ರಿಷಬ್ ಶೆಟ್ಟಿ ಸಿನಿಮಾದ ಇಬ್ಬರು ನಟರು ಸಾವು: ಅಂದು ದೈವ ನುಡಿದಿದ್ದೇ ನಿಜವಾಯ್ತಾ?
ಡಿವೈನ್ ಸ್ಟಾರ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಮೂಲಕ ಈಗಾಗಲೇ ಯಶಸ್ಸು ಕಂಡಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಅವರು ಕಾಂತಾರ ಸೀಕ್ವೆಲ್ಗೂ ಕೈಹಾಕಿದ್ದಾರೆ. ಕಾಂತಾರ ಚಾಪ್ಟರ್-1 ಸಿನಿಮಾ ಸೆಟ್ಟೇರಿದ್ದು, ಶೂಟಿಂಗ್ ನಡೆಯುತ್ತಿದೆ. ಆದರೆ ಈ ಸಿನಿಮಾ ಶುರುವಾದಾಗಿನಿಂದಲೂ ಚಿತ್ರತಂಡಕ್ಕೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಇದೇ ಸಿನಿಮಾದ ಶೂಟಿಂಗ್ ಮುಗಿಸಿ ಬಂದಿದ್ದ ಹಾಸ್ಯನಟ ಮತ್ತು ಕಾಮಿಡಿ ಕಿಲಾಡಿಗಳು ಸೀಸನ್-3ರ ವಿಜೇತ ರಾಕೇಶ್ ಪೂಜಾರಿ ನಿಧನರಾಗಿರುವುದು ಚಿತ್ರತಂಡಕ್ಕೆ ಮತ್ತೊಂದು ದೊಡ್ಡ ಆಘಾತವೇ ನೀಡಿದೆ. ಇದನ್ನೆಲ್ಲ ಗಮನಿಸುತ್ತಿದ್ದರೆ ವಾರಾಹಿ ಪಂಜುರ್ಲಿ ದೈವವು ರಿಷಬ್ ಶೆಟ್ಟಿಗೆ ಹೇಳಿದ್ದ ಮಾತುಗಳು ನಿಜವಾಗುತ್ತಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂತಾರ ಚಾಪ್ಟರ್-1 ಸಿನಿಮಾ ಸೆಟ್ಟೇರಿದಾಗಿನಿಂದಲೂ ರಿಷಬ್ ಶೆಟ್ಟಿ ಅವರು ಸಮಸ್ಯೆಗಳ ಸರಮಾಲೆಯಲ್ಲೇ ಸಿಲುಕುತ್ತಿದ್ದಾರೆ. ಐದು ದಿನಗಳ ಹಿಂದಷ್ಟೇ ಈ ಸಿನಿಮಾದ ಶೂಟಿಂಗ್ ವೇಳೆ ದುರಂತ ನಡೆದಿತ್ತು. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಎಂಬುವವರು ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ಬಳಿ ಶೂಟಿಂಗ್ ಮುಗಿಸಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಶೂಟಿಂಗ್ಗಾಗಿ ಕೊಲ್ಲೂರಿಗೆ ಬಂದಿದ್ದ ಕಪಿಲ್, ಶೂಟಿಂಗ್ ಮುಗಿಸಿ ಅಲ್ಲಿನ ಸೌಪರ್ಣಿಕ ನದಿಯಲ್ಲಿ ತಮ್ಮ ತಂಡದವರ ಜೊತೆ ಈಜಲು ತೆರಳಿದ್ದಾಗ ಈ ಘಟನೆ ಸಂಭವಿಸಿತ್ತು. ನೀರಿನ ಆಳ ಹೆಚ್ಚಾಗಿರುವುದು ತಿಳಿಯದೆ ನದಿಗೆ ಇಳಿದಿದ್ದ ಕಪಿಲ್, ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಘಟನೆ ಮಾಡುವ ಮುನ್ನವೇ ಮತ್ತೊಂದು ಸಾವು ಸಂಭವಿಸಿದೆ. ಇದೇ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಹಾಸ್ಯನಟ ರಾಕೇಶ್ ಪೂಜಾರಿ ಕೂಡ ಹಠಾತ್ ನಿಧನರಾಗಿರುವುದು ಚಿತ್ರತಂಡಕ್ಕೆ ದೊಡ್ಡ ಶಾಕ್ ನೀಡಿದೆ.
ಕಳೆದ ವರ್ಷ ಇದೇ ಸಿನಿಮಾ ಶೂಟಿಂಗ್ ವೇಳೆ ಕಾಂತಾರ ಸಿನಿಮಾದ ಕಲಾವಿದರಿದ್ದ ಬಸ್ ದುರಂತ ಸಂಭವಿಸಿತ್ತು. ಉಡುಪಿ ಬಳಿ ನಡೆದ ಅಪಘಾತದಲ್ಲಿ ಚಿತ್ರತಂಡದ ಬಸ್ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಇಬ್ಬರು ಕಲಾವಿದರು ಶೂಟಿಂಗ್ ನಡುವೆಯೇ ಇಹಲೋಕ ತ್ಯಜಿಸಿದ್ದಾರೆ. ಹಾಸನ ಬಳಿಯ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲೂ ಕಾಂತಾರ ಚಿತ್ರತಂಡಕ್ಕೆ ವಿರೋಧ ವ್ಯಕ್ತವಾಗಿತ್ತು. ಶೂಟಿಂಗ್ನಲ್ಲಿ ಸ್ಫೋಟಕ ವಸ್ತುಗಳ ಬಳಕೆ ಆರೋಪ ಕೇಳಿ ಬಂದಿತ್ತು. ಈ ಸಿನಿಮಾಗೆ ಪದೇ ಪದೇ ಸಮಸ್ಯೆಗಳು ಎದುರಾಗುತ್ತಲೇ ಇವೆ. ಇತ್ತೀಚೆಗೆ ರಿಷಬ್ ಶೆಟ್ಟಿಗೆ ದೈವ ನುಡಿದಿದ್ದೇ ನಿಜವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ತಿಂಗಳಷ್ಟೇ ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವಸ್ಥಾನಕ್ಕೆ ರಿಷಬ್ ಶೆಟ್ಟಿ ಕುಟುಂಬ ಸಮೇತ ಭೇಟಿ ನೀಡಿದ್ದರು. ನೇಮೋತ್ಸವದಲ್ಲಿ ಭಾಗಿಯಾಗಿದ್ದ ರಿಷಬ್ಗೆ ದೈವವು ಕೆಲವು ಮಾತುಗಳನ್ನು ಹೇಳಿತ್ತು. ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ, ನಿನ್ನ ಕೆಲಸ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆ ಎಂದು ಇಲ್ಲಿಗೆ ಬಂದಿದ್ದೀಯ, ಯಾರೋ ನಿನಗೆ ಕೇಡು ಬಯಸಿದ್ದಾರೆ. ಅವರು ಯಾರೆಂದು ಹೇಳಲ್ಲ, ನಿನಗೆ ಕೇಡು ಆಗದಂತೆ ನೋಡಿಕೊಳ್ಳುತ್ತೇನೆ. ನೀನು ನಂಬಿದ ದೈವ ಕೈಬಿಡಲ್ಲ, 5 ತಿಂಗಳಲ್ಲಿ ಒಳ್ಳೇದು ಮಾಡ್ತೇನೆ ಎಂದು ಅಭಯ ನೀಡಿತ್ತು. ಇದಾದ ಒಂದು ತಿಂಗಳಿನಲ್ಲೇ ಈ ರಿಷಬ್ ಸಿನಿಮಾದ ಇಬ್ಬರು ಕಲಾವಿದರ ಸಾವು ಸಂಭವಿಸಿದೆ. ರಿಷಬ್ಗೆ ದೈವ ನುಡಿದಿದ್ದು ನಿಜವಾಗುತ್ತಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications