Get Updates
Get notified of breaking news, exclusive insights, and must-see stories!

Atal Bihari Vajpayee- ರಾಜಕೀಯ ಅಜಾತಶತ್ರು ಬಗ್ಗೆ ವಿಶೇಷ ನೆನಪು

ಭಾರತ ಕಂಡ ಅತ್ಯುತ್ತಮ ರಾಜಕೀಯ ನೇತಾರರ ಪಟ್ಟಿ ಮಾಡಿದರೆ ಅದರಲ್ಲಿ ಮೊದಲು ಕೇಳಿಬರುವ ಹೆಸರುಗಳಲ್ಲಿ ಅಟಲ್ ಬಿಹಾರಿ ವಾಜಪೇಯಿಯವರದ್ದೂ ಒಂದು. ವಾಜಪೇಯಿ ಬಹಳ ವಾಗ್ಮಿ, ಚತುರ, ಸ್ಪಂದನಶೀಲ ರಾಜಕಾರಣಿಯಾಗಿದ್ದವರು. ಕವಿಯೂ ಹೌದು, ಕವಿ ಮನಸಿನವರೂ, ಅಜಾತಶತ್ರುವೂ ಹೌದು. ಅಂತೆಯೇ ಭಾರತ ರತ್ನ ಪುರಸ್ಕೃತರೂ ಹೌದು.

ಭಾರತದ ಪ್ರಧಾನಿಯಾಗಿ ಬಹಳ ಜನಪ್ರಿಯವಾಗಿದ್ದ ಅವರು 2018, ಆಗಸ್ಟ್ 16ರಂದು ನಮ್ಮನ್ನು ಅಗಲಿ ಹೋದರು. ಇಂದು ಮಂಗಳವಾರ ಅವರ ಐದನೇ ಪುಣ್ಯತಿಥಿ. ಅವರು ಹುಟ್ಟಿದ್ದು ಡಿಸೆಂಬರ್ ೨೫ರಂದು. ಆ ದಿನವನ್ನು 'ಉತ್ತಮ ಆಡಳಿತ' ದಿನವಾಗಿ ಆಚರಿಸಲಾಗುತ್ತದೆ.

ಮೂರು ಬಾರಿ ಪ್ರಧಾನಿಯಾಗಿದ್ದ ಅವರು ಪೂರ್ಣಾವಧಿ ಪ್ರಧಾನಿ ಸ್ಥಾನ ನಿರ್ವಹಿಸಿದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ ಎನಿಸಿದ್ದಾರೆ. ವಿಪಕ್ಷದಲ್ಲಿದ್ದಾಗ ತಮ್ಮ ಪ್ರಖರ ಭಾಷಣಗಳಿಂದ ಇಡೀ ಸಂಸತ್ತನ್ನು ಸ್ತಂಭೀಭೂತಗೊಳಿಸುತ್ತಿದ್ದ ಅವರು ಎಲ್ಲಾ ಪಕ್ಷಗಳಲ್ಲೂ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದರು.

ಆರೆಸ್ಸೆಸ್ ಹಿನ್ನೆಲೆಯವರಾದರೂ ಕಮ್ಯೂನಿಸ್ಟ್‌ನಂಥ ಪಕ್ಷಗಳ ನಾಯಕರೂ ವಾಜಪೇಯಿ ಮೇಲೆ ಅಭಿಮಾನ ಇಟ್ಟುಕೊಂಡಿದ್ದರು. ವಾಜಪೇಯಿ ತಪ್ಪು ಗುಂಪಿನಲ್ಲಿರುವ ಒಳ್ಳೆಯ ವ್ಯಕ್ತಿ ಎಂದು ವಿಪಕ್ಷಗಳು ಹೇಳುತ್ತಿದ್ದರು.

ವಾಜಪೇಯಿ ಯಾರು?

ವಾಜಪೇಯಿ ಯಾರು?

ಅಟಲ್ ಬಿಹಾರಿ ವಾಜಪೇಯಿ ಜನಿಸಿದ್ದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 1924 ಡಿಸೆಂಬರ್ 25ರಂದು. ಅದರೆ, ಅವರ ಕುಟುಂಬದ ಮೂಲ ಉತ್ತರಪ್ರದೇಶದ ಆಗ್ರಾ ಜಿಲ್ಲೆ. ಮಧ್ಯಪ್ರದೇಶದಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು ಕಾನಪುರ್‌ನಲ್ಲಿ ಡಿಎವಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಎ ಮಾಡಿದರು. ವಿವಾಹವಾಗದೇ ಬ್ರಹ್ಮಚಾರಿಯಾಗಿ ಉಳಿದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತ ರಾಜಕಾರಣದ ಭೀಷ್ಮ ಎಂದೇ ಕರೆಯಲಾಗುತ್ತದೆ. ತಮ್ಮ ಸ್ನೇಹಿತೆ ರಾಜಕುಮಾರಿ ಕೌಲ್ ಅವರ ಮಗಳು ನಮಿತಾ ಭಟ್ಟಾಚಾರ್ಯರನ್ನು ದತ್ತುಪಡೆದು ಪಡೆದಿದ್ದರು.

ಸ್ವಾತಂತ್ರ್ಯ ಹೋರಾಟ

ಸ್ವಾತಂತ್ರ್ಯ ಹೋರಾಟ

ಅಟಲ್ ಬಿಹಾರಿ ವಾಜಪೇಯಿ ಆರ್ಯಸಮಾಜ ಮತ್ತು ಆರೆಸ್ಸೆಸ್ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆರೆಸ್ಸೆಸ್ ನೇರವಾಗಿ ಪಾಲ್ಗೊಳ್ಳದಿದ್ದರೂ ವಾಜಪೇಯಿ ಸೇರಿದಂತೆ ಹಲವು ಸ್ವಯಂ ಸೇವಕರು ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.

1951ರಲ್ಲಿ ಭಾರತೀಯ ಜನಸಂಘ ಸ್ಥಾಪನೆಯಾದಾಗ ವಾಜಪೇಯಿ ಪ್ರಮುಖ ಹುದ್ದೆ ಗಳಿಸಿದರು. 1957ರಲ್ಲಿ ಬಲರಾಮಪುರ್‌ನಿಂದ ಲೋಕಸಭೆಗೆ ಆಯ್ಕೆಯಾದರು. ಲೋಕಸಭೆಯಲ್ಲಿ ಆಗಲೇ ವಾಜಪೇಯಿ ತಮ್ಮ ಪ್ರಖರ ಭಾಷಣಗಳಿಂದ ಗಮನ ಸೆಳೆದಿದ್ದರು. ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಅಟಲ್ ಭಾಷಣಕ್ಕೆ ಬೆರಗಾಗಿದ್ದರು. ಮುಂದೊಂದು ದಿನ ಈತ ದೇಶದ ಪ್ರಧಾನಿಯಾಗಬಹುದು ಎಂದು ನೆಹರೂ ನುಡಿದಿದ್ದ ಭವಿಷ್ಯ 1996ರಲ್ಲಿ ನಿಜವಾಯಿತು.

ಪ್ರಧಾನಿಯಾಗಿದ್ದಾಗಿನ ಪ್ರಮುಖ ಘಟನೆಗಳು

ಪ್ರಧಾನಿಯಾಗಿದ್ದಾಗಿನ ಪ್ರಮುಖ ಘಟನೆಗಳು

1996ರ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಟಲ್ ಬಿಹಾರಿ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚಿಸಿತು. ಆದರೆ, ಬಹುಮತ ಸಾಬೀತು ಮಾಡಲಾಗಲಿಲ್ಲ. ನಂತರ ದೇವೇಗೌಡರದ್ದೂ ಸೇರಿ ಬೇರೆಡು ಸರಕಾರಗಳು ಪತನಗೊಂಡವು. 1998ರಲ್ಲಿ ಮತ್ತೆ ಚುನಾವಣೆ ನಡೆಯಿತು. ಬಿಜೆಪಿ ಮತ್ತೆ ನಂಬರ್ ಒನ್ ಪಕ್ಷವಾಯಿತು. ವಾಜಪೇಯಿ ಎರಡನೇ ಬಾರಿ ಪ್ರಧಾನಿಯಾದರು. ೧೩ ತಿಂಗಳ ಕಾಲ ಎನ್‌ಡಿಎ ಮೈತ್ರಿಕೂಟದ ಸರಕಾರ ನಡೆಯಿತು. ಎಐಎಡಿಎಂಕೆ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಆ ಸರಕಾರ ಪತನಗೊಂಡಿತು.

1999ರಲ್ಲಿ ಮತ್ತೆ ಲೋಕಸಭಾ ಚುನಾವಣೆ ನಡೆಯಿತು. ಎನ್‌ಡಿಎ ಮೈತ್ರಿಕೂಟ ಸ್ಪಷ್ಟಬಹುಮತ ಪಡೆಯಿತು. ವಾಜಪೇಯಿ ಮೂರನೇ ಬಾರಿ ಪ್ರಧಾನಿಯಾಗಿ, ಪೂರ್ಣಾವಧಿ ಆಡಳಿತ ನೀಡಿದರು.

ವಾಜಪೇಯಿ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೋಕ್ರನ್ ಅಣು ಬಾಂಬ್ ಪರೀಕ್ಷೆ ನಡೆಸಿದ್ದು ವಿಶೇಷ. ಹಾಗೆಯೇ ಕಾರ್ಗಿಲ್ ಯುದ್ಧವೂ ಆಗಲೇ ಆಗಿದ್ದು.

ಮೂರನೇ ಬಾರಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಂಸತ್ ಮೇಲೆ ಉಗ್ರರ ದಾಳಿ, 2002ರ ಗುಜರಾತ್ ಗಲಭೆ ಘಟನೆಗಳು ನಡೆದವು. ಇದರ ಜೊತೆಗೆ ಭಾರತದ ಆರ್ಥಿಕ ವೃದ್ಧಿಯೂ ಉತ್ತಮಗೊಂಡಿತು. ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಸುವ ಪ್ರಯತ್ನಗಳಾದವು. ವಿವಿಧ ಕ್ಷೇತ್ರಗಳಿಗೆ ಒಳ್ಳೆಯ ಪುಷ್ಟಿ ಸಿಕ್ಕಿತು.

ಉತ್ತಮ ರಾಜತಾಂತ್ರಿಕರಾಗಿದ್ದ ವಾಜಪೇಯಿ ಅವಧಿಯಲ್ಲಿ ಭಾರತ ಚೀನಾ ಸ್ನೇಹ ಉತ್ತಮಗೊಂಡಿತು. ಟಿಬೆಟ್ ಚೀನಾದ ಭಾಗ ಎಂದು ಭಾರತ ಒಪ್ಪಿಕೊಂಡಿತು. ಹಾಗೆಯೇ ಸಿಕ್ಕಿಂ ಭಾರತಕ್ಕೆ ಸೇರಿದ್ದು ಎಂದು ಚೀನಾ ಮಾನ್ಯ ಮಾಡಿತು.

ಬಹಳ ಜನಪ್ರಿಯವಾಗಿದ್ದ ವಾಜಪೇಯಿ ಸರಕಾರ 2004ರ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲಪ್ಪಿತು. ಅದಾಗಿ ಒಂದು ವರ್ಷದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದರು. ಆ ಬಳಿಕ ಅವರ ಅನಾರೋಗ್ಯವೂ ಕೆಟ್ಟಿತು. 2009ರಲ್ಲಿ ಸ್ಟ್ರೋಕ್ ಆಗಿ ಅವರು ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಅವರ ಅಂತಿಮ ವರ್ಷಗಳು ಬಹುತೇಕ ಹಾಸಿಗೆಯಲ್ಲೇ ಕಳೆದುಹೋಗಿದ್ದವು.

ವಾಜಪೇಯಿ ನುಡಿಮುತ್ತುಗಳು

ವಾಜಪೇಯಿ ನುಡಿಮುತ್ತುಗಳು

* ನೀವು ಸ್ನೇಹಿತರನ್ನು ಬದಲಿಸಬಹುದು, ನೆರೆಹೊರೆಯವರನ್ನಲ್ಲ.
* ಭ್ರಾತೃತ್ವದಿಂದ ಸಮಸ್ಯೆ ಬಗೆಹರಿಸಬಹುದೇ ಹೊರತು ಗನ್‌ನಿಂದಲ್ಲ
* ಗೆಲುವು ಮತ್ತು ಸೋಲು ಜೀವನದ ಒಂದು ಭಾಗ. ಅವನ್ನು ಸಮಾನವಾಗಿ ನೋಡಬೇಕು.
* ಸರಕಾರಗಳು ಬರುತ್ತವೆ ಹೋಗುತ್ತವೆ. ರಾಜಕೀಯ ಪಕ್ಷಗಳು ಹುಟ್ಟುತ್ತವೆ, ಸಾಯುತ್ತವೆ, ಆದರೆ, ದೇಶ ಮಾತ್ರ ಉಳಿಯುತ್ತದೆ.
* ಸಾಮಾಜಿಕ ನ್ಯಾಯ ಇಲ್ಲದ ಸ್ವಾತಂತ್ರ್ಯ ಅಪೂರ್ಣ
* ನಮ್ಮ ಅಮೂಲ್ಯ ಸಂಪತ್ತನ್ನು ಅನಾವಶ್ಯಕವಾಗಿ ಯುದ್ಧಗಳಿಗೆ ಕಳೆದುಕೊಳ್ಳುತ್ತಿದ್ದೇವೆ. ನಾವು ಯುದ್ಧ ಮಾಡಬೇಕಿರುವುದು ನಿರುದ್ಯೋಗ, ಅನಾರೋಗ್ಯ, ಬಡತನದ ವಿರುದ್ಧ.
* ಭಾರತ ಜಾತ್ಯತೀತ ಅಲ್ಲದೇ ಇದ್ದರೆ ಭಾರತ ಭಾರತವೇ ಆಗಿರುವುದಿಲ್ಲ.
* ಗರೀಬಿ ಹಟಾವೋ ಸ್ಲೋಗನ್‌ನಿಂದ ಚುನಾವಣೆ ಗೆಲ್ಲುವುದು ಸುಲಭ. ಆದರೆ, ಘೋಷಣೆಗಳಿಂದ ಬಡತನ ಸೋಲಿಸಲು ಆಗುವುದಿಲ್ಲ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+