ಬಿಜೆಪಿ ಲೋಕ ದಿಗ್ವಿಜಯದ ಹಿಂದೆ ಅಮಿತ್ ಶಾ ಕುಸುರಿಗಾರಿಕೆ
ನವದೆಹಲಿ, ಮೇ 24 : ಭಾರತೀಯ ಜನತಾ ಪಕ್ಷದ ಐತಿಹಾಸಿಕ ದಿಗ್ವಿಜಯ ಶ್ರೇಯಸ್ಸು ನರೇಂದ್ರ ಮೋದಿ ಅವರೊಂದಿಗೆ, ಅವರ ಬಲಗೈ ಬಂಟನಂತಿರುವ, ಮೋದಿಯವರ ಎಲ್ಲ ಯೋಜನೆಗಳ ಹಿಂದಿರುವ ಶಕ್ತಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಸಲ್ಲುತ್ತದೆ.
ಈ ಚುನಾವಣೆಯಲ್ಲಿ ಮಾತ್ರವಲ್ಲ, 2014ರ ಲೋಕಸಭಾ ಚುನಾವಣೆ ಸೇರಿದಂತೆ, ದೇಶದಲ್ಲಿ ನಂತರ ನಡೆದ ಎಲ್ಲ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ್ದರೆ ಅದರ ಪಾಲುದಾರ ಅಮಿತ್ ಶಾ ಕೂಡ ಆಗುತ್ತಾರೆ.
ಅಭ್ಯರ್ಥಿಗಳನ್ನು ಸೆಳೆಯುವಲ್ಲಿ, ವಿರೋಧಿಗಳನ್ನು ಕಟ್ಟಿಹಾಕುವಲ್ಲಿ, ಕಾರ್ಯಕರ್ತರನ್ನು ಹುರಿದುಂಬಿಸುವಲ್ಲಿ, ಅಭ್ಯರ್ಥಿಗಳನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡುವಲ್ಲಿ, ಜಾತಿ ಮತಗಳನ್ನು ಸೆಳೆಯುವಲ್ಲಿ, ಮೈತ್ರಿ ಮಾಡಿಕೊಳ್ಳುವಲ್ಲಿ ಅವರು ತೋರುವ ಚಾಣಾಕ್ಷ ನಡೆಗಳೇ ಬಿಜೆಪಿಯನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿವೆ.
ಅವರು ಚುನಾವಣೆಯನ್ನು ಸೋಲಿಲ್ಲವೆಂದೇನಿಲ್ಲ. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಪಂಜಾಬ್ ಚುನಾವಣೆಗಳಲ್ಲಿ ಎಡವಿದ್ದಾರೆ. ಆದರೆ, ಮಾಡಿದ ತಪ್ಪನ್ನು ಹೇಗೆ ಮಾಡಬಾರದು, ಹಿಂದೆ ನಡೆದ ತಪ್ಪುಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂಬುದನ್ನು ಅವರು ಅರಿತಿದ್ದರಿಂದಲೇ 'ಚಾಣಕ್ಯ' ಬಿರುದು ಅವರಿಗೆ ದಕ್ಕಿದೆ.
ಚುನಾವಣೆಯನ್ನು ಗೆಲ್ಲುವ ಅವರ ಸಾಮರ್ಥ್ಯದಿಂದಾಗಿಯೇ, ಇಷ್ಟು ವರ್ಷಗಳ ಕಾಲ ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟ ಅಲಂಕರಿಸಿದ್ದ ಅವರನ್ನು ಬಳುವಳಿಯಾಗಿ ಕೇಂದ್ರ ಸಂಪುಟಕ್ಕೆ ನರೇಂದ್ರ ಮೋದಿಯವರು ಸೇರಿಸಿಕೊಂಡರೂ ಅಚ್ಚರಿಯಿಲ್ಲ. ಅವರ ಈ ಏರುಗತಿಯ ಬೆಳವಣಿಗೆಗೆ ಕಾರಣಗಳೇನಿರಬಹುದು ಎಂಬುದನ್ನು ಇಲ್ಲಿ ವ್ಯಾಖ್ಯಾನಿಸಲಾಗಿದೆ.

ಬಂಗಾಳದಲ್ಲಿ ದೀದಿಯನ್ನು ಕಟ್ಟಿದ ಹಾಕಿದ ಶಾ
ಅವರ ಚಾಣಾಕ್ಷತನಕ್ಕೆ ಉತ್ತಮ ಉದಾಹರಣೆಯೆಂದರೆ, ನರೇಂದ್ರ ಮೋದಿಯವರ ವಿರುದ್ಧ ಘರ್ಜಿಸುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿಯೇ ಹಿಮ್ಮೆಟ್ಟುವಂತೆ ಮಾಡಿರುವುದು. ರಾಜ್ಯಾದ್ಯಂತ ಅಮಿತ್ ಶಾ ಅವರು ತಮಗಾಗಿ ಮತ್ತು ನರೇಂದ್ರ ಮೋದಿಯವರಿಗಾಗಿ ಯಾವ ರೀತಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದ್ದರೆಂದರೆ, ದೀದಿ ಪತರಗುಟ್ಟಿ ಹೋದರು ಮತ್ತು ಹಲವಾರು ಸಭೆಗಳಿಗೆ ಅಡೆತಡೆಯುಂಟು ಮಾಡಲು ಯತ್ನಿಸಿದರು. ಒಂದು ಸಭೆಯ ನಂತರ ಸಾಕಷ್ಟು ಗಲಭೆಯೂ ಆಗಿರುವುದು ಎಲ್ಲರ ಕಣ್ಣ ಮುಂದೆಯೇ ಇದೆ. ಜೊತೆಗೆ, ಮಮತಾ ಬ್ಯಾನರ್ಜಿ ಅವರು ರಾಜ್ಯ ಬಿಟ್ಟು ಹೊರಹೋಗದಂತೆ ತಂತ್ರಗಾರಿಕೆ ರೂಪಿಸಿದ್ದರು. ಇದರ ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿ, ಕಳೆದ ಬಾರಿ ಎರಡು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 18 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಸಿಪಿಐಎಂ ಮಕಾಡೆ ಮಲಗಿದೆ.

ಬೆರಳ ತುದಿಯಲ್ಲಿ ಸಾಧನೆಯ ಅಂಕಿಅಂಶಗಳು
ವಿರೋಧ ಪಕ್ಷದವರು ನರೇಂದ್ರ ಮೋದಿ ಸರಕಾರ ಉದ್ಯೋಗ ಸೃಷ್ಟಿಸದ ಬಗ್ಗೆ, ರೈತರಿಗೆ ಮತ್ತು ಬಡವರನ್ನು ಕಡೆಗಣಿಸಲಾಗಿದೆ ಎಂದು ಚಕಾರವೆತ್ತಿದಾಗಲೆಲ್ಲ, ಸೂಕ್ತ ದಾಖಲೆಗಳನ್ನು, ಅಂಕಿಅಂಶಗಳನ್ನು ಹಿಡಿದುಕೊಂಡೇ ಅಮಿತ್ ಶಾ ಅವರು ನರೇಂದ್ರ ಮೋದಿ ಸರಕಾರದ ಸಾಧನೆಯನ್ನು ಜನರ ಮುಂದಿಟ್ಟಿದ್ದಾರೆ. ಇದರ ಜೊತೆಗೆ, ವಿರೋಧ ಪಕ್ಷಗಳು ಯಾವ ರೀತಿ ಸುಳ್ಳು ಹೇಳುತ್ತಿವೆ ಎಂದು ಮನವರಿಕೆ ಮಾಡಿಕೊಡುವ ತಾಕತ್ತು ಅವರ ಮಾತಲ್ಲಿದೆ. ಅವರಿಗೆ ಅಲ್ಪಸಂಖ್ಯಾತರನ್ನು ವೊಲಿಸಿಕೊಳ್ಳುವುದೂ ಗೊತ್ತು, ಮುಸ್ಲಿಂ ರಾಷ್ಟ್ರ ಪಾಕಿಸ್ತಾನಕ್ಕೆ ತಪರಾಕಿ ನೀಡುವುದೂ ಗೊತ್ತು. ಕೆಲಬಾರಿ ಅವರ ಮಾತು ಕೇಳಲು ಕಠಿಣವೆನಿಸಿದರೂ, ಹಲವಾರಿ ಹೌದಪ್ಪ ಎನ್ನುವಂತಿರುತ್ತದೆ.

ಒಂದು ವರ್ಷದಿಂದಲೇ ಕಾರ್ಯತಂತ್ರ
ಒಂದೊಂದೇ ರಾಜ್ಯಗಳನ್ನು ಕಬಳಿಸುವತ್ತ ದೃಷ್ಟಿ ನೆಟ್ಟಿದ್ದ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೆಲೆ ಕಾಣಿಸುವಲ್ಲಿ ಸೋತಿದ್ದರು. ಆದರೆ ಈ ಬಾರಿ ಕಳೆದೊಂದು ವರ್ಷದಿಂದಲೇ ತಮ್ಮ ಕಾರ್ಯತಂತ್ರ ರೂಪಿಸಲು ಆರಂಭಿಸಿದ್ದರು. ಮೊದಲು ಈಶಾನ್ಯ ರಾಜ್ಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಮೇಲೆ ಅವರು ನೇರವಾಗಿ ಕೈಹಾಕಿದ್ದು ದೀದಿಯ ರಾಜ್ಯದ ಮೇಲೆ. ಬಾಂಗ್ಲಾದೇಶದಿಂದ ವಲಸೆ ಬಂದಿವರಿಗೆ ನಾಗರಿಕ ಹಕ್ಕು ನೀಡುತ್ತೇನೆ ಎಂದು ಭರವಸೆ ನೀಡಿದ್ದಲ್ಲದೆ, ಸ್ಥಳೀಯ ಮುಸ್ಲಿಂ ಸಂಸ್ಥೆಗಳಿಗೆ ಹಣದ ಸಹಾಯ ನೀಡುತ್ತ ಪಶ್ಚಿಮ ಬಂಗಾಳವನ್ನು ಮತ್ತೊಂದು ಬಾಂಗ್ಲಾ ಮಾಡಲು ಹೊರಟಿದೆ ಎಂದು ಆರೋಪಿಸಿ ಅಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದರು.

ಸುಮಲತಾಗೆ ಬಿಜೆಪಿಯಿಂದ ಬೆಂಬಲ
ಕರ್ನಾಟಕದ ಮಂಡ್ಯದ ಚುನಾವಣೆಯ ಉದಾಹರಣೆಯನ್ನು ತೆಗೆದುಕೊಂಡರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರ ಗೆಲುವಿನ ಹಿಂದೆ ಕೂಡ ಅಮಿತ್ ಶಾ ಕೈವಾಡವಿದೆ. ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಮೂಲಕ ಸುಮಲತಾ ಜೊತೆ ಸಂಪರ್ಕ ಸಾಧಿಸಿದ ಅಮಿತ್ ಶಾ ಅವರು, ಬಿಜೆಪಿಯ ಬೆಂಬಲ ಸಂಪೂರ್ಣವಾಗಿ ಸುಮಲತಾ ಅವರಿಗೆ ಸಿಗುವಂತೆ ಮಾಡಿದ್ದರು. ಮತ್ತು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ನಿಲ್ಲದಂತೆ ತಡೆಹಿಡಿದಿದ್ದರು. ಇದರ ಫಲವಾಗಿ ಸುಮಲತಾ ಅವರು ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ವಿರುದ್ಧ 1 ಲಕ್ಷ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಇದರ ಜೊತೆಗೆ ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಪ್ಲಾನನ್ನೂ ಅವರು ರೂಪಿಸಿದ್ದಾರೆ.

ಗಾಂಧಿನಗರದಲ್ಲಿ ಶಾ ಬರೆದ ದಾಖಲೆ
ಇತ್ತೀಚಿನ ವರ್ಷಗಳಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಸ್ಪರ್ಧೆ ಅವರಿಗೆ ಹೊಸದೇನಲ್ಲ. ಗುಜರಾತ್ ನಲ್ಲಿ ಪಾಲಿಕೆ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆಗಳವರೆಗೆ ಅವರು 29 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ರಾಜ್ಯಸಭೆಗೂ ಗುಜರಾತ್ ನಿಂದ ಆಯ್ಕೆಯಾಗಿದ್ದರು. ಈ ಬಾರಿ, ಹಿಂದೆ ಎಲ್ ಕೆ ಅಡ್ವಾಣಿಯವರು ಪ್ರತಿನಿಧಿಸಿದ್ದ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಅಡ್ವಾಣಿಯವರು ಸ್ಥಾಪಿಸಿದ್ದ ದಾಖಲೆಯನ್ನೂ ಮುರಿದಿದ್ದಾರೆ.

