ಬೆಳಗಾವಿ 18 ಕ್ಷೇತ್ರಗಳಲ್ಲಿ 6 ಮಂದಿ ಹೊಸಬರ ಜಯ!
ಬೆಳಗಾವಿ, ಮೇ 15: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಇತ್ತ ಬೆಳಗಾವಿಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. 18 ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ 9 ಸ್ಥಾನ ಬಿಜೆಪಿ ಹಾಗೂ ಜೆಡಿಎಸ್ ಪಡೆದರೆ ಎಂಇಎಸ್ ಮಾಯವಾಗಿದೆ.
ಬೆಳಗಾವಿಯಲ್ಲಿ ಈ ಸಲ ಮೂವರು ಮಹಿಳೆಯರನ್ನು ವಿಧಾನಸಭೆ ಮೆಟ್ಟಲೇರಲಿದ್ದು, ಈ ಸಲ ಫಲಿತಾಂಶದ ವಿಶೇಷತೆಗಳಲ್ಲಿ ಒಂದು. ಸ್ವಾತಂತ್ರ್ಯ ನಂತರ ಅತಿ ಹೆಚ್ಚು ಮಹಿಳೆಯರು ಜಿಲ್ಲೆಯನ್ನು ಪ್ರತಿನಿಧಿಸಿತ್ತಿರುವುದು ಇದೆ ಮೊದಲು ಎನ್ನಲಾಗುತ್ತಿದೆ.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಎರಡು ಸ್ಥಾನ ಕಳೆದುಕೊಂಡು ಬಿಜೆಪಿ ಹಿನ್ನಡೆ ಅನುಭವಿಸಿದ್ದರೆ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಮಲ ಮತ್ತಷ್ಟು ಅರಳಿದೆ. ಕಳೆದ ಸಲ ವಿಜಯ ಪತಾಕೆ ಹಾರಿಸಿದ್ದ ಆರು ಜನ ಶಾಸಕರನ್ನು ಈ ಸಲ ತಿರಸ್ಕರಿಸಿರುವ ಗಡಿ ಜಿಲ್ಲೆಯ ಮತದಾರ, ಆರು ಜನ ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ.

ಮಹಿಳಾ ರಂಗು
18 ವಿಧಾನಸಭೆ ಕ್ಷೇತ್ರ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈ ಸಲ ಮೂವರು ಮಹಿಳೆಯರು ವಿಧಾನಸಭೆ ಮೆಟ್ಟಿಲೇರಲಿದ್ದಾರೆ. ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿ ಶಶಿಕಲಾ ಜೊಲ್ಲೆ ಮರು ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಖಾನಾಪುರ ಕ್ಷೇತ್ರದಿಂದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅಂಜಲಿ ನಿಂಬಾಳ್ಕರ್ ಇದೆ ಮೊದಲ ಸಲ ವಿಧಾನಸಭೆ ಮೆಟ್ಟಿಲೇರಲಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್- ಬಿಜೆಪಿಗೆ ಸಮನಾಗಿ ಒಲಿದ ಮತದಾರ
ಕಳೆದ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ಸ್ಥಾನಗಳ ಪೈಕಿ ಬಿಜೆಪಿ-ಕಾಂಗ್ರೆಸ್ ತಲಾ ಎರಡು ಸ್ಥಾನ ಪಡೆದುಕೊಂಡಿದ್ದವು. ದ್ವಿಸದಸ್ಯ ಸ್ಥಾನ ಹೊಂದಿರುವ ಬಯಲು ಸೀಮೆ ಅಥಣಿ ತಾಲೂಕಿನ ಇಬ್ಬರು ಬಿಜೆಪಿಯ ಹಿರಿಯ ನಾಯಕರಾದ ಲಕ್ಷ್ಮಣ್ ಸವದಿ ಹಾಗೂ ರಾಜು ಕಾಗೆ ಪರಾಭವಗೊಂಡಿದ್ದಾರೆ.
ಅಥಣಿಯಲ್ಲಿ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ ಗೆಲುವು ದಾಖಲಿಸಿದ್ದಾರೆ. ಉಳಿದಂತೆ ಕಾಗವಾಡ, ನಿಪ್ಪಾಣಿ, ಕುಡಚಿ, ಹುಕ್ಕೇರಿ, ಚಿಕ್ಕೋಡಿ-ಸದಲಗಾ ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ಹಾಲಿಗಳಿಗೆ ಮತದಾರ ಮಣೆ ಹಾಕಿದ್ದಾನೆ. ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 10 ಕ್ಷೇತ್ರಗಳಲ್ಲಿ ಕಳೆದ ಸಲ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ನಾಲ್ಕು ಸ್ಥಾನ ಹಾಗೂ ಎಂಇಎಸ್ ಎರಡು ಸ್ಥಾನ ಪಡೆದುಕೊಂಡಿದ್ದವು.
ಆದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಆರು ಸ್ಥಾನಪಡೆದುಕೊಂಡಿದ್ದು, ಕಾಂಗ್ರೆಸ್ ನಾಲ್ಕು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬೈಲಹೊಂಗಲ ಬಿಜೆಪಿಯ ಹಿಂದಿನ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಹಿಂದಿನ ಶಾಸಕ ಸಂಜಯ್ ಪಾಟೀಲ ಸೋಲನುಭವಿಸಿದ್ದರೆ, ಕಿತ್ತೂರು ಹಿಂದಿನ ಕಾಂಗ್ರೆಸ್ ಶಾಸಕ ಡಿ.ಬಿ.ಇನಾಮದಾರ್, ಬೆಳಗಾವಿ ಉತ್ತರದ ಫಿರೋಜ್ ಸೇಠ್, ರಾಮದುರ್ಗದ ಅಶೋಕ ಪಟ್ಟಣ ಸೋಲನುಭವಿಸಿದ್ದಾರೆ.
In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ

ಬೆಳಗಾವಿಯಲ್ಲಿ ಎಂಇಎಸ್ ಧೂಳಿಪಟ
ಗಡಿ-ಭಾಷೆ ಹೆಸರಿನಲ್ಲಿ ಗಡಿಯಲ್ಲಿ ರಾಜಕೀಯ ಬೇಳೆ ಬೇಯಸಿಕೊಳ್ಳುತ್ತಿದ್ದ ಎಂಇಎಸ್ ಈ ಸಲ ಭಾರೀ ಮುಖಭಂಗ ಅನುಭವಿಸಿದೆ. ಕಳೆದ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಹಾಗೂ ಖಾನಾಪುರ ಕ್ಷೇತ್ರದಲ್ಲಿ ಎಂಇಎಸ್ ಗೆಲುವು ದಾಖಲಿಸಿತ್ತು. ಇದೀಗ ಖಾನಾಪುರ ಕೈ ವಶವಾಗಿದ್ದರೆ, ದಕ್ಷಿಣ ಕ್ಷೇತ್ರವನ್ನು ಬಿಜೆಪಿ ಮರುವಶ ಮಾಡಿಕೊಂಡಿದೆ. ಗಡಿ ವಿಷಯ ಸುಪ್ರೀಂ ಕೋರ್ಟ್ನಲ್ಲಿದ್ದರೂ ಗಡಿಯಲ್ಲಿ ಸಾಮರಸ್ಯ ಕೆಡಸುತ್ತ ಬಂದಿದ್ದ ಎಂಇಎಸ್ಗೆ ಗಡಿ ಭಾಗದ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಅಲ್ಲದೇ ಮುಖಂಡರ ತಿಕ್ಕಾಟವೂ ಎಂಇಎಸ್ ಹಿನ್ನಡೆಗೆ ಪ್ರಮುಖ ಕಾರಣ.

ಬೆಳಗಾವಿಯಲ್ಲಿ ಆರು ಹೊಸಮುಖಗಳು
ಬೆಳಗಾವಿ ಜಿಲ್ಲೆಯಲ್ಲಿ 18 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆರು ಹೊಸ ಮುಖಗಳಿಗೆ ಜಿಲ್ಲೆಯ ಮತದಾರ ಮಣೆ ಹಾಕಿದ್ದಾನೆ. ಕಿತ್ತೂರು ವಿಧಾನಸಭೆ ಕ್ಷೇತ್ರದ ಹಿಂದಿನ ಶಾಸಕ ಡಿ.ಬಿ. ಇನಾಮದಾರ್ ಹಾಗೂ ಅವರ ಅಳಿಯ ಬಾಬಾಸಾಹೇಬ್ ಪಾಟೀಲ ಅವರ ಜಗಳದ ಲಾಭವನ್ನು ಬಿಜೆಪಿಯ ಮಹಾಂತೇಶ ದೊಡ್ಡಗೌಡರ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರ ಕಾಂಗ್ರೆಸ್ನ ಅಂಜಲಿ ನಿಂಬಾಳ್ಕರ್, ಬೆಳಗಾವಿ ಉತ್ತರದ ಅನಿಲ್ ಬೆನಕೆ, ಅಥಣಿಯ ಮಹೇಶ ಕುಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ ಚೊಚ್ಚಲ ಬಾರಿಗೆ ವಿಧಾನಸಭೆ ಮೆಟ್ಟಿಲೇರಲಿದ್ದಾರೆ.

ಬೆಳಗಾವಿಯಲ್ಲಿ ಮೂರು ಜನರು ಸಾಧನೆಯಿಂದ ವಂಚಿತ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆರು ಜನರ ಪೈಕಿ ಈ ಸಲ ಮೂವರು ನಾಯಕರು ಹ್ಯಾಟ್ರಿಕ್ ಸಾಧನೆಯಿಂದ ವಂಚಿತರಾಗಿದ್ದಾರೆ. ಇನ್ನೊಂದೆಡೆ ಯಮಕನಮರಡಿಯ ಕಾಂಗ್ರೆಸ್ ಸತೀಶ ಜಾರಕಿಹೊಳಿ, ರಾಯಬಾಗದ ದುರ್ಯೋಧನ ಐಹೊಳೆ, ಸವದತ್ತಿಯ ಆನಂದ ಮಾಮನಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ. ಇನ್ನು ಹ್ಯಾಟ್ರಿಕ್ ತವಕದಲ್ಲಿದ್ದ ಉತ್ತರ ಕ್ಷೇತ್ರದ ಫಿರೋಜ್ ಸೇಠ್, ರಾಮದುರ್ಗ ಕ್ಷೇತ್ರದ ಅಶೋ ಪಟ್ಟಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂಜಯ್ ಪಾಟೀಲ ಸೋಲನುಭವಿಸಿ, ನಿರಾಸೆ ಅನುಭವಿಸಿದರು.












Click it and Unblock the Notifications