ಐತಿಹಾಸಿಕ ಸಿನಿಮಾ ಮಾಡಲು ಸಜ್ಜಾದ ಧನಂಜಯ; ಕೆಂಪೇಗೌಡರ ಪಾತ್ರ ಮಾಡ್ತಾರಾ 'ನಟ ರಾಕ್ಷಸ'?
ಕೋಟಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಧನಂಜಯ ಹೊಸ ಸಿನಿಮಾ ಘೋಷಿಸಲು ಸಜ್ಜಾಗಿದ್ದಾರೆ. ಐತಿಹಾಸಿಕ ಪಾತ್ರದಲ್ಲಿ ತೆರೆ ಮೇಲೆ ಬರುವ ಮುನ್ಸೂಚನೆ ಕೊಟ್ಟಿರುವ ಅವರು, ಜೂನ್ 21 (ಶುಕ್ರವಾರ) ಹೊಸ ಸಿನಿಮಾದ ಮೊದಲ ಲುಕ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿರುವ ಅವರು, "ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲು ಸಿದ್ಧವಾಗುತ್ತಿದೆ. ಮಹಾಕಾವ್ಯದ ಮೇರುಕೃತಿಯನ್ನು ನೋಡಲು ಸಜ್ಜಾಗಿ" ಎನ್ನುವ ಶೀರ್ಷಿಕೆಯೊಂದಿಗೆ ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ನಾಡಪ್ರಭು ಕೆಂಪೇಗೌಡರ ಕಾಲದ ನಾಣ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಾಣ್ಯದ ಮೇಲೆ 'ಬೆಂಗಳೂರಿನ ನಾಡಪ್ರಭು' ಮತ್ತು 'ಜಯ ಜಯ ಕಾಲಭೈರವ' ಎನ್ನುವ ಬರಹಗಳನ್ನು ನೋಡಬಹುದು.
ಈಗಾಗಲೇ ಅಲ್ಲಮ ಎನ್ನುವ ಐತಿಹಾಸಿಕ ಸಿನಿಮಾದಲ್ಲಿ ವಚನಕಾರ ಅಲ್ಲಮ ಪ್ರಭು ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಯಾವುದೇ ಪಾತ್ರದಲ್ಲೂ ನಟಿಸುವ ಸಹಜ ಅಭಿನಯ ಧನಂಜಯ ಅವರಿಗೆ ಇದ್ದು, ಕೆಂಪೇಗೌಡರ ಸಿನಿಮಾ ಬಗ್ಗೆ ಸಿನಿಪ್ರೇಮಿಗಳ ಕುತೂಹಲ ಹೆಚ್ಚಾಗಿದೆ.
ಕೆಂಪೇಗೌಡ ಸಿನಿಮಾ ವಿವಾದ
ಕೆಂಪೇಗೌಡ ಸಿನಿಮಾ ಮಾಡಲು ಕನ್ನಡ ಚಿತ್ರರಂಗದ ಅನೇಕರ ಕನಸಾಗಿದ್ದರೂ, ಇದುವರೆಗೂ ನನಸಾಗಿಲ್ಲ. ದಿನೇಶ್ ಬಾಬು ನಿರ್ದೇಶನದಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಹೆಸರಿನ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ವಿವಾದ ಉಂಟಾಗಿತ್ತು. ಕಿರಣ್ ತೋಟಂಬೈಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಅರಸರ ಇತಿಹಾಸವನ್ನು ಜಗತ್ತಿಗೆ ತಿಳಿಸುತ್ತಿರುವ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಈ ಸಿನಿಮಾಗೆ ಕತೆ ಬರೆದಿದ್ದಾರೆ.
'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ಖ್ಯಾತ ನಿರ್ದೇಶ ಟಿ.ಎಸ್. ನಾಗಾಭರಣ ಮತ್ತು ನಿರ್ಮಾಪಕ ಡಾ ಎಂ ಎನ್ ಶಿವರುದ್ರಪ್ಪ ಕೋರ್ಟ್ ಮೆಟ್ಟಿಲೇರಿದ್ದರು. 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಮಾಡದಂತೆ ಕೋರಿದ್ದರು. ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು.
ಟಿಎಸ್ ನಾಗಾಭರಣ 'ಕಲ್ಲರಳಿ ಹೂವಾಗಿ'ಯಂತಹ ಐತಿಹಾಸಿಕ ಸಿನಿಮಾ ಮಾಡಿ ಗೆದ್ದವರು, ಧನಂಜಯ ಸಿನಿಮಾಗೆ ಅವರೇ ನಿರ್ದೇಶನ ಮಾಡುತ್ತಾರಾ? ಅಥವಾ ಬೇರೆ ತಂಡದ ಜೊತೆ ಧನಂಜಯ ಸಿನಿಮಾ ಮಾಡಲಿದ್ದಾರಾ ಎನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.












Click it and Unblock the Notifications