ಸೈಟು, ರಾಜಕಾರಣಿಗಳೊಂದಿಗೆ ಫೈಟು : ಪ್ರಕಾಶ್ ರೈ ಸಂದರ್ಶನ
Recommended Video

"ನನ್ನ ಹೋರಾಟ ಕೋಮುವಾದದ ವಿರುದ್ಧ. ಮುಂದಿನ ಚುನಾವಣೆಯಲ್ಲಿ ಕೋಮು ರಾಜಕೀಯ ಗೆಲ್ಲಬಾರದು. ಅನಂತ ಕುಮಾರ ಹೆಗಡೆ, ಪ್ರತಾಪ್ ಸಿಂಹ, ಅಮಿತ್ ಶಾ ಇವರ ವಿರುದ್ಧವೇ ನನ್ನ ಹೋರಾಟ. ನಾವು ಆಯ್ಕೆ ಮಾಡುವಷ್ಟು ಅರ್ಹತೆ ಇವರಿಗಿಲ್ಲ" ಎಂದು ಬಹುಭಾಷಾ ನಟ- ನಿರ್ಮಾಪಕ ಪ್ರಕಾಶ್ ರೈ ಒನ್ಇಂಡಿಯಾ ಕನ್ನಡದ ಸಂದರ್ಶನದಲ್ಲಿ ಕಿಡಿ ಕಾರಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಸರಕಾರವನ್ನು ಟೀಕಿಸುವ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರದಿಂದ ಎಚ್ಎಸ್ಆರ್ ಲೇಔಟ್ ನಲ್ಲಿ ಸೈಟ್ ಪಡೆದುಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹರಿಬಿಡಲಾಗಿದೆ. ಇದು ನಿಜವೇ ಎಂಬುದು ಸೇರಿದಂತೆ ಉದಯವಾಣಿಯಲ್ಲಿ ಅವರ ಅಂಕಣವನ್ನು ದಿಢೀರ್ ನಿಲ್ಲಿಸಲು ಕಾರಣವೇನು ಎಂಬ ಪ್ರಶ್ನೆ ಮಾಡಲಾಯಿತು.
"ನನ್ನ ಪ್ರಶ್ನೆಗೆ ಉತ್ತರಿಸುವ ತಾಕತ್ತು ಇಲ್ಲದವರು ಇವನು ಇಂಥ ಪಕ್ಷದಿಂದ ಹಣ ಪಡೆದಿದ್ದಾನೆ, ಇಂಥ ಜಾತಿಯವನು, ಇಂಥ ಧರ್ಮದವನು, ಹಿಂದೂ ವಿರೋಧಿ ಹೀಗೆ ನಾನಾ ಆರೋಪಗಳನ್ನು ಮಾಡುತ್ತಾರೆ. ಏನಾದರೂ ಆರೋಪ ಮಾಡಿಕೊಳ್ಳಲಿ. ಅದಕ್ಕೂ ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು ಅಲ್ಲವಾ?" ಎಂದು ಪ್ರಶ್ನಿಸುತ್ತಾರೆ.
ಪ್ರಕಾಶ್ ರೈ ಜತೆಗಿನ ಒನ್ಇಂಡಿಯಾ ಕನ್ನಡದ ಪ್ರಶ್ನೋತ್ತರಗಳಿಗಾಗಿ ಮುಂದೆ ಓದಿ.

