ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ : ಮೋದಿ ಜೊತೆ ಸಿದ್ದು ಹೋಲಿಕೆ ಸರಿಯೆ?
Recommended Video
ಕಳೆದ 20 ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎರಡು ಕ್ಷೇತ್ರಗಳಲ್ಲಿನ ಸ್ಪರ್ಧೆಯ ವಿಚಾರಗಳ ಊಹಾಪೋಹಗಳಿಗೆ, ತಮ್ಮ ಉಮೇದುವಾರಿಕೆ ಸಲ್ಲಿಸುವ ಕಡೆಯ ದಿನಕ್ಕೆ ಕೇವಲ ಎರಡು ದಿನ ಮೊದಲಷ್ಟೇ ತೆರೆ ಬಿದ್ದಿದೆ.
ಮೈಸೂರಿನ ಚಾಮುಂಡೇಶ್ವರಿ ಹಾಗು ಬಾಗಲಕೋಟೆಯ ಬಾದಾಮಿ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ಪರ್ಧೆ ಕೆಪಿಸಿಸಿ ಅಧಿಕೃತ ಗೊಳಿಸಿದೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನ ಹಾಲಿ ಸದಸ್ಯ ಜಿಟಿ ದೇವೇಗೌಡ ಹಾಗು ಬಾದಾಮಿಯಲ್ಲಿ ಹಾಲಿ ಶಾಸಕ ಕಾಂಗ್ರೆಸ್ ನ ಚಿಮ್ಮನಕಟ್ಟಿ.
ಸಿದ್ದರಾಮಯ್ಯ ತಾವು ತಮ್ಮ ಕ್ಷೇತ್ರ ವರುಣಾವನ್ನು, ಮಗ ಡಾ. ಯತೀಂದ್ರಗೆ ಬಿಟ್ಟುಕೊಟ್ಟು ತಮ್ಮ ಹಳೆಯ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡುವುದಾಗಿ ಸುಮಾರು ಆರೇಳು ತಿಂಗಳ ಹಿಂದೆಯೇ ಘೋಷಿಸಿದ್ದರು. ಆಗಿನಿಂದ ತೀರಾ ಇತ್ತೀಚಿನ ದಿನಗಳವೆರೆಗೂ ಚಾಮುಂಡೇಶ್ವರಿಯಲ್ಲಿ ಅನಾಯಾಸವಾಗಿ ಗೆಲ್ಲುತ್ತೇನೆಂಬ ಆತ್ಮವಿಶ್ವಾಸದಲ್ಲೇ ಇದ್ದರು ಹಾಗು ಅನೇಕ ಬಾರಿ ಬಹಳ ದಿಟ್ಟತನದಿಂದ ಕೇವಲ ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸುತ್ತೇನೆಂದು ಹೇಳಿಕೊಳ್ಳುತ್ತಿದ್ದರು.
ಯುದ್ಧಕ್ಕೆ ಮೊದಲೇ ಸೋಲೊಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ಬಿಜೆಪಿ
ನಂತರದ ದಿನಗಳಲ್ಲಿ, ಯಾವಾಗ ತಮ್ಮ ಆಪ್ತವಲಯದಲ್ಲಿರುವ ಪತ್ರಕರ್ತರು (ವಿಶೇಷವಾಗಿ ಮೈಸೂರು ಭಾಗದವರು), ರಾಜಕೀಯ ವಿಶ್ಲೇಷಕರು ಚಾಮುಂಡೇಶ್ವರಿಯಲ್ಲಿ ಗೆಲುವು ಸುಲಭವಲ್ಲವೆಂದು ಮನವರಿಕೆ ಮಾಡಿಕೊಡಲು ಒತ್ತುಕೊಟ್ಟರೋ, ಸಿದ್ದರಾಮಯ್ಯ ತಕ್ಕಮಟ್ಟಿಗೆ ತಲ್ಲಣಗೊಂಡರು. ಅದಕ್ಕೆ ತಮ್ಮ ಆಪ್ತ ಅಧಿಕಾರಿಗಳಿಂದ ಆಂತರಿಕ ಸಮೀಕ್ಷೆ ನಡೆಸಿದರು. 25 ದಿನಗಳಲ್ಲಿ ಎರಡು ಬಾರಿ ನಡೆದ ಗುಪ್ತ ಸಮೀಕ್ಷೆಯೂ ಸಿದ್ದರಾಮಯ್ಯರ ಗೆಲುವು ಸುಲಭದ್ದಲವೆಂಬುದನ್ನು ಸಿದ್ದು ಅಂಡ್ ಟೀಮ್ ಗೆ ತಲುಪಿಸಿದರು.
ಆದಾಗ್ಯೂ ಸಿದ್ದರಾಮಯ್ಯ ಅತಿಯಾದ ಆತ್ಮವಿಶ್ವಾಸದಲ್ಲೇ ಚಾಮುಂಡೇಶ್ವರಿಯಲ್ಲಿ ತಾನೇ ಗೆಲ್ಲುತ್ತೇನೆಂದು ಬೀಗುತಿದ್ದರು. ಇದನ್ನು ಗಮನಿಸಿದ ಕೆಲ ಪತ್ರಕರ್ತರು, ಅಧಿಕಾರಿಗಳು, ಕೆಲ ಸಚಿವರು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುವುದೇ ಬೇಡವೆಂದು ಮನವರಿಕೆ ಮಾಡಿಸುವ ಪ್ರಯತ್ನ ನಡೆಸಿದರು. "ಈ ಬಾರಿ ಡಾ.ಯತೀಂದ್ರ ಸ್ಪರ್ಧಿಸುವುದೇ ಬೇಡ. ನೀವೇ ವರುಣಾದಲ್ಲಿ ಸ್ಪರ್ಧಿಸಿ" ಎಂದು ಸಲಹೆಯನ್ನಿತ್ತರು.
ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ
ಆಗ ಎಚ್ಛೆತ್ತುಕೊಂಡಿದ್ದ ಮುಖ್ಯಮಂತ್ರಿ, ಚಾಮುಂಡೇಶ್ವರಿಯನ್ನು ಬಿಟ್ಟು ಬೇರೆಡೆಗೆ ಹೋದರೆ, ಪಕ್ಷದ ಒಳಗಿನ ಹಾಗು ಹೊರಗಿನ ವಿರೋಧಿಗಳಿಗೂ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ವಿಶ್ಲೇಷಿಸಿ, ಚಾಮುಂಡೇಶ್ವರಿ ಹಾಗು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದೆಂದು ತೀರ್ಮಾನಕ್ಕೆ ಬಂದಿದ್ದು.
ಕಡೆಕ್ಷಣದಲ್ಲಿ ಬಾದಾಮಿಯನ್ನು ಆಯ್ದುಕೊಂಡ ಸಿದ್ದು
ಹೀಗೆ ಮತ್ತೊಂದು ಕ್ಷೇತ್ರದ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದ ಮೊದಲೆರೆಡು ಕ್ಷೇತ್ರಗಳು ಬಾಗಲಕೋಟೆಯ ಬಾದಾಮಿ ಹಾಗು ಬೆಂಗಳೂರಿನ ಶಾಂತಿನಗರ. ಇದೇ ಏಪ್ರಿಲ್ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಪರಮೇಶ್ವರ ಟಿಕೆಟ್ ಅಂತಿಮಗೊಳಿಸುವ ಕಸರತ್ತಿಗಾಗಿ ದೆಹಲಿಗೆ ತೆರಳಿದ್ದರು. ಪ್ರಕಟಗೊಂಡ ಪಟ್ಟಿಯಿಂದ ಶಾಂತಿನಗರ ಕ್ಷೇತ್ರವನ್ನು ಕೈಬಿಡಲಾಗಿತ್ತು ಹಾಗು ಬಾದಾಮಿ ಕ್ಷೇತ್ರವನ್ನು ಹಾಲಿ ಜನಪ್ರಿಯ ಶಾಸಕ, 6 ಬಾರಿ ಗೆಲುವಿನ ರುಚಿಕಂಡಿದ್ದ ಚಿಮ್ಮನಕಟ್ಟಿ ಬದಲಿಗೆ ಡಾ.ದೇವರಾಜ್ ಪಾಟೀಲ ಹೆಸರನ್ನು ಪ್ರಕಟಿಸಲಾಗಿತ್ತು. ಕಾರಣ, ಚಿಮ್ಮನಕಟ್ಟಿ ಸ್ಪರ್ಧಿಸಬೇಕೆಂದು ತೀರ್ಮಾನಿಸಿ, ನಂತರ ಬದಲಾಯಿಸುವ ಸಂದರ್ಭ ಬಂದರೆ, ಚಿಮ್ಮನಕಟ್ಟಿ ಬಿಟ್ಟುಕೊಡದಿದ್ದರೆ, ಮುಜುಗರ ಅನುಭವಿಸಬೇಕಾಗಬಹುದೆಂದು ಪ್ರಕಟಿಸಿರಲಿಲ್ಲ.
ಮೋದಿ ಹಾಗು ಕುಮಾರಸ್ವಾಮಿಯೊಂದಿಗೆ ಹೋಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎರಡು ಕ್ಷೇತ್ರದ ಸ್ಪರ್ಧೆಯನ್ನು 2014ರ ಲೋಕಸಭೆ ಚುನಾವಣೆಯ ಮೋದಿಯವರ 2 ಕ್ಷೇತ್ರದ ಸ್ಪರ್ಧೆಗೆ ಹಾಗು ಇದೆ ಚುನಾವಣೆಯ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿಯ ಸ್ಪರ್ಧೆಯ ಉದಾಹರಣೆಯನ್ನು ಕೊಟ್ಟು ತಾಳೆಹಾಕತೊಡಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ, ಸಿದ್ದರಾಮಯ್ಯನವರು ಹಾಗು ಕಾಂಗ್ರೆಸ್ ನವರು ಒಪ್ಪಲಿ ಬಿಡಲಿ, ಮೋದಿ ಪರವಾದ ಅಲೆ ದೇಶದ ಅನೇಕ ಭಾಗಗಳಲ್ಲಿ ಇದ್ದದ್ದು ಸ್ಪಷ್ಟವಾಗಿತ್ತು. ಕಡೇ ಪಕ್ಷ ತಮ್ಮ ತವರು ಕ್ಷೇತ್ರವಾಗಿದ್ದ ಗುಜರಾತ್ ನ ವಡೋದರಾದಲ್ಲಿನ ಸ್ಪರ್ಧೆ ಹಾಗು ಗೆಲುವಿನ ಯಾವುದೇ ಆತಂಕ ಅಥವಾ ತೊಂದರೆಗಳಿರಲಿಲ್ಲ.
ಉತ್ತರಪ್ರದೇಶ ಹಿಡಿತ ಸಾಧಿಸುವ ಉದ್ದೇಶದಿಂದ ಸ್ಪರ್ಧೆ
ಪ್ರಧಾನಿ ಪಟ್ಟ ಹಿಡಿಯುವುದಕ್ಕಾಗಿ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ಹಿಡಿತ ಸಾಧಿಸುವುದು ಯಾವುದೇ ಪಕ್ಷಕ್ಕಾದರೂ ಅನಿವಾರ್ಯವಾಗಿತ್ತು. ಹಾಗಾಗಿ ನರೇಂದ್ರ ಮೋದಿಯ ಬಲದಿಂದ ಉತ್ತರ ಪ್ರದೇಶದ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಲುವಾಗಿ ವಾರಣಾಸಿಯಲ್ಲೂ ಸ್ಪರ್ಧಿಸಿದರು. ಅಲ್ಲಿ ಭರ್ಜರಿ ಪ್ರಚಾರವನ್ನೂ ನಡೆಸಿದರು. ವಡೋದರಾದಲ್ಲಿ ಸುಮಾರು 5,70,128 ಮತಗಳ ಅಂತರದಿಂದ ಜಯಗಳಿಸಿದರು. (ಇತಿಹಾಸದಲ್ಲೇ ಇದು ಅತೀ ದೊಡ್ಡ ಅಂತರದ ಗೆಲುವು). ವಾರಣಾಸಿಯಲ್ಲಿ ಮೋದಿಯ ವಿರುದ್ಧ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ 3.7 ಲಕ್ಷ ಮತಗಳ ಅಂತರದಿಂದ ಗೆದ್ದು ಲೋಕಸಭೆಗೆ 2ನೇ ಕ್ಷೇತ್ರದಿಂದ ಆಯ್ಕೆಯಾದರು.
ಯೋಗೇಶ್ವರ್ ಅವರನ್ನು ಸೋಲಿಸುವುದು ಎಚ್ಡಿಕೆಗೆ ಪ್ರತಿಷ್ಠೆಯ ಪ್ರಶ್ನೆ
ಇನ್ನು ಮಾಜಿ ಸಿಎಂ ಕುಮಾರಸ್ವಾಮಿಯ ಎರಡು ಕ್ಷೇತ್ರದ ಸ್ಪರ್ಧೆಯ ವಿಚಾರಕ್ಕೆ ಬರುವುದಾದರೆ, ಕುಮಾರಸ್ವಾಮಿಯ ತವರು ಕ್ಷೇತ್ರ ರಾಮನಗರ ವಿಧಾನಸಭಾ ಕ್ಷೇತ್ರ. ಅಲ್ಲೇ ಸ್ಪರ್ಧಿಸುವುದೂ ನಿಶ್ಚಯವಾಗಿತ್ತು. 2013ರ ವಿಧಾನಸಭೆಯ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ, ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಎದುರು 6,464 ಮತಗಳ ಅಂತರದಿಂದ ಸೋಲುಕಂಡಿದ್ದರು. ಇಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿದಿರುವ ಯೋಗೇಶ್ವರ್ಗೆ ಪ್ರಬಲ ಸ್ಪರ್ಧೆಯನ್ನು ಒಡ್ಡುವುದಕ್ಕೆ ಮತ್ತೆ ಅನಿತಾರನ್ನೇ ಕಣಕ್ಕಿಳಿಸಬೇಕೆಂಬುದು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರ ಒತ್ತಾಸೆಯಾಗಿತ್ತು. ಆದರೆ ತಮ್ಮ ಕುಟುಂಬದಿಂದ ಇಬ್ಬರು ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ ಎಂಬ ವಿಚಾರಕ್ಕೆ ಗಂಟುಬಿದ್ದಿದ್ದ ಕುಮಾರಸ್ವಾಮಿ, ಮತ್ಯಾರನ್ನೇ ಕಣಕ್ಕಿಳಿಸಿದರೂ ಯೋಗೇಶ್ವರ್ ರನ್ನು ಮಣಿಸಲು ಕಷ್ಟವೆಂದು ಅರಿತು, ಚನ್ನಪಟ್ಟಣವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಬೇಕೆಂಬ ಹಠದಿಂದ ಬಿದ್ದು, ತಾವೇ ಚನ್ನಪಟ್ಟಣದಲ್ಲೂ ಸ್ಪರ್ಧಿಸುತ್ತೇನೆಂದು ತೀರ್ಮಾನಿಸಿದಂತಿದೆ.
ಬಾದಾಮಿಯಲ್ಲೂ ಸ್ಪರ್ಧಿಸುತ್ತಿರುವ ಸಿದ್ದು ಲೆಕ್ಕಾಚಾರ
ಇಲ್ಲಿ ಮೋದಿ ಹಾಗು ಕುಮಾರಸ್ವಾಮಿ ಅವರಿಗೆ ಎರಡನೇ ಕ್ಷೇತ್ರದ ಆಯ್ಕೆ ಸುರಕ್ಷಿತ ಕ್ಷೇತ್ರದ ಸಲುವಾದ್ದುದ್ದಲ್ಲ ಎಂಬುದು ಸ್ಪಷ್ಟ. ಮೊದಲ ಕ್ಷೇತ್ರದಲ್ಲಿ ಸೋಲುತ್ತಾರೆಂಬ ಬೆದರಿಕೆಯಿಂದ ಅವರಿಬ್ಬರು ಎರಡನೇ ಕ್ಷೇತ್ರವನ್ನೂ ಆಯ್ದುಕೊಂಡಿಲ್ಲ. ಎರಡನೇ ಕ್ಷೇತ್ರ ಆಯ್ದುಕೊಂಡಿರುವುದು ವಿಭಿನ್ನ ಕಾರಣಗಳಿಗಾಗಿ. ಈ ಮೂರೂ ನಾಯಕರ ಎರಡೆರಡು ಕ್ಷೇತ್ರಗಳ ಸ್ಪರ್ಧೆಯ ಉದ್ದೇಶ, ಪರಿಸ್ಥಿತಿ, ಸ್ಪರ್ಧಿಗಳ ಮನಸ್ಥಿತಿ ಎಲ್ಲವೂ ಬೇರೆ ಬೇರೆಯಾಗಿದ್ದು, ಸಿಎಂ ಸಿದ್ದರಾಮಯ್ಯರ ಬಾದಾಮಿ ಕ್ಷೇತ್ರದ (ಎರಡನೇ ಕ್ಷೇತ್ರದ) ಸ್ಪರ್ಧೆಯ ಹಿಂದಿನ ಲೆಕ್ಕಾಚಾರಗಳು ಗುಟ್ಟಾಗೇನೂ ಉಳಿದಿಲ್ಲ. ಚಿಮ್ಮನಕಟ್ಟಿ ಮತ್ತು ಡಾ. ದೇವರಾಜ್ ಅವರನ್ನು ಪಕ್ಕಕ್ಕೆ ಸರಿಸಿ ಸಿದ್ದರಾಮಯ್ಯನವರು ಬನಶಂಕರಿ ಕ್ಷೇತ್ರವಿರುವ ಬಾದಾಮಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಅವರ ವಿರುದ್ಧ ಸೆಡ್ಡು ಹೊಡೆಯಲು ಬಿಜೆಪಿಯ ಶ್ರೀರಾಮುಲು ಅವರು ಕೂಡ ಸಿದ್ಧರಾಗಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ತಾರಾ?