ವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂ

"ವೈದ್ಯೋ ನಾರಾಯಣೋ ಹರಿಃ" -ಎಂಬ ಶ್ಲೋಕದ ಬಗ್ಗೆ ಎಲ್ಲರೂ ಕೇಳಿರುತ್ತಾರೆ.

ಶರೀರೇ ಜರ್ಝರೀಭೋತೇ
ವ್ಯಾಧಿಗ್ರಸ್ತೇ ಕಳೇಬರೇ
ಔಷಧಂ ಜಾಹ್ನವೀತೋಯಂ
ವೈದ್ಯೋ ನಾರಾಯಣೋ ಹರಿಃ

ಶರೀರವು ತೀವ್ರ ಕಾಯಿಲೆಯಿಂದ ಶವದಂತೆ ಕೃಶವಾಗಿ ಹೋದಾಗ, ಬೇರಾವ ಔಷಧಿಯೂ ಕೆಲಸ ಮಾಡದಿದ್ದಾಗ ಉಳಿದಿರುವ ಔಷಧ ಗಂಗಾಜಲವೊಂದೇ, ಯಾವ ವೈದ್ಯನೂ ಗುಣಪಡಿಸಲು ಸಾಧ್ಯವಿಲ್ಲದಿರುವಾಗ ಮುಕ್ತಿಯನ್ನು ಕೊಡಲು ಉಳಿದಿರುವ ಶ್ರೀಮನ್ನಾರಾಯಣನಾದ ಹರಿಯೆಂಬ ವೈದ್ಯನೊಬ್ಬನೇ.

ಇದು ಪೂರ್ಣ ಶ್ಲೋಕ ಮತ್ತು ಅದರ ಅರ್ಥ. ಪ್ರಪಂಚದ ಯಾವ ವೈದ್ಯನೂ ಇಲ್ಲಿಯವರೆಗೆ ತನ್ನನ್ನು ತಾನು ಭಗವಂತನೆಂದು ತಿಳಿದುಕೊಂಡಿಲ್ಲ, ಘೋಷಿಸಿಕೊಂಡಿಲ್ಲ.

ಆ ಶ್ಲೋಕದ ಅರ್ಥವೇನೇ ಇರಲಿ, ವೈದ್ಯರೆಂದರೆ ಹಲವರಿಗೆ ಸಾಕ್ಷಾತ್ ಹರಿಯೆಂಬ ಭಾವ. ತಮಗೇನಾದರೂ ವೈದ್ಯರು ಕಾಪಾಡೇ ಕಾಪಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಆಸ್ಪತ್ರೆಗೆ ಹೋಗಿರುತ್ತಾರೆ. ಇದೇ ರೀತಿ ರೋಗಿಗಳನ್ನು ಗುಣಪಡಿಸಬೇಕೆಂಬ ಇಚ್ಛೆಯೂ ವೈದ್ಯರಲ್ಲಿರುತ್ತದೆ.

ಆದರೆ, ಇಂದೇನಾಗಿದೆ? ಏನೋ ಎಡವಟ್ಟಾಗಿ ರೋಗಿಯ ಜೀವಕ್ಕೆ ಕುತ್ತು ಬಂದರೆ ವೈದ್ಯನ ಜೀವಕ್ಕೂ ಕುತ್ತು ಬಂದಂತೆಯೆ! ವೈದ್ಯನನ್ನು ಹಿಡಿದು ಬಡಿದು ಹಾಕುತ್ತಾರೆ, ಆಸ್ಪತ್ರೆಯನ್ನು ಧ್ವಂಸ ಮಾಡಲಾಗುತ್ತಿದೆ. ಸಾಲದೆಂಬಂತೆ, ಕರ್ನಾಟಕ ಸರಕಾರ ಕೂಡ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017' ಅನ್ನು ಜಾರಿಗೆ ತಂದು ವೈದ್ಯರನ್ನು ಕಟ್ಟಿಹಾಕಲು ಹವಣಿಸುತ್ತಿದೆ.

ಈ ಕಾಯ್ದೆಯ ವಿರುದ್ಧವೇ ವೈದ್ಯರೀಗ ಸಿಡಿದೆದ್ದಿರುವುದು. ನವೆಂಬರ್ 3ರಂದು ಒಂದು ದಿನದ ಮುಷ್ಕರವನ್ನೂ ವೈದ್ಯರು ಹೂಡಿದ್ದರು. ವೈದ್ಯರು ಮತ್ತು ಸರಕಾರದ ನಡುವಿನ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ವೈದ್ಯರು ಈ ಕಾಯ್ದೆಯ ವಿರುದ್ಧ ತಿರುಗಿಬಿದ್ದಿರುವುದೇಕೆ? ವಸ್ತುಸ್ಥಿತಿ ಏನಿದೆ? ವೈದ್ಯರು ಹೇಗೆ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬ ಬಗ್ಗೆ ಕಣ್ಣು ತೆರೆಸುವಂಥ ಲೇಖನ ಇಲ್ಲಿದೆ.

ಈ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಗೆ ವೈದ್ಯರ ವಿರೋಧ ಏಕೆ? ಇದಕ್ಕೆ ಹಲವಾರು ಕಾರಣಗಳಿವೆ.

ವೈದ್ಯಕೀಯ ದರಗಳನ್ನು ನಿರ್ಧರಿಸುವ ಸರಕಾರ

ವೈದ್ಯಕೀಯ ದರಗಳನ್ನು ನಿರ್ಧರಿಸುವ ಸರಕಾರ

1. ರಾಜ್ಯ ಸರಕಾರ ವೈದ್ಯಕೀಯ ದರಗಳನ್ನು ನಿರ್ಧರಿಸುತ್ತದೆ. ಉದಾಹರಣೆಗೆ ವೈದ್ಯರ ಒಂದು ಬಾರಿಯ ಸಲಹೆಗೆ ತಾಲೂಕುಗಳಲ್ಲಿ ರೂ.50, ಜಿಲ್ಲಾ ಕೇಂದ್ರಗಳಲ್ಲಿ ರೂ.100, ಮತ್ತು ಬೃಹನ್ನಗರ ಪಾಲಿಕೆಗಳಲ್ಲಿ ರೂ.150 ಮಾತ್ರ ಎಂಬ ಅಂದಾಜಿದೆ. ಅಪೆಂಡಿಕ್ಸ್ ಆಪರೇಷನ್ನಿಗೆ ರೂ.900 ಎಂಬ ಅಂದಾಜಿದೆ. ಇದು ಪ್ರತಿ ಕಿ.ಮೀ.ಗೆ ರೂ.13 ನಿಗದಿಪಡಿಸಿರುವ ಆಟೋ ಚಾಲನೆಗೆ ಇನ್ನು ಮುಂದೆ ಕಿ.ಮೀ.ಗೆ 25 ಪೈಸೆ ಮಾತ್ರ ನಿಗದಿಗೊಳಿಸಿದಂತೆ.

ರೋಗಿ ದೂರು ಕೊಟ್ಟರೆ ವೈದ್ಯರ ಗತಿ...

ರೋಗಿ ದೂರು ಕೊಟ್ಟರೆ ವೈದ್ಯರ ಗತಿ...

2. ಯಾರಾದರೂ ರೋಗಿ ವೈದ್ಯರು ಹೆಚ್ಚು ಹಣ ಕೇಳಿದರೆಂದು ಅಥವಾ ವೈದ್ಯರು ತನ್ನೊಂದಿಗೆ ಮಾತನಾಡಿಲ್ಲ ಎಂದು ದೂರು ಕೊಟ್ಟರೆ ವೈದ್ಯರಿಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸಬಹುದು. ಯಾರು ಯಾವ ಕಾರಣಕ್ಕೆ ದೂರು ಕೊಡುವರೋ, ಸುಳ್ಳು ದೂರು ಕೊಟ್ಟರೆ ಏನು ಮಾಡಬೇಕೋ ಎಂಬ ಭಯದಲ್ಲಿಯೇ ವೈದ್ಯರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲದೆ ಈ ದೂರುಗಳಿಗೆ ಉತ್ತರಿಸಲು ವೈದ್ಯರು ವಕೀಲರನ್ನು ನಿಯಮಿಸಿಕೊಳ್ಳುವಂತಿಲ್ಲ, ಖುದ್ದಾಗಿ ಪ್ರಾಧಿಕಾರದ ಮುಂದೆ ಹಾಜರಾಗಬೇಕು.

ನಿಯಂತ್ರಣ ಪ್ರಾಧಿಕಾರದ ವ್ಯವಸ್ಥೆ ನೋಡಿ

ನಿಯಂತ್ರಣ ಪ್ರಾಧಿಕಾರದ ವ್ಯವಸ್ಥೆ ನೋಡಿ

3. ಈ ನಿಯಂತ್ರಣ ಪ್ರಾಧಿಕಾರದ ವ್ಯವಸ್ಥೆ ನೋಡಿ - ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು, ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾಧಿಕಾರಿ, ಒಬ್ಬ ಆಯುರ್ವೇದ ವೈದ್ಯ. ಇವರ ಮುಂದೆ ಪ್ರತಿ ದೂರಿಗೂ ದಿನದ ಕೆಲಸವೆಲ್ಲ ಬದಿಗಿಟ್ಟು ಎಲ್ಲರೂ ಸೇರುವವರೆಗೂ ಕಾದು ಉತ್ತರಿಸಬೇಕು. ಒಂದು ದಿನ ಮುಷ್ಕರಕ್ಕೇ ರೋಗಿಗಳಿಗೆ ಕಷ್ಟ ಎನ್ನುವ ಜನ ಪ್ರತಿ ದೂರಿಗೂ ಕರ್ತವ್ಯ ಬಿಟ್ಟು ಹೋದಾಗ ರೋಗಿಗಳಿಗೆ ಆಗುವ ತೊಂದರೆ ಏನೆಂದು ತಿಳಿದಾರೇ?

ಹಫ್ತಾ ಪದ್ಧತಿಗೆ ನಾಂದಿಯಾಗಬಹುದು

ಹಫ್ತಾ ಪದ್ಧತಿಗೆ ನಾಂದಿಯಾಗಬಹುದು

4. ಪ್ರಾಧಿಕಾರದಲ್ಲಿರುವ ವ್ಯಕ್ತಿಗಳು ಯಾವ ಕ್ಷಣ ಬೇಕಿದ್ದರೂ ಖಾಸಗಿ ಆಸ್ಪತ್ರೆ/ಕ್ಲಿನಿಕ್ಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಇದು ಹಫ್ತಾ ಪದ್ಧತಿಗೆ ನಾಂದಿಯಾಗಬಹುದು.

ಭ್ರಷ್ಟಾಚಾರಕ್ಕೆ ಮತ್ತೊಂದು ಹಾದಿ ಖಚಿತ

ಭ್ರಷ್ಟಾಚಾರಕ್ಕೆ ಮತ್ತೊಂದು ಹಾದಿ ಖಚಿತ

5. ಇದರೊಟ್ಟಿಗೆ ಸರಕಾರ ಎಲ್ಲರಿಗೂ ಆರೋಗ್ಯ ಚೀಟಿ ವಿತರಿಸುವುದಾಗಿ ತಿಳಿಸಿದೆ. ರೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಲವು ದಿನಗಳ ನಂತರ ಸರಕಾರ ಚಿಕಿತ್ಸಾ ವಿವರ ಪರಿಶೀಲಿಸಿ ಆಸ್ಪತ್ರೆಗೆ ಹಣ ನೀಡುವ ವ್ಯವಸ್ಥೆ ತರಬೇಕೆಂದಿದೆ. ಇದು ಸರಕಾರದ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮತ್ತೊಂದು ಹಾದಿಯಾಗುವುದು ಖಚಿತ. ಒಂದು ವೇಳೆ ಸರಕಾರ ದುಡ್ಡು ಕೊಡದಿದ್ದಲ್ಲಿ ಆಸ್ಪತ್ರೆಗೆ ಆಗುವ ನಷ್ಟಕ್ಕೆ ಪಾರವೂ ಇಲ್ಲ, ಪರಿಹಾರವೂ ಇಲ್ಲ.

ಚಿಕ್ಕ ಆಸ್ಪತ್ರೆಗಳಿಗೆ ಈ ಕಾಯ್ದೆ ಮರಣಶಾಸನ

ಚಿಕ್ಕ ಆಸ್ಪತ್ರೆಗಳಿಗೆ ಈ ಕಾಯ್ದೆ ಮರಣಶಾಸನ

ಒಟ್ಟಿನಲ್ಲಿ ಚಿಕ್ಕ ಆಸ್ಪತ್ರೆಗಳಿಗೆ ಈ ಕಾಯ್ದೆ ಮರಣಶಾಸನ. ಇದೇ ಕಾರಣಕ್ಕೆ ಬಂಗಾಳದಲ್ಲೀಗ ವೈದ್ಯಕೀಯ ವ್ಯವಸ್ಥೆ ಕುಸಿದಿದೆ. ಬಹಳಷ್ಟು ವೈದ್ಯರು ವೃತ್ತಿ ತೊರೆಯುವ ಮನಸ್ಸು ಮಾಡುತ್ತಿದ್ದಾರೆ. ಒಮ್ಮೆ ಬೆಂಗಳೂರಿನ ನಿಮ್ಹಾನ್ಸ್, ವಿಕ್ಟೋರಿಯಾ, ವೈದೇಹಿ ಮುಂತಾದ ಆಸ್ಪತ್ರೆಗಳಲ್ಲಿ ಹೋಗಿ ಪರಿಶೀಲಿಸಿ. ಕನಿಷ್ಠ 25-30% ರೋಗಿಗಳು ಬಂಗಾಲಿಗಳಿರುತ್ತಾರೆ. ಈಗ ನಮ್ಮ ರಾಜ್ಯದಲ್ಲಿ ಮಾಡಹೊರಟಿರುವ ಕಾನೂನು ಬಂಗಾಳದಲ್ಲಿ ಜಾರಿಯಾಗಿರುವ ಕಾನೂನಿನ ನಕಲು ಮಾತ್ರವೇ. ಬಂಗಾಲಿಗಳು ಬಂಗಾಳದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಏಕೆ ಹಿಂಜರಿಯುತ್ತಿದ್ದಾರೆ ಎಂಬುದನ್ನೂ ವಿಚಾರ ಮಾಡಿ.

ಒಬ್ಬ ವ್ಯಕ್ತಿ ವೈದ್ಯನಾಗಬೇಕಾದಲ್ಲಿ ಏನೆಲ್ಲ ಆಗಬೇಕು?

ಒಬ್ಬ ವ್ಯಕ್ತಿ ವೈದ್ಯನಾಗಬೇಕಾದಲ್ಲಿ ಏನೆಲ್ಲ ಆಗಬೇಕು?

ನಮ್ಮ ದೇಶದ ವೈದ್ಯಕೀಯ ಸೇವೆಯ ಸುಧಾರಣೆಗೆ ಭಾರತದ ಪ್ರತಿ ಜಿಲ್ಲೆಗೆ ರೂ. 5000 ಕೋಟಿಗಳ ವೈದ್ಯಕೀಯ ಬಂಡವಾಳ, ರೂ. 200 ಕೋಟಿಗಳ ಮಾಸಿಕ ನಿರ್ವಹಣಾ ವೆಚ್ಚದ ಅವಶ್ಯಕತೆ ಇದೆ. ಯಾವ ಸರಕಾರವೂ ವೈದ್ಯಕೀಯ ಕ್ಷೇತ್ರಕ್ಕೆ ಇಷ್ಟು ದ್ರವ್ಯ ವ್ಯಯಿಸಲು ಸಿದ್ಧವಿಲ್ಲ. ಈ ಕೊರತೆಯನ್ನು ನೀಗಿಸಲು ರೋಗಿಗಳಿಂದ ಹಣ ವಸೂಲಿ ಮಾಡಬೇಕಾದ ಅನಿವಾರ್ಯತೆ ಖಾಸಗಿ ವೈದ್ಯಕೀಯ ಸಂಸ್ಥೆಗಳದ್ದು.


ನಿಜ. ನಮ್ಮ ದೇಶದಲ್ಲಿ ವೈದ್ಯಕೀಯ ಸೇವೆ ಹದಗೆಟ್ಟಿದೆ. ಇದಕ್ಕೆ ಕಾರಣಗಳು:

* ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಉಚಿತವಾಗಿ ಪಡೆಯಬೇಕೆಂಬ ಜನರ ಭ್ರಮೆ.

* ಆರೋಗ್ಯ ಸೇವೆಯನ್ನು ಕಾಲಕ್ಕನುಗುಣವಾಗಿ ಮೇಲ್ದರ್ಜೆಗೇರಿಸದ ಸರ್ಕಾರದ ನಿರ್ಲಕ್ಷ್ಯತೆ.

* ವೈದ್ಯಕೀಯ ಸೇವೆಯನ್ನು ವ್ಯಾಪಾರವನ್ನಾಗಿ ಪರಿಗಣಿಸಿ ಗ್ರಾಹಕ ಸೇವಾ ಕಾಯ್ದೆಯಲ್ಲಿ ಸೇರಿಸಿದ್ದು.

* ವೈದ್ಯಕೀಯ ವಿದ್ಯಾಲಯಗಳ ವ್ಯಾಪಾರೀಕರಣ.

* ಸುದೀರ್ಘ ಅಧ್ಯಯನ ಮಾಡುವ ವೈದ್ಯರಿಗೆ ಅತಿ ಕಡಿಮೆ ಸಂಬಳ ನಿಗದಿಪಡಿಸಿರುವುದು.

* ಶುದ್ಧ ನೀರಿನ ಅಭಾವ.

* ಆರೋಗ್ಯ ಸಂಸ್ಥೆಗಳನ್ನು ವೈದ್ಯರ ಮೇಲ್ವಿಚಾರಣೆಯಿಂದ ಆಡಳಿತವರ್ಗಕ್ಕೆ ಹಸ್ತಾಂತರಿಸಿದ್ದು.

* ಆಸ್ಪತ್ರೆಗಳನ್ನು ವಿಭಾಗಿಸಿರುವುದು: ನರರೋಗ-ನಿಮ್ಹಾನ್ಸ್, ಹೃದ್ರೋಗ-ಜಯದೇವ ಇತ್ಯಾದಿ.

* ಎಲ್ಲ ರೋಗಗಳೂ ಆಸ್ಪತ್ರೆಗೆ ಬಂದ ಕೂಡಲೇ ಮಾಯವಾಗಬೇಕೆಂಬ ತುರಾತುರಿ.

* ಯಾವ ರೋಗವಿದ್ದರೂ ಯಾವುದೇ ಹಂತದಲ್ಲಿದ್ದರೂ ಯಾವುದೇ ವಯೋಮಾನದಲ್ಲಿದ್ದರೂ ಪೂರ್ಣ ಗುಣವಾಗಲೇಬೇಕು ಎಂಬ ಅಸಂಬದ್ಧ ನಿರೀಕ್ಷೆ.

* ಆಸ್ಪತ್ರೆಯಲ್ಲಿ ರೋಗಿಗೆ ಯಾವುದೇ ತೊಂದರೆಯಾದರೂ ಅಥವಾ ಮೃತರಾದರೂ ವೈದ್ಯರೇ ಕಾರಣವೆಂಬ ಮನಃಸ್ಥಿತಿ.

* ವೈದ್ಯರನ್ನು ಕೀಳಾಗಿ ತೋರಿದರೆ ಟಿ ಆರ್ ಪಿ ದೊರೆಯುವುದೆಂಬ ಮಾಧ್ಯಮಗಳ ಭ್ರಾಂತಿ.

* ಸರಕಾರ ತನ್ನ ಈ ಅಸಹಾಯಕತೆ ಮತ್ತು ನಿರ್ಲಕ್ಷ್ಯ ಮುಚ್ಚಿಕೊಳ್ಳಲು ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ದರ ನಿಗದಿಪಡಿಸಲು ಮುಂದಾಗಿದೆ ಮತ್ತು ಆ ಮೂಲಕ ವೈದ್ಯಕೀಯ ಸೇವೆಗಳು ಇನ್ನಷ್ಟು ಹದಗೆಡಲು ಕಾರಣವಾಗುತ್ತಿದೆ.

* ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಹೆಚ್ಚು ಎನ್ನುವವರಿಗೆ ಒಂದು ಸವಾಲು- ತಾವೇ ಸ್ವತಃ ಒಂದು ವಿಶ್ವದರ್ಜೆಯ ಆಸ್ಪತ್ರೆ ಪ್ರಾರಂಭಿಸಿ ತಾವು ಈಗ ಅಪೇಕ್ಷೆ ಪಡುತ್ತಿರುವ ದರಕ್ಕೆ ಚಿಕಿತ್ಸೆ ನೀಡಿ.

* ಬೆಂಗಳೂರಿನಲ್ಲಿ ಮಾಗಡಿ ರಸ್ತೆಯ ಕುಷ್ಠರೋಗದ ಆಸ್ಪತ್ರೆಯ ನೂರು ಎಕರೆ, ಇಂದಿರಾನಗರದ ಐಸೋಲೇಷನ್ ಆಸ್ಪತ್ರೆಯ ನೂರು ಎಕರೆ ಜಾಗವಿತ್ತು. ಅದರಲ್ಲಿ ಮುವತ್ತು ನಲವತ್ತು ಎಕರೆ ಈಗಾಗಲೇ ರಾಜಕಾರಣಿಗಳು ನುಂಗಿಯೂ ಆಗಿದೆಯಂತೆ.

* ಮಿಕ್ಕ ಭೂಮಿಯಲ್ಲಾದರೂ ಸರಕಾರೀ ಆಸ್ಪತ್ರೆ ಕಟ್ಟಿದರೆ ಖಾಸಗಿ ಆಸ್ಪತ್ರೆಗೆ ಯಾರೂ ಹೋಗುವುದಿಲ್ಲ. ಆದರೆ ಸರಕಾರ ಆಸ್ಪತ್ರೆ ಏಕೆ ಕಟ್ಟುವುದಿಲ್ಲ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+