ಬಿಟ್ಕಾಯಿನ್ ರಗಳೆ: ಕಾಂಗ್ರೆಸ್ ಪಟಾಕಿಗೆ ಬೆಂಕಿ ಹಚ್ಚಿದ ಬಿಜೆಪಿ?
ಬೆಂಗಳೂರು, ನ 18: ಬಿಟ್ಕಾಯಿನ್ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ/ಪ್ರತ್ಯಾರೋಪ ತಾರಕಕ್ಕೇರಿರುವ ಬೆನ್ನಲ್ಲೇ, ರಾಜ್ಯ ಗೃಹ ಸಚಿವರು ಸ್ಪೋಟಕ ಹೇಳಿಕೆಯೊಂದನ್ನು ನೀಡಿರುವುದರಿಂದ, ಪ್ರಕರಣ ಹೊಸ ತಿರುವನ್ನು ಪಡೆಯುವ ಸಾಧ್ಯತೆಯಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ದಾಖಲೆ ಸಮೇತ ತಿರುಗೇಟು ನೀಡಿದ್ದರೂ, ಸಚಿವರು ಮಾಡಿರುವ ಆರೋಪದ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಚರ್ಚೆ ಆರಂಭವಾಗಿದೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಬಿಟ್ಕಾಯಿನ್ ಪ್ರಕರಣದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಶಾಸಕ ಪ್ರಿಯಾಂಕ್ ಖರ್ಗೆಯವರು ಬುಧವಾರ (ನ 17) ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ, ಆರಗ ಜ್ಞಾನೇಂದ್ರ ಆರೋಪ ನಿರಾಧಾರ ಎಂದು ಹೇಳಿದ್ದಾರೆ.
ಹ್ಯಾಕರ್ ಶ್ರೀಕಿಯನ್ನು ಬಳಸಿಕೊಂಡು ಇತ್ತೀಚೆಗೆ ನಡೆದ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಭಾರೀ ಅಕ್ರಮವನ್ನು ಎಸೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದರು. ಯೂತ್ ಕಾಂಗ್ರೆಸ್ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಎನ್ನುವ ಆರೋಪ ಹಿಂದೆ ಕೂಡಾ ಇದ್ದಿದ್ದರಿಂದ ಗೃಹ ಸಚಿವರ ಹೇಳಿಕೆಗೆ ಮಹತ್ವ ಬಂದಿದೆ.

ಕರ್ನಾಟಕ ಕಾಂಗ್ರೆಸ್ಸಿನ ಯುವ ಘಟಕದ ಚುನಾವಣೆ ಫಲಿತಾಂಶ
ಕರ್ನಾಟಕ ಕಾಂಗ್ರೆಸ್ಸಿನ ಯುವ ಘಟಕದ ಚುನಾವಣೆ ನಡೆದ ಹಲವು ದಿನಗಳ ನಂತರ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಅತಿಹೆಚ್ಚು ಮತವನ್ನು ಮೊಹಮ್ಮದ್ ನಲಪಾಡ್ ಪಡೆದಿದ್ದರೂ, ರಕ್ಷಾ ರಾಮಯ್ಯ ಅವರನ್ನು ವಿಜೇತರೆಂದು ಘೋಷಿಸಲಾಗಿತ್ತು. ಇದು, ಸ್ಪಷ್ಟವಾಗಿ ಕೆಪಿಸಿಸಿಯಲ್ಲಿ ಎರಡು ಬಣದಂತಾಗಿ, ಎಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಕೊನೆಗೆ, ರಕ್ಷಾ ರಾಮಯ್ಯ ಮತ್ತು ನಲಪಾಡ್ ನಡುವೆ ಸಂಧಾನ ನಡೆದು ಡಿಸೆಂಬರ್ 2021ರ ವರೆಗೆ ರಕ್ಷಾ, ಉಳಿದ ಅವಧಿಗೆ ನಲಪಾಡ್ ಅಧ್ಯಕ್ಷರು ಎಂದು ಘೋಷಿಸಲಾಗಿತ್ತು. ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದ್ದರು.

ತನಿಖೆ ನಡೆಸಲು ಸರಕಾರ ಸಿದ್ದವಿದೆ ಎಂದ ಆರಗ ಜ್ಞಾನೇಂದ್ರ
"ಕಾಂಗ್ರೆಸ್ಸಿನ ನಾಯಕರೇ ನನಗೆ ಹೇಳಿದಂತೆ, ಯುವ ಘಟಕದ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಆನ್ಲೈನ್ ಮೂಲಕ ಈ ಚುನಾವಣೆ ನಡೆದಿತ್ತು, ಹ್ಯಾಕರ್ ಶ್ರೀಕಿಯನ್ನು ಬಳಸಿಕೊಂಡು ಅಕ್ರಮ ನಡೆಸಲಾಗಿದೆ. ಚಲಾವಣೆಯಾಗುವ ಮತಗಳು ಒಂದೇ ಕಡೆ ಬೀಳುವಂತೆ ಮಾಡಲಾಗಿದೆ. ಈ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿ ಈ ಅಕ್ರಮ ಎಸೆಯಲಾಗಿದೆ ಎನ್ನುವುದು ನನ್ನ ಅಥವಾ ಬಿಜೆಪಿಯ ಆರೋಪವಲ್ಲ, ಕಾಂಗ್ರೆಸ್ಸಿನವರೇ ಹೇಳಿರುವುದು. ಲಿಖಿತ ದೂರು ಕೊಟ್ಟರೆ, ತನಿಖೆ ನಡೆಸಲು ಸರಕಾರ ಸಿದ್ದವಿದೆ" ಎಂದು ಆರಗ ಜ್ಞಾನೇಂದ್ರ ಹೇಳಿಕೆಯನ್ನು ನೀಡಿದ್ದರು.

ಗೃಹ ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್
ಗೃಹ ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರಾದ ರಾಮಲಿಂಗ ರೆಡ್ಡಿ ಮತ್ತು ಪ್ರಿಯಾಂಕ್ ಖರ್ಗೆ, "IYC ಚುನಾವಣೆ - 2021ರ ಜನವರಿ 10,11,12, ಫಲಿತಾಂಶ - 4/2/2021. ಈ ಅವಧಿಯಲ್ಲಿ ಕಸ್ಟಡಿಯಲ್ಲಿದ್ದ ಶ್ರೀಕಿಗೆ ಸರ್ಕಾರ ಕಂಪ್ಯೂಟರ್ ಕೊಟ್ಟಿತ್ತೇ? ಬಿಜೆಪಿ ಸ್ಪಷ್ಟಪಡಿಸಲಿ, ಇಲ್ಲವೇ ಸುಳ್ಳು ಹೇಳುವುದನ್ನ ಬಿಡಲಿ. @nalapad ಮೇಲಿನ ಅರ್ಧದಷ್ಟು ಆಸಕ್ತಿ ಸರ್ಕಾರಿ ವೆಬ್ಸೈಟ್ ಹ್ಯಾಕ್ ಪ್ರಕರಣದ ತನಿಖೆಗೆ ತೋರಿದರೆ ಸರ್ಕಾರದ ಮಾನ ಉಳಿಸಬಹುದು"ಎಂದು ಪ್ರಿಯಾಂಕ್ ಟ್ವೀಟ್ ಮಾಡಿದ್ದಾರೆ.

ಹ್ಯಾಕರ್ ಶ್ರೀಕಿ ಜೊಗೆ ನಲಪಾಡ್ ಸಹೋದರನಿಗೆ ಲಿಂಕ್
ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು,"ಶ್ರೀಕಿ ಹ್ಯಾಕ್ ಮಾಡಿದ್ದಾನೋ, ಇನ್ನೊಬ್ಬ ಮಾಡಿದ್ದಾನೋ ನನಗೆ ಗೊತ್ತಿಲ್ಲ. ಅವರದೇ ಪಕ್ಷದ ಮುಖಂಡರು ಈ ಬಗ್ಗೆ ನನಗೆ ಹೇಳಿದ್ದಾರೆ. ನಾನು ಪ್ರಿಯಾಂಕ್ ಖರ್ಗೆ ಅಥವಾ ಕಾಂಗ್ರೆಸ್ ವಿರುದ್ದ ಆರೋಪಿಸುತ್ತಿಲ್ಲ"ಎಂದು ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಆದರೂ, ಗೃಹ ಸಚಿವರೇ ಈ ಬಗ್ಗೆ ಹೇಳಿರುವುದರಿಂದ, ವೆಬ್ಸೈಟ್ ಹ್ಯಾಕ್ ಆಗಿತ್ತೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಜೊತೆಗೆ, ಹ್ಯಾಕರ್ ಶ್ರೀಕಿ ಜೊತೆಗೆ ಓಮರ್ ನಲಪಾಡ್ ಗೆ ಲಿಂಕ್ ಇದೆ ಎನ್ನುವುದೂ ಚಾಲ್ತಿಯಲ್ಲಿರುವ ವಿಚಾರ. ಹಾಗಾಗಿ, ಬಿಜೆಪಿಯ ಆರೋಪ ತಿರುಗುತ್ತಾ ಕಾಂಗ್ರೆಸ್ಸಿಗೆ ಸುತ್ತುತ್ತಾ ಎನ್ನುವುದು ಕಾದು ನೋಡಬೇಕಾಗಿದೆ.












Click it and Unblock the Notifications