Darshan Thoogudeepa: 'ತಾಯಿ ಕನಕದುರ್ಗಮ್ಮ ಆಶೀರ್ವಾದದಿಂದ ದರ್ಶನ್ ಹೊರಬಂದರು'
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಧವಾರ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಹೈಕೋರ್ಟ್ ದರ್ಶನ್ ಅವರಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಹೀಗಾಗಿ ದರ್ಶನ್ ಅವರಿಗೀಗ ಕೊಂಚ ರಿಲೀಫ್ ಸಿಕ್ಕಂತಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಪೂಜೆಗೆ ಫಲ ಸಿಕ್ಕಂತಾಗಿದೆ. ಇದರಿಂದಾಗಿ ದೇವರ ಮುಂದೆ ನಿಂತು ವಿಜಯಲಕ್ಷ್ಮೀ ಕಣ್ಣೀರು ಹಾಕಿದ್ದಾರೆ.
ಹೌದು... ಬರೋಬ್ಬರಿ 131 ದಿನಗಳ ಬಳಿಕ ದರ್ಶನ್ ಜೈಲುವಾಸದಿಂದ ಹೊರಬಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರಿಗೆ ಚಿಕಿತ್ಸೆ ಉದ್ದೇಶಕ್ಕಾಗಿ ಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಇದು ದರ್ಶನ್ ಆಪ್ತರಿಗೆ, ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಂತಸ ತಂದಿದೆ. ಅಲ್ಲದೆ ವಿಜಯಲಕ್ಷ್ಮೀ ಅವರು ನಂಬಿದ ದೇವರು ಅವರನ್ನು ಕೈಹಿಡಿದಿರುವುದು ದೇವರ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.\

ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಭಾವುಕರಾಗಿದ್ದು ಕಂಡು ಬಂದಿದೆ. ಮಾತ್ರವಲ್ಲ ಅಭಿಮಾನಿಗಳೂ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಕ್ಕಿರೋದ್ರಿಂದ ದೇವರಿಗೆ ದೀಪ ಹಚ್ಚಿ ಖುಷಿಪಟ್ಟಿದ್ದಾರೆ ಅಭಿಮಾನಿಗಳು. ಅಲ್ಲದೆ ನಮಗೆ ಇಂದೇ ದೀಪಾವಳಿ ಆರಂಭವಾಗಿದೆ ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.
'ತಾಯಿ ಕನಕದುರ್ಗಮ್ಮ ಆಶೀರ್ವಾದದಿಂದ ದರ್ಶನ್ ಹೊರಬಂದರು'
ಪತಿ ದರ್ಶನ್ ಜೈಲಿನಿಂದ ಹೊರ ಬರುವ ವಿಚಾರ ತಿಳಿಯುತ್ತಿದ್ದಂತೆ ವಿಜಯಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳ್ಳಾರಿ ಕನಕದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅಲ್ಲಿನ ಅರ್ಚಕರು ಸುದ್ದಿಗಾರೊಂದಿಗೆ ಮಾತನಾಡಿದರು. 'ವಿಜಯಲಕ್ಷ್ಮಿ ಅವರು ದರ್ಶನ್ ಬಿಡುಗಡೆಗಾಗಿ ತಾಯಿ ಬಳಿ ಬೇಡಿಕೊಂಡಿದ್ದರು. ಅಮ್ಮನವರ ಆಶೀರ್ವಾದದಿಂದಲೇ ಇವತ್ತು ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಹೀಗಾಗಿ ವಿಜಯಲಕ್ಷ್ಮಿ ಅವರು ಬಂದು ಅಮ್ಮನವರಿಗೆ ಪೂಜೆ ಸಲ್ಲಿಸಿದ್ದಾರೆ. ಯಾವುದೇ ಬೇಡಿಕೆ ಇದ್ದರೂ ಕನಕದುರ್ಗಮ್ಮ ಮೂರು ತಿಂಗಳ ಒಳಗೆ ಈಡೇರಿಸುತ್ತಾಳೆ. ಅದೆಷ್ಟೋ ಬೇಡಿಕೆಯನ್ನು ತಾಯಿ ಈಡೇರಿಸಿದ್ದಾಳೆ. ಹೀಗಾಗಿ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ' ಎಂದು ಹೇಳಿದರು.
