ಹಳಿ ತಪ್ಪಿದ ಭಾಗ್ಯಲಕ್ಷ್ಮಿ ಧಾರಾವಾಹಿ: ನಟಿ ಸುಷ್ಮಾ ರಾವ್ ಫ್ಯಾನ್ಸ್ ಗರಂ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಕಥೆ ಇಂಟ್ರಸ್ಟಿಂಗ್ ಆಗಿದ್ದರೂ ಕೂಡ ಚಿತ್ರ ಕಥೆಯಲ್ಲಿ ವೈಫಲ್ಯ ಕಾಣುತ್ತಿದೆ. ಆರಂಭದಿಂದಲೂ ಕುತೂಹಲಕಾರಿಯಾಗಿದ್ದ ಭಾಗ್ಯಲಕ್ಷ್ಮಿ ಕಥೆ, ನಾನು ಭಾಗ್ಯ ಅಧ್ಯಾಯ ಆರಂಭವಾದ ಮೇಲಂತೂ ಮಹಿಳೆಯರಿಗೆ ಅಚ್ಚುಮೆಚ್ಚಾಗಿದೆ.
ಮನೆಯಲ್ಲಿರುವ ಹೆಂಡತಿ ಭಾಗ್ಯಗಳಿಗೆ ಮೋಸ ಮಾಡಿ ಆಫೀಸ್ನಲ್ಲಿ ಪ್ರೀತಿ ಮಾಡಿದ ಶ್ರೇಷ್ಠಳನ್ನು ಮದುವೆಯಾಗಿರುವ ತಾಂಡವ್ ವಿರುದ್ಧ ಪ್ರೇಕ್ಷಕರ ವ್ಯಾಪಕ ಆಕ್ರೋಶ ಇದೆ. ಜೊತೆಗೆ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ಭಾಗ್ಯ ಮೇಲೆ ಕೂಡ ಪ್ರೇಕ್ಷರಿಗೆ ಮೆಚ್ಚುಗೆ ಇದೆ. ಆದರೆ ಭಾಗ್ಯ ಕಷ್ಟವನ್ನು ಹೇಗೆ ಎದುರಿಸುತ್ತಾಳೆ ಎನ್ನುವ ಚಿತ್ರ ಕಥೆಯನ್ನು ತೋರಿಸುವ ಭರದಲ್ಲಿ ನಿರ್ದೇಶಕರು ಕೆಲವು ಲಾಜಿಕ್ಗಳನ್ನೇ ಮರೆಯುತ್ತಿದ್ದಾರೆ ಎನ್ನುವುದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸದ್ಯ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯಾ ಡಬ್ಬ ಸರ್ವೀಸ್ ಶುರು ಮಾಡಿದ್ದು, ಕ್ಯಾಟರಿಂಗ್ ರೀತಿ ಊಟ ನೀಡುವ ಕೆಲಸ ಶುರು ಮಾಡಿದ್ದಾಳೆ. ಭಾಗ್ಯಾಳ ಹೊಸ ಪ್ರಯತ್ನಕ್ಕೆ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಭಾಗ್ಯ ದುಡಿಯಲು ಆರಂಭಿಸಿದ್ದಾಳೆ. ಆದರೆ ಆಕೆ ಏನೇ ಮಾಡಲು ಹೊರಟರೂ ಕೂಡ ಅಡೆತಡೆಗಳು ಸಾಮಾನ್ಯ. ಯುಗಾದಿ ಹಬ್ಬದ ದಿನ ಭಾಗ್ಯಾ ಡಬ್ಬ ಸರ್ವೀಸ್ಗೆ ಒಂದಿಷ್ಟು ಹಬ್ಬದೂಟದ ಆರ್ಡರ್ಗಳು ಬಂದಿದ್ದು, ಅದನ್ನು ಸಿದ್ಧಪಡಿಸಿ, ಭಾಗ್ಯ ಹೇಗೆ ತಲುಪಿಸುತ್ತಾಳೆ ಎನ್ನುವ ಸಂಚಿಕೆಗಳು ಪ್ರಸಾರ ಕಾಣುತ್ತಿದೆ.
ಸರಿಯಾದ ಸಮಯಕ್ಕೆ ಊಟ ತಲುಪಿಸಲು ಚೂಡಿದಾರ ಧರಿಸಿರುವ ಭಾಗ್ಯ ಸೈಕಲ್ ಏರಿ ಹೊರಡುತ್ತಾಳೆ. ಈ ಸಂಚಿಕೆಯ ಪ್ರೋಮೋ ಎಲ್ಲೆಡೆ ವೈರಲ್ ಆಗುತ್ತಿದೆ. ನಿರ್ದೇಶಕರ ದಡ್ಡತನದ ಬಗ್ಗೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದು, ಕಮೆಂಟ್ಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾಲದಲ್ಲಿ ಅದರಲ್ಲೂ ಬೆಂಗಳೂರಿನ ಟ್ರಾಫಿಕ್ನಲ್ಲಿ ಬೈಕ್ ಕಾರಿನಲ್ಲಿ ಹೋದರೆ ಸಮಯಕ್ಕೆ ಸರಿಯಾಗಿ ಹೋಗುವುದು ಕಷ್ಟ. ಅಂತದರಲ್ಲಿ ಭಾಗ್ಯ ಸೈಕಲ್ ಏರಿ ಹೋಗುವುದೆಂದರೆ ಕಥೆಯಲ್ಲಿ ಲಾಜಿಕ್ ಬೇಡವೇ? ಎಂದಿದ್ದಾರೆ.

ಇನ್ನು ಕಾರು ಓಡಿಸಲು ಬಂದರೂ ತನ್ನದೇ ಕಾರು ಮುಟ್ಟದ ಭಾಗ್ಯ ಕೊನೆ ಪಕ್ಷ ಆಟೋ ರಿಕ್ಷಾವಾದರೂ ಹತ್ತಬಹುದುದಲ್ಲವೇ?, ಬೆಂಗಳೂರಿನಲ್ಲಿ ಸಂಚಾರಕ್ಕೆ ನೂರಾರು ಆ್ಯಪ್ಗಳಿವೆ, ಸದಾ ಮೊಬೈಲ್ ರೀಲ್ಸ್ನಲ್ಲಿ ಮುಳುಗುತ್ತಿದ್ದ ಪೂಜೆಗೆ ಈ ವಿಚಾರ ಹೊಳೆಯುವುದೇ ಇಲ್ಲವೇ?. ಅದೆಲ್ಲಾವನ್ನು ಬದಿಗಿಟ್ಟು ಮೂಲೆಯಲ್ಲಿದ್ದ ಸೈಕಲ್ ತಂದು ಅದಕ್ಕೆ ಊಟದ ಡಬ್ಬಿಗಳನ್ನು ಕಟ್ಟಿ ಕಥಾ ನಾಯಕಿ ಅದನ್ನು ಓಡಿಸಿಕೊಂಡು ಹೋಗುತ್ತಾಳೆ ಅಂದರೆ ನೀವಿನ್ನೂ ಯಾವ ಕಾಲದಲ್ಲಿದ್ದೀರಿ ಎಂದು ಪ್ರೇಕ್ಷಕರು ಭಾಗ್ಯಲಕ್ಷ್ಮಿ ಧಾರಾವಾಹಿ ತಂಡವನ್ನು ಪ್ರಶ್ನಿಸುತ್ತಿದ್ದಾರೆ.
ಇನ್ನೂ ಕೆಲವರು ನಾವು ಹಲವು ವರ್ಷಗಳಿಂದ ನಟಿ ಸುಷ್ಮಾ ರಾವ್ ಅವರ ಅಭಿಮಾನಿ, ನಟಿಯಾಗಿ, ನಿರೂಪಕಿಯಾಗಿ ಅವರನ್ನು ಮೆಚ್ಚಿಕೊಂಡಿದ್ದೇವೆ. ಅವರು ನಿಮ್ಮ ಭಾಗ್ಯಲಕ್ಷ್ಮಿ ಧಾರಾವಾಹಿ ಒಪ್ಪಿಕೊಂಡು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನಿಮ್ಮ ಮನಸ್ಸಿಗೆ ಬಂದಂತಹ ದೃಶ್ಯಗಳನ್ನು ಇಟ್ಟು, ಅವರ ನಟನಾ ದಕ್ಷತೆಯನ್ನು ಹಾಳುಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications