₹50 ದಂಡ ಹಾಕಿ ಬಿಡೋದಲ್ಲ, ಘೋರ ಶಿಕ್ಷೆ ಕೊಡ್ಬೇಕು: ನಟಿ ಸುಧಾರಾಣಿ ಸಿಡಿದಿದ್ದು ಯಾರ ವಿರುದ್ಧ?
ಸ್ಯಾಂಡಲ್ವುಡ್ನ ಹಿರಿಯ ನಟಿ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರಾಣಿ ಪ್ರೇಮಿಯಾಗಿರುವ ಅವರನ್ನು ಇತ್ತೀಚಿನ ಘಟನೆಯೊಂದು ಬಹಳ ಕಾಡಿದೆ. ಈ ಹಿನ್ನೆಲೆ ಪೋಸ್ಟ್ನಲ್ಲಿ ಸುದೀರ್ಘವಾಗಿ ಅವರು ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹೊರರಾಜ್ಯದ ವ್ಯಕ್ತಿಯೊಬ್ಬ ಹಸುವಿನ ಕೆಚ್ಚಲುಗಳನ್ನು ಕತ್ತರಿಸಿ ಕ್ರೌರ್ಯ ಮೆರೆದಿರುವ ಘಟನೆ ನಡೆದಿತ್ತು. ಈ ಬಗ್ಗೆ ನಟಿ ಸುಧಾರಾಣಿ ಅವರು ಫುಲ್ ಗರಂ ಆಗಿದ್ದಾರೆ. ಇದೇ ವಿಚಾರವಾಗಿ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದರೊಂದಿಗೆ ಗೋವುಗಳೊಂದಿಗೆ ಸುಧಾರಾಣಿ ಅವರ ಬಾಲ್ಯದ ಫೋಟೋಗಳನ್ನು ಕೂಡ ಅವರ ಶೇರ್ ಮಾಡಿಕೊಂಡಿದ್ದಾರೆ.

"ಒಬ್ಬ ಪ್ರಾಣಿ ಪ್ರೇಮಿಯಾಗಿ ಈ ಕೃತ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ನೋಡಿ, ಇದರ ಬಗ್ಗೆ ಓದಿ ನನ್ನಿಂದ ಸುಮ್ಮನೆ ಇರಲು ಸಾಧ್ಯವಾಗಲಿಲ್ಲ. ಸುಮ್ಮನೆ ಇರೋದು ಕೂಡ ತಪ್ಪು. ನಾವು ತಾಯಿಯ ಸ್ಥಾನ ಕೊಟ್ಟಿರೋ ಕಾಮಧೇನುವಿಗೆ ಹೀಗೆ ಅಮಾನವೀಯವಾಗಿ ಹಿಂಸೆ ಕೊಟ್ಟಿರೋದನ್ನ ನೋಡಿದ್ರೆ ಕರುಳು ಕಿವುಚಿ ಬರುವಷ್ಟು ಸಂಕಟ ಆಗುತ್ತೆ" ಎಂದು ಸುಧಾರಾಣಿ ಗರಂ ಆಗಿದ್ದಾರೆ.
"ಈಗಲಾದ್ರೂ ನಮ್ಮ ಶಾಸಕಾಂಗ ಎಚ್ಚೆತ್ತುಕೊಳ್ಳಬೇಕು. ಕೆಟ್ಟದ್ದನ್ನೇ ಅರಿಯದ ನಾಯಿ, ಕುರಿ, ಹಸು, ಕುದುರೆ, ಕತ್ತೆ ಇಂಥಹ ಯಾವುದೇ ಮೂಕಪ್ರಾಣಿಗಳಿಗೆ, ಪಕ್ಷಿಗಳಿಗೆ ಹಿಂಸೆ ಕೊಡುವ ಕ್ರೂರಿಗಳಿಂದ 50 ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟು ಬಿಡೋದಲ್ಲ. ಇದು ಬೇಲೆಬಲ್ ಅಫೆನ್ಸ್ ಕೂಡ ಅಲ್ಲ. ಎಷ್ಟೋ ಜನ ಪ್ರಾಣಿ ಪಕ್ಷಿ ಪ್ರೇಮಿಗಳು ಮೂಕಜೀವಿಗಳಿಗೆ ಹಿಂಸೆ ಕೊಡೋದು ಜಾಮೀನು ರಹಿತ ಅಪರಾಧ ಅನ್ನೋ ಕಾನೂನನ್ನು ತರಲು ಹೋರಾಟ ಮಾಡುತ್ತಿದ್ದಾರೆ. ಇಂತಹ ಕ್ರೂರಿಗಳನ್ನ ಜೈಲಿನಲ್ಲಿಟ್ಟು ಸಾಕಬೇಕೆ?" ಎಂದು ಕೆಂಡವಾಗಿದ್ದಾರೆ.

"ಅವರು ಜೈಲಿನ ಒಳಗಡೆ ಚೆನ್ನಾಗಿ ಊಟ ತಿಂಡಿ ಮಾಡ್ಕೊಂಡು ಆರಾಮಾಗಿ ಇರ್ತಾರೆ. ಇವರಿಗೆ 50 ರೂಪಾಯಿ, 50 ಸಾವಿರ ರೂಪಾಯಿ ಅಂತ ದಂಡ ಹಾಕಿದ್ರೆ, ಹೇಗೋ ಏನೋ ಮಾಡಿ, ಸಾಲ ಮಾಡಿಯಾದ್ರೂ ದಂಡ ಕಟ್ಟಿ ಹೊರಗಡೆ ಬರ್ತಾರೆ. ಈ ಎರಡು ಶಿಕ್ಷೆಗಳಿಂದ ಯಾವುದೇ ಬದಲಾವಣೆ ತರೋಕೆ ಸಾಧ್ಯವಿಲ್ಲ. ಇಂಥವರಿಗೆ ಘೋರವಾದ ಶಿಕ್ಷೆ ಕೊಡಬೇಕಾದ ಅವಶ್ಯಕತೆ ಇದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಬೇರೆ ದೇಶಗಳಲ್ಲಿ ಇರೋ ಹಾಗೆ ನಮ್ಮ ದೇಶದಲ್ಲೂ ಪ್ರಾಣಿ ಪಕ್ಷಿಗಳ ಹಿಂಸೆ ಮಾಡೋರಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಪ್ರಾಣಿ ಹಿಂಸೆ ಮಾಡುವವರ ವಿರುದ್ಧ ಕ್ರಿಮಿನಲ್ ರೆಕಾರ್ಡ್ ಫೈಲ್ ಆಗಬೇಕು. ಅವರು ಇನ್ನೇನೇ ಕೆಲಸ ಮಾಡೋಕೆ ಪ್ರಯತ್ನ ಪಟ್ಟರೂ ಇಂಥ ಕೆಲಸ ಮಾಡಿರೋದಕ್ಕೆ ಕ್ರಿಮಿನಲ್ ಹಿನ್ನೆಲೆ ಇರಬೇಕು" ಎಂದು ಆಗ್ರಹಿಸಿದ್ದಾರೆ.

"ಈ ಕ್ರಮ ಕೈಗೊಂಡಾಗ ಮಾತ್ರ ಈ ರೀತಿ ಮಾಡಬೇಕು ಅಂದುಕೊಳ್ಳೋರಿಗೆ ಯೋಚನೆ ಮಾಡೋಕೆ ಕೂಡ ಭಯ ಶುರುವಾಗುತ್ತೆ. ಪ್ರಾಣಿಗಳಿಗೆ ಉಪಯುಕ್ತವಾಗೋ ಕಾನೂನನ್ನ ಈಗಲಾದರೂ ಜಾರಿಗೆ ತಂದರೆ ಮಾತ್ರ ಮುಂದೆ ಇಂಥ ಕೃತ್ಯಗಳು ನಡೆಯದೇ ಇರೋ ಹಾಗೆ ತಡೆಗಟ್ಟಬಹುದು" ಎಂದು ನಟಿ ಸುಧಾರಾಣಿ ಪೋಸ್ಟ್ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.












Click it and Unblock the Notifications