಕಾಯಿತು. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ ಮೂಲಕ ಬರದಂತೆ ತಡೆಯುವಲ್ಲಿ ಮಮತಾ ಯಶಸ್ವಿಯಾಗಿದ್ದರು. ಅವರು ರಸ್ತೆ ಮೂಲಕ ಬಂದರಾದರೂ ಮಮತಾ ಅಂದರೆ ಹೇಗೆ, ಅವರ ಆಡಳಿತದ ವೈಖರಿ ಹೇಗೆ ಎಂಬುದನ್ನು ತೋರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಮಮತಾ ವಿಚಲಿತರಾಗಿರುವುದಂತೂ ಸತ್ಯ
ಬಹುಕೋಟಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಜೊತೆ ತನಿಖೆಗೆ ಸಹಕಾರ ನೀಡದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ತನಿಖೆಗೆ ಸಹಕಾರ ನೀಡಲೇಬೇಕೆಂದು ಕೋರ್ಟ್ ಹೇಳಿದ ಮೇಲೆ ತಮ್ಮ ಮೂರು ದಿನಗಳ ನಿರಶನವನ್ನು ಕೈಬಿಟ್ಟಿದ್ದರು. ಆಯುಕ್ತರನ್ನು ಬಂಧಿಸದಂತೆ ತಡೆಯುವಲ್ಲಿ ಯಶಸ್ವಿಯಾದ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ನೈತಿಕ ಜಯ ಸಾಧಿಸಿದ್ದೇವೆ ಎಂದು ಬೀಗುತ್ತಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ ಮಾಡಲಾಗುತ್ತಿದೆ ಮತ್ತು ಆಯುಕ್ತ ಸಹಕಾರ ನೀಡುತ್ತಿಲ್ಲ ಎಂದು ತೋರುವಲ್ಲಿ ಬಿಜೆಪಿ ಜಯ ಸಾಧಿಸಿದೆ. ಈ ಘಟನೆಯಿಂದ ಮಮತಾ ತೀವ್ರವಾಗಿ ವಿಚಲಿತರಾಗಿರುವುದಂತೂ ಸತ್ಯ.
ದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆ
ಮಮತಾರನ್ನು ಹಣಿಯುವುದೇ ಬಿಜೆಪಿ?
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗಿಂತ ಪಶ್ಚಿಮ ಬಂಗಾಳದಲ್ಲಿ ಗುಹೆಯೊಳಗೆ ನುಗ್ಗಿ ಹೆಣ್ಣುಹುಲಿ ಮಮತಾ ಬ್ಯಾನರ್ಜಿಯವರನ್ನು ಹಣಿಯುವುದು ಅತ್ಯಂತ ಪ್ರಮುಖವಾದದ್ದು ಎಂಬುದನ್ನು ಬಿಜೆಪಿ ಅರಿತಿದೆ. ಈ ಕಾರಣದಿಂದಲೇ ಪಶ್ಚಿಮ ಬಂಗಾಳದಲ್ಲಿ ಸತತವಾಗಿ ಚುನಾವಣಾ ಸಭೆಗಳನ್ನು ನಡೆಸುತ್ತಿದ್ದು, ಕಮ್ಯುನಿಸ್ಟರ ನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳುವಲ್ಲಿ ಶತಪ್ರಯತ್ನ ನಡೆಸುತ್ತಿದ್ದಾರೆ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ 64 ವರ್ಷದ ಮಮತಾ ಬ್ಯಾನರ್ಜಿ ಸಾಮ್ರಾಜ್ಞಿಯಂತೆ ಮೆರೆದಿದ್ದಾರೆ. 2016ರ ವಿಧಾನಸಭೆ ಚುನಾವಣೆಯಲ್ಲಿ 294 ಸೀಟುಗಳಲ್ಲಿ 211 ಸೀಟುಗಳನ್ನು ಗೆದ್ದು ದೀದಿ ತಾವೆಂಥ ಪ್ರಭಾವಿ ನಾಯಕಿಯೆಂದು ಸಾಬೀತುಪಡಿಸಿದ್ದರು. 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಇರುವ 42 ಕ್ಷೇತ್ರಗಳಲ್ಲಿ 34ರಲ್ಲಿ ಗೆದ್ದು ಹೂಂಕರಿಸಿದ್ದರು. ಆಗ ಬಿಜೆಪಿ ಗೆದ್ದಿದ್ದು ಕೇವಲ 2 ಸೀಟು ಮಾತ್ರ.
ಸತ್ತರೂ ಸರಿ, ಹೋರಾಟ ಬಿಡೆನು: ಮಮತಾ ಬ್ಯಾನರ್ಜಿ
ಮಮತಾಗೆ ಎಚ್ಡಿಡಿ, ಎಚ್ಡಿಕೆ ಬೆಂಬಲ
2019ರ ಚುನಾವಣೆಯಲ್ಲಿ ಕೂಡ ಮಮತಾ ಬ್ಯಾನರ್ಜಿ ಅದೇ ರೀತಿಯ ಸಾಧನೆ ತೋರಿದರೆ ಮತ್ತು ಬಿಜೆಪಿ ಒಂದು ವೇಳೆ ಪೂರ್ಣ ಬಹುಮತ ಗಳಿಸದಿದ್ದರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂಬುದನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಚೆನ್ನಾಗಿ ಅರಿತಿದ್ದಾರೆ. ಮಹಾಘಟಬಂಧನ್ ದ ಭರ್ಜರಿ ಸಮಾವೇಶ ನಡೆಸಿದ ಮಮತಾ ಬ್ಯಾನರ್ಜಿ ತಾವೇ ವಿರೋಧಿ ಗ್ಯಾಂಗಿನ ಪ್ರಧಾನಿ ಅಭ್ಯರ್ಥಿ ಎಂದು ಸಾರಿಸಾರಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರನ್ನು ಮಹಾಘಟಬಂಧನ್ ಲೆಕ್ಕಕ್ಕೇ ಹಿಡಿದಿಲ್ಲ. ಅಲ್ಲದೆ, ಕರ್ನಾಟಕದ ನಾಯಕರುಗಳಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಕೂಡ ದೇಶವನ್ನು ಮುನ್ನಡೆಸಲು ಮಮತಾ ಬ್ಯಾನರ್ಜಿ ಎಲ್ಲ ಅರ್ಹತೆ ಮತ್ತು ಶಕ್ತಿ ಪಡೆದಿದ್ದಾರೆ ಎಂದು ಎಂಡಾರ್ಸ್ ಮಾಡಿದ್ದಾರೆ. ಸಿಬಿಐ ಮತ್ತು ಬಿಜೆಪಿ ತಾಕಲಾಟ ನಡೆಯುತ್ತಿದ್ದಾಗ ಬಿಜೆಪಿ ವಿರೋಧಿ ನಾಯಕರೆಲ್ಲ ಮಮತಾಗೆ ಬೆಂಬಲ ನೀಡಿದ್ದಾರೆ.
ಮುಸ್ಲಿಂ ಮತಗಳ ಮೇಲೆ ಹಾಕಲು ಲಗ್ಗೆ, ಮಮತಾ ನೆತ್ತಿಯ ಮೇಲೆ ಜೆಡಿಎಸ್ ಪುಗ್ಗೆ
ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳಲು ಶತಪ್ರಯತ್ನ
ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಮತ್ತು ತಾವೇ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸಿಕೊಳ್ಳಲು ಮಮತಾ ಬ್ಯಾನರ್ಜಿ ಕೂಡ ಹರಸಾಹಸಪಡುತ್ತಿದ್ದಾರೆ. ಮತ್ತು ಕಾಂಗ್ರೆಸ್ ನಾಯಕರನ್ನು ಪ್ರಧಾನಿ ರೇಸಿನಿಂದ ಹೊರಗಿಡುವ ದೃಷ್ಟಿಯಿಂದಲೇ ಈ ಎಲ್ಲ ಪ್ರಯತ್ನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕೋಲ್ಕತಾದಲ್ಲಿ ನಡೆಸಿದ ಮಹಾಘಟಬಂಧನ್ ನ ಸಮಾವೇಶ ಇದಕ್ಕೆ ಸಾಕ್ಷಿ. ಈ ಸಮಾವೇಶದಲ್ಲಿ ರಾಹುಲ್ ಗಾಂಧಿಯಾಗಲಿ, ಸೋನಿಯಾ ಗಾಂಧಿಯಾಗಲಿ ಭಾಗವಹಿಸಲಿಲ್ಲ ಎಂಬುದು ಗಮನಾರ್ಹ ಸಂಗತಿ. ಹಿಂದೆ, ಶಾರದಾ ಚಿಟ್ ಫಂಡ್ ಹಗರಣಕ್ಕಾಗಿ ಮಮತಾರನ್ನು ಟೀಕಿಸಿದ್ದ ರಾಹುಲ್ ಗಾಂಧಿಯವರು ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಅವರ ಬೆನ್ನಿಗೆ ನಿಂತಿರುವುದು ವಿಪರ್ಯಾಸ. ಇಲ್ಲಿ ಉದ್ದೇಶ ಮಾತ್ರ ಸ್ಪಷ್ಟ, ಏನೇ ಮಾಡಲಿ ನರೇಂದ್ರ ಮೋದಿ ಗದ್ದುಗೆಯಿಂದ ಕೆಳಗಿಳಿಯಬೇಕು!
