ಕಾಂತಾರ-1 ಶೂಟಿಂಗ್ ವೇಳೆ ಆಗಿದ್ದೇನು? ಕ್ಲಾರಿಟಿ ಕೊಟ್ಟ ಹೊಂಬಾಳೆ ಫಿಲ್ಮ್ಸ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಚಾಪ್ಟರ್-1 (Kantara Chapter 1) ಚಿತ್ರೀಕರಣದ ಸಂದರ್ಭದಲ್ಲಿ ನಿನ್ನೆ ಭಾರೀ ಅನಾಹುತ ನಡೆದಿದೆ ಎಂದು ಹೇಳಲಾಗುತ್ತಿದೆ. ರಿಷಬ್ ಶೆಟ್ಟಿ ಸೇರಿದಂತೆ ಚಿತ್ರತಂಡದ 30ಕ್ಕೂ ಹೆಚ್ಚು ಮಂದಿ ಇದ್ದ ದೋಣಿ ಮುಗುಚಿ ಬಿದ್ದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಚಾರವಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ (Hombale Films) ಸ್ಪಷ್ಟನೆ ನೀಡಿದೆ. ಕಾಂತಾರ ಶೂಟಿಂಗ್ ವೇಳೆ ನಿಜಕ್ಕೂ ನಡೆದಿದ್ದೇನು ಎಂಬುದನ್ನೂ ವಿವರಿಸಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ದೋಣಿ ಮುಗುಚಿತ್ತು ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಹೊಂಬಾಳೆ ಫಿಲಂಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ನಿನ್ನೆ ಶೂಟಿಂಗ್ ವೇಳೆ ನಡೆದಿದ್ದೇನು ಎಂದು ವಿವರಿಸಿದ್ದಾರೆ.

ಶನಿವಾರ ಸಂಜೆ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಶೂಟಿಂಗ್ಗಾಗಿ ಹಾಕಲಾಗಿದ್ದ ಶಿಪ್ ಸೆಟ್ ಹಾನಿಗೆ ಒಳಗಾಗಿದೆ. ನಾವು ಹಿನ್ನೀರಿನ ಭಾಗದಲ್ಲಿ ಯಾವುದೇ ಶೂಟಿಂಗ್ ನಡೆಸಿಲ್ಲ. ಶಿಪ್ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈ ಘಟನೆ ನಡೆದ ಜಾಗಕ್ಕೂ ಶೂಟಿಂಗ್ ನಡೆದ ಜಾಗಕ್ಕೂ ಬಹಳ ಅಂತರವಿದೆ. ಸುದ್ದಿ ಹರಿದಾಡಿದಂತೆ ಇಲ್ಲಿ ಯಾವುದೇ ದುರಂತ ನಡೆದಿಲ್ಲ. ನಟರು ಸಹನಟರೆಲ್ಲರೂ ಆರೋಗ್ಯವಾಗಿದ್ದಾರೆ. ನೀರಿನ ಭಾಗದಲ್ಲಿ ನಮ್ಮ ಯಾವುದೇ ಚಿತ್ರೀಕರಣ ಇಲ್ಲ. ಇಂದು (ಭಾನುವಾರ) ಕೂಡ ಶೂಟಿಂಗ್ ನಡೆಯುತ್ತಿದೆ. ಇಲ್ಲಿ ಶೂಟಿಂಗ್ ನಡೆಸಲು ಸ್ಥಳೀಯ ಪಂಚಾಯಿತಿ, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟವರಿಂದ ಎಲ್ಲ ರೀತಿಯ ಅನುಮತಿ ಪಡೆದುಕೊಂಡಿದ್ದೇವೆ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ನೀರಿನ ಭಾಗದಲ್ಲಿ ನಮ್ಮ ಯಾವುದೇ ಶೂಟಿಂಗ್ ಇಲ್ಲ. ಆದರೂ ನಾವು ಭದ್ರತಾ ಕ್ರಮಗಳನ್ನು ಪಾಲಿಸಿದ್ದೇವೆ. ಬೋಟ್ಗಳು, ಮೀನುಗಾರರು, ಈಜುಪಟುಗಳು, ಸ್ಕೂಬಾ ಡೈವರ್ಸ್, ಲೈಫ್ ಜಾಕೆಟ್ ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಾವು ಹಾಕಿದ್ದ ಸೆಟ್ನಲ್ಲಿದ್ದ ಶಿಪ್ ಮಳೆ, ಗಾಳಿಗೆ ಪಲ್ಟಿ ಹೊಡೆದಿದೆ. ಆಗ ಅಲ್ಲಿ ಯಾರೂ ಇರಲಿಲ್ಲ. ಅಲ್ಲಿಂದ ಶೂಟಿಂಗ್ ನಡೆಯುತ್ತಿದ್ದ ಸ್ಥಳ ದೂರವಿದೆ. ಇನ್ನು ಸಿನಿಮಾ ಸೆಟ್ನ ವಸ್ತುಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ ಎನ್ನುವುದು ಕೂಡು ಸುಳ್ಳು. ಇಂದು ಎಂದಿನಂತೆಯೇ ಶೂಟಿಂಗ್ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಶೂಟಿಂಗ್ ವೇಳೆ ಚಿತ್ರತಂಡದವರಿದ್ದ ದೋಣಿ ಮುಗುಚಿತ್ತು. ಇದರಲ್ಲಿ ರಿಷಬ್ ಶೆಟ್ಟಿ ಕೂಡ ಇದ್ದರು. ನೀರಿನಲ್ಲಿ ದೋಣಿ ಮುಗುಚಿ ಬಿದ್ದಿದ್ದರಿಂದ ಎಲ್ಲರೂ ನೀರಿನಲ್ಲಿ ಈಜಿಕೊಂಡು ಪ್ರಾಣ ಉಳಿಸಿಕೊಂಡಿದ್ದರು ಎಂದು ನಿನ್ನೆ ಸುದ್ದಿ ಹರಿದಾಡಿತ್ತು. ಇಂದು ಹೊಂಬಾಳೆ ಫಿಲ್ಮ್ಸ್ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.












Click it and Unblock the Notifications