Maha Kumbh Mela 2025: ಮಹಾ ಕುಂಭಮೇಳದಲ್ಲಿ ಈ ಒಂದೇ ದಿನ 10 ಕೋಟಿ ಭಕ್ತರ ನಿರೀಕ್ಷೆ
ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ ಮಹಾ ಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಆರಂಭವಾಗಿ ಮೂರು ದಿನಗಳು ಯಶಸ್ವಿಯಾಗಿ ಕಳೆದಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ದೇಶ-ವಿದೇಶ ಸೇರಿದಂತೆ ಪ್ರತಿ ದಿನ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ಮಹಾ ಕುಂಭ ಮೇಳ ಆರಂಭವಾದ ಮೊದಲ ದಿನ ಅಂದರೆ ಜನವರಿ 13 ರಂದು 1.75 ಕೋಟಿಯಷ್ಟು ಭಕ್ತರು ಪವಿತ್ರ ಸ್ನಾನ ಮಾಡಿದ್ದು, ಮಕರ ಸಂಕ್ರಾಂತಿಯ ಮಾರನೇ ದಿನ ಜನವರಿ 15 ರಂದು 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಹಾದೇವನ ಸ್ಮರಣೆ ಮಾಡುತ್ತಾ ಕುಂಭ ಸ್ನಾನ ಮಾಡಿದ್ದಾರೆ. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾ ಕುಂಭ ಮೇಳದ ಇಂದೊಂದು ಮಹತ್ವದ ದಿನಕ್ಕೆ ಪ್ರಯಾಗ್ ರಾಜ್ ಮತ್ತಷ್ಟು ಸಿದ್ಧವಾಗುತ್ತಿದೆ.

ಮಹಾ ಕುಂಭ ಮೇಳದಲ್ಲಿ ಸಾವಿರಾರು ಸಾಧು-ಸಂತರು ನಾಗಾ ಸಾಧುಗಳ ಉಪಸ್ಥಿತಿಯಲ್ಲಿ ಜನವರಿ 29ರಂದು ಮೌನಿ ಅಮಾವಾಸ್ಯೆ ಪುಣ್ಯಸ್ನಾನ ನಡೆಯಲಿದೆ. ಮಹಾ ಕುಂಭ ಮೇಳದಲ್ಲಿ ಇದು ಮಹತ್ವದ ದಿನವಾಗಿದ್ದು, ದೇಶ-ವಿದೇಶದಿಂದ ಕೋಟಿ ಕೋಟಿ ಭಕ್ತರು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಮೌನಿ ಅಮಾವಾಸ್ಯೆ ಪುಣ್ಯಸ್ನಾನದ ಒಂದೇ ದಿನ ಪ್ರಯಾಗ್ ರಾಜ್ನ ಮಹಾ ಕುಂಭ ಮೇಳದಲ್ಲಿ ಸುಮಾರು 8 ರಿಂದ 10 ಕೋಟಿ ಭಕ್ತರು ಸೇರುವ ನಿರೀಕ್ಷೆ ಇದೆ.
ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಒಟ್ಟು 40 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ 10,000 ಹೆಕ್ಟೇರ್ಗಳ ವಿಶಾಲವಾದ ಪ್ರದೇಶದಲ್ಲಿ ಭಕ್ತರಿಗಾಗಿ 1.5 ಲಕ್ಷ ಟೆಂಟ್ಗಳನ್ನು ನಿರ್ಮಿಸಲಾಗಿದೆ. ಆದರೆ ಜನವರಿ 29ರ ಮೌನಿ ಅಮಾವಾಸ್ಯೆಯ ಒಂದೇ ದಿನ 10 ಕೋಟಿ ಭಕ್ತರು, ಕನಿಷ್ಠ ಎಂದರೂ 8 ಕೋಟಿ ಭಕ್ತರು ಸೇರುವ ನಿರೀಕ್ಷೆ ಇರುವುದರಿಂದ ಉತ್ತರ ಪ್ರದೇಶ ಸರ್ಕಾರ ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಜನವರಿ 29ರ ಮೌನಿ ಅಮಾವಾಸ್ಯೆಯ ಸಿದ್ಧತೆ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತ ಮಟ್ಟದ ಪರಿಶೀಲನಾ ಸಭೆ ಕರೆದು ಅಧಿಕಾರಿಗಳಿಗೆ ಹಾಗೂ ವ್ಯವಸ್ಥಾಪಕರಿಗೆ ಇನ್ನಷ್ಟು ಸೂಚನೆಗಳನ್ನು ನೀಡಿದ್ದಾರೆ. ಈಗಾಗಲೇ ಭಕ್ತರಿಗಾಗಿ 1.5 ಲಕ್ಷ ಟೆಂಟ್ಗಳು, 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಅಷ್ಟೇ ಅಲ್ಲದೇ ಭಕ್ತಾಧಿಗಳ ಸಂಚಾರಕ್ಕಾಗಿ 30 ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಕುಂಭ ಮೇಳದ ಸ್ನಾನದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್ಗಳನ್ನು ನಿರ್ಮಿಸಲಾಗಿದೆ. ಇವುಗಳ ಜೊತೆಗೆ ಇನ್ನಷ್ಟು ಸೌಲಭ್ಯಗಳನ್ನು ಭಕ್ತರಿಗೆ ನೀಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.












Click it and Unblock the Notifications