Bigg Boss: ಇರಲು ಆಗಲ್ಲ ಅಂತ ಹಠ ಹಿಡಿದ ಶೋಭಾ ಶೆಟ್ಟಿ- ಮನೆ ಬಾಗಿಲು ಓಪನ್ ಮಾಡಿಸಿದ ಸುದೀಪ್! ಮುಂದಾಗಿದ್ದೇನು?
ಬಿಗ್ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಶೋಭಾ ಶೆಟ್ಟಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಮನೆಯೊಳಗೆ ಎಂಟ್ರಿ ಕೊಟ್ಟಾಗ ತಮ್ಮದೇ ಆದ ಛಾಪು ಮೂಡಿಸಿದ್ದ ಶೋಭಾ ಶೆಟ್ಟಿ ಈಗ ಮನೆಯಿಂದ ಹೊರಬರುವ ಮಾತನಾಡಿದ್ದಾರೆ. ಅದರಲ್ಲೂ ಕಿಚ್ಚಾ ಸುದೀಪ್ ಅವರ ಮುಂದೆ ಶೊಭಾ ಶೆಟ್ಟಿ ತಮಗೆ ಬಿಗ್ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಹೀಗಾಗಿ ಶೋಭಾ ಶೆಟ್ಟಿ ಮನೆಯಲ್ಲಿದ್ದರೂ ಮನಸ್ಸಿನಿಂದ ಹೊರಬಂದಾಗಿದೆ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ಹಾಗಾದರೆ ಆಗಿದ್ದೇನು?
ಶೋಭಾ ಶೆಟ್ಟಿ ಹಾಗೂ ರಜತ್ ಇಬ್ಬರೂ ಒಟ್ಟಿಗೆ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಹೋದಾಗ ತುಂಬಾ ಜೋಶ್ ಅಲ್ಲಿದ್ದ ಶೋಭಾ ಆದರೀಗ ಮನೆಯಿಂದ ಹೊರಬರುವ ಮಾತನಾಡಿದ್ದಾರೆ. ಟಾಸ್ಕ್ ಹಾಗೂ ಮನೆಯ ಸ್ಪರ್ಧಿಗಳೊಂದಿಗೆ ಶೋಭಾ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆದರೆ ಈ ವಾರದಲ್ಲಿ ಮಹಾರಾಜ ಟಾಸ್ಕ್ ಅಲ್ಲಿ ಅವರ ಟ್ಯಾಲೆಂಟ್ ತೋರಿಸಲು ಅವಕಾಶ ಸಿಗಲಿಲ್ಲ. ಹೀಗಾಗಿ ಅವರಿಗೆ ಕಳಪೆ ನೀಡಿ ಜೈಲಿಗೂ ಕಳುಹಿಸಲಾಗಿತ್ತು. ಇದೇ ಬೇಸರದಲ್ಲಿ ಇದ್ದ ಶೋಭಾ ಶೆಟ್ಟಿ ಶನಿವಾರದ ಸಂಚಿಕೆಯಲ್ಲೂ ಈ ನೋವಿನಿಂದ ಹೊರಬಂದಿರಲಿಲ್ಲ.

ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ನಾಮಿನೇಟ್ ಆದವರ ಹೆಸರನ್ನು ಹೇಳುತ್ತಾ ಒಬ್ಬರಾದ ಮೇಲೆ ಒಬ್ಬರನ್ನು ಸೇವ್ ಮಾಡುತ್ತಿದ್ದರು. ಈ ಲಿಸ್ಟ್ನಲ್ಲಿ ಶೋಭಾ ಶೆಟ್ಟಿ ಕೂಡ ಸೇವ್ ಆಗಿದ್ದಾರೆ. ಈ ವಿಚಾರವನ್ನು ಸುದೀಪ್ ಅವರು ತಿಳಿಸಿದ ತಕ್ಷಣ ಶೋಭಾ ಓವರ್ ರಿಯಾಕ್ಟ್ ಮಾಡಿದ್ದಾರೆ.
ನನಗೆ ಬಿಗ್ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ ಅನಿಸುತ್ತದೆ ಎಂದು ಶೋಭಾ ಸುದೀಪ್ ಅವರ ಮುಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಶಾಕ್ ಆಗಿದ್ದಾರೆ. ಆಗ ಸುದೀಪ್ ಅವರು ಶೋಭಾ ಅವರ ಮನವೊಲಿಸಲು ಪ್ರಯತ್ನಸುತ್ತಾರೆ. ಮನೆ ಒಳಗಡೆ ಹೋಗಿರುವ ಉದ್ದೇಶವನ್ನ ಅವರಿಗೆ ಮತ್ತೆ ನೆನಪಿಸಲು ಪ್ರಯತ್ನಿಸುತ್ತಾರೆ. ಆದರೂ ಶೋಭಾ ತಮಗೆ ಮನೆಯಲ್ಲಿ ಇರಲು ಆಗುತ್ತಿಲ್ಲ ಅಂತಲೇ ಹಠ ಮಾಡುತ್ತಾರೆ.
ಆಗ ಕೋಪಗೊಂಡ ಸುದೀಪ್ ಅವರು, 'ನಾನು ನಿಮಗಾಗಿ ಬಿಗ್ಬಾಸ್ ಮನೆಯ ಬಾಗಿಲು ತೆರೆಸುತ್ತೇನೆ. ನೀವು ಹೊರಗಡೆ ಹೋಗಬಹುದು. ಹೋಗೋಕ್ ರೆಡಿ ಇದಿರಾ? ಹೋಗಿ' ಎಂದು ಹೇಳುತ್ತಾರೆ. ಇದರಿಂದ ದಾರಿಗೆ ಬಂದ ಶೋಭಾ ಶೆಟ್ಟಿ ಸುದೀಪ್ ಅವರ ಬಳಿ ಕ್ಷಮೆ ಕೇಳಿ ತಾವು ಆಟ ಮುಂದುವರೆಸುವುದಾಗಿ ಹೇಳುತ್ತಾರೆ.

ಸುದೀಪ್ ಅವರೊಂದಿಗೆ ಮಾತನಾಡಿದ ಬಳಿಕವೂ ಅವರು ಕಣ್ಣೀರು ಹಾಕಿ, ನನಗೆ ಮನೆಯಲ್ಲಿ ಇರಲು ಆಸೆ ಇದೆ. ಆಡಬೇಕು ಅಂತ ಮನಸ್ಸಿದೆ ನನಗೆ. ಆದರೆ ಫೇಸ್ ಮಾಡೋದು ಹೇಗೆ ಅಂತ ನನಗೆ ಗೊತ್ತಾಗ್ತಿಲ್ಲ ಅಂತ ಪುನ: ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ಶೋಭಾ ಶೆಟ್ಟಿ ಅವರಿಗೆ ಆರಂಭದಲ್ಲಿ ಇದ್ದ ಜೋಶ್ ಈಗ ಸಂಪೂರ್ಣವಾಗಿ ಕಡಿಮೆಯಾದಂತೆ ಕಾಣಿಸುತ್ತಿದೆ.
ಜೈಲಿಗೆ ಹೋಗಿ ಬಂದ ಬಳಿಕ ಅವರು ಕುಗ್ಗಿ ಹೋದಂತೆ ಕಾಣಿಸುತ್ತಿದೆ. ಆದರೂ ಸುದೀಪ್ ಅವರ ಮಾತಿನಿಂದ ತಮ್ಮ ಮಾತನ್ನು ಹಿಂದೆ ಪಡೆದ ಶೋಭಾ ಮುಂದಿನ ವಾರ ಹೇಗೆ ಆಟ ಆಡುತ್ತಾರೆ ಅನ್ನೋ ಕುತೂಹಲ ಮೂಡಿದೆ. ಆದರೆ ಶೋಭಾ ಅವರಲ್ಲಿ ಆರಂಭದಲ್ಲಿ ಇದ್ದ ಉತ್ಸಾಹ ಈಗ ಕಂಡು ಬಂದಿಲ್ಲ. ಇದು ಮುಂದಿನ ವಾರ ಅವರು ಬಿಗ್ಬಾಸ್ ಮನೆಯಿಂದ ಹೊರಗಡೆ ಬರಲು ದಾರಿ ಆದರೂ ಆಶ್ಚರ್ಯವಿಲ್ಲ.
ಶೋಭಾ ಶೆಟ್ಟಿ ಪರವಾಗಿ ಕ್ಷಮೆ ಕೇಳಿದ ಕಿಚ್ಚ ಸುದೀಪ್
ಶೋಭಾ ಶೆಟ್ಟಿ ಬಿಗ್ಬಾಸ್ ಮನೆಗೆ ಆಗಮಿಸಿ ಕೇವಲ ಎರಡೇ ವಾರಗಳು ಕಳೆದಿವೆ. ಹೀಗಾಗಿ ಆರಂಭದಲ್ಲಿ ಚೆನ್ನಾಗಿ ಗೇಮ್ ಆಡಿದ್ದ ಶೋಭಾಗೇ ಈ ವಾರ ಅವಕಾಶವೇ ಸಿಗಲಿಲ್ಲ. ಹೀಗಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ನಡುವೆ ಕ್ಯಾಪ್ಟನ್ ಧನ್ರಾಜ್ ಅವರು ಶೋಭಾ ಅವರಿಗೆ ಕಳಪೆ ನೀಡಿ ಜೈಲಿಗೆ ಕಳುಹಿಸಿದರು. ಇದೆಲ್ಲಾ ಬೇಸರದಲ್ಲಿ ಇದ್ದ ಶೋಭಾ ಕಿಚ್ಚ ಸುದೀಪ್ ಮುಂದೆ ಕಣ್ಣೀರು ಹಾಕಿದ್ದರು. ಎಷ್ಟೇ ಅವರನ್ನು ಒಲಿಸಲು ಪ್ರಯತ್ನಿಸಿದರೂ ಶೋಭಾ ಸಮಾಧಾನವಾಗಲಿಲ್ಲ.
ಬಿಗ್ಬಾಸ್ ಮನೆ ಬಾಗಿಲು ತೆಗೆದ ಬಳಿಕ ಹೊರಬರುವ ವಿಚಾರದಲ್ಲಿ ಉಲ್ಟಾ ಹೊಡೆದಿರುವುದು ಗೊತ್ತೇ ಇದೆ. ಈ ಬೆಳವಣಿಗೆಗಳ ನಡುವೆ ಸುದೀಪ್ ಅವರು ಶೋಭಾ ಪರವಾಗಿ ಬಿಗ್ಬಾಸ್ ವೀಕ್ಷಕರಿಗೆ ಕ್ಷಮೆಯನ್ನು ಕೇಳಿದ್ದಾರೆ. ನೀವು ಒಬ್ಬ ಸ್ಪರ್ಧಿಯನ್ನು ನಂಬಿ ಈ ಮನೆಯಲ್ಲಿ ಓಟ್ ಹಾಕಿ ಉಳಿಸಿಕೊಂಡಿರುತ್ತೀರಿ. ಆದರೆ ಶೋಭಾ ಅವರು ಅದನ್ನು ಕಡೆಗಣಿಸಿ ಮಾತನಾಡಿದ್ರು. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.












Click it and Unblock the Notifications