ರಾತ್ರಿ ಶೂಟಿಂಗ್ ವೇಳೆ ಚಿರತೆ ಬಂತು, ಇಬ್ಬರೇ ಇದ್ವಿ... 'ಮಹಾನಟಿ' ಪ್ರಿಯಾಂಕಾ ಅಂದು ಪಾರಾಗಿದ್ದೇಗೆ?
'ಮಹಾನಟಿ' ರಿಯಾಲಿಟಿ ಶೋನ ವಿನ್ನರ್ ಆಗಿದ್ದ ಪ್ರಿಯಾಂಕಾ ಆಚಾರ್ ಅವರು ಇದೀಗ 'ಏಳುಮಲೆ' ಸಿನಿಮಾ ಮೂಲಕ ನಟಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಬ್ಯಾನರ್ನಲ್ಲೇ ಚೊಚ್ಚಲ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಪ್ರಿಯಾಂಕಾ. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ಮಾಣ ಮಾಡುತ್ತಿದ್ದರೆ, ನಟ ರಾಣಾಗೆ ಪ್ರಿಯಾಂಕಾ ನಾಯಕಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ನಡೆದ ಭಯಾನಕ ಅನುಭವವನ್ನು ಪ್ರಿಯಾಂಕಾ ಇತ್ತೀಚಿನ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ರಾತ್ರಿ ಶೂಟಿಂಗ್ ನಡೆಯುವಾಗ ಚಿರತೆ ಬಂದಿದ್ದನ್ನು ನೆನೆದು ಬೆಚ್ಚಿಬಿದ್ದಿದ್ದಾರೆ.
ಮಹಾನಟಿ ಶೋ ಮೂಲಕ ಜನಪ್ರಿಯತೆ ಪಡೆದಿರುವ ಪ್ರಿಯಾಂಕಾ ಅವರು ಏಳುಮಲೆ ಸಿನಿಮಾದ ನಾಯಕಿಯಾಗಿ ಆಯ್ಕೆಯಾದರು. ಇನ್ನು ಹುರುಪಿನಿಂದ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಅವರು ಚಿರತೆ ನೋಡಿ ಜೀವಭಯದ ಅನುಭವ ಎದುರಿಸಿದ್ದಾರೆ. ಅಂದು ಆ ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ? ಎಂಬುದನ್ನೂ ಅವರೇ ಹೇಳಿಕೊಂಡಿದ್ದಾರೆ.

'ಅಂದು ರಾತ್ರಿ ಶೂಟಿಂಗ್ ಮಾಡಲು ನಿರ್ಧರಿಸಲಾಗಿತ್ತು. ಆರಂಭದಲ್ಲಿ ನನಗೂ ಕಷ್ಟವಾಗಿತ್ತು. ಮೊದಲ ಸಿನಿಮಾ ಆದ ಕಾರಣ ನಿದ್ದೆ ತಡೆಯಲು ಕಷ್ಟವಾಗಿತ್ತು, ಆಯಾಸ ಕೂಡ ಆಗ್ತಿತ್ತು. ಶೂಟಿಂಗ್ ಆರಂಭಕ್ಕೂ ಮುನ್ನವೇ ರಾತ್ರಿ ವೇಳೆ ಶೂಟಿಂಗ್ ಇರುತ್ತೆ ಎಂದೇ ಹೇಳಿದ್ದರು. ಇದಕ್ಕೆ ನಾನೂ ಒಪ್ಪಿಕೊಂಡಿದ್ದೆ. ಪ್ರತಿದಿನವೂ ಶೂಟಿಂಗ್ಗಾಗಿ ತಯಾರಿ ನಡೆಸುತ್ತಿದ್ದೆ' ಎಂದಿದ್ದಾರೆ ಪ್ರಿಯಾಂಕಾ.
'ಆ ದಿನ ರಾತ್ರಿ ಶೂಟಿಂಗ್ ನಡೆಯುತ್ತಿತ್ತು. ನಾನು ನಾಗಾಭರಣ ಅವರೊಂದಿಗೆ ಬೈಕ್ನಲ್ಲಿ ಹೋದೆ. ಅವರು ಬೆಟ್ಟದ ಮೇಲಿನಿಂದ ಬೈಕ್ನಲ್ಲಿ ಬರುವ ದೃಶ್ಯದ ಶೂಟಿಂಗ್ ಇತ್ತು. ಆ ಸೀನ್ನಲ್ಲಿ ನಾನು ಇರಲಿಲ್ಲ. ಹೀಗಾಗಿ ನನ್ನನ್ನ ದಾರಿ ಮಧ್ಯದಲ್ಲೇ ಇಳಿಸಿ ಹೋದರು. ನನ್ನ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ವೊಬ್ಬರು ಇದ್ದರು. ಆಗ ಇದ್ದಕ್ಕಿದ್ದಂತೆ ಒಂದು ಚಿರತೆ ಪ್ರತ್ಯಕ್ಷವಾಯ್ತು' ಎಂದು ಪ್ರಿಯಾಂಕಾ ಹೇಳಿದ್ದಾರೆ.

ʼಚಿರತೆ ನಮ್ಮನ್ನ ನೋಡಿದ್ರೆ ಇವತ್ತು ಇರುತ್ತಿರಲಿಲ್ಲʼ
'ಒಂದು ಚಿರತೆ ನಮಗೆ ಬಹಳ ಹತ್ತಿರದಿಂದಲೇ ಹೋಯಿತು. ಆ ಚಿರತೆಯನ್ನು ನಾವು ನೋಡಿದ್ವಿ, ಆದ್ರೆ ಅದು ನಮ್ಮಿಬ್ಬರನ್ನೂ ನೋಡಲಿಲ್ಲ. ಚಿರತೆ ಕಂಡು ಭಯವಾಗಿದ್ದರಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಂಡೆವು. ನಂತರ ಚಿತ್ರತಂಡದವರಿಗೆ ಫೋನ್ ಮಾಡಿದಾಗ ಅವರು ಕೂಡಲೇ ಅಲ್ಲಿಗೆ ಬಂದು ನಮ್ಮನ್ನ ಕಾರಿನಲ್ಲಿ ಕರೆದುಕೊಂಡು ಹೋದರು. ಒಂದು ವೇಳೆ ಚಿರತೆ ನಮ್ಮನ್ನ ನೋಡಿದ್ದರೆ ನಾವಿಬ್ಬರೂ ಇಂದು ಜೀವಂತವಾಗಿ ಇರುತ್ತಿರಲಿಲ್ಲ. ಆ ಘಟನೆಯನ್ನ ನಾವು ಎಂದಿಗೂ ಮರೆಯೋದಿಲ್ಲ' ಎಂದಿದ್ದಾರೆ.
ಪುನೀತ್ ರಂಗಸ್ವಾಮಿ ನಿರ್ದೇಶನದ ಏಳುಮಲೆ ಸಿನಿಮಾ ಮೂಲಕ ಪ್ರಿಯಾಂಕಾ ಸ್ಯಾಂಡಲ್ವುಡ್ ನಟಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಕಿಶೋರ್, ಜಗಪತಿ ಬಾಬು, ಟಿಎಸ್ ನಾಗಾಭರಣ, ಸತ್ಯ ಸೇರಿದಂತೆ ಪ್ರಮುಖರು ನಟಿಸಿದ್ದಾರೆ. ಪ್ರಿಯಾಂಕಾ ಆಚಾರ್ ಮಹಾನಟಿ ಶೋನಲ್ಲಿದ್ದಾಗಲೇ ನಿರ್ದೇಶಕ ತರುಣ್ ಸುಧೀರ್ ಅವರು ಈ ಸಿನಿಮಾ ಆಫರ್ ಕೊಟ್ಟಿದ್ದರು. ಈ ಶೋ ಮುಗಿದ ನಂತರ ತರುಣ್ ಸುಧೀರ್ ತಮ್ಮದೇ ನಿರ್ಮಾಣದ ಈ ಸಿನಿಮಾದಲ್ಲಿ ಪ್ರಿಯಾಂಕಾ ಆಚಾರ್ ಅವರಿಗೆ ನಟಿಯಾಗಿ ಅವಕಾಶ ಕೊಟ್ಟಿದ್ದರು.












Click it and Unblock the Notifications