ಗಟ್ಟಿಮೇಳ ಧಾರಾವಾಹಿ ಹಿರಿಯ ನಟಿಗೆ ಕ್ಯಾನ್ಸರ್: ಚಿಕಿತ್ಸೆಗೆ ನೆರವಾದ ಉಮಾಶ್ರೀ
ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಅಜ್ಜಿ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಕಮಲಶ್ರೀ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿ ಮುಗಿಯುತ್ತಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ವೈದ್ಯರ ತಪಾಸಣೆ ಬಳಿಕ ಕಾನ್ಸರ್ ಎಂದು ತಿಳಿದು ಬಂದಿದೆ. ಸದ್ಯ ಹಿರಿಯ ನಟಿ ಕಮಲಶ್ರೀ ಅವರು ಬ್ರೆಸ್ಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಗುಣಮುಖರಾಗಲು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಪಂಚಮಿ ಟಾಕೀಸ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಸದ್ಯಕ್ಕೆ ನನ್ನ ಆರೋಗ್ಯ ಚೆನ್ನಾಗಿಲ್ಲ. ಕ್ಯಾನ್ಸರ್ ಆಗಿದೆ. ಬ್ರೆಸ್ಟ್ ಕ್ಯಾನ್ಸರ್ ಆಗಿದೆ. ಕಿದ್ವಾಯಿ ಆಸ್ಪತ್ರೆಗೆ ತಿಂಗಳು ತಿಂಗಳು ರಕ್ತ ಪರೀಕ್ಷೆ ಮಾಡಿಸಿ ರಿಪೋರ್ಟ್ ತೆಗೆದುಕೊಂಡು ಹೋಗುತ್ತೇನೆ. ಮೂರು ತಿಂಗಳಿಗೊಂದು ಸಲ ಸ್ಕ್ಯಾನಿಂಗ್ ಮಾಡುತ್ತಾರೆ. ಪ್ರತಿ ಶುಕ್ರವಾರ ಸೇವಾಶ್ರಯದವರು ಬಂದು ಗಾಯಕ್ಕೆ ಡ್ರೆಸಿಂಗ್ ಮಾಡಿ ಹೋಗುತ್ತಾರೆ' ಎಂದರು.

'ನನಗೆ ವಯಸ್ಸಾಗಿರುವುದರಿಂದ ಸರ್ಜರಿ ಮಾಡಲು ಆಗುವುದಿಲ್ಲವಂತೆ. ಕಿಮಿಯೋಥೆರಪಿ ಕೊಟ್ಟರೆ ನಾನು ತಡೆಯಲಾಗುವುದಿಲ್ಲವಂತೆ. ಅದಕ್ಕೆ ಸ್ವಲ್ಪ ದುಬಾರಿ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಅವುಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆ ಮಾತ್ರೆಗಳಿಂದಲೇ ನಾನು ಶೇಕಡಾ ಅರವತ್ತುರಷ್ಟು ಗುಣಮುಖ ಆಗಿದೆ ಅಂತಾ ಡಾಕ್ಟರ್ ಹೇಳಿದ್ದಾರೆ. ಅವರು ಹೇಳಿದ ಹಾಗೆಯೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ'.
'ಡಾಕ್ಟರ್ ನನಗೆ ಚೆನ್ನಾಗಿ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡಿ, ಆರಾಮಾಗಿರಿ ಅಂತಾ ಹೇಳಿದ್ದಾರೆ. ಏನೂ ಭಾರ ಹೊರಲು ಹೋಗಬೇಡಿ. ಸದ್ಯಕ್ಕೆ ಕಷ್ಟಪಡಬೇಡಿ, ಮನೆಯಲ್ಲೇ ವಿಶ್ರಾಂತಿ ಪಡೆಯಿರಿ ಅಂತಾ ಹೇಳಿದ್ದಾರೆ. ಹೀಗಾಗಿ ಮನೆಯಲ್ಲೇ ಆರಾಮಾಗಿದ್ದೇನೆ' ಎಂದು ಹೇಳಿದರು.

'ನನಗೆ ಕ್ಯಾನ್ಸರ್ ಅಂತಾ ಗೊತ್ತಾದಾಗ ನಾನು ಮೊದಲು ಫೋನ್ ಮಾಡಿದ್ದೇ ಗಿರಿಜಾ ಲೋಕೇಶ್ ಅವರಿಗೆ. ಮೊದಲು ಹೋದ ಆಸ್ಪತ್ರೆಯಲ್ಲಿ ತುಂಬಾ ದುಬಾರಿ ಇತ್ತು. ನಮ್ಮ ಹತ್ತಿರ ಅಷ್ಟು ದುಡ್ಡಿರಲಿಲ್ಲ. ಹೀಗಾಗಿ ಗಿರಿಜಾ ಲೋಕೇಶ್ ಅವರಿಗೆ ಫೋನ್ ಮಾಡಿದೆ. ಅವರು ನಾನು ಹೇಳುತ್ತೇನೆ ಆ ಡಾಕ್ಟರ್ ಹತ್ತಿರ ಕಿದ್ವಾಯಿ ಆಸ್ಪತ್ರೆಗೆ ಹೋಗು ಎಂದರು. ಬಳಿಕ ಉಮಾಶ್ರೀಗೂ ಅದೇ ದಿನ ಫೋನ್ ಮಾಡಿದೆ. ಅವರು ಆಗ ಬೆಳಗಾವಿಯಲ್ಲಿ ಇದ್ದರು. ಬೆಳಗಾವಿಯಿಂದ ಬಂದವರೇ ನನಗೆ ಫೋನ್ ಮಾಡಿದರು. ಆಮೇಲೆ ಇಬ್ಬರು ಕಿದ್ವಾಯಿ ಆಸ್ಪತ್ರೆಗೆ ಹೋದೆವು'.
'ಸ್ಕ್ಯಾನಿಂಗ್ಗಳಿಗೆಲ್ಲಾ ಉಮಾಶ್ರೀನೇ ದುಡ್ಡು ಕಟ್ಟಿದ್ದು. ಆಗಾಗ ಅಕೌಂಟ್ಗೆ ದುಡ್ಡು ಹಾಕುತ್ತಾಳೆ. ಡಾಕ್ಟರ್ಗೂ ಸಹ ದುಡ್ಡು ತೆಗೆದುಕೊಳ್ಳಬಾರದು ಎಂದು ಹೇಳಿದ್ದಾಳೆ. ಗಿರಿಜಾ ಲೋಕೇಶ್ ಸಹ ಆಗಾಗ ದುಡ್ಡು ಹಾಕುತ್ತಾಳೆ. ಈಗ ಯಾರೋ ಪುಣ್ಯಾತ್ಮರು ಇಪ್ಪತ್ತೈದು ಕೆ.ಜಿ ಅಕ್ಕಿ ತಂದುಕೊಟ್ಟರು. ಅವರು, ಇವರು ಸಹಾಯ ಮಾಡುತ್ತಾರೆ. ನನ್ನ ಸಹ ಕಲಾವಿದರಾದ ಮೈಸೂರು ಮಾಲತಿ, ವೀಣಾ ವೆಂಕಟೇಶ್, ಅಶ್ವಿನಿ, ಅನು ಪೂವಮ್ಮ, ಪದ್ಮಾ ಇವರೆಲ್ಲಾ ದುಡ್ಡು ಕೊಟ್ಟು ಸಹಾಯ ಮಾಡಿದ್ದಾರೆ. ನನ್ನ ಸೋದರ ಮಾವನ ಮಗ ಕೂಡ ಸಹಾಯ ಮಾಡಿದ. ಹೀಗೆ ಅವರೋ ಇವರೋ ಕೊಟ್ಟ ಹಣದಿಂದ ಮನೆಯಲ್ಲಿ ಧವಸ ಧಾನ್ಯಕ್ಕೆ ಮತ್ತು ಮಾತ್ರೆಗಳಿಗೆ ತೊಂದರೆ ಇಲ್ಲ' ಎಂದು ತಮ್ಮ ಪರಿಸ್ಥಿತಿ ಬಗ್ಗೆ ಹೇಳಿಕೊಂಡರು.












Click it and Unblock the Notifications