ರೀಲ್ಸ್ ಸ್ಟಾರ್, ಸೀರಿಯಲ್ ನಟನ ವಿರುದ್ಧ ಎಫ್ಐಆರ್
ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡು, ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ್ದ ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವತಿಗೆ ಬೆದರಿಕೆ ಹಾಕಿರುವ ಆರೋಪದ ಮೇರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಕೇಸ್ ದಾಖಲಾಗಿದೆ. ಯುವತಿಯ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ವರುಣ್ ಯುವತಿಗೆ ಹೆದರಿಸಿದ್ದ ಎನ್ನುವ ಆರೋಪವಿದೆ.
ಹಾಗಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ವರುಣ್ ವಿರುದ್ಧ ಕ್ರಮ ಜರುಗಿಸುವಂತೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾಗಾಗಿ ಪೊಲೀಸರು ವರುಣ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಟಿಕ್ಟಾಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವರುಣ್ ಆರಾಧ್ಯ ಹೆಚ್ಚಿನ ಫಾಲೋವರ್ಸ್ ಹೊಂದಿದ್ದರು. ಬಳಿಕ ವರುಣ್ಗೆ ಕನ್ನಡ ಖಾಸಗಿ ವಾಹನಿಯೊಂದರಲ್ಲಿ ಪ್ರಸಾರವಾಗುವ ಸೀರಿಯಲ್ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು.
ಮೂಲಗಳ ಪ್ರಕಾರ ವರುಣ್ ಮಾಜಿ ಪ್ರೇಯಸಿಯೇ ಈ ರೀತಿ ದೂರು ನೀಡಿದ್ದಾರೆ. ಈ ಹಿಂದೆ ಇಬ್ಬರೂ ಪ್ರೇಮದಲ್ಲಿದ್ದರು. ಆದರೆ, ಇದೇ ವೇಳೆ ಮತ್ತೊಂದು ಯುವತಿಯ ಜೊತೆ ವರುಣ್ ಸಂಬಂಧ ಹೊಂದಿದ್ದ ಎನ್ನುವ ವಿಚಾರಕ್ಕೆ ಇಬ್ಬರ ಸಂಬಂಧ ಮುರಿದಿತ್ತು ಎನ್ನಲಾಗಿದೆ.
ಅಲ್ಲದೆ ಇದನ್ನು ಪ್ರಶ್ನಿಸಿದ್ದಕ್ಕೆ ತನ್ನೊಂದಿಗಿದ್ದ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋ ಹರಿಬಿಡುವುದಾಗಿ ವರುಣ್ ಹೆದರಿಸಿದ್ದ. ಬೇರೆ ಯುವಕರನ್ನು ಮದುವೆಯಾದರೆ ಅವನನ್ನೂ ಸಾಯಿಸಿ, ನಿನ್ನನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ ಯುವತಿಯ ವಾಟ್ಸ್ಆಪ್ ನಂಬರ್ಗೆ ಖಾಸಗಿ ಫೋಟೋಗಳನ್ನು ಕಳುಹಿಸಿ, ಕೆಟ್ಟ ಪದಗಳಿಂದ ಬೈದಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿಯ ದೂರು ಆಧರಿಸಿ ಬಸವೇಶ್ವರ ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಹಿಂದೆ ವರುಣ್ ಜೊತೆ ಯುವತಿಯೊಬ್ಬರು ಬಹಳ ಪ್ರೇಮದಲ್ಲಿದ್ದರು. ಟಿಕ್ಟಾಕ್ ಹಾಗೂ ಸೋಶಿಯಲ್ ಮೀಡಿಯಾದಲ್ಲೇ ಇವರ ಲವ್ ಸ್ಟೋರಿ ಶುರುವಾಗಿತ್ತು. ಹೀಗಾಗಿ ಇಬ್ಬರಿಗೂ ಫಾಲೋವರ್ಸ್ ಕೂಡ ಲಕ್ಷಗಟ್ಟಲೆ ಇದ್ದರು.
ಬಳಿಕ ಯೂಟ್ಯೂಬ್ನಲ್ಲೂ ಈ ಜೋಡಿ ಸಖತ್ ಕ್ರೇಜ್ ಹುಟ್ಟಿಸಿತ್ತು. ಪ್ರತಿದಿನವೂ ವಿಡಿಯೋ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಇವರಿಬ್ಬರೂ ಇನ್ನೇನು ಮದುವೆಯಾಗಲಿದ್ದಾರೆ ಎಂದೂ ಹೇಳಲಾಗಿತ್ತು.
ಆದರೆ, ಕಳೆದ ವರ್ಷ ಇಬ್ಬರ ಬ್ರೇಕಪ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ವರುಣ್ ವಿರುದ್ಧ ಆಗಲೇ ಹಲವು ಆರೋಪಗಳನ್ನು ಮಾಡಿದ್ದ ಯುವತಿ, ಇಬ್ಬರ ಸಂಬಂಧ ಮುರಿದುಬಿದ್ದಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಅನೌನ್ಸ್ ಕೂಡ ಮಾಡಿದ್ದರು.
ನನ್ನ ಮತ್ತು ವರುಣ್ ನಡುವೆ ಮತ್ತೊಬ್ಬಳು ಹುಡುಗಿ ಬಂದಿದ್ದಾಳೆ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ಗಲಾಟೆ ನಡೆದಿದೆ. ವರುಣ್ಗೆ ನಾನು ಬೇಡವಂತೆ, ಆಕೆಯೇ ಬೇಕಂತೆ, ನಾನು ಎಷ್ಟೇ ಹೇಳಿದ್ರೂ ಆ ಹುಡುಗಿಯನ್ನು ವರುಣ್ ಬಿಡಲ್ವಂತೆ. ಅದೇ ಹುಡುಗಿ ಜೊತೆ ಜೀವನ ನಡೆಸುತ್ತೇನೆ ಎಂದಿದ್ದಾನೆ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದು ಆ ಯುವತಿ ಹೇಳಿದ್ದರು.
ಬಳಿಕ ವರುಣ್ ಆರಾಧ್ಯಗೆ ಸೀರಿಯಲ್ನಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ʼಬೃಂದಾವನʼ ಎನ್ನುವ ಧಾರಾವಾಹಿಯಲ್ಲಿ ವರುಣ್ ಆರಾಧ್ಯ ನಟನೆ ಶುರು ಮಾಡಿದ್ದರು. ಇದೀಗ ನಟನಿಗೆ ಸಂಕಷ್ಟ ಎದುರಾಗಿದೆ.












Click it and Unblock the Notifications