ಪ್ರಾದೇಶಿಕ ಪಕ್ಷಗಳಿಗೆ, ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧ ಮಾಡಿಕೊಟ್ಟ ಫಲಿತಾಂಶ
ಪ್ರಾದೇಶಿಕ ಪಕ್ಷಗಳು ಹೆಮ್ಮೆ ಪಡುವ ಕಾಲ ಇದು. ರಾಜಕೀಯವಾಗಿ ರಾಷ್ಟ್ರೀಯ ಪಕ್ಷಗಳು ಎಷ್ಟೇ ಬಲವಾಗಿರಬಹುದು. ಅದಕ್ಕೆ ಸಡ್ಡು ಹೊಡೆಯುವಂಥ ಪ್ರಾದೇಶಿಕ ಪಕ್ಷಗಳಿದ್ದರೆ ಜನರ ಆಯ್ಕೆಯು ಪ್ರಾದೇಶಿಕ ಪಕ್ಷಗಳೇ ಅನ್ನೋದಿಕ್ಕೆ ಐದು ರಾಜ್ಯಗಳ ಈ ಚುನಾವಣೆಯಲ್ಲಿ ಉತ್ತರ ಸಿಕ್ಕಂತಾಗಿದೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ತೃತೀಯ ರಂಗ ರಚನೆಗೆ ಬಲ ಬರಲಿದೆ.
ತೆಲಂಗಾಣದಲ್ಲಿ ಬಂದಿರುವ ಫಲಿತಾಂಶವಂತೂ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ. ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನು ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಂತೂ ಕಾಂಗ್ರೆಸ್ ಅನ್ನು ಪಾತಾಳಕ್ಕೆ ತುಳಿದುಹಾಕಿದೆ. ಅಲ್ಲಿ ನೆಲೆಯೇ ಇಲ್ಲದಿದ್ದ ಬಿಜೆಪಿಗೆ ಇದೀಗ ನೆಲೆ ಸಿಕ್ಕಂತಾಗಿದೆ.
ಇದೀಗ ಕರ್ನಾಟಕದಲ್ಲಿ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಗೆ ಮತ್ತಷ್ಟು ಆತ್ಮಸ್ಥೈರ್ಯ ಮೂಡುತ್ತದೆ. ಸದ್ಯಕ್ಕೆ ಅಧಿಕಾರದಲ್ಲಿ ಇರುವ ಮೈತ್ರಿ ಸರಕಾರ ಉತ್ತಮ ಆಡಳಿತ ನೀಡಿದರೆ ಲೋಕಸಭೆ ಚುನಾವಣೆಗೆ ಜೆಡಿಎಸ್ ಗೆ ಹೆಚ್ಚಿನ ಲಾಭ, ಅಂದರೆ ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಗಳಿಕೆ ಆಗುವುದು ನಿಶ್ಚಿತ ಆಗುತ್ತದೆ.
ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲಿನ ಫಲಿತಾಂಶ ಗಮನಿಸಿದರೆ ಜನರಲ್ಲಿ ಆಯ್ಕೆ ವಿಚಾರಕ್ಕೆ ಗೊಂದಲ ಈಗಲೂ ಇರುವುದು ಸ್ಪಷ್ಟವಾಗುತ್ತದೆ. ಆ ಎರಡೂ ರಾಜ್ಯಗಳಲ್ಲಿ ಪ್ರಬಲವಾದ ಪ್ರಾದೇಶಿಕ ಪಕ್ಷ ಇದ್ದಿದ್ದರೆ ಫಲಿತಾಂಶ ಬೇರೆ ಇರುತ್ತಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಮಹಾಮೈತ್ರಿ ರಚನೆಗೆ ಬಂತು ಉತ್ಸಾಹ
ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಲ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ ಈ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಮಹಾ ಮೈತ್ರಿ ರಚಿಸಿಕೊಂಡು, ಲೋಕಸಭೆ ಚುನಾವಣೆ ಎದುರಿಸಿದರೆ ಏನಾಗಬಹುದು ಎಂಬ ದಿಕ್ಸೂಚಿ ಈಗ ದೊರೆತಂತಾಗಿದೆ.

ಅಖಿಲೇಶ್- ಮಾಯಾವತಿ ಪಾತ್ರ ಪ್ರಮುಖವಾದದ್ದು
ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹೊರಗಿಟ್ಟು, ತೃತೀಯ ರಂಗ ರಚಿಸುವ ತೀರ್ಮಾನದಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ ಮಾಯಾವತಿ ಪಾತ್ರ ಪ್ರಮುಖವಾದದ್ದು. ದಕ್ಷಿಣದಲ್ಲಿ ಡಿಎಂಕೆ, ಟಿಡಿಪಿ, ದೆಹಲಿಯಿಂದ ಆಪ್, ಪಶ್ಚಿಮ ಬಂಗಾಲದ ಟಿಎಂಸಿ, ಮಹಾರಾಷ್ಟ್ರದ ಶಿವಸೇನಾ, ಬಿಹಾರದಿಂದ ಲಾಲೂ ಪ್ರಸಾದ್ ಯಾದವ್ ರ ಮಕ್ಕಳು ಮುನ್ನಡೆಸುತ್ತಿರುವ ರಾಷ್ಟ್ರೀಯ ಜನತಾ ದಳ ಮುಖ್ಯ ಪಾತ್ರ ವಹಿಸುತ್ತವೆ.

ಕೊಟ್ಟು- ತೆಗೆದುಕೊಳ್ಳುವ ವಿಚಾರದಲ್ಲಿ ಅಹಂಕಾರ ತೋರಬಾರದು
ಇನ್ನು ಇವುಗಳ ಪೈಕಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಕೆಲವು ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಇದೆ. ಕೆಲವು ಕಡೆ ಬಿಜೆಪಿಗೆ ಮೈತ್ರಿ ಇದೆ. ಆದರೆ ಬಿಜೆಪಿ ವಿರೋಧಿಸುವ ಪಕ್ಷಗಳನ್ನೆಲ್ಲ ಒಗ್ಗೂಡಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷವು ಅಹಂಕಾರ ಬಿಟ್ಟು, ಸೀಟು ಹಂಚಿಕೆಯಲ್ಲಿ ಕೊಟ್ಟು-ತೆಗೆದುಕೊಳ್ಳುವುದನ್ನೇ ದೊಡ್ಡ ವಿವಾದ ಮಾಡಿಕೊಳ್ಳದೆ, ಲೋಕಸಭೆ ಚುನಾವಣೆಗೂ ಪೂರ್ವವೇ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದರೆ ಫಲಿತಾಂಶವು ವಿಭಿನ್ನವಾಗಿರುತ್ತದೆ.

ಚಂದ್ರಬಾಬು ನಾಯ್ಡು ಯತ್ನಕ್ಕೆ ಪುಷ್ಟಿ ಸಿಕ್ಕಿದೆ
ಬಿಜೆಪಿ ವಿರೋಧಿ ಪಕ್ಷಗಳ ವೇದಿಕೆ ಸಿದ್ಧತೆಗೆ ಯತ್ನಿಸುತ್ತಿರುವ ಟಿಡಿಪಿಯ ಚಂದ್ರಬಾಬು ನಾಯ್ಡು ಯತ್ನಕ್ಕೆ ಈ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ಮಟ್ಟದಲ್ಲಿ ಪುಷ್ಟಿ ನೀಡುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಅಲ್ಲಿಗೆ ಲೋಕಸಭೆಗೆ ಇನ್ನೇನು ಕೆಲ ತಿಂಗಳು ಇರುವಂತೆ ದೇಶದಾದ್ಯಂತ ಪ್ರಾದೇಶಿಕ ಪಕ್ಷಗಳು ಸಂಭ್ರಮಿಸುವ ಫಲಿತಾಂಶ ಬಂದಿದೆ.












Click it and Unblock the Notifications