ಶೃಂಗೇರಿಯಲ್ಲಿ ದೇವೇಗೌಡರಿಂದ ಅತಿರುದ್ರ ಯಾಗ, ಯಾವ ಕಾರಣಕ್ಕೆ?
ಮಾಜಿ ಪ್ರಧಾನಿ - ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ರಾಜಕೀಯ ಚಾಣಾಕ್ಷತೆ ಬಗ್ಗೆ ಎಷ್ಟೆಲ್ಲ ಮಾತುಗಳು ಚಾಲ್ತಿಯಲ್ಲಿವೆಯೋ ಅವರ ದೈವ ಭಕ್ತಿ ಬಗ್ಗೆ ಕೂಡ ಅಷ್ಟೇ ಬಗೆಯ ಮಾತುಗಳಿವೆ. ಈಗ ಇದರ ಪ್ರಸ್ತಾವ ಏಕೆಂದರೆ, ಶೃಂಗೇರಿಯ ಶಾರದಾ ಮಾತೆ ದೇವಸ್ಥಾನದಲ್ಲಿ ಬುಧವಾರದಿಂದ (ಜನವರಿ 3) ಅತಿರುದ್ರ ಮಹಾಯಾಗವನ್ನು ದೇವೇಗೌಡರು ಮಾಡಿಸುತ್ತಿದ್ದಾರೆ.
ಹತ್ತು ದಿನಗಳ ಕಾಲ ನಡೆಯುವ ಈ ಮಹಾಯಾಗದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಪುರೋಹಿತರು ಪಾಲ್ಗೊಳ್ಳುತ್ತಿದ್ದಾರೆ. ಜ್ಯೋತಿಷಿಗಳ ಸಲಹೆ ಮೇರೆಗೆ ದೇವೇಗೌಡರು ಈ ಯಾಗ ಮಾಡಿಸುತ್ತಿದ್ದಾರೆ ಎಂಬುದು ಮೊದಲ ಸುತ್ತಿದ ಸುದ್ದಿಯಾದರೆ, ಈ ಮಾಸದಲ್ಲಿ ಮಾಡಿಸುವುದು ಬೇಡ ಎಂಬ ಸಲಹೆಯನ್ನೂ ಮೀರಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂಬುದು ಮತ್ತೊಂದು ಮೂಲದ ಸುದ್ದಿ.
ಈ ಅತಿರುದ್ರ ಮಹಾಯಾಗದ ಸಂಕಲ್ಪಕ್ಕೆ ದೇವೇಗೌಡ ದಂಪತಿ ಹಾಗೂ ಎಚ್ ಡಿ ರೇವಣ್ಣ ದಂಪತಿ ತೆರಳಿದ್ದಾರೆ. ಆದರೆ ಈ ಯಾಗವನ್ನು ಯಾವ ಫಲಾಪೇಕ್ಷೆ ಇಟ್ಟುಕೊಂಡು ದೇವೇಗೌಡರು ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಂದಿಲ್ಲ. ಇನ್ನೇನು ಚುನಾವಣೆ ಹತ್ತಿರದಲ್ಲಿ ಇರುವುದರಿಂದ ವಿಘ್ನ ನಿವಾರಣೆಗೋ ಗೆಲುವಿಗೋ ಮಾಡುತ್ತಿರಬಹುದು ಎಂಬುದು ಊಹೆ.
ಈ ಯಾಗದ ವಿಚಾರದ ಬಗ್ಗೆ ಒನ್ಇಂಡಿಯಾ ಕನ್ನಡ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಇನ್ನಷ್ಟು ವಿವರ ನೀಡಿದ್ದಾರೆ. ಮುಂದಿನ ಸ್ಲೈಡ್ ಗಳನ್ನು ಓದಿ.

ಈಶ್ವರನ ಸಂಪ್ರೀತಿಗಾಗಿ ಅತಿರುದ್ರ ಮಹಾ ಯಾಗ
ಅತಿರುದ್ರ ಮಹಾಯಾಗವನ್ನು ಮಾಡುವುದು ಈಶ್ವರನ ಸಂಪ್ರೀತಿಗಾಗಿ. ಗುರುವಿನ ಅನುಗ್ರಹ ಕಡಿಮೆ ಇದೆ ಎಂಬ ಕಾರಣಕ್ಕೆ ಕೂಡ ಈಶ್ವರನ ಅನುಗ್ರಹ ಪಡೆಯುವ ಸಲುವಾಗಿ ಅತಿರುದ್ರ ಮಹಾಯಾಗ ಮಾಡುವಂತೆ ಸೂಚಿಸಿರಬಹುದು. ಪ್ರಾಯಶ್ಚಿತ್ತದ ಸಲುವಾಗಿ ಕೂಡ ಈ ರೀತಿಯ ಯಾಗವನ್ನು ಮಾಡಿಸುತ್ತಾರೆ.

ಹತ್ತನೇ ಒಂದು ಅಂಶದಷ್ಟು ಹೋಮಕ್ಕೆ ಆಹುತಿ
ರುದ್ರ-ಚಮಕ ಎಂಬುದನ್ನು ನೀವು ಕೇಳಿರುತ್ತೀರಿ. 11x11x11x11=14641 ಸಲ ರುದ್ರವನ್ನು, 1331 ಸಲ ಚಮಕವನ್ನು ಹೇಳುತ್ತಾ ಅಭಿಷೇಕ ಮಾಡಲಾಗುತ್ತದೆ. ಅದರ ಹತ್ತನೇ ಒಂದು ಭಾಗದಷ್ಟು ಲೆಕ್ಕದಲ್ಲಿ ಹೋಮದಲ್ಲಿ ಆಹುತಿ ನೀಡಲಾಗುತ್ತದೆ. ಇನ್ನು ಈ ಹೋಮಕ್ಕೆ ನೂರಿಪ್ಪತ್ತು ಪುರೋಹಿತರು ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಕೆಸಿಆರ್ ಆಯತ ಚಂಡಿಕಾ ಯಾಗ
ಈ ಸಂದರ್ಭಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಯತ ಚಂಡಿಕಾ ಯಾಗ ಮಾಡಿಸಿದ್ದು ನೆನಪಾಗುತ್ತಿದೆ. ಅವರ ಇಷ್ಟಾರ್ಥ ನೆರವೇರಿದ್ದರಿಂದ ಆ ಯಾಗ ಮಾಡಿಸಿದ್ದರು. ಆ ಸಂದರ್ಭದಲ್ಲಿ ಶಾಮಿಯಾನಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅದು ಕೂಡ ಅಗ್ನಿ ದೇವನಿಗೆ ಆಹುತಿಯಾಯಿತು ಎಂದು ಆಗ ವ್ಯಾಖ್ಯಾನ ಮಾಡಲಾಗಿತ್ತು.

ಸಾಮಾನ್ಯರಿಂದ ಈ ಯಾಗ ಸಾಧ್ಯವಿಲ್ಲ
ನೂರಿಪ್ಪತ್ತು ಪುರೋಹಿತರ ದಕ್ಷಿಣೆ, ವಸ್ತ್ರದಾನ ಇತ್ಯಾದಿ, ಹೋಮದ ಸಾಮಗ್ರಿ, ತಿಂಡಿ- ಊಟದ ವ್ಯವಸ್ಥೆ, ಉಳಿದುಕೊಳ್ಳುವ ವ್ಯವಸ್ಥೆ, ಹತ್ತು ದಿನಗಳ ಕಾಲ ನಡೆಸುತ್ತಿರುವ ಈ ಯಾಗವನ್ನು ಸಾಮಾನ್ಯದ ಖರ್ಚಿನಲ್ಲಿ, ಸಾಮಾನ್ಯ ಜನರು ಮಾಡುವುದು ಕಷ್ಟ. ಜತೆಗೆ ಕರ್ತೃವಿಗೆ ಶ್ರದ್ಧೆ ಕೂಡ ಬಹಳ ಮುಖ್ಯ. ಶೃಂಗೇರಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ನೇಮ-ನಿಷ್ಠೆ-ಶ್ರದ್ಧೆ ಬಗ್ಗೆ ತುಟಿ ಎರಡು ಮಾಡುವಂತಿಲ್ಲ.












Click it and Unblock the Notifications