ಬಹುಮತ ಸಾಬೀತಿಗೂ ಮೊದಲೇ ಬಿಜೆಪಿಗೆ ಮತ್ತೊಂದು ಪರೀಕ್ಷೆ!
ಹೈದರಾಬಾದ್, ಮೇ 18 : ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಬಹುಮತ ಸಾಬೀತು ಮಾಡಬೇಕಾಗಿದೆ. ಆದರೆ, ಬಹುಮತ ಸಾಬೀತು ಪಡಿಸುವ ಮೊದಲು ಅವರು ಸ್ಪೀಕರ್ ಆಯ್ಕೆಯ ಕಗ್ಗಂಟಿನಿಂದ ಬಿಡಿಸಿಕೊಳ್ಳಬೇಕಿದೆ.
ವಿಧಾನಸಭೆಯ ಕಾರ್ಯಕಲಾಪಗಳನ್ನು ನಡೆಸುವುದು ಸ್ಪೀಕರ್. ಆದ್ದರಿಂದ, ಸ್ಪೀಕರ್ ಆಯ್ಕೆ ಯಾವುದೇ ಪಕ್ಷಕ್ಕಾದರೂ ಪ್ರಮುಖ ವಿಚಾರವಾಗುತ್ತದೆ. ಅದರಲ್ಲೂ ಬಹುಮತ ಸಾಬೀತು ಪಡಿಸುವ ವೇಳೆಯಲ್ಲಿ ಸ್ಪೀಕರ್ ಪಾತ್ರ ಬಹಳ ಮುಖ್ಯವಾಗುತ್ತದೆ.
ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಹೇಗೆ ಮತವನ್ನು ಪರಿಗಣಿಸಬೇಕು? ಎಂದು ಸ್ಪೀಕರ್ ನಿರ್ಧರಿಸಬೇಕು. ಅಡ್ಡ ಮತದಾನವನ್ನು ಯಾರಾದರೂ ಮಾಡಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಸ್ಪೀಕರ್.

ಬಿಜೆಪಿ ಬಳಿ ಸ್ಪೀಕರ್ ಆಯ್ಕೆ ಮಾಡಲು 7 ಮತಗಳು ಕಡಿಮೆ ಇದೆ. ಒಂದು ವೇಳೆ ಬಿಜೆಪಿ ಸ್ಪೀಕರ್ ಆಯ್ಕೆ ಮಾಡಲು ವಿಫಲವಾದರೆ, ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಅಗ್ನಿ ಪರೀಕ್ಷೆ ಎದುರಾಗಲಿದೆ.
ಕಾಂಗ್ರೆಸ್ ಆರ್.ವಿ.ದೇಶಪಾಂಡೆ ಅವರ ಹೆಸರನ್ನು ಸ್ಪೀಕರ್ ಹುದ್ದೆಗೆ ಸೂಚಿಸಿದೆ. ಬಿಜೆಪಿ ಉಮೇಶ್ ಕತ್ತಿ ಅವರ ಹೆಸರನ್ನು ಶಿಫಾರಸು ಮಾಡಿದೆ. ವಿಧಾನಸಭೆಗೆ ಹಿರಿಯರಾದ, ಹೆಚ್ಚು ಬಾರಿ ಗೆದ್ದು ಬಂದಿರುವ ಶಾಸಕರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಬೇಕು. ಅಂತಿಮ ನಿರ್ಧಾರವನ್ನು ರಾಜ್ಯಪಾಲರು ತೆಗೆದುಕೊಳ್ಳಲಿದ್ದಾರೆ.
ಅಧಿವೇಶನ ಆರಂಭವಾದ ದಿನ ಎಲ್ಲಾ ಶಾಸಕರು ಪ್ರಮಾಣ ವಚನ ತೆಗೆದುಕೊಳ್ಳಲು ಹಂಗಾಮಿ ಸ್ಪೀಕರ್ ಕಾರ್ಯ ನಿರ್ವಹಿಸುತ್ತಾರೆ. ಬಳಿಕ ಸ್ಪೀಕರ್ ಆಯ್ಕೆ ನಡೆಯುತ್ತದೆ. ಹಂಗಾಮಿ ಸ್ಪೀಕರ್ ಬಹುಮತ ಸಾಬೀತು ಪಡಿಸುವ ಕೆಲಸ ನಿರ್ವಹಣೆ ಮಾಡಬಹುದೇ? ಎಂಬುದರ ಬಗ್ಗೆ ನಿಯಮಾವಳಿಗಳು ಸ್ಪಷ್ಟವಾಗಿಲ್ಲ.
ಸ್ಪೀಕರ್ ಹುದ್ದೆಗೆ ಜಗದೀಶ್ ಶೆಟ್ಟರ್ ಅಥವ ಕೆ.ಜಿ.ಬೋಪಯ್ಯ ಅವರನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಬಹುಮತ ಸಾಬೀತು ಪಡಿಸಬೇಕಾಗಿರುವ ಕಾರಣ ಸ್ಪೀಕರ್ ಆಯ್ಕೆ ಮಹತ್ವ ಪಡೆದಿದೆ. ಅಡ್ಡಮತದಾನ ನಡೆದರೆ ಮುಂದಿನ ತೀರ್ಮಾನವನ್ನು ಸ್ಪೀಕರ್ ಕೈಗೊಳ್ಳಬೇಕಾಗುತ್ತದೆ.












Click it and Unblock the Notifications