ಅವರ ಮಾತಿಗೆ ಯಾರೂ ಚಕಾರವೆತ್ತುವಂತಿಲ್ಲ
ಒಂದು ಕಡೆ ನರೇಂದ್ರ ಮೋದಿಯವರು ತಮ್ಮ ಸಮರ್ಥ ಸಂಪುಟದೊಂದಿಗೆ ಸಮರ್ಥ ಆಡಳಿತವನ್ನು ನೀಡುತ್ತಿದ್ದರೆ, ಬಿಜೆಪಿ ಅಧ್ಯಕ್ಷರಾಗಿ ಪಕ್ಷದಲ್ಲಿರುವ ಯಾರೂ ಚಕಾರವೆತ್ತದಂತೆ ನಿಭಾಯಿಸುವ, ಚುನಾವಣೆ ಬಂದಾಗ ತಳಮಟ್ಟದ ಕಾರ್ಯಕರ್ತರೊಂದಿಗೆ ಬೆರೆತು ಅವರಿಂದ ಕೆಲಸ ತೆಗೆಯುವ ಚಾಣಾಕ್ಷತನ ಅವರಲ್ಲಿದೆ. ನಿಜವಾದ ಹೈಕಮಾಂಡ್ ಹೇಗಿರಬೇಕೆಂದು ಅವರು ತೋರಿಸಿಕೊಟ್ಟಿದ್ದಾರೆ. ಹಿಂದೆ ಹಲವಾರು ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟ ಅಲಂಕರಿಸಿದ್ದರೂ ಅಮಿತ್ ಶಾರಷ್ಟು ಯಶಸ್ಸು ಪಡೆಯಲು ಅವರಿಗೆ ಸಾಧ್ಯವಾಗಿಲ್ಲ.

ನರೇಂದ್ರ ಮೋದಿಯವರ ಉತ್ತರಾಧಿಕಾರಿ
ಅಮಿತ್ ಶಾ ಅವರನ್ನು ನರೇಂದ್ರ ಮೋದಿಯವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ. 68 ವಯಸ್ಸಿನವರಾದ ನರೇಂದ್ರ ಮೋದಿಯವರಿಗೆ ಬಹುಶಃ ಇದೇ ಕಡೆಯ ಲೋಕಸಭೆ ಚುನಾವಣೆ ಮತ್ತು ಪ್ರಧಾನಿಯಾಗಿ ಕಡೆಯ ಪ್ರಯತ್ನವೂ ಹೌದು. ಏಕೆಂದರೆ, ಮುಂದಿನ ಲೋಕಸಭೆ ಚುನಾವಣೆ ಬರುವ ಹೊತ್ತಿಗೆ ನರೇಂದ್ರ ಮೋದಿಯವರು ಹೆಚ್ಚೂಕಡಿಮೆ ನಿವೃತ್ತಿಯ ಹೊಸ್ತಿಲಲ್ಲಿ ಇರುತ್ತಾರೆ. ಈ ಕಾರಣದಿಂದಾಗಿಯೇ 54 ವರ್ಷದ ಅಮಿತ್ ಶಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು. ಆಡಳಿತದ ಅನುಭವ ಗಳಿಸುವ ಉದ್ದೇಶದಿಂದ ಅವರು ಈಬಾರಿ ಸಂಪುಟ ಸೇರುವುದು ಹೆಚ್ಚೂಕಡಿಮೆ ಖಚಿತವಾಗಿದೆ.

ಮೋದಿ ಯಶಸ್ಸಿನ ಹಿಂದೆ ಅಮಿತ್ ಶಾ
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ನರೇಂದ್ರ ಅವರ ಜನಪ್ರಿಯತೆ ಉತ್ತುಂಗಕ್ಕೇರಿದೆ. ನರೇಂದ್ರ ಮೋದಿಗಿರುವ ವರ್ಚಸ್ಸನ್ನು ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಏರಿಸುವಲ್ಲಿ ಅಮಿತ್ ಶಾ ಸಾಕಷ್ಟು ಶ್ರಮಿಸಿದ್ದಾರೆ. ಅಮಿತ್ ಶಾ ಅವರು ನರೇಂದ್ರ ಮೋದಿಯವರ ಸರಕಾರದ ಸಾಧನೆಯನ್ನು ಅಂಕಿಅಂಶಗಳ ಸಮೇತ ದೇಶದ ಮೂಲೆಮೂಲೆಗೂ ತಲುಪಿಸಿದ್ದಾರೆ. ಇಂಥ ಸಾಧನೆ ಮಾಡಲು ನರೇಂದ್ರ ಮೋದಿಯವರಿಂದ ಮಾತ್ರ ಮಾಡಲು ಸಾಧ್ಯ ಎಂದು ಮೋದಿ ಸಾಮರ್ಥ್ಯದ ಬಗ್ಗೆ ಹೋದಲ್ಲೆಲ್ಲ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರ ಪ್ರಯತ್ನದ ಫಲವಾಗಿಯೇ ಇದೀಗ ಬಿಜೆಪಿ ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿಯುವಂತಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications