Actor Darshan: ಬಳ್ಳಾರಿಯಿಂದ ಬೆಂಗಳೂರಿಗೆ ಬರಲಿದ್ದಾರೆ ನಟ ದರ್ಶನ್!
ನಟ ದರ್ಶನ್ರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ಅವರಿಗೆ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಜಾಮೀನು ಕೊಡುವಂತೆ ಹಿರಿಯ ವಕೀಲ ಸಿ.ವಿ. ನಾಗೇಶ್ ಬಲವಾಗಿ ವಾದ ಮಂಡಿಸುತ್ತಿದ್ದಾರೆ. ದರ್ಶನ್ ರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿರುವ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಾಳೆಗೆ ತೀರ್ಪನ್ನು ಕಾಯ್ದಿರಿಸಿದೆ. ಆದರೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ನಟ ದರ್ಶನ್ಗೆ ಜಾಮೀನು ಕೊಡುವ ವಿಚಾರ ಇಂದು ಹೈಕೋರ್ಟ್ನಲ್ಲಿ ತೀವ್ರ ವಾದ-ವಿವಾದ ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಸಿ. ವಿ. ನಾಗೇಶ್, ದರ್ಶನ್ಗೆ ಬೆನ್ನು ನೋವು ಸಮಸ್ಯೆ ಹೆಚ್ಚಾಗಿದ್ದು ಅವರಿಗೆ ವೈದ್ಯಕೀಯ ಮಧ್ಯಂತರ ಜಾಮೀನು ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಮಧ್ಯಂತರ ಜಾಮೀನು ಕೊಡಬೇಕು ಎಂದು ಮನವಿ ಮಾಡಿರುವ ಸಿ.ವಿ. ನಾಗೇಶ್, ದರ್ಶನ್ಗೆ ಬೆನ್ನು ನೋವು ತೀವ್ರವಾಗಿದ್ದು, ಶಸ್ತ್ರ ಚಿಕಿತ್ಸೆ ಅಗತ್ಯವಿರುವ ಕಾರಣ ಮಧ್ಯಂತರ ಜಾಮೀನು ಕೊಡಬೇಕು. ಈಗಾಗಲೇ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿದ್ದು, ಈಗ ಜಾಮೀನು ಕೊಟ್ಟರೆ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದರು.
ವೈದ್ಯಕೀಯ ಮಂಡಳಿಗೆ ದರ್ಶನ್ಗೆ ಇರುವ ಸಮಸ್ಯೆಯನ್ನು ಪರಿಶೀಲನೆ ಮಾಡಲು ಆದೇಶ ಕೊಡಬೇಕು, ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಗೆ ಪ್ರಕರಣವನ್ನು ಪರಿಶೀಲಿಸಲು ಆದೇಶಿಸಬಹುದು ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
ದರ್ಶನ್ ಎಷ್ಟು ದಿನ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎನ್ನುವುದನ್ನು ಅಕ್ಟೋಬರ್ 24ರಂದು ಬಳ್ಳಾರಿ ವಿಮ್ಸ್ ವೈದ್ಯರು ಕೊಟ್ಟಿರುವ ವರದಿಯಲ್ಲಿ ಹೇಳಿಲ್ಲ. ವೈದ್ಯಕೀಯ ಮಂಡಳಿಗೆ ಪ್ರಕರಣ ವಹಿಸಿ, ವರದಿಯನ್ನು ಆಧರಿಸಿ ನ್ಯಾಯಾಲಯ ನಿರ್ಧರಿಸಬಹುದು ಎಂದು ವಾದ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ವಿ. ನಾಗೇಶ್, ನಾವು ಮಧ್ಯಂತರ ಜಾಮೀನು ಕೊಡುವಂತೆ ಕೇಳಿದ್ದೇವೆ, ಬಳ್ಳಾರಿ ಸರ್ಕಾರಿ ಆಸ್ಪತ್ರೆ ವರದಿಯನ್ನೇ ಅನುಮಾನಿಸುತ್ತಿರುವುದೇಕೆ ಎಂದು ಕೇಳಿದರು. ಕನಿಷ್ಠ ಮೂರು ತಿಂಗಳು ಮಧ್ಯಂತರ ಜಾಮೀನು ನೀಡಿ ಎಂದು ಕೇಳಿದರು.
ಬೆಂಗಳೂರಿನಲ್ಲಿ ತಪಾಸಣೆ
ಎರಡೂ ಕಡೆಯ ವಾದವನ್ನು ಆಲಿಸಿದ ಪೀಠ, ಬೆಂಗಳೂರಿನಲ್ಲಿ ಎರಡನೇ ಅಭಿಪ್ರಾಯ ಪಡೆಯಬಹುದಲ್ಲವೇ ಎಂದು ಪ್ರಶ್ನೆ ಮಾಡಿದೆ. ಬೆಂಗಳೂರಿನಲ್ಲಿ ದರ್ಶನ್ ದಾಖಲಾಗಲಿ ಅಲ್ಲಿ ವರದಿ ಪಡೆಯುತ್ತೇವೆ ಎಂದು ಪೀಠ ಹೇಳಿದೆ. ಇದಕ್ಕೆ ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದ್ದು, ಮೂರು ತಿಂಗಳು ವೈದ್ಯಕೀಯ ಜಾಮೀನು ನೀಡಿ, ಅಲ್ಲಿ ನೀಡುವ ವರದಿಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಡ್ಮಿಟ್ ಆಗಲು ಭದ್ರತೆ ಸಮಸ್ಯೆ ಉಂಟಾಗುತ್ತದೆ. ಬಳ್ಳಾರಿಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಮಧ್ಯರಾತ್ರಿ ಕರೆದುಕೊಂಡು ಹೋಗಿದ್ದಾರೆ ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಾಡಿದ ಎಸ್ಪಿಪಿ ಪ್ರಸನ್ನಕುಮಾರ್, ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿ ವರದಿ ಆಧಿರಿಸಿ ವೈದ್ಯಕೀಯ ಜಾಮೀನು ನೀಡಿದ್ದು, ಬೆಂಗಳೂರಿನಲ್ಲಿ ತಜ್ಞರು ಪರಿಶೀಲಿಸಿ ದರ್ಶನ್ಗೆ ಎಷ್ಟು ದಿನ ಚಿಕಿತ್ಸೆ ನೀಡಬೇಕು ಎಂದು ಹೇಳಲಿ, ಅನಿರ್ದಿಷ್ಟಾವಧಿಯವರೆಗೆ ವೈದ್ಯಕೀಯ ಜಾಮೀನು ಕೊಡಬಾರದು ಎಂದು ಹೇಳಿದ್ದಾರೆ.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಆದೇಶವನ್ನು ನಾಳೆಗೆ (ಅಕ್ಟೋಬರ್ 30) ಕಾಯ್ದಿರಿಸಿದೆ. ಎಸ್ಪಿಪಿ ವಾದವನ್ನು ಪುರಸ್ಕರಿಸಿದರೆ, ನಟ ದರ್ಶನ್ರನ್ನು ಬೆಂಗಳೂರಿಗೆ ಕರೆ ತಂದು ವೈದ್ಯರಿಂದ ತಪಾಸಣೆ ಮಾಡಿಸಿ, ವರದಿಯನ್ನು ಪರಿಶೀಲನೆ ಮಾಡಿದ ಬಳಿಕ ಎಷ್ಟು ದಿನ ಮಧ್ಯಂತರ ಜಾಮೀನು ನೀಡಬೇಕು ಎನ್ನುವ ಬಗ್ಗೆ ಕೋರ್ಟ್ ನಿರ್ಧಾರ ಮಾಡುವ ಸಾಧ್ಯತೆ ಇದೆ.












Click it and Unblock the Notifications