ಹಸಿರನ್ನೊದ್ದ ಚಾಮುಂಡಿ ಬೆಟ್ಟದಲ್ಲೀಗ ಬೆಳ್ಮೋಡಗಳ ಮನಮೋಹಕ ಚಿತ್ತಾರ...
ಕಣ್ಣು ಹಾಯಿಸಿದುದ್ದಕ್ಕೂ ಹಸಿರ ಚಪ್ಪರ ಹಾಕಿ ಅದರ ಮೇಲೆ ಬೆಳ್ಮೋಡಗಳ ಚಿತ್ತಾರ ಬರೆದು, ಹಕ್ಕಿಗಳ ಚಿಲಿಪಿಲಿ ಇಂಚರಕ್ಕೆ ತಲೆದೂಗಿ, ಜೀವಜಂತುಗಳ ಕಂಡು ಪುಳಕಗೊಂಡು, ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ, ಸಣ್ಣಗೆ ಸುರಿಯುವ ಹಿಮದಲ್ಲಿ ಮೀಯುತ್ತಾ ಸುಂದರಲೋಕದಲ್ಲಿ ವಿಹರಿಸಬೇಕೆಂಬ ಬಯಕೆ ನಿಮ್ಮಲ್ಲಿದೆಯೇ? ಹಾಗಿದ್ದರೆ ದೂರದ ಮಲೆನಾಡಿಗೋ, ಊಟಿಗೋ ಹೋಗಬೇಕಾಗಿಲ್ಲ. ಒಂದು ಮುಂಜಾನೆ ಚಾಮುಂಡಿ ಬೆಟ್ಟದ ಪಾದದ ಬಳಿಯಿಂದ ಮೆಟ್ಟಿಲೇರುತ್ತಾ ಚಾಮುಂಡೇಶ್ವರಿ ದೇಗುಲದ ಕಡೆಗೆ ಹೆಜ್ಜೆ ಹಾಕಿಬಿಡಿ ಸಾಕು... ನಿಸರ್ಗದ ಸೌಂದರ್ಯ ನಿಮ್ಮ ಕಣ್ಣಿಗೆ ರಾಚುತ್ತದೆ...
Recommended Video
ಸುಮಾರು ಎರಡೂವರೆ ತಿಂಗಳ ಲಾಕ್ ಡೌನ್ ಬಳಿಕ ಇದೀಗ ಮುಂಜಾನೆ ಅಂದರೆ ಸೂರ್ಯೋದಯಕ್ಕೆ ಮುನ್ನ ಮೆಟ್ಟಿಲೇರುವ ಮನಸ್ಸು ಮಾಡಿದರೆ ಪ್ರಕೃತಿಯ ಮಡಿಲಲ್ಲಿ ಸುಂದರ ದೃಶ್ಯಗಳನ್ನು ವೀಕ್ಷಿಸಿ, ಆ ಮೂಲಕ ಸದಾ ಜಂಜಾಟದಲ್ಲಿದ್ದ ಜೀವಕ್ಕೆ ಹುರುಪು ತುಂಬಲು ಸಾಧ್ಯವಾಗುತ್ತದೆ. ಲಾಕ್ ಡೌನ್ಗೂ ಮುನ್ನ ಚಾಮುಂಡಿಬೆಟ್ಟದತ್ತ ಹೋದವರು ಮತ್ತೆ ಇದೀಗ ಅಲ್ಲಿಗೆ ಹೋದರೆ ಅಚ್ಚರಿ ಪಡುತ್ತಾರೆ. ಅವತ್ತು ಮರಗಿಡಗಳು ಎಲೆಯುದುರಿಸಿ, ಬಿಸಿಲಿನ ಝಳಕ್ಕೆ ಒಣಗಿ ಬೋಳಾಗಿ ನಿಂತಿದ್ದವು. ಒಂದೆಡೆಯಿಂದ ನಿಂತು ನೋಡಿದರೆ ಇಡೀ ಬೆಟ್ಟ ಹಸಿರ ಮೇಲೆ ಹಳದಿ ಬಣ್ಣವನ್ನು ಎರಚಿದಂತೆ ಭಾಸವಾಗುತ್ತಿತ್ತು. ಈಗಿನ ಚಿತ್ರಣ ಸ್ವಲ್ಪ ಭಿನ್ನವಾಗಿದೆ.
ಲಾಕ್ ಡೌನ್ನಿಂದ ವರದಾನವಾಯ್ತು
ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 22 ರಿಂದಲೇ ಚಾಮುಂಡಿ ಬೆಟ್ಟದ ಪಾದದ ಬಳಿ ಗೇಟ್ ಬಂದ್ ಮಾಡುವ ಮೂಲಕ ಮೆಟ್ಟಿಲೇರಿ ಹೋಗುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಜನ ಆ ಕಡೆ ಸುಳಿದಿರಲಿಲ್ಲ. ಬೇಸಿಗೆಯ ದಿನಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಿದ್ದ ಜನರು ಎರಡೂವರೆ ತಿಂಗಳ ಕಾಲ ಅತ್ತ ಹೋಗುವ ಮನಸ್ಸು ಮಾಡಲಿಲ್ಲ. ಜತೆಗೆ ಚಾಮುಂಡಿ ಬೆಟ್ಟದಲ್ಲಿರುವ ದೇವಸ್ಥಾನಕ್ಕೂ ತೆರಳುವ ಅವಕಾಶ ಇಲ್ಲದ್ದರಿಂದ ಜನ ಅತ್ತ ಮುಖ ಹಾಕಲಿಲ್ಲ. ಇದರಿಂದ ಯಾವುದೇ ರೀತಿಯ ಪರಿಸರ ಮಾಲಿನ್ಯವಾಗಲೀ, ಕಾಡ್ಗಿಚ್ಚಿನ ತೊಂದರೆಯಾಗಲೀ ಯಾವುದೂ ಆಗಲಿಲ್ಲ. ಹೀಗಾಗಿ ಇಡೀ ವಾತಾವರಣ ಶುಭ್ರಗೊಂಡು ಪ್ರಕೃತಿಗೆ ವರದಾನವಾಯಿತು.
ಜೀವವೈವಿಧ್ಯ ಪಾರಂಪರಿಕ ತಾಣವಾಗುವುದೇ ಚಾಮುಂಡಿ ಬೆಟ್ಟ?
ಬೋಳಾಗಿದ್ದ ವನಸಿರಿ ಹಸಿರಾಯಿತು
ಬೇಸಿಗೆಯ ದಿನಗಳಲ್ಲಿ ಆಗೊಂದು ಈಗೊಂದು ಮಳೆ ಸುರಿದಿದ್ದು ಬಿಸಿಲ ಬೇಗೆಗೆ ಸಿಲುಕಿ ಬೆಂಡಾಗಿದ್ದ ಮರಗಿಡಗಳು, ಕುರುಚಲು ಕಾಡು, ಹುಲ್ಲುಗಳಿಗೆ ಜೀವಜಲವಾಯಿತು. ಮಣ್ಣು ತೇವಗೊಂಡಿದ್ದರಿಂದ ಹಸಿರು ಚಿಗುರಲು ಆರಂಭವಾಯಿತು. ನೋಡನೋಡುತ್ತಿದ್ದಂತೆಯೇ ಬಿಸಿಲಿಗೆ ಬೋಳಾಗಿದ್ದ ಇಡೀ ಬೆಟ್ಟ ಹಸಿರಿನಿಂದ ಕಂಗೊಳಿಸುವಂತಾಯಿತು. ಸತ್ತು ಹೋಗಿದ್ದ ಹುಲ್ಲುಗಳು ಮತ್ತೆ ಹುಟ್ಟಿದವು. ನಿತ್ರಾಣಗೊಂಡ ಕುರುಚಲು ಕಾಡುಗಳು ಚಿಗುರಿ ತಲೆ ಎತ್ತಿ ನಳನಳಿಸ ತೊಡಗಿದವು. ಇದೆಲ್ಲದರಿಂದಾಗಿ ಇಂದು ಚಾಮುಂಡಿ ಬೆಟ್ಟ ನಿಸರ್ಗ ಸೌಂದರ್ಯವನ್ನು ತನ್ನೊಡಲಲ್ಲಿಟ್ಟುಕೊಂಡು ನಳನಳಿಸುತ್ತಿದೆ. ಆ ಹಸಿರಿನಲ್ಲಿ ಹಕ್ಕಿಗಳು, ಜೀವಜಂತುಗಳು ಖುಷಿಯಾಗಿ ವಿಹರಿಸುತ್ತಿವೆ.
ಶನಿವಾರ, ಭಾನುವಾರ ಮೈಸೂರಿಗೆ ಹೋಗುವವರ ಗಮನಕ್ಕೆ
ದೊಡ್ಡದೇವರಾಜ ಒಡೆಯರ್ ನಿರ್ಮಿಸಿದ ಮೆಟ್ಟಿಲು
ಇಡೀ ಮೈಸೂರಿಗೆ ಎದ್ದು ಕಾಣುವ ಚಾಮುಂಡಿ ಬೆಟ್ಟವನ್ನೊಮ್ಮೆ ಹಾಗೆ ಸುಮ್ಮನೆ ಗಮನಿಸಿ ನೋಡಿದರೆ ಮಹಿಷಾಸುರ ಮಲಗಿದಂತೆ ಕಾಣುತ್ತದೆ. ಇನ್ನು ಸಮುದ್ರ ಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿರುವ ಬೆಟ್ಟದಲ್ಲಿ ಪಾದದಿಂದ ದೇವಾಲಯಕ್ಕೆ ಹತ್ತಿಕೊಂಡು ಹೋಗಲು ದೊಡ್ಡದೇವರಾಜ ಒಡೆಯರ್ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 700 ಮೆಟ್ಟಿಲುಗಳನ್ನೇರಿದಾಗ ಸಮತಟ್ಟಾದ ಸ್ಥಳ ಸಿಗುತ್ತದೆ. ಮೆಟ್ಟಿಲೇರಿ ಬಂದವರಿಗೆ ಇಲ್ಲೊಂದಿಷ್ಟು ವಿಶ್ರಾಂತಿ ಸಿಗುತ್ತದೆ. ಜತೆಗೆ ಬೀಸಿ ಬರುವ ತಂಗಾಳಿ ಸುಸ್ತಾದ ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಇಲ್ಲಿ ಕೆತ್ತಲಾಗಿರುವ ಸುಮಾರು 16 ಅಡಿ ಎತ್ತರ 26 ಅಡಿ ಉದ್ದದ ಈ ಶಿಲಾಮೂರ್ತಿ ನಂದಿ ಬಹು ಅಪರೂಪದ್ದಾಗಿದ್ದು ಇದನ್ನು ನೋಡುವುದೇ ಮಹದಾನಂದವಾಗುತ್ತದೆ.
ನಿಸರ್ಗ ಸುಂದರ ವೀಕ್ಷಣಾ ತಾಣ
ಇದರ ನಡುವೆ ಸುಮಾರು ನಾನೂರೈವತ್ತು ಮೆಟ್ಟಿಲೇರಿದರೆ ಇಲ್ಲೊಂದು ಪುಟ್ಟ ಕಲ್ಯಾಣಿ ಕಾಣಸಿಗುತ್ತದೆ. ಇದನ್ನು ಇತ್ತೀಚೆಗಷ್ಟೆ ಸಂಶೋಧಿಸಿ ಅಭಿವೃದ್ಧಿಪಡಿಸಿದ್ದು, ಇದರಲ್ಲಿ ನೀರು ತುಂಬಿರುವುದು ಕಂಡು ಬರುತ್ತಿದೆ. ಅಲ್ಲಿಂದ ಮುಂದೆ ಮೆಟ್ಟಿಲೇರುತ್ತಾ ಹೋದರೆ ಹಾಸುಬಂಡೆಯ ಒಂದಷ್ಟು ವಿಶಾಲ ಜಾಗ ಕಾಣಿಸುತ್ತದೆ. ಇದೊಂದು ವೀಕ್ಷಣಾತಾಣವಾಗಿದ್ದು, ಇಲ್ಲಿಂದ ನಿಂತು ನೋಡಿದರೆ ಮೈಸೂರು ನಗರದ ಸುಂದರ ನೋಟ ಲಭ್ಯವಾಗುತ್ತದೆ. ಜೊತೆಗೆ ದೂರದ ಕೃಷ್ಣರಾಜಸಾಗರ ಜಲಾಶಯದ ಅಲೆಯಾಡುವ ನೀರಿನ ನೋಟವೂ ಲಭ್ಯವಾಗುತ್ತದೆ.
ಮೈಸೂರು: ಕೊನೆಗೂ ತೆರೆದ ಚಾಮುಂಡಿಬೆಟ್ಟದ ಪಾದದ ಬಾಗಿಲು
ಮನಶಾಂತಿ ಸಿಗಲು ಸಾಧ್ಯ
ಇದೆಲ್ಲದರ ನಡುವೆ ರಸ್ತೆ ಮೂಲಕ ವಾಹನಗಳಲ್ಲಿ ತೆರಳಿದರೆ ಹಲವು ಕಡೆ ವ್ಯೂ ಪಾಯಿಂಟ್ಗಳಿದ್ದು, ಅಲ್ಲಿಂದರೂ ಚಾಮುಂಡಿ ಬೆಟ್ಟದ ನಿಸರ್ಗ ಸೌಂದರ್ಯ ಮಾತ್ರವಲ್ಲದೆ, ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನೈಜ ಸುಂದರತೆ ಕಣ್ತುಂಬಿ ಬರುತ್ತದೆ. ಸದಾ ಕೆಲಸ ಮತ್ತು ಇತರೆ ಒತ್ತಡದಲ್ಲಿ ಸಿಲುಕಿ ನಲುಗಿದವರು ತಮ್ಮ ಜಂಜಾಟವನ್ನೆಲ್ಲ ಬದಿಗೊತ್ತಿ ಒಂದಷ್ಟು ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆಯಬೇಕೆಂಬ ಮನಸಿದ್ದರೆ ಮುಂಜಾನೆ ಚಾಮುಂಡಿ ಬೆಟ್ಟದತ್ತ ಬಂದರೆ ನಿಸರ್ಗದ ಒಡನಾಟದಲ್ಲಿ ನಮ್ಮ ಒತ್ತಡಗಳು ಪರಿಹಾರವಾಗಿ ಮನಶಾಂತಿ ಸಿಗಲು ಸಾಧ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.