ಸಿನಿಮಾದವರ ಯಾರ ಮನೆಯಲ್ಲಿ ಏನೇ ಸಮಸ್ಯೆ ಆದ್ರೂ ನನಗೆ ಕಾಲ್ ಬರುತ್ತೆ- ಮಾಳವಿಕ ಅವಿನಾಶ್
ಒಂದು ಕಾಲದಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾಗಿದ್ದ ಬದುಕು ಜಟಕಾಬಂಡಿ ಅನೇಕರ ಜೀವನಕ್ಕೆ ಹೊಸ ಅಧ್ಯಾಯ ಸೃಷ್ಟಿಸಿಕೊಟ್ಟ ವೇದಿಕೆ. ಈ ಕಾರ್ಯಕ್ರಮದಿಂದ ಅನೇಕರ ಬದುಕು ಬದಲಾಗಿದೆ. ಕಾರ್ಯಕ್ರಮ ಮುಗಿದು ಹತ್ತಾರು ವರ್ಷಗಳು ಕಳೆದರೂ ಜನ ಇಂದಿಗೂ ಈ ಶೋ ಬಗ್ಗೆ ಮಾತನಾಡುತ್ತಾರೆ. ಇದೀಗ ಸ್ವತಃ ಕಾರ್ಯಕ್ರಮದ ರೂವಾರಿಯಾಗಿದ್ದ ನಟಿ ಮಾಳವಿಕ ಅವಿನಾಶ್ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.
ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, 'ನನಗೆ ಬದುಕು ಜಟಕಾಬಂಡಿ ಕಾರ್ಯಕ್ರಮ ಮಾಡಲು ಇಷ್ಟ ಇತ್ತು. ಅಂತಹ ಕಾರ್ಯಕ್ರಮ ನಡೆಸಿಕೊಡುವುದು ಕಷ್ಟನೇ ಆದರೆ ಇಷ್ಟ ಇತ್ತು. ನಾನು ಮೊದಲು ಕಾರ್ಯಕ್ರಮದ ಆಯೋಜಕರಿಗೆ ಹೇಳಿದ್ದು, ನೀವು ಒಬ್ಬರನ್ನು ಕರೆದುಕೊಂಡು ಬಂದು ಅವರ ಬಾಯಲ್ಲಿ ಕಥೆ ಹೇಳಿಸಬೇಡಿ. ನನಗೆ ಇಬ್ಬರೂ ಬರಬೇಕು. ನೇರಾನೇರ ಮುಖಾಮುಖಿ ಕೂರಿಸಿ ಮಾತನಾಡಿದಾಗ ಸತ್ಯಗಳು ಹೊರಬರುತ್ತದೆ' ಎಂದರು.

'ಒಬ್ಬೊಬ್ಬರೇ ಕುಳಿತುಕೊಂಡಾಗ ಸತ್ಯಗಳು ಆಚೆ ಬರುವುದಿಲ್ಲ. ನಾವು ಅಷ್ಟೇ ನಮ್ಮ ಮೂಗಿನ ನೇರಕ್ಕೆ ಏನು ಬರುತ್ತದೆ ಅದನ್ನು ಹೇಳುತ್ತೇವೆ. ಈಗ ಯಾರೋ ಇಬ್ಬರು ಇಲ್ಲದೇ ಇದ್ದಾಗ ನಾನು ಅವರ ಬಗ್ಗೆ ಮಾತನಾಡಿದಾಗ ನೀವೇನು ಅವರನ್ನು ಎಬ್ಬಿಸಿ ಕರೆದುಕೊಂಡು ಬಂದು ಕೇಳುತ್ತೀರಾ. ಈ ರೀತಿ ಆಗಬಾರದು ಎನ್ನುವುದು ನನ್ನ ಮೊದಲ ಯೋಚನೆ ಆಗಿತ್ತು' ಎಂದು ಹೇಳಿದರು.
'ಎರಡನೇಯದು ಯಾರ ಸಮಸ್ಯೆಗೆ ನಾವೇನೋ ಪರಿಹಾರ ಹುಡುಕುತ್ತೇವೆ ಎನ್ನುವ ಕಲ್ಪನೆ ಅಥವಾ ಭ್ರಮೆಯಲ್ಲಿ ನಾನಿರಲಿಲ್ಲ. ಯಾರ ಸಮಸ್ಯೆಗೆ ಯಾರೂ ಪರಿಹಾರ ಹುಡುಕಿಕೊಡಲು ಆಗುವುದಿಲ್ಲ. ಅವರೇ ಅವರ ಸಮಸ್ಯೆಗೆ ಪರಿಹಾರ ಹುಡುಕಬೇಕು. ಬದುಕುತ್ತಾ ಬದುಕುತ್ತಾ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಾನು ಆಗ ಅವರಿಗೆ ಹೇಳಿದ್ದು ಅಂದರೆ ನಾವೊಂದು ವೇದಿಕೆ ಕೋಡೊಣ ಅವರು ಬಂದು ಮಾತನಾಡಲಿ ಅವರಿಗೆ ಪರಿಹಾರ ಸಿಕ್ಕರೆ ಸಿಗಲಿ, ಒಂದಾಗುತ್ತಾರಾ ಆಗಲಿ ಅಂತಾ ಹೇಳಿದ್ದೆ' ಎಂದರು.

'ನನ್ನ ಪ್ರಯತ್ನ ಅವತ್ತಿಗೂ ಇವತ್ತಿಗೂ ಒಂದುಗೂಡಿಸುವುದು ಮಾತ್ರ ಆಗಿದೆ. ಇವತ್ತಿಗೂ ನನಗೆ ಕರೆ ಬರುತ್ತದೆ. ನನ್ನ ಹತ್ತಿರ ಜನ ಬರುತ್ತಾರೆ. ಯಾರ ಮನೆಯಲ್ಲಿ ಏನೇ ಸಮಸ್ಯೆ ಆದರೂ ನಿಮ್ಮ ಮುಂದೆ ತಂದು ಕೂರಿಸುತ್ತೇವೆ ಬಗೆಹರಿಸಿ ಎನ್ನುತ್ತಾರೆ. ಈಗ ನನಗೆ ಜನ ಸಾಮಾನ್ಯರಿಗೆ ಮಾಡುವಷ್ಟು ಸಮಯ ಇಲ್ಲ. ಈಗ ಸಿನಿಮಾದವರು ದೊಡ್ಡ ದೊಡ್ಡ ಕಲಾವಿದರು ದೊಡ್ಡ ಹೆಸರು ಮಾಡಿದವರು ಅಂತವರು ಬರುತ್ತೇನೆ ಅಂದಾಗ ಬೇಡ ಎನ್ನುವುದಿಲ್ಲ. ಅಲ್ಲೂ ಅಷ್ಟೇ ನಾನು ಸುಮ್ಮನೆ ಕುಳಿತಿರುತ್ತೇನೆ ಅವರು ಮಾತನಾಡುತ್ತಾರೆ. ಈ ವೇಳೆ ಕೆಲವರಿಗೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೆಲವರಿಗೆ ಸಿಗುವುದಿಲ್ಲ' ಎಂದರು.












Click it and Unblock the Notifications