ಬಿಜೆಪಿ ಉರುಳಿಸಿದ 'ಚಿರಾಗ್' ದಾಳಕ್ಕೆ ಕಂಗಾಲಾದರೇ ನಿತೀಶ್ ಕುಮಾರ್?
ನವದೆಹಲಿ, ನವೆಂಬರ್ 10: ಒಂದೆಡೆ ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಆರ್ಜೆಡಿ ಮತ್ತು ಕಾಂಗ್ರೆಸ್ಗೆ ತೀವ್ರ ಹಿನ್ನಡೆಯುಂಟು ಮಾಡುವ ಮೂಲಕ ಬಿಜೆಪಿ ಮತ್ತು ಜೆಡಿಯುಗೆ ನೆರವಾಗಿದ್ದರೆ, ಇನ್ನೊಂದೆಡೆ ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಜೆಡಿಯುಗೆ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ.
Recommended Video
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಬಹುತೇಕ ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಆದರೆ ಜೆಡಿಯು ತೀವ್ರ ಹಿನ್ನಡೆ ಅನುಭವಿಸಿದೆ. ಈ ಮೂಲಕ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಇದೆ. ನಿತೀಶ್ ಪಕ್ಷದ ಪ್ರದರ್ಶನ ವೈಫಲ್ಯದಲ್ಲಿ ಚಿರಾಗ್ ಕೈವಾಡ ಇಲ್ಲ ಎನ್ನಲಾಗದು.
ನಿತೀಶ್ ಕುಮಾರ್ ಅವರ ಪಕ್ಷವು ಸ್ಪರ್ಧಿಸಿದ ಪ್ರತಿ ಕ್ಷೇತ್ರದಲ್ಲಿಯೂ ಚಿರಾಗ್ ಪಾಸ್ವಾನ್ ತಮ್ಮ ಎಲ್ಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಮಾತ್ರವಲ್ಲ, ಅವರ ಚುನಾವಣೆಯ ಪ್ರಚಾರದ ಎದುರಾಳಿ ಪ್ರತಿಬಾರಿಯೂ ನಿತೀಶ್ ಕುಮಾರ್ ಅವರೇ ಆಗಿದ್ದರು. ಪ್ರತಿ ಪ್ರಚಾರ ಸಭೆಯಲ್ಲಿಯೂ ಚಿರಾಗ್ ಪಾಸ್ವಾನ್, ನಿತೀಶ್ ಅವರ ಜೆಡಿಯು ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಒಮ್ಮೆಯೂ ಅವರು ಬಿಜೆಪಿ ವಿರುದ್ಧ ಮಾತನಾಡಲಿಲ್ಲ. ಮಹಾಮೈತ್ರಿಕೂಟದ ವಿರುದ್ಧವೂ ಅಷ್ಟಾಗಿ ಧ್ವನಿ ಎತ್ತಲಿಲ್ಲ. ಚಿರಾಗ್ ಎದುರಾಳಿಯಾಗಿ ನಿಲ್ಲದೆ ಹೋಗಿದ್ದರೆ ಜೆಡಿಯು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿತ್ತು ಎಂದು ಹೇಳಲಾಗುತ್ತಿದೆ. ಮುಂದೆ ಓದಿ.

ಬಿಜೆಪಿಗೂ ಬೇಕಿಲ್ಲ
ನಿತೀಶ್ ಕುಮಾರ್ ಅವರನ್ನು ಗುರಿಯನ್ನಾಗಿರಿಸುವ ಚಿರಾಗ್ ಪಾಸ್ವಾನ್ ಅವರ ಈ ತಂತ್ರದ ಹಿಂದೆ ಬಿಜೆಪಿ ಕುಮ್ಮಕ್ಕು ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಜೆಡಿಯು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಸ್ವತಃ ಅದರ ಪಾಲುದಾರ ಬಿಜೆಪಿಗೆ ಕೂಡ ಬೇಕಿಲ್ಲ. ನಿತೀಶ್ ಅವರನ್ನು ಹೀಗೆ ಹಣಿದರೆ ಜೆಡಿಯು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯವಾಗಲಿದೆ. ಹೀಗಾಗಿ ಚಿರಾಗ್ ಮೂಲಕ ಈ ಕೆಲಸ ಮಾಡಿಸಿದೆ ಎಂದು ಹೇಳಲಾಗುತ್ತಿದೆ.