ಪ್ರಶ್ನೆ: ಕರ್ನಾಟಕ ರಾಜ್ಯ ಸರಕಾರದಿಂದ ಎಚ್ಎಸ್ಆರ್ ಲೇಔಟ್ ನಲ್ಲಿ ಸೈಟ್ ಪಡೆದಿದ್ದೀರಂತೆ?
ಪ್ರಕಾಶ್ ರೈ: ಐದು ಭಾಷೆಗಳ, ಮುನ್ನೂರು ಸಿನಿಮಾಗಳಲ್ಲಿ ನಟಿಸಿರುವ ನಟ ನಾನು. ಹಲವು ಸಿನಿಮಾಗಳನ್ನು ನಿರ್ಮಿಸಿದ್ದೀನಿ. ನಾಲ್ಕು ರಾಜ್ಯಗಳಲ್ಲಿ ನನಗೆ ಸ್ವಂತ ಮನೆ ಇದೆ. ನನ್ನ ಬಳಿ ಎಷ್ಟು ಎಕರೆ ಜಮೀನಿದೆ ಎಂಬುದು ಇಂಥ ಆರೋಪ ಮಾಡುವ ಭಿಕಾರಿಗಳಿಗೆ ಗೊತ್ತಿದೆಯಾ?
ಜುಜುಬಿ ಒಂದು ಸೈಟ್ ಗಾಗಿ ನನ್ನ ರಾಜಕೀಯ ಆಲೋಚನೆಗಳನ್ನು ಬಳಸಿಕೊಳ್ಳುವ ಅಗತ್ಯ ನನಗಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತಿಲ್ಲದೆ ತಮ್ಮ ಹುಳುಕನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯ ಚಾರಿತ್ರ್ಯ ಹರಣಕ್ಕೆ ಮುಂದಾಗುತ್ತಾರೆ. ಇಂಥ ಸುಳ್ಳು ಸುದ್ದಿ ಹಬ್ಬಿಸುವವರಿಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲದೆ ದ್ವೇಷ ಕಾರಿಕೊಳ್ಳುತ್ತಿದ್ದಾರೆ.

ಪ್ರಶ್ನೆ: ನಿಮ್ಮ ಮೇಲಿನ ಟೀಕೆಯನ್ನು ಕೇಳಿ ಹತಾಶೆಯಿಂದ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದರಾ? ಆ ನೋಟಿಸ್ ಏನಾಯಿತು?
ಪ್ರಕಾಶ್ ರೈ: ಯಾರಾದರೂ ಏನಾದರೂ ಮಾತನಾಡಬಹುದು ಅಂತಾಗಿ ಬಿಟ್ಟರೆ ಹೇಗೆ? ನಾನು ನೋಟಿಸ್ ಕೊಟ್ಟಿರುವುದು ಹತಾಶೆಯಿಂದಲ್ಲ. ಇದು ನನ್ನ ಜವಾಬ್ದಾರಿ. ದೇಶಕ್ಕಾಗಿ ನಾನು ಮಾಡಬೇಕಾದ ಕರ್ತವ್ಯ. ನೋಟಿಸ್ ತೆಗೆದುಕೊಳ್ಳುವುದಕ್ಕೆ ತಲೆ ತಪ್ಪಿಸಿಕೊಂಡು ಓಡಾಡುವುದಲ್ಲ. ಮುಂದಿನ ಕಾನೂನು ಕ್ರಮಕ್ಕೆ ಈಗಾಗಲೇ ಮುಂದಾಗಿದ್ದೀನಿ.
ಇವತ್ತಿನ ದಿನ ಈ ದೇಶದ ಅಮಾಯಕ ಹೆಣ್ಣುಮಕ್ಕಳು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಇಂಥ ಶೋಷಣೆ ಅನುಭವಿಸುತ್ತಿದ್ದಾರೆ. ಹೀಗೆ ಮಾಡಿದರೆ ಏನಾಗುತ್ತದೆ ಎಂಬುದನ್ನು ನಾನು ತೋರಿಸಿಕೊಡಲು ಮುಂದಾಗಿದ್ದೀನಿ. ಒಬ್ಬ ಸಂಸದನಾಗಿ ಹೇಗಾದರೂ ನಡೆದುಕೊಳ್ಳಬಹುದು, ಮಾತನಾಡಬಹುದು ಎಂದುಕೊಂಡಿರುವ ವ್ಯಕ್ತಿಗೆ ಅದು ತಪ್ಪು ಅಂತ ತಿಳಿಸಿಕೊಡಬೇಕು.

ಪ್ರಶ್ನೆ: ನೀವು ಎಡಪಂಥೀಯರೋ ಅಥವಾ ಬಲಪಂಥೀಯರೋ?
ಪ್ರಕಾಶ್ ರೈ: ನಾನೊಬ್ಬ ಮನುಷ್ಯ. ಮಾನವೀಯ ಗುಣಗಳಿರುವ ವ್ಯಕ್ತಿ. ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದವರು ನನ್ನನ್ನು ಬ್ರ್ಯಾಂಡ್ ಮಾಡಬೇಕಿದೆ. ನಾನು ಹಿಂದೂಗಳ ವಿರುದ್ಧ ಅಲ್ಲ. ಅವರಂತೆ ಮತಾಂಧನೂ ಅಲ್ಲ. ನನ್ನ ಹೆಂಡತಿ ಹಿಂದೂ, ತಾಯಿ ಕ್ರಿಶ್ಚಿಯನ್, ತಂದೆ ಹಿಂದೂ. ಇನ್ನು ನನ್ನದೇ ಸಿದ್ಧಾಂತಗಳಿದ್ದರೂ ನನ್ನ ಹೆಂಡತಿ ಕೊಲ್ಲೂರಿಗೆ ಕರೆದಾಗ ಜತೆಗೆ ಹೋಗಿಬಂದಿದ್ದೀನಿ.
ನನ್ನ ತಾಯಿ ಚರ್ಚ್ ಗೆ ಕರೆದರೆ ಅವರ ಜತೆಗೆ ಹೋಗ್ತೀನಿ. ಯಾರದೇ ಧರ್ಮ- ನಂಬಿಕೆಯನ್ನು ಗೌರವಿಸ್ತೀನಿ. ಆದರೆ ಇವರಿದ್ದಾರಲ್ಲಾ, ರಾಜಕೀಯ ಕುರ್ಚಿಗಳನ್ನು ಉಳಿಸಿಕೊಳ್ಳಲು ಧರ್ಮಗುರುಗಳಾದರೂ ಆಗ್ತಾರೆ, ದೇಶಪ್ರೇಮಿಗಳಾದರೂ ಆಗ್ತಾರೆ. ಧರ್ಮ ಅನ್ನೋದು ಪರ್ಸನಲ್ ಆಗಿರಬೇಕು. ಅದನ್ನು ಬೀದಿಗೆ ತರಬಾರದು. ಎಲ್ಲಕ್ಕಿಂತ ಶ್ರೇಷ್ಠವಾದದ್ದು ಮನುಷ್ಯತ್ವ.

ಪ್ರಶ್ನೆ: ಬೆಂಗಳೂರಿನಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದ ನೀವು ಯೋಗಿ ಆದಿತ್ಯನಾಥ್ ಬಗ್ಗೆ ಮಾತನಾಡಿದ ಹಿನ್ನೆಲೆ ಏನು?
ಪ್ರಕಾಶ್ ರೈ: ನಾನು ಹಾಗೂ ಮಹೇಶ್ ಬಾಬು ಲಖನೌನಲ್ಲಿ ಸಿನಿಮಾದ ಶೂಟಿಂಗ್ ನಲ್ಲಿದ್ದಿವಿ. ಆಗ ಅಲ್ಲಿನ ಮುಖ್ಯಮಂತ್ರಿ ಅನಿಸಿಕೊಂಡ ಮನುಷ್ಯ ಪೂಜೆ ಮಾಡಿಕೊಂಡು ಓಡಾಡ್ತಾ ಇದ್ದಾನೆ. ಗೋ ಸಫಾರಿ ಅಂತೆ. ಅದಕ್ಕೆ ಏನು ಹೇಳೋಣ? ಇದು ಮತಾಂಧತೆ ಅಲ್ಲವಾ? ಒಂದು ಧರ್ಮದವರು ನಮಗೆ ಮತ ಹಾಕೋದೇ ಬೇಡ ಅನ್ನೋರು ಕೂಡ ನಮ್ಮ ಮಧ್ಯೆ ಇದ್ದಾರೆ.
ಮುಖ್ಯಮಂತ್ರಿ ಆದ ವ್ಯಕ್ತಿ ತನ್ನ ಮನೆಯಲ್ಲಿ ಪೂಜೆ ಮಾಡಬಾರದು ಅಂತ ಹೇಳುವಷ್ಟು ಮೂರ್ಖತನ ನನಗಿಲ್ಲ. ಆದರೆ ಅಂಥ ಜವಾಬ್ದಾರಿ ಸ್ಥಾನದಲ್ಲಿ ಕೂತು ಪೂಜಾರಿ ಥರ ದಿನಗಟ್ಟಲೆ ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಾ ಇದ್ದುಬಿಟ್ಟರೆ ರಾಜ್ಯದ ಗತಿ ಏನು? ಆ ಹಿನ್ನೆಲೆಯಲ್ಲಿ ಆದಿತ್ಯನಾಥ್ ಬಗ್ಗೆ ಮಾತನಾಡಿದ್ದೆ.

ಪ್ರಶ್ನೆ: ಈಚೆಗೆ ಮುಂಚಿಗಿಂತ ಹೆಚ್ಚು ಕರ್ನಾಟಕದ ಜತೆಗೆ ನಂಟು ಬೆಳೆಯುತ್ತಿರುವಂತಿದೆಯಲ್ಲಾ?
ಪ್ರಕಾಶ್ ರೈ: ನನಗೆ ಹಿಂದಿನಿಂದಲೂ ಕರ್ನಾಟಕ- ಕನ್ನಡ, ಇಲ್ಲಿನ ಜನರ ಬಗ್ಗೆ ಅಪಾರ ಪ್ರೀತಿ ಇದ್ದೇ ಇದೆ. ಈಚೆಗಿನ ಘಟನೆಗಳಿಂದ ಇಲ್ಲಿನ ಜನರು ನನ್ನನ್ನು ಅದೆಷ್ಟು ಪ್ರೀತಿ ಮಾಡುತ್ತಾರೆ ಅಂತ ಗೊತ್ತಾಯಿತು. ನನ್ನ ಬಗ್ಗೆ ಯಾರು- ಎಷ್ಟೇ ಅಸಭ್ಯ- ಅಸಹ್ಯವಾಗಿ ಮಾತನಾಡಿದರೂ ಅವರನ್ನು ಬ್ಲಾಕ್ ಮಾಡಲ್ಲ. ನನ್ನನ್ನು ಮಹಾನ್ ನಟ ಅನ್ನುತ್ತಿದ್ದವರೇ ನಿನಗೆ ನಟನೆ ಬರುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.
ಇವರು ಆಡುವ ಮಾತನ್ನೆಲ್ಲ ಸೂಕ್ಷ್ಮ ಮನಸ್ಸಿನ ಹೆಣ್ಣುಮಕ್ಕಳು, ಹಿರಿಯರು ಗಮನಿಸುತ್ತಿದ್ದಾರೆ. ನಾನು ಏನಂದೆ, ಕುಂಬಳಕಾಯಿ ಕಳ್ಳ ಅಂತ ಹೇಳಿದ್ದೀನಿ. ಯಾರು ಕಳ್ಳರೋ ಅವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ.

ಪ್ರಶ್ನೆ: ಕೋಟ ಶಿವರಾಮ ಕಾರಂತ ಪ್ರಶಸ್ತಿ ವಿತರಣೆ ದಿನ ಕ್ಷಮೆ ಕೇಳಿದರಂತಲ್ಲಾ?
ಪ್ರಕಾಶ್ ರೈ: ಹೌದು, ಕ್ಷಮೆ ಕೇಳಿದೆ. ಆ ಪ್ರಶಸ್ತಿಯನ್ನು ಪ್ರೀತಿಯಿಂದ ನನಗೆ ನೀಡಿದ ಕಾರಣಕ್ಕೆ ಎಷ್ಟೆಲ್ಲ ಕಷ್ಟಗಳನ್ನು ಆಯೋಜಕರು ಎದುರಿಸಬೇಕಾಯಿತಲ್ಲಾ, ಆದ್ದರಿಂದ ಕ್ಷಮೆ ಕೇಳಿದೆ. ಅದು ನನ್ನ ಸಂಸ್ಕೃತಿ, ಸಂಸ್ಕಾರ ಹಾಗೂ ಪ್ರೀತಿ. ಆಗಿನ ಎಲ್ಲ ವಿರೋಧ, ಆಕ್ಷೇಪಗಳನ್ನು ಎದುರಿಸಿಯೂ ಆ ಪ್ರಶಸ್ತಿ ನನಗೇ ಕೊಡಬೇಕು ಅಂದುಕೊಂಡರಲ್ಲಾ, ನನ್ನ ಸಲುವಾಗಿ ಏನೆಲ್ಲ ಅಸಹ್ಯ ಎದುರಿಸಿದರಲ್ಲಾ ಅದಕ್ಕಾಗಿ ಕ್ಷಮೆ ಕೇಳಿದೆ.

ಪ್ರಶ್ನೆ: ಹೀಗೆ ಮಾಡಿದರೆ ನಾನು ರಾಜಕೀಯಕ್ಕೆ ಬಂದುಬಿಡ್ತೀನಿ ಅಂದಿದ್ದೀರಾ?
ಪ್ರಕಾಶ್ ರೈ: ಮೊದಲಿಗೆ ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ನನ್ನ ಮುಖ್ಯವಾದ ಬಲ ಜನರು. ನನ್ನ ಕಾಳಜಿ ಇರೋದು ಯಾರನ್ನು ಆರಿಸಬೇಕು ಎಂಬ ಬಗ್ಗೆ. ನನ್ನನ್ನು ಕೊಲ್ಲಬಯಸುವ, ತುಳಿಯುವವರ, ಹೆದರಿಸುವವರ ವಿರುದ್ಧದ ಹೋರಾಟ ನನ್ನದು. ನಾನು ಯಾರು ಗೆಲ್ಲಬೇಕು ಅಂತ ಹೇಳುವುದಕ್ಕೆ ಹೊರಟಿಲ್ಲ. ಆದರೆ ಯಾರನ್ನು ನಾವು ಸೋಲಿಸಬೇಕು ಅಂತ ಹೇಳುತ್ತೇನೆ.
ಬಿಜೆಪಿ ಗೆಲ್ಲಬಾರದು. ಕೋಮುವಾದ ರಾಜಕೀಯ ಗೆಲ್ಲಬಾರದು. ಅನಂತಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಇಂಥವರ ವಿರುದ್ಧವೇ ನನ್ನ ಹೋರಾಟ. ನಾನು ಪ್ರಶ್ನೆ ಕೇಳಿದರೆ, ನೀನ್ಯಾಕೆ ಸಿದ್ದರಾಮಯ್ಯನ ಕೇಳಲ್ಲ? ನೀನು ಸಿಪಿಎಂ, ಕಾಂಗ್ರೆಸ್ ಪಕ್ಷದವನು ಅನ್ನೋದು. ಟಾರ್ಗೆಟ್ ಮಾಡೋದು. ಸರಿ ಸ್ವಾಮಿ, ಇವೆಲ್ಲ ಮಾತನಾಡೋರು ನೀವು, ನನ್ನ ಪ್ರಶ್ನೆಗೆ ಯಾಕೆ ಉತ್ತರ ಕೊಡಲ್ಲ?

ಪ್ರಶ್ನೆ: ಉದಯವಾಣಿಯಲ್ಲಿ ಬರುತ್ತಿದ್ದ ನಿಮ್ಮ ಅಂಕಣ ದಿಢೀರ್ ಅಂತ ನಿಲ್ಲಿಸಿದ್ದಾರೆ, ಏನು ಕಾರಣ?
ಪ್ರಕಾಶ್ ರೈ: ಎಲ್ಲಕ್ಕೂ ನಾವೇ ಉತ್ತರವನ್ನು ಕೊಡಬಾರದು. ಹೋದ ವಾರದವರೆಗೂ ಎಲ್ಲ ಚೆನ್ನಾಗಿರುತ್ತದೆ. ದಿಢೀರ್ ಅಂತ ನಿಂತುಹೋಗುತ್ತದೆ ಅಂದರೆ ಅದಕ್ಕೆ ನೀವೇ ಉತ್ತರವನ್ನು ಕೇಳಿ. ನನಗೆ ಕಾರಣ ಗೊತ್ತಿಲ್ಲ.












Click it and Unblock the Notifications