'ಶೂಟಿಂಗ್ ವೇಳೆ ನಿಜವಾಗಿ ನೇಣು ಹಾಕಿದ್ರು..ಬಾಯಲ್ಲಿ ನೊರೆ ಬಂತು..ಕಣ್ಣು ಮೇಲೆ ಹೋಯ್ತು'
ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಗಳಲ್ಲಿ ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಮಿಂಚುತ್ತಿರುವ ನಟಿ ವಾಣಿಶ್ರೀ ಕನ್ನಡಿಗರಿಗೆ ಚಿರಪರಿಚಿತರು. ಕನ್ನಡ ಚಿತ್ರರಂಗದ ಅದ್ಭುತ ಪೋಷಕ ನಟಿಯಾಗಿರುವ ಇವರು, ನೂರ ಹತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಮುನ್ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿರುವ ವಾಣಿಶ್ರೀ ಅವರು, ತಮ್ಮ ನಟನಾ ಜೀವನದಲ್ಲಿ ನಡೆದ ಭಯಾನಕ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ನ್ಯೂಸೋ ನ್ಯೂಸು ಚಾನೆಲ್ನ ಹರಿ-ಕಥೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಒಂದು ಧಾರಾವಾಹಿ ಮಾಡುತ್ತಿದ್ದೇವು. ಈ ಚಿತ್ರೀಕರಣದ ಶೂಟಿಂಗ್ ವೇಳೆ ಸ್ಟಂಟ್ ಡೈರೆಕ್ಟರರ್ಸ್ ಬಂದಿದ್ದರು. ಒಂದು ನೇಣು ಹಾಕುವ ದೃಶ್ಯ ಇತ್ತು. ಅದನ್ನು ಮಾಡೋಣ ಎಂದು ಡೈರೆಕ್ಟರ್ ಹೇಳಿದರು. ನಾನೇ ನೇಣು ಹಾಕಿಕೊಳ್ಳವ ರೀತಿ ದೃಶ್ಯ ಇತ್ತು. ಹೀಗಾಗಿ ಮೊದಲು ಬಟ್ಟೆ ಕಟ್ಟಿದ್ದರು, ನಾನು ಮೇಲಿಂದ ನೇಣು ಹಾಕಿಕೊಂಡು ಕೆಳಗೆ ಹಾರಿದೆ. ಆ ದೃಶ್ಯಗಳನೆಲ್ಲಾ ಶೂಟ್ ಮಾಡಿಕೊಂಡಿದ್ದರು'.

'ಬಳಿಕ ಕ್ಯಾಮರಾ ಕೆಳಗೆ ಇಟ್ಟಾಗ ನನ್ನ ಸೊಂಟಕ್ಕೆ ಹಾಕಿದ್ದ ವಯರ್ ಕಾಣುತ್ತಿತ್ತು. ನನ್ನ ಕುತ್ತಿಗೆಗೆ ಹಾಕಿರುವ ಬಟ್ಟೆಯನ್ನು ಆ ವಯರ್ ಕಾಣದಂತೆ ಸುತ್ತಿದ್ದರೆ ಅದು ನನ್ನ ಕುತ್ತಿಗೆಯನ್ನು ಎಳೆದು ಬಿಡುತ್ತದೆ ಎನ್ನುವುದು ಅವರಿಗೂ ತಲೆಯಲ್ಲಿ ಇರಲಿಲ್ಲ. ಒಂದು ಸಲ ನಾನು ನೇಣು ಹಾಕಿಕೊಳ್ಳುವ ರೀತಿ ಕಾಲಿನ ಕೆಳಗಿದ್ದ ಖುರ್ಚಿ ಸರಿಸಿ ಹಾರಿದಾಗ ಒಂದು ಸಲ ನನ್ನ ಮಗಳ ಮುಖ ನನ್ನ ಕಣ್ಣ ಎದುರು ಬಂದು ಬಿಟ್ಟಿತ್ತು'.
'ಸಿನಿಮಾದಲ್ಲಿ ನೇಣು ಹಾಕಿಕೊಂಡಾಗ ತೋರಿಸುತ್ತಾರಲ್ಲಾ ನೆಗೆಟಿವ್ ಶೇಡ್ನಲ್ಲಿ ಫೋಟೋಗಳು ಅದೇ ರೀತಿ ನನಗೆ ನನ್ನ ಮಗಳ ಫೋಟೋ ಕಾಣಿಸುತ್ತಿತ್ತು. ಅಲ್ಲಿರುವ ಸೆಟ್ ಹುಡುಗ ನನ್ನನ್ನು ಗಮನಿಸಿ ಮೇಡಂ ಕಣ್ಣು ಮೇಲೆ ಹೋಗುತ್ತಿದೆ, ಬಾಯಲ್ಲಿ ನೊರೆ ಬರುತ್ತಿದೆ ಅವರಿಗೆ ಏನೋ ತೊಂದರೆಯಾಗುತ್ತಿದೆ ಅಂತಾ ಹೇಳುತ್ತಿದ್ದನಂತೆ. ಆದರೆ ನಿದೇರ್ಶಕರು ನಾನು ನಟನೆ ಮಾಡುತ್ತಿದ್ದೇನೆ ಅಂತಾ ತಿಳಿದು ಸೀನ್ ಸಖತ್ ಆಗಿ ಬರುತ್ತಿದೆ ಹೀಗೆ ಮಾಡಿ ಎನ್ನುತ್ತಿದ್ದರು'.

'ನಿಜವಾಗಿ ನನಗೆ ನೇಣು ಹಾಕಿದ್ದರು. ಪುಣ್ಯಕ್ಕೆ ವಯರ್ ಇದ್ದ ಕಾರಣ ಒಮ್ಮೆಲೆ ಅಷ್ಟೊಂದು ಎಳೆದಿಲ್ಲ. ನಾನು ಹಾರಿರುವ ವೇಗಕ್ಕೆ ಹಾಕಿದ್ದ ಬಟ್ಟೆ ನನ್ನ ಕತ್ತಿಗೆ ಸಿಕ್ಕಿ ಎಳೆದಿದೆ. ಎರಡು ಮೂರು ನಿಮಿಷ ಆದ ಮೇಲೆ ಯಾವಾಗ ನನ್ನ ಕೈ ಕಾಲುಗಳು ನೋಡುತ್ತಿದ್ದಂತೆ ನೆಟ್ಟಗಾಯಿತೋ, ಕೂಡಲೇ ಅವರು ನನ್ನನ್ನು ಕೆಳಗೆ ಇಳಿಸಿ ಕೈಕಾಲು ಉಚ್ಚಲು ಶುರು ಮಾಡಿದರು. ಅಷ್ಟೋತ್ತಿಗಾಗಲೇ ನನ್ನ ಮೈಯಲ್ಲಾ ತಣ್ಣಗಾಗಿತ್ತು. ತಕ್ಷಣವೇ ನನಗೆ ಪ್ರಥಮ ಚಿಕಿತ್ಸೆ ಮಾಡಿದರು. ಒಮ್ಮೆಲೆ ನನಗೆ ಹೋದ ಜೀವ ವಾಪಸ್ ಬಂದಂತೆ ಆಯಿತು. ಆ ಕ್ಷಣ ಹೇಗಿತ್ತು ಅಂದರೆ ಕರೆಂಟ್ ಶಾಕ್ ಕೊಟ್ಟ ಹಾಗೆ ಅನಿಸಿತು. ಈ ಘಟನೆಯಿಂದ ನೇಣು ಹಾಕಿಕೊಂಡರೆ ಹೇಗಿರುತ್ತದೆ ಎನ್ನುವ ಕೆಟ್ಟ ಅನುಭವ ನನಗೆ ಆಯ್ತು' ಎಂದು ನಟಿ ವಾಣಿಶ್ರೀ ತಾವು ಮರುಜನ್ಮ ಪಡೆದುಕೊಂಡ ಘಟನೆಯ ಬಗ್ಗೆ ವಿವರಿಸಿದ್ದಾರೆ.












Click it and Unblock the Notifications