'ವಿಜಯಲಕ್ಷ್ಮೀ ಅವರು ಪೂಜೆ ಮಾಡಿಸುವಾಗ ತಾಯಿ ಮುಂದೆ ನಿಂತು ಕಣ್ಣೀರು ಹಾಕಿದ್ದನ್ನು ನಾನು ನೋಡಿದೆ. ತಾಯಿ ಆಶೀರ್ವಾದ ಅವರ ಮೇಲೆ ಸದಾ ಇರಲಿ. ಅವರ ಸಮಸ್ಯೆಗಳು ಎಲ್ಲವೂ ತಾಯಿ ನಿವಾರಣೆ ಮಾಡಿ ಜೀವನದಲ್ಲಿ ಸಂತೋಷ ನೀಡಲಿ ಎನ್ನುವುದು ನಮ್ಮ ಆಶಯ, ಆಶೀರ್ವಾದ' ಎಂದರು.
ವಿಜಯಲಕ್ಷ್ಮೀ ಪ್ರಯತ್ನಕ್ಕೆ ಸಿಕ್ಕ ಯಶಸ್ಸು
ದರ್ಶನ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ವಿಜಯಲಕ್ಷ್ಮೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೇಡಿಕೊಳ್ಳದ ದೇವರುಗಳಿಲ್ಲ. ದರ್ಶನ್ ಜೈಲಿಗೆ ಹೋದ ಬಳಿಕ ಹಲವಾರು ದೇವಸ್ಥಾನಗಳಿಗೆ ವಿಜಯಲಕ್ಷ್ಮಿ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡಿದ್ದರು. 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಕಾಮಾಖ್ಯ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂತ್ರಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವನ್ನು ದರ್ಶನ್ ಅವರಿಗೆ ನೀಡಿದ್ದರು.
ಶನಿಶಾಂತಿ, ಗ್ರಹಗಳ ಪೂಜೆ, ಶಕ್ತಿದೇವತೆಯ ಪೂಜೆ ಹೀಗೆ ವಿಜಯಲಕ್ಷ್ಮೀ ದರ್ಶನ್ ಬಿಡುಗಡೆಗಾಗಿ ಬೇಡಿಕೊಳ್ಳದ ದೇವರುಗಳಿಲ್ಲ. ಭೀಮನಮವಾಸ್ಯೆ ದಿನ ವಿಶೇಷ ಪೂಜೆ, ವರಮಹಾಲಕ್ಷ್ಮೀ ಪೂಜೆ, ತಾವು ಹೋದ ಪ್ರತಿಯೊಂದು ದೇವಸ್ಥಾನಗಳಲ್ಲೂ ಗಂಡನಿಗಾಗಿ ಪ್ರಾರ್ಥನೆ ಮಾಡಿದ ವಿಜಯಲಕ್ಷ್ಮಿಗೆ ಈಗ ಪೂಜಾ ಫಲ ಸಿಕ್ಕಿದೆ. ಹೀಗಾಗಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ದೇವರಿಗೆ ಧನ್ಯವಾದ ಹೇಳಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಕೊನೆಗೂ ಜೈಲಿನಿಂದ ಹೊರಬಂದಿದ್ದು, ದೀಪಾವಳಿಗೆ ಹೊಸ ಬೆಳಕು ವಿಜಯಲಕ್ಷ್ಮೀ ಬಾಳಲ್ಲಿ ಮೂಡಿದಂತಾಗಿದೆ.












Click it and Unblock the Notifications