ಪ್ರಿಯಾಂಕಾ ಮುಂದೆ ರಾಹುಲ್ ಹಿಂದೆ
ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ನಗೆಬೀರಿರುವ ರಾಹುಲ್ ಗಾಂಧಿ ಅವರು ಇನ್ನೇನು ಪ್ರಧಾನಿ ಅಭ್ಯರ್ಥಿಯಾಗಿಯೂ ಮಹಾಘಟಬಂಧನ್ ದ ಮುಂಚೂಣಿಯಲ್ಲಿರಲಿದ್ದಾರೆ ಎಂದು ಅಂದುಕೊಳ್ಳುವಾಗಲೇ ಪ್ರಿಯಾಂಕಾ ವಾದ್ರಾ ಅವರನ್ನು ಸಕ್ರೀಯ ರಾಜಕಾರಣಕ್ಕೆ ತಂದು ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಕಲ್ಲನ್ನು ಎಳೆದುಕೊಂಡಿದೆ. ರಾಹುಲ್ ಗಾಂಧಿ ಅವರ ಮೇಲಿದ್ದ ದೃಷ್ಟಿ ತಾನಾಗಿಯೇ ಸರಿದು ಪ್ರಿಯಾಂಕಾ ವಾದ್ರಾ ಅವರ ಮೇಲೆ ನೆಟ್ಟಿದೆ. ಇದಕ್ಕೆ ಪೂರಕವಾಗಿ ಹಲವಾರು ಬೆಳವಣಿಗೆಗಳು ಕೂಡ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿವೆ. ಪ್ರಿಯಾಂಕಾ ಅವರು ಬಿರುಗಾಳಿಯಂತೆ ಆವರಿಸಿಕೊಳ್ಳುತ್ತಿದ್ದು, ಎಲ್ಲ ಸಭೆಗಳ ಲಗಾಮನ್ನು ಹಿಡಿದುಕೊಳ್ಳುತ್ತಿದ್ದಾರೆ, ರಾಹುಲ್ ಗಾಂಧಿ ಸ್ಪಷ್ಟವಾಗಿ ಹಿಂದಿನ ಸೀಟಿನಲ್ಲಿ ಕೂಡುವಂತಾಗಿದೆ.
ಲೋಕಸಭೆಯಲ್ಲಿ ದೀದಿ ವರ್ಸಸ್ ಮೋದಿ
ಈ ಎಲ್ಲ ಬೆಳವಣಿಗೆಗಳು ಮಮತಾ ಬ್ಯಾನರ್ಜಿ ಅವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅವರು ಉದ್ದೇಶಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರು ತೆರೆಮರೆಗೆ ಸರಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಪ್ರತಿಸ್ಪರ್ಧಿ ಎಂದು ಅಂದುಕೊಂಡಿದ್ದನ್ನೇ ಮಮತಾ ಬ್ಯಾನರ್ಜಿ ಬದಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ಕೂಡ ಮೂವತ್ತಕ್ಕೂ ಹೆಚ್ಚು ಸೀಟು ಗಳಿಸಿದರೆ ತಾವೇ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂಬುದನ್ನು ಕೂಡ ಅವರು ಅರಿತಿದ್ದಾರೆ. ಇದೀಗ ಕಾಳಗ ನಡೆಯುತ್ತಿರುವುದು ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ನಡುವೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಅಚ್ಚರಿಯೆಂಬಂತೆ ಮಮತಾ ಬ್ಯಾನರ್ಜಿಗೆ ಎಲ್ಲ ಬಿಜೆಪಿ ವಿರೋಧಿಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಅವರು ಕೂಡ ಮಹಿಳೆಯೊಬ್ಬರು ಪ್ರಧಾನಿಯಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಘಂಟಾಘೋಷವಾಗಿ ಸಾರಿದ್ದಾರೆ.