ಚಿರಾಗ್ ಪಾಸ್ವಾನ್ ತಂತ್ರಗಾರಿಕೆ
ತಮ್ಮ ಎದೆ ಬಗೆದರೆ ಮೋದಿ ಕಾಣಿಸುತ್ತಾರೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು. ಅವರ ಪ್ರಚಾರಗಳಲ್ಲಿ ಬಿಜೆಪಿ ಪರವಾದ ಒಲವು ಸ್ಪಷ್ಟವಾಗಿ ಪ್ರಕಟವಾಗುತ್ತಿತ್ತು. ಮಾತ್ರವಲ್ಲ, ಬಿಜೆಪಿ ಹಾಗೂ ಎಲ್ಜೆಪಿ ಸೇರಿ ಸರ್ಕಾರ ರಚಿಸಲಿವೆ ಎಂದೂ ಹೇಳಿಕೊಂಡಿದ್ದರು. ಇದುವರೆಗಿನ ಫಲಿತಾಂಶ ಚಿರಾಗ್ ಪಾಸ್ವಾನ್ ಅವರ ತಂತ್ರಗಳು, ಹಾಗೂ ಅದರ ಹಿಂದಿನ ಬಿಜೆಪಿ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತದೆ.

ಜೆಡಿಯು ಶಕ್ತಿ ಕುಸಿತ
'ನಿತೀಶ್ ಕುಮಾರ್ ಅವರನ್ನು ತನ್ನ ಕಿರಿಯ ಪಾಲುದಾರನನ್ನಾಗಿ ಇಳಿಸುವ ಗುರಿಯನ್ನು ಬಿಜೆಪಿ ಈಡೇರಿಸಿಕೊಂಡಂತೆ ಕಾಣಿಸುತ್ತದೆ. ಈ ಗುರಿಯನ್ನು ಈಡೇರಿಸಿಕೊಳ್ಳಲು ಅದು ಚಿರಾಗ್ ಪಾಸ್ವಾನ್ ಅವರನ್ನು ಬಳಸಿಕೊಂಡಿತ್ತು' ಎಂದು ಒಂದು ಕಾಲದಲ್ಲಿ ನಿತೀಶ್ ಕುಮಾರ್ ಅವರಿಗೆ ಆಪ್ತರಾಗಿದ್ದು, 10 ತಿಂಗಳ ಹಿಂದೆ ಪಕ್ಷದಿಂದ ಉಚ್ಚಾಟಿತರಾದ ಪವನ್ ವರ್ಮಾ ಹೇಳಿದ್ದಾರೆ.

ಹಳೆಯ ಸೇಡು
2010ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿಯಾಗುವ ಸಂದರ್ಭವನ್ನು ತಪ್ಪಿಸಲು ನಿತೀಶ್ ಕುಮಾರ್ ಪಟ್ನಾದಲ್ಲಿ ಆಯೋಜಿಸಿದ್ದ ಭೋಜನಕೂಟವನ್ನು ರದ್ದುಗೊಳಿಸಿದ್ದು ಸುದ್ದಿಯಾಗಿತ್ತು. ಇಂದು ಅವರು ಮುಖ್ಯಮಂತ್ರಿಯಾಗುವ ಅವಕಾಶ ಪಡೆದಿದ್ದರೆ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಬೆಂಬಲದಿಂದ ಮಾತ್ರ. ಈ ಫಲಿತಾಂಶ ಬಳಿಕ ನಿತೀಶ್ ಕುಮಾರ್, ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯ ಬಳಿ ಹೋಗುವ ಅನಿವಾರ್ಯತೆ ಬರಲಿದೆ ಎನ್ನಾಗುತ್ತಿದೆ.

ಮಹಾರಾಷ್ಟ್ರದಲ್ಲಾದ ಅನುಭವ
ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿಯಿಂದ ಹೊರಬಂದಿದ್ದ ಶಿವಸೇನಾ, ತನ್ನ ಬದ್ಧ ವೈರಿಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿ ಅಧಿಕಾರ ಪಡೆದ ಉದಾಹರಣೆ ಹಾಗೂ ಅನುಭವ ಬಿಜೆಪಿಗೆ ಚೆನ್ನಾಗಿದೆ. ಬಿಹಾರದಲ್ಲಿ ಮುಖ್ಯಮಂತ್ರಿ ಗಾದಿ ತನಗೇ ಬೇಕು ಎಂದು ಬಿಜೆಪಿ ಪಟ್ಟುಹಿಡಿದರೆ ಮತ್ತು ಚಿರಾಗ್ ಪಾಸ್ವಾನ್ ಹಾಗೂ ಇತರೆ ಸಣ್ಣ ಪಕ್ಷಗಳ ಸಹಾಯದಿಂದ ಸರ್ಕಾರ ರಚನೆ ಸಾಧ್ಯವಿಲ್ಲದೆ ಹೋದರೆ ಭಾರಿ ದೊಡ್ಡ ರಾಜಕೀಯ ಬದಲಾವಣೆಗಳಾದರೂ ಅಚ್ಚರಿಯಿಲ್ಲ.












Click it and Unblock the Notifications