ಮಗಳಿಗೆ ರಿಯಾಲಿಟಿ ಶೋ..ಮಗನಿಗೆ ಗುರುಕುಲ ಎಷ್ಟು ಸರಿ?: ಮಾಸ್ಟರ್ ಆನಂದ್ ಉತ್ತರವೇನು?
ಕನ್ನಡದ ನಟ, ನಿರೂಪಕ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರ ಪುತ್ರ ಕೃಷ್ಣ ಚೈತನ್ಯ ಕಶ್ಯಪ ಚಿಕ್ಕಮಗಳೂರಿನ ಗುರುಕುಲವೊಂದರಲ್ಲಿ ಓದುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತ ಮಗಳು ವಂಶಿಕಾ ಅಂಜನಿ ಕಶ್ಯಪ ತನ್ನ ಓದಿನ ಜೊತೆಗೆ ನಟನೆ ಮತ್ತು ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾಳೆ.
ಮಗಳನ್ನು ಮುಖ್ಯಭೂಮಿಕೆ ತಂದು ಮಗನನ್ನು ಗುರುಕುಲದಲ್ಲಿ ಬಿಟ್ಟು ಇರುವುದು ಎಷ್ಟು ಸರಿ? ಮಗನಿಗೆ ಗುರುಕುಲ ಮಗಳಿಗೆ ರಿಯಾಲಿಟಿ ಶೋ? ಮಗಳು ಬಾಲ ಕಲಾವಿದೆ ಎನ್ನುವ ಕಾರಣಕ್ಕೆ ಮಕ್ಕಳಲ್ಲಿ ಪಕ್ಷಪಾತ ಮಾಡುತ್ತೀರಾ ಎನ್ನುವ ನೆಟ್ಟಿಗರ ಕಮೆಂಟ್ಗೆ ನಿರೂಪಕ ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಮಾಸ್ಟರ್ ಆನಂದ್ ಖಡಕ್ ಉತ್ತರ ಕೊಟ್ಟಿದ್ದಾರೆ.

ಮಗನನ್ನು ಬಿಟ್ಟಿರುವುದು ಎಷ್ಟು ಕಷ್ಟ ಎನ್ನುವುದರ ಬಗ್ಗೆ ಮೊದಲು ಯಶಸ್ವಿನಿ ಮಾಸ್ಟರ್ ಆನಂದ್ ಮಾತನಾಡಿದ್ದು, 'ಅವನನ್ನು ಅಲ್ಲಿಗೆ ಸೇರಿಸಿದರೆ ಏನೋ ಒಂದು ಕಲಿಯುತ್ತಾನೆ ಎನ್ನುವುದು ಗೊತ್ತಿತ್ತು. ಅಲ್ಲಿದ್ದರೆ ನಮ್ಮನ್ನು ಬಿಟ್ಟಿದ್ದರೆ ಜೀವನ ಪಾಠಗಳನ್ನು ಕಲಿಯುತ್ತಾನೆ ಎನ್ನುವುದು ಗೊತ್ತಿತ್ತು. ಆದರೆ ಒಂದು ಆರು ತಿಂಗಳ ಕಳೆದ ಬಳಿಕ ತುಂಬಾ ತೂಕ ಕಳೆದುಕೊಂಡ. ಆಗ ನನಗೆ ಟೆನ್ಷನ್ ಶುರುವಾಯ್ತು. ಅವನು ಗುರುಕುಲದಲ್ಲಿ ಊಟನೇ ಮಾಡುತ್ತಿರಲಿಲ್ಲ. ಅವನಿಗೆ ಹೋಮ್ ಸಿಕ್ ಆಗಿತ್ತು. ಮನೆಯಲ್ಲಿ ಹೊಟ್ಟೆ ತುಂಬಾ ಊಟ ಮಾಡುವವನು ಹೋಮ್ ಸಿಕ್ ಆಗಿ ಊಟ ಮಾಡುತ್ತಿರಲಿಲ್ಲ. ಅವನನ್ನು ನೋಡಿ ನಮಗೆ ಬಹಳ ಬೇಜಾರಾಯ್ತು' ಎಂದರು.
'ಅಲ್ಲಿ ಚೆನ್ನಾಗಿ ಊಟ ಕೊಡುತ್ತಿದ್ದರು. ಫ್ರೆಂಡ್ಸ್ ಜೊತೆ ಕೂಡ ಚೆನ್ನಾಗಿದ್ದ. ಹೇಗಾಗಿತ್ತು ಅಂದರೆ ನಾವು ಹೋಗಿ ಬಂದರೆ ಮೂರ್ನಾಲ್ಕು ದಿನ ಅವನು ಅದೇ ಆಲೋಚನೆಯಲ್ಲಿ ಇರುತ್ತಿದ್ದ. ನನ್ನ ದುಪ್ಪಟ್ಟ ಕೊಡು ಎಂದು ಕೇಳುತ್ತಿದ್ದ. ಅದೆಲ್ಲಾ ನನಗೆ ಬಹಳ ಹಿಂಸೆ ಆಗಲು ಶುರುವಾಯ್ತು. ಅವನು ಇಲ್ಲಿದ್ದಾಗ ಹಾಗೆಲ್ಲಾ ಇರಲಿಲ್ಲ. ತುಂಬಾ ಜಾಲಿಯಾಗಿ ಇರುತ್ತಿದ್ದ. ಆದರೆ ಅಲ್ಲಿಗೆ ಹೋದ ಮೇಲೆ ತುಂಬಾ ಭಾವನಾತ್ಮಕವಾಗಿ ಬದಲಾದ' ಎಂದು ಮಗನನ್ನು ಗುರುಕುಲದಲ್ಲಿ ಬಿಟ್ಟು ಬಂದಾಗ ತಮಗಾದ ನೋವನ್ನು ಯಶಸ್ವಿನಿ ಮಾಸ್ಟರ್ ಆನಂದ್ ಹಂಚಿಕೊಂಡಿದ್ದಾರೆ.

ಇನ್ನು ಮಕ್ಕಳಲ್ಲಿ ಪಕ್ಷಪಾತ ಮಾಡುತ್ತೀರಾ? ಎನ್ನುವ ಕಮೆಂಟ್ ಬಗ್ಗೆ ಮಾಸ್ಟರ್ ಆನಂದ್ ಮಾತನಾಡಿದ್ದು, 'ನಮಗೆ ನಮ್ಮ ಮಕ್ಕಳು ಇಬ್ಬರೂ ಒಂದೇ. ಇವಳು ಟಿವಿ ಸಿನಿಮಾದಲ್ಲಿ ಮಾಡಿದ ಕೂಡಲೇ ಇವಳನ್ನು ಜಾಸ್ತಿ ಪ್ರೀತಿ ಮಾಡಲು ಹೇಗೆ ಸಾಧ್ಯ. ಈ ರೀತಿ ಕಮೆಂಟ್ ಮಾಡಲು ನೀವು ನಮ್ಮ ಮನೆಯಲ್ಲಿ ಇದ್ದು ನೋಡಿದ್ದೀರಾ? ಅವನನ್ನು ನಾನು ಎಷ್ಟು ಪ್ರೀತಿ ಮಾಡುತ್ತೇನೆ. ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ನನಗೆ ಗೊತ್ತು. ಅವನಲ್ಲಿ ಎಷ್ಟು ಒಳ್ಳೆ ಗುಣಗಳು ಇದೆ. ಅದು ನಿಮಗೆ ಗೊತ್ತಾ? ಅದಕ್ಕೆಲ್ಲಾ ನಾನು ರೀಲ್ಸ್ ಮಾಡಿ ಹಾಕ್ಲಾ?' ಎಂದು ಕಮೆಂಟ್ ಹಾಕುವವರನ್ನು ಪ್ರಶ್ನಿಸಿದ್ದಾರೆ.
'ಇನ್ನು ಅವನು ಎಷ್ಟು ಯೋಚನೆ ಮಾಡುತ್ತಾನೆ ಎಂದರೆ ಕೆಲವೊಂದು ವಿಚಾರಕ್ಕೆ ನಮಗೆ ತಿಳಿ ಹೇಳುತ್ತಾನೆ. ಈ ರೀತಿ ಆಲೋಚನೆ ಮಾಡುವ ನಮ್ಮಂತ ಹೆತ್ತವರಿಗೆ ಈ ರೀತಿ ಯೋಚನೆ ಮಾಡುವ ಮಗುನಾ ಅಂತಾ ನಮಗೆ ಖುಷಿಯಾಗುತ್ತದೆ. ಅವನಲ್ಲೂ ಒಳ್ಳೆ ವಿಚಾರಗಳು ಸಾಕಷ್ಟಿದೆ. ಅವನು ಚಿಕ್ಕ ವಯಸ್ಸಿನಲ್ಲಿ ಸಿನಿಮಾ ರಿಯಾಲಿಟಿ ಶೋ ಮಾಡಿದ್ದಾನೆ. ಪ್ರಪಂಚ ಅದರ ಅಳತೆಯಂತೆ ಎಲ್ಲರನ್ನೂ ನೋಡುತ್ತದೆ' ಎಂದು ಮಾಸ್ಟರ್ ಆನಂದ್ ವಿಶ್ವ ವಾಣಿ ಟಿವಿ ಸ್ಪೆಷಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications