Actor Darshan: ದರ್ಶನ್ ಅಭಿಮಾನಿಗಳಿಗೆ ಹೆಚ್ಚಾದ ಆತಂಕ!
ನಟ ದರ್ಶನ್ ಜಾಮೀನು ಅರ್ಜಿ ವಜಾಗೊಂಡಿದ್ದು ಅವರ ಅಭಿಮಾನಿಗಳು ಮತ್ತು ಕುಟುಂಬದವರಿಗೆ ಭಾರಿ ನಿರಾಸೆ ಮೂಡಿಸಿದೆ. ಇದೀಗ ಜಾಮೀನು ಪಡೆಯಲು ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ದರ್ಶನ್ರ ಆರೋಗ್ಯ ಕೂಡ ಹದಗೆಡುತ್ತಿದ್ದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈ ಮೊದಲೇ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ಗೆ ಇದೀಗ ನಡೆಯಲು ಕೂಡ ಕಷ್ಟಪಡುವಂತಾಗಿದೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ರ ಬೆನ್ನು ನೋವು ದಿನೇ ದಿನೇ ಹೆಚ್ಚುತ್ತಲೇ ಇದೆ. ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ಪಡೆಯುವಂತೆ ಕೇಳಿದ್ದರೂ ದರ್ಶನ್ ಅದಕ್ಕೆ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿರುವ ಅವರು, ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ನಡೆಯಲು ಕಷ್ಟಪಡುತ್ತಿರುವ ದರ್ಶನ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ತಕ್ಕಮಟ್ಟಿಗೆ ವ್ಯವಸ್ಥೆಗಳು ಸಿಕ್ಕ ಕಾರಣ ದರ್ಶನ್ಗೆ ಹೆಚ್ಚಿನ ಕಷ್ಟವೇನು ಆಗಿರಲಿಲ್ಲ, ಆದರೆ ಅವರಿಗೆ ಐಷಾರಾಮಿ ಸೌಲಭ್ಯ ಸಿಗುವ ಕಾರಣಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದು ದರ್ಶನ್ಗೆ ಭಾರಿ ಕಷ್ಟ ತಂದಿಟ್ಟಿದೆ. ಪರಪ್ಪನ ಅಗ್ರಹಾರ ಘಟನೆಯ ನಂತರ ಬಳ್ಳಾರಿ ಜೈಲು ಅಧಿಕಾರಿಗಳು ದರ್ಶನ್ಗೆ ಯಾವುದೇ ಸೌಲಭ್ಯ ಸಿಗದಂತೆ ನೋಡಿಕೊಂಡರು. ವೈದ್ಯರ ಶಿಫಾರಸ್ಸಿನ ಬಳಿಕ ಮಾತ್ರ ಇತ್ತೀಚೆಗೆ ಅವರಿಗೆ ಮೆಡಿಕಲ್ ಬೆಡ್, ದಿಂಬು ನೀಡಲಾಗಿದೆ. ಅದುವರೆಗೂ ದರ್ಶನ್ ಚಾಪೆ ಮೇಲೆ ಮಲಗಬೇಕಿದ್ದರಿಂದ ಬೆನ್ನು ನೋವು ತೀವ್ರವಾಗಿತ್ತು.
ಶನಿವಾರ ಬಳ್ಳಾರಿ ಜೈಲಿನಲ್ಲಿ ವಕೀಲ್ ರಾಮ್ ಸಿಂಗ್ ದರ್ಶನ್ರನ್ನು ಭೇಟಿ ಮಾಡಿದ್ದರು. ತಮ್ಮ ಸೆಲ್ನಿಂದ ಸಂದರ್ಶಕರ ಕೊಠಡಿಗೆ ಬರುವಾಗ ಬೆನ್ನು ಹಿಡಿದುಕೊಂಡಿದ್ದು, ಪದೇ ಪದೇ ಬೆನ್ನು ಗುದ್ದಿಕೊಳ್ಳುತ್ತಾ ಬರುತ್ತಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅಭಿಮಾನಿಗಳು ದರ್ಶನ್ರ ಪರಿಸ್ಥಿತಿ ನೋಡಿ ಆತಂಕಗೊಂಡಿದ್ದಾರೆ.
ದರ್ಶನ್ರ ಬೆನ್ನಿನ ಎಲ್1 ಹಾಗೂ ಎಲ್5 ಭಾಗದಲ್ಲಿ ನೋವು ಹೆಚ್ಚಾಗಿದ್ದು ಚಿಕಿತ್ಸೆ ಪಡೆಯಬೇಕಿದೆ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ. ಸದ್ಯ ದರ್ಶನ್ಗೆ ಜೈಲಿನಲ್ಲೇ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಬೆಂಗಳೂರಿಗೆ ಕಳಿಸಿ, ಅಲ್ಲಿಯೇ ನಮ್ಮ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತೇನೆ ಎಂದು ಜೈಲಿನ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
57ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದರ್ಶನ್ರ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ, ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬೆನ್ನು ನೋವಿನ ಕಾರಣ ನೀಡಿ ದರ್ಶನ್ಗೆ ಜಾಮೀನು ಕೊಡುವಂತೆ ವಕೀಲರು ಮನವಿ ಮಾಡುವ ಸಾಧ್ಯತೆ ಕೂಡ ಇದೆ. ಜಾಮೀನು ನಿರಾಕರಿಸಿದರೆ, ಬೆಂಗಳೂರಿಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಪಡೆಯಲು ಅವಕಾಶ ಕೊಡುವಂತೆ ಮನವಿ ಮಾಡುವ ಸಾಧ್ಯತೆ ಕೂಡ ಇದೆ.












Click it and Unblock the Notifications