ಕೊರೊನಾ ವೈರಸ್ ಮತ್ತು ಭಾರತಕ್ಕೂ 102 ವರ್ಷಗಳ ಹಳೆಯ ನಂಟು!
ನವದೆಹಲಿ, ಮಾರ್ಚ್.12: ಕೊರೊನಾ ವೈರಸ್ ಎಂದಾಕ್ಷಣ ಮೈಯಲ್ಲಿ ನಡುಕ ಹುಟ್ಟಿಕೊಳ್ಳುವಂತಾ ವಾತಾವರಣ ಸೃಷ್ಟಿಯಾಗಿದೆ. ಮಾರಕ ಸೋಂಕಿನ ಹೆಸರು ಕೇಳಿದರು ಜನರು ಬೆಚ್ಚಿ ಬೀಳುವಂತಾಗಿದೆ. ಈ ಸೋಂಕಿಗೆ ಬರೋಬ್ಬರಿ 102 ವರ್ಷಗಳ ಇತಿಹಾಸವಿದೆ ಎಂದು ವಿಚಾರ ಇದೀಗ ಬಹಿರಂಗವಾಗಿದೆ.
ಕೊವಿಡ್-19 ಎನ್ನುವುದು ಕೊರೊನಾ ವೈರಸ್ ಗೆ ಇದೀಗ ವಿಜ್ಞಾನಿಗಳು ನೀಡಿರುವ ಹೆಸರು. ಆದರೆ, ಇದನ್ನೂ ಮೀರಿಸುವಂತಾ ರೋಗವೊಂದಕ್ಕೆ 19ನೇ ಶತಮಾನದ ಆದಿಯಲ್ಲಿಯೇ ಭಾರತ ಸೇರಿದಂತೆ ಇಡೀ ಜಗತ್ತು ತತ್ತರಿಸಿ ಹೋಗಿತ್ತು.
ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?
ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಕೊರೊನಾ ವೈರಸ್ ನಿಂದ 4,718ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದರೆ, 1,27,863ಕ್ಕಿಂತಲೂ ಹೆಚ್ಚು ಜನರಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಸ್ಪಷ್ಟವಾಗಿದೆ. ಈ ಅಂಕಿ-ಅಂಶಗಳನ್ನೂ ಮೀರಿಸುವಂತಾ ಘೋರ ಇತಿಹಾಸವನ್ನು ಭಾರತವು ಈ ಹಿಂದೆಯೇ ಕಂಡಿದೆ.
19ನೇ ಶತಮಾನದ ಆರಂಭದಲ್ಲೇ ಸೋಂಕಿನ ಅಟ್ಟಹಾಸ
ಕಳೆದ 1918ರಲ್ಲಿ ಸ್ಪ್ಯಾನಿಷ್ ರಾಷ್ಟ್ರದಲ್ಲಿ ಕಾಣಿಸಿಕೊಂಡ ಶೀತಜ್ವರಕ್ಕೆ 5 ರಿಂದ 10 ಕೋಟಿಗೂ ಅಧಿಕ ಜನರು ಪ್ರಾಣ ಬಿಟ್ಟಿದ್ದರು. ಈ ಪೈಕಿ 1 ರಿಂದ 2 ಕೋಟಿ ಮಂದಿ ಭಾರತೀಯರೇ ಮಾರಕ ಶೀತಜ್ವರದಿಂದ ಮೃತಪಟ್ಟಿದ್ದರು ಎಂದು ಹೇಳಲಾಗುತ್ತಿದೆ.
1918ರ ಮೇ ತಿಂಗಳಲ್ಲಿ ಬಾಂಬೆಯಲ್ಲಿ ಮೊದಲ ಸೋಂಕು
ಕಳೆದ 1918ರ ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡ ಭಯಾನಕ ಜ್ವರಕ್ಕೆ ಬಾಂಬೆ ಶೀತಜ್ವರ ಅಥವಾ ಬಾಂಬೆ ಜ್ವರ ಎಂದು ಜನರು ಕರೆಯುತ್ತಿದ್ದರು. ಬಾಂಬೆ ಬಂದರು ಪ್ರದೇಶದ ಮೂಲಕ ದೇಶವನ್ನು ಪ್ರವೇಶಿಸಿದ ಬಾಂಬೆ ಶೀತಜ್ವರದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಾಖ್ಯಾನಿಸಿದ್ದಾರೆ.
ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿದ ಕಳ್ಳನಂತೆ ಬಾಂಬೆಜ್ವರ!
ಇನ್ನು, ಅಂದಿನ ಕಾಲದಲ್ಲಿ ಬಾಂಬೆ ಆರೋಗ್ಯ ಸಚಿವರಾಗಿದ್ದ ಜೆ.ಎ. ಟರ್ನರ್ಸ, ಮಧ್ಯರಾತ್ರಿ ಮನೆಗೆ ಕಳ್ಳನು ನುಗ್ಗಿದಂತೆ ಶೀತಜ್ವರ ಎಂಬ ಸಾಂಕ್ರಾಮಿಕ ಪಿಡುಗು ಬಾಂಬೆಯನ್ನು ಪ್ರವೇಶಿಸಿತು ಎಂದು ವ್ಯಾಖ್ಯಾನಿಸಿದ್ದಾರೆ.
ದೇಶದ ಚಿತ್ರಣವನ್ನೇ ಬದಲಿಸಿತು ಅದೊಂದು ಬಾಂಬೆ ಜ್ವರ
1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಶೀತಜ್ವರ (ಬಾಂಬೆ ಜ್ವರ)ಕ್ಕೆ ಭಾರತದ ಚಿತ್ರಣವೇ ಸಂಪೂರ್ಣ ಬದಲಾಯಿತು. ವಿನಾಶಕಾರಿ ಬೆಳವಣಿಗೆಗೆ ನಾಂದಿ ಎನ್ನುವಂತಾ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿತ್ತು. ಕಣ್ ಮುಚ್ಚಿ ಕಣ್ ಬಿಡುವುದರಲ್ಲೇ ನನ್ನ ಕುಟುಂಬ ಸದಸ್ಯರೆಲ್ಲ ನನ್ನಿಂದ ಕಳೆದುಹೋಗಿದ್ದರು. ನನ್ನೆಲ್ಲ ಸಹೋದ್ಯೋಗಿಗಳು ಪ್ರಾಣ ಬಿಟ್ಟರು. ನನ್ನ ನಾಲ್ವರು ಆತ್ಮೀಯ ಸಹೋದರರು ಕೂಡಾ ರೋಗಕ್ಕೆ ಬಲಿಯಾದರು ಎಂದು ಕವಿ ಸೂರ್ಯಕಾಂತ್ ತ್ರಿಪಾಠಿ ಬರೆದಿದ್ದಾರೆ.
ತಮ್ಮ ಅನುಭವದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ ಗಾಂಧೀಜಿ
ದೇಶದಲ್ಲಿ ಬಾಂಬೆ ಜ್ವರದ ಹಾವಳಿ ಇರುವಾಗಲೇ ಮಹಾತ್ಮ ಗಾಂಧೀಜಿ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿತ್ತು. ಈ ಬಗ್ಗೆ ಗಂಗಾಬೆನ್ ಎಂಬುವವರಿಗೆ ಬರೆದ ಪತ್ರದಲ್ಲಿ ಅವರೇ ಉಲ್ಲೇಖಿಸಿದ್ದಾರೆ. ನಮ್ಮ ಪೂರ್ವಜರು ದೇಹಪ್ರಕೃತಿಯನ್ನು ಸದೃಢವಾಗಿ ಇಟ್ಟುಕೊಂಡಿದ್ದರು. ಆದರೆ, ಈಗಿನ ವಾತಾವರಣದಲ್ಲಿ ನಾವು ಬಹಳ ಬೇಗನೇ ಗಾಳಿಯಲ್ಲಿನ ಸೂಕ್ಷ್ಮಾಣುಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂದು ಬರೆದುಕೊಂಡಿದ್ದರು ಅಂತಾ ವರದಿಯಾಗಿದೆ.
ಬಾಂಬೆ ಜ್ವರಕ್ಕೆ ಮೊದಲು ಬಲಿಯಾಗಿದ್ದೇ ಸಿಪಾಯಿಗಳು
ಬಾಂಬೆಯಲ್ಲಿ ಏಳು ಮಂದಿ ಸಿಪಾಯಿಗಳು ಮೊದಲ ಬಾರಿಗೆ ಮಲೇರಿಯಾ ಅಲ್ಲದ ವಿಚಿತ್ರ ರೀತಿಯ ಜ್ವರದಿಂದ ಪೊಲೀಸ್ ಆಸ್ಪತ್ರೆಗೆ ದಾಖಲಾದರು. ಅದಾಗಿ ಕೆಲ ಗಂಟೆಗಳಲ್ಲಿಯೇ ಹಡಗು ತಾಣದಲ್ಲಿನ ಸಿಬ್ಬಂದಿ, ಬಾಂಬೆ ಪೋರ್ಟ್ ಟ್ರಸ್ಟ್ ನ ಸಿಬ್ಬಂದಿ, ಹಾಂಗ್ ಕಾಂಗ್ ಮತ್ತು ಶಾಂಗೈ ಬ್ಯಾಂಕ್ ಸಿಬ್ಬಂದಿ, ಟೆಲಿಗ್ರಾಫ್ ಸಿಬ್ಬಂದಿ, ಮಿಂಟ್, ರಚನ್ ಸಸ್ಸೇನ್ ಮಿಲ್ಸ್ ಸಿಬ್ಬಂದಿಯು ಮಾರಕ ಜ್ವರಕ್ಕೆ ತುತ್ತಾದರು ಎನ್ನಲಾಗಿದೆ.
20 ರಿಂದ 40 ವರ್ಷದವರಗೆ ಹೆಚ್ಚಾಗಿ ಮೃತಪಟ್ಟಿದ್ದು
ಸಾಂಕ್ರಾಮಿಕ ರೋಗವಾಗಿ ಆರಂಭಗೊಂಡ ಶೀತಜ್ವರಕ್ಕೆ ಮೊದಮೊದಲು ಪುಟ್ಟ ಮಕ್ಕಳು ಮತ್ತು ಯುವಕರಷ್ಟೇ ಹೆಚ್ಚಾಗಿ ಪ್ರಾಣ ಬಿಟ್ಟಿದ್ದರು. ಸಂಶೋಧಕ ದೇವಿಡ್ ಅರ್ನಾಲ್ಡ್ ಅವರ 'ಡೆತ್ ಆಂಡ್ ಮಾಡ್ರನ್ ಎಂಪಾಯರ್' ಪತ್ರಿಕೆಯಲ್ಲಿ 1918-19 ಅವಧಿಯಲ್ಲಿ ಭಾರತದಲ್ಲಿ ಸಾಂಕ್ರಾಮಿಕ ರೋಗ ಶೀತಜ್ವರ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಬಿತ್ತರಿಸಲಾಗಿತ್ತು. ಈ ವರದಿಯಲ್ಲಿ ಮಾರಕ ರೋಗಕ್ಕೆ 20 ರಿಂದ 40 ವರ್ಷದೊಳಗಿನ ಜನರು ಹೆಚ್ಚಾಗಿ ಪ್ರಾಣ ಬಿಟ್ಟಿರುವ ಬಗ್ಗೆ ಪ್ರಕಟಿಸಲಾಗಿತ್ತು.
ಒಂದೇ ದಿನ ಬಾಂಬೆಯಲ್ಲಿ ಶೀತಜ್ವರಕ್ಕೆ 768 ಮಂದಿ ಸಾವು
1918ರ ಅಕ್ಟೋಬರ್.06ರಂದು ಭಾರತದ ಇತಿಹಾಸದಲ್ಲೇ ಕರಾಳ ದಿನವಾಗಿತ್ತು. ಒಂದೇ ದಿನ ಶೀತಜ್ವರಕ್ಕೆ ಬಾಂಬೆ ನಗರ ಒಂದರಲ್ಲಿಯೇ 768ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದರು. ಈ ಅಂಕಿ-ಅಂಶಗಳನ್ನು ಗಮನಿಸಿದಾಗ 1890-1900 ನಡುವೆ ಕಾಣಿಸಿಕೊಂಡ ಪ್ಲೇಗ್ ರೋಗಕ್ಕಿಂತಲೂ ಕಠೋರವಾಗಿತ್ತು ಎಂದು ಸಂಶೋಧಕ ದೇವಿಡ್ ಅರ್ನಾಲ್ಡ್ ಬರೆದಿದ್ದಾರೆ.