ಮತ್ತೊಂದು ಭರ್ಜರಿ 'ಆಪರೇಷನ್ನಿಗೆ' ಟೇಬಲ್ ಸಿದ್ಧವಾಗಿದೆಯಾ?
ಬೆಂಗಳೂರು, ಮೇ 15 : ಅಧಿಕಾರಕ್ಕಾಗಿ ರಾಜಕೀಯ ಹೊಡೆದಾಟಕ್ಕೆ ಬಿದ್ದಮೇಲೆ ನೈತಿಕತೆ, ಅನೈತಿಕತೆ, ಪವಿತ್ರ ಮೈತ್ರಿ, ಅಪವಿತ್ರ ಮೈತ್ರಿ ಎಂಬುದಕ್ಕೆ ಯಾವುದೇ ವ್ಯತ್ಯಾಸವೂ ಇರುವುದಿಲ್ಲ, ಅರ್ಥವೂ ಇರುವುದಿಲ್ಲ, ಅನರ್ಥಕ್ಕಂತೂ ಜಾಗವೇ ಇಲ್ಲ.
ರಾಜಕೀಯದಲ್ಲಿ ಇಟ್ಟಿಗೆಯ ಏಟಿಗೆ ಕಲ್ಲಿನ ಎದಿರೇಟು ನೀಡಲೇಬೇಕಾಗುತ್ತದೆ, ಒಂದು ಕಪಾಳಕ್ಕೆ ಬಿಗಿದ ಮೇಲೆ ಇನ್ನೊಂದು ಕಪಾಳವನ್ನು ತೋರಿಸುವವನು ಮೂರ್ಖ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಮೋಸಕ್ಕೆ ಮತ್ತೊಂದು ಮೋಸದಿಂದಲೇ ಉತ್ತರ ನೀಡಬೇಕು.
103 ಸೀಟುಗಳನ್ನು ಭಾರತೀಯ ಜನತಾ ಪಕ್ಷ ಗೆದ್ದ ಮೇಲೆಯೂ, ಆ ಪಕ್ಷಕ್ಕೆ ಅಧಿಕಾರ ಸಿಗುವುದನ್ನು ತಪ್ಪಿಸಲು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೆಡರು, ತಮ್ಮೆಲ್ಲ ದ್ವೇಷವನ್ನು ಮರೆತು, ಸಿಟ್ಟನ್ನು ಹಿಮ್ಮೆಟ್ಟಿಸಿ, ಕೈಜೋಡಿಸಿದ ಮೇಲೆ, ಭಾರತೀಯ ಜನತಾ ಪಕ್ಷ ಕೂಡ ನೈತಿಕವಾಗಿಯಾಗಲಿ, ಅನೈತಿಕವಾಗಿಯಾಗಲಿ 'ಆಪರೇಷನ್' ಕಮಲ ನಡೆಸಿದರೆ ತಪ್ಪೇನು?
ಬಹುಮತ ಗಳಿಸಲು ಎಲ್ಲ ಪಕ್ಷಗಳೂ ಸೋತಿವೆ. ಆದರೆ, ಸಹಜವಾಗಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಬೇಕು. ಅದಕ್ಕೆ ಒಂದು ವಾರದ ವೇಳೆಯನ್ನೂ ರಾಜ್ಯಪಾಲರು ಕೊಟ್ಟಿದ್ದಾರೆ. ಆದರೆ, ಇನ್ನೂ ಬೇಕಿರುವ 9 ಸೀಟುಗಳನ್ನು ಬಿಜೆಪಿ ಹೇಗೆ ಪಡೆಯಬೇಕು, ಹೇಗೆ ಪಡೆಯುತ್ತದೆ? ದಿ ಪಾಲಿಟಿಕಲ್ ಗೇಮ್ ಹ್ಯಾಸ್ ಬಿಗನ್.

ಗಣಿಧಣಿಗಳು ಮತ್ತೆ ಆಪದ್ಬಾಂಧರಾಗುವರೆ?
ಒಂದು ಬಲ್ಲ ಮೂಲದ ಪ್ರಕಾರ, ಬಾದಾಮಿಯಿಂದ ಸೋತರೂ ಮೊಳಕಾಲ್ಮೂರಿನಿಂದ ಜಯಭೇರಿ ಬಾರಿಸಿರುವ, ಗಣಿಧಣಿಗಳ ಆಪ್ತ ಶ್ರೀರಾಮುಲು ಅವರು ಜೆಡಿಎಸ್ ನಿಂದ ಒಂದಿಷ್ಟು ಶಾಸಕರನ್ನು ಹೈಜಾಕ್ ಮಾಡಿಕೊಂಡು ಬರುವುದಾಗಿ ವಾಗ್ದಾನ ನೀಡಿದ್ದಾರೆ. ಹಿಂದೆ 2008ರಲ್ಲಿ ಇಂಥದೇ ಪರಿಸ್ಥಿತಿ ಉದ್ಭವಿಸಿದ್ದಾಗ ಆಪರೇಷನ್ ಕಮಲ ಮಾಡಿ ಪಕ್ಷೇತರ ಶಾಸಕರನ್ನು ಕೊಂಡು ತಂದಿದ್ದೇ ಗಣಿಧಣಿಗಳು. ಈಗ ಮತ್ತೆ ಅವರೇ ಯಡಿಯೂರಪ್ಪ ಅವರಿಗೆ ಆಪದ್ಬಾಂಧವರಾಗಿ ಸಹಾಯಕ್ಕೆ ಬರಬೇಕು.

ಶಕ್ತಿಶಾಲಿ ರಾಜಕಾರಣಿಯೊಬ್ಬರಿಗೆ ಬಲೆ
ಮತ್ತೊಂದು ಸಾಧ್ಯತೆಯ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದು ಅಸಾಧ್ಯವೆಂದು ಮೇಲ್ನೋಟಕ್ಕೆ ಕಂಡರೂ ಏನು ಬೇಕಾದರೂ ಆಗಬಹುದು. ಅದೇನೆಂದರೆ, ಹಿಂಬಾಗಿಲ ಮೂಲಕ ಕಾಂಗ್ರೆಸ್ಸಿನ 'ಶಕ್ತಿ'ಶಾಲಿ ರಾಜಕಾರಣಿಯೊಬ್ಬರನ್ನು ಸೆಳೆದು ಅವರ ಮೂಲಕ, ಕಾಂಗ್ರೆಸ್ ಬಗ್ಗೆ, ಸಿದ್ದರಾಮಯ್ಯನವರ ಬಗ್ಗೆ ಅಸಮಾಧಾನ ಹೊಂದಿರುವ ಕೆಲವರನ್ನು ಸೆಳೆಯಲು ಬಿಜೆಪಿ ಸಿದ್ಧವಾಗಿದೆ. ಸದ್ಯಕ್ಕೆ ಆ ರಾಜಕಾರಣಿ ಯಾರೆಂದು ಗುಟ್ಟುಗುಟ್ಟು.

ರೇವಣ್ಣ ಬಿಜೆಪಿ ತೆಕ್ಕೆಗೆ ಬರ್ತಾರಾ?
ಇವೆರಡರ ಜೊತೆಗೆ, ಉಪಮುಖ್ಯಮಂತ್ರಿ ಆಗುವುದರಿಂದ ಮತ್ತೆ ವಂಚಿತರಾಗಲಿರುವ ಎಚ್ ಡಿ ರೇವಣ್ಣ ಅವರು ತಮ್ಮೊಂದಿಗೆ ಹದಿಮೂರು ಶಾಸಕರನ್ನು ಕರೆದುಕೊಂಡು ಭಾರತೀಯ ಜನತಾ ಪಕ್ಷ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂಬ ಗಾಳಿಸುದ್ದಿ ಬಲವಾಗಿ ಹಬ್ಬಿದೆ. ಕುಮಾರಣ್ಣ ಅವರಿಗೂ ರೇವಣ್ಣ ಅವರಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಕುಮಾರಸ್ವಾಮಿ ಅವರು ರೇವಣ್ಣನ ಮಗ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಲು ಕೂಡ ನಿರಾಕರಿಸಿದ್ದರು. ಆದರೆ, ಅವರೇ ಸರಕಾರದಲ್ಲಿರುವಾಗ ಏಕೆ, ಪಕ್ಷ ಬಿಟ್ಟು ಹೋಗುತ್ತಾರೆ?

ಅಮಿತ್ ಬತ್ತಳಿಕೆಯಲ್ಲಿ ಏನೇನು ತಂತ್ರ?
ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮನದಲ್ಲಿ ಏನೇನು ತಂತ್ರಗಳಿವೆಯೋ ಬಲ್ಲವರಾರು? ಖಂಡಿತ ಅವರು ಕೂಡ ಹಿಂದೆ ಎಸ್ಎಂ ಕೃಷ್ಣ ಅವರನ್ನು ಸೆಳೆಯಲು ಮಾಡಿದಂಥ ತಂತ್ರಗಾರಿಕೆಯನ್ನು ಪ್ರಯೋಗಿಸಬಹುದು. ಒಟ್ಟಿನಲ್ಲಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಹುಮತಕ್ಕೆ ಹತ್ತಿರ ಬಂದರೂ ಅಧಿಕಾರ ಕೈಗೆ ಸಿಗದಂತಾಗಿದೆ. ಬಹುಮತ ಸಾಬೀತುಪಡಿಸಲು ಉಳಿದಿರುವ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಕುದುರೆ ವ್ಯಾಪಾರವನ್ನು ತಪ್ಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್ ರಾಜಕೀಯ ಆರಂಭಿಸಿದರೂ ಅಚ್ಚರಿಯಿಲ್ಲ.

ಲಿಂಗಾಯತ ಕಾಂಗ್ರೆಸ್ ನಾಯಕರಿಗೆ ಗಾಳ
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಸ್ತಿತ್ವ ನೀಡುವುದಾಗಿ ನಡೆದ ಹೋರಾಟ, ಇದರಿಂದ ಧರ್ಮವನ್ನೇ ಇಬ್ಭಾಗ ಮಾಡಲು ನಡೆದ ಹುನ್ನಾರ, ವೀರಶೈವರನ್ನು ಹೊರದಬ್ಬಿದ್ದರಿಂದ ಅಸಮಾಧಾನಗೊಂಡಿರುವ ಕೆಲ ಲಿಂಗಾಯತ ನಾಯಕರನ್ನು ಕೂಡ ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದರೂ ಶೇ.60ರಷ್ಟು ಮತಗಳು ಬಿಜೆಪಿ ಪಾಲಾಗಿವೆ. ಕಾಂಗ್ರೆಸ್ಸಿಗೆ ಸಿಕ್ಕಿದ್ದು ಬರೀ ಶೇ.20ರಷ್ಟು ಲಿಂಗಾಯತ ಮತಗಳು ಮಾತ್ರ.












Click it and Unblock the